ನ್ಯಾಯಮೂರ್ತಿ ಆನಂದ ನೂತನ ಉಪ ಲೋಕಾಯುಕ್ತ
ಬೆಂಗಳೂರು, ಡಿಸೆಂಬರ್ 15 : ಉಪ ಲೋಕಾಯುಕ್ತ ಹುದ್ದೆಗೆ ನ್ಯಾಯಮೂರ್ತಿ ಎನ್.ಆನಂದ ಅವರನ್ನು ನೇಮಿಸುವ ಶಿಫಾರಸಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಒಪ್ಪಿಗೆ ನೀಡಿದ್ದಾರೆ. ಕೋಲಾರ ಮೂಲದ ಆನಂದ ಅವರು ಕರ್ನಾಟಕ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ.
ಉಪ ಲೋಕಾಯುಕ್ತ ನ್ಯಾ.ಎಸ್.ಬಿ. ಮಜಗೆ ಅವರ ನಿವೃತ್ತಿಯಿಂದ ತೆರವಾಗಿದ್ದ ಒಂದನೆಯ ಉಪ ಲೋಕಾಯುಕ್ತ ಹುದ್ದೆಗೆ ಆನಂದ ಅವರ ಹೆಸರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಮಿತಿ ಶಿಫಾರಸು ಮಾಡಿ, ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿತ್ತು. [ನ್ಯಾ.ಆನಂದ ಪರಿಚಯ ಓದಿ]

ಸೋಮವಾರ ಸಂಜೆ ರಾಜ್ಯಪಾಲರು ಈ ಶಿಫಾರಸಿಗೆ ಒಪ್ಪಿಗೆ ನೀಡಿದ್ದಾರೆ. ಇದಕ್ಕೂ ಮೊದಲು ಈ ಹುದ್ದೆಗೆ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಅವರ ಹೆಸರನ್ನು ಸರ್ಕಾರ ಶಿಫಾರಸು ಮಾಡಿತ್ತು. ಆದರೆ, ಮಂಜುನಾಥ್ ಅವರ ಹೆಸರನ್ನು ರಾಜ್ಯಪಾಲರು ಮೂರು ಬಾರಿ ತಿರಸ್ಕರಿಸಿದ್ದರು. [ಲೋಕಾಯುಕ್ತ ಹುದ್ದೆಗೆ ಕೇಳಿಬರಲಿವೆ ಕನಿಷ್ಠ 5 ಹೆಸರು]
ಕರ್ನಾಟಕದ ಲೋಕಾಯುಕ್ತ ವೈ. ಭಾಸ್ಕರ ರಾವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಎರಡನೇ ಉಪ ಲೋಕಾಯುಕ್ತ ಸುಭಾಷ ಬಿ. ಅಡಿ ಅವರ ವಿರುದ್ಧ ಪದಚ್ಯುತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಆದ್ದರಿಂದ, ಲೋಕಾಯುಕ್ತ ಸಂಸ್ಥೆಯ ಮೂರೂ ಪ್ರಮುಖ ಹುದ್ದೆಗಳು ಈಗ ಖಾಲಿ ಇವೆ. [ಕರ್ನಾಟಕ ಲೋಕಾಯುಕ್ತ ಹಗರಣದ Timeline]
ನ್ಯಾಯಮೂರ್ತಿ ಆನಂದ ಅವರು ಅಧಿಕಾರ ಸ್ವೀಕರಿಸಿದ ನಂತರ, ಲೋಕಾಯುಕ್ತ ಸಂಸ್ಥೆಗೆ ಒಬ್ಬರು ಮುಖ್ಯಸ್ಥರು ದೊರಕಿದಂತೆ ಆಗುತ್ತದೆ. ಮಂಗಳವಾರ ಅಥವ ಬುಧವಾರ ಉಪ ಲೋಕಾಯುಕ್ತರು ಅಧಿಕಾರವಹಿಸಿಕೊಳ್ಳುವ ಸಾಧ್ಯತೆ ಇದೆ.












Click it and Unblock the Notifications