ಫಲಿತಾಂಶಕ್ಕೆ ದಿನಗಣನೆ: ಸೋನಿಯಾ ಗಾಂಧಿಗೆ ದೇವೇಗೌಡ್ರ 'ಸ್ಟ್ರಾಂಗ್' ಪತ್ರ!
Recommended Video
ಒಂದು ವೇಳೆ ಅತಂತ್ರ ಫಲಿತಾಂಶ ಬಂದರೆ ಎನ್ನುವ ಮುಂದಾಲೋಚನೆಯಿಂದ ಪ್ರಾದೇಶಿಕ ಪಕ್ಷಗಳ ಜೊತೆ ಮಾತುಕತೆ ಪ್ರಕ್ರಿಯೆ ಈಗಾಗಲೇ ಆರಂಭಿಸಿರುವ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಜೆಡಿಎಸ್ ವರಿಷ್ಠ ದೇವೇಗೌಡ್ರು ಪತ್ರ ಬರೆದಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷಗಳ ನಡುವೆ 'ಸಂಬಂಧ'ಗಳು ಸರಿಹೋಗದೇ ಇರುವುದರಿಂದ, ದೇವೇಗೌಡ್ರು ಬರೆದಿದ್ದಾರೆ ಎನ್ನಲಾಗುತ್ತಿರುವ ಪತ್ರದಲ್ಲಿ, ರಾಜ್ಯದ ಕೆಲವು ಕಾಂಗ್ರೆಸ್ ಮುಖಂಡರ ಮೇಲೆ, ಗೌಡ್ರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರೂ, ಕೆಲವೊಂದು ಕ್ಷೇತ್ರಗಳಲ್ಲಿ ಎರಡು ಪಕ್ಷಗಳ ನಡುವಿನ ಹೊಂದಾಣಿಕೆ ಸರಿದಾರಿಗೆ ಬರದೇ ಎರಡೂ ಪಕ್ಷಗಳು ತೀವ್ರ ಮುಜುಗರವನ್ನು ಎದುರಿಸಬೇಕಾಗಿ ಬಂದಿದ್ದನ್ನೂ ಗೌಡ್ರು, ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಾದೇಶಿಕ ಪಕ್ಷಗಳ ಬೆಂಬಲ ಪಡೆಯಲು ಮುಂದಾಗುತ್ತಿರುವ ಸೋನಿಯಾ ಗಾಂಧಿಗೆ, ದೇವೇಗೌಡರ ಪತ್ರ ಇರುಸುಮುರುಸು ತರುವ ಸಾಧ್ಯತೆಯಿದ್ದು, ಪತ್ರದಲ್ಲಿ ಪ್ರಮುಖವಾಗಿ ಸಿದ್ದರಾಮಯ್ಯನವರ ಕಾರ್ಯಶೈಲಿಯ ಬಗ್ಗೆ ಗೌಡ್ರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.

ಹಾಸನ, ಮಂಡ್ಯ, ತುಮಕೂರು ಕ್ಷೇತ್ರ
ಎಚ್ಎಂಟಿ (ಹಾಸನ, ಮಂಡ್ಯ, ತುಮಕೂರು) ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತೀವ್ರ ಹೊಂದಾಣಿಕೆಯ ಕೊರತೆ ಕಾಡುತ್ತಿತ್ತು. ಕಾಂಗ್ರೆಸ್ ಮುಖಂಡರಿಂದ ನಿರೀಕ್ಷಿಸಿದ ಬೆಂಬಲ ನಮಗೆ ಸಿಗಲಿಲ್ಲ. ಸಿದ್ದರಾಮಯ್ಯನವರು ಮನಸ್ಸು ಮಾಡಿದ್ದರೆ ಎಲ್ಲವನ್ನೂ ಸರಿಪಡಿಸಬಹುದಿತ್ತು ಎಂದು ಗೌಡ್ರ ಪತ್ರದಲ್ಲಿ ಉಲ್ಲೇಖವಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಎಚ್ ವಿಶ್ವನಾಥ್ ವರ್ಸಸ್ ಸಿದ್ದರಾಮಯ್ಯ
ಎಚ್ ವಿಶ್ವನಾಥ್ ಮತ್ತು ಸಿದ್ದರಾಮಯ್ಯ ನಡುವೆ 'ಏಕವಚನ'ದಲ್ಲಿ ಮಾತಿನ ಚಕಮಕಿ ನಡೆಯುತ್ತಿದ್ದರೂ, ಕುಮಾರಸ್ವಾಮಿಯಾಗಲಿ ದೇವೇಗೌಡರಾಗಲಿ ಬಹಿರಂಗ ಹೇಳಿಕೆಯನ್ನು ನೀಡಿರಲಿಲ್ಲ. ವಿಶ್ರಾಂತಿಯಲ್ಲಿದ್ದರೂ, ದೇವೇಗೌಡ್ರು, ಸೋನಿಯಾ ಮತ್ತು ರಾಹುಲ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ದೂರು ನೀಡಿದ್ದರು ಎನ್ನುವ ಮಾಹಿತಿಯಿದೆ.

ಕುಮಾರಸ್ವಾಮಿಯೇ ಮುಖ್ಯಮಂತ್ರಿ ಎಂದು ನೀವೇ ಮನೆಬಾಗಿಲಿಗೆ ಬಂದಿದ್ದು
ಕುಮಾರಸ್ವಾಮಿಯೇ ಮುಖ್ಯಮಂತ್ರಿ ಎಂದು ನೀವೇ ಮನೆಬಾಗಿಲಿಗೆ ಬಂದ ಮೇಲೆ, ನಿಮ್ಮ ಪಕ್ಷದವರಿಂದ ಸಿಎಂ ಬಗ್ಗೆ ಗೊಂದಲದ ಹೇಳಿಕೆ ಬರುತ್ತಿರುವುದು ವಿಷಾದನೀಯ. ಸಿದ್ದರಾಮಯ್ಯ ಸಿಎಂ ಎನ್ನುವ ಹೇಳಿಕೆ ದಿನಂಪ್ರತಿ ಅವರ ಬೆಂಬಲಿಗರಿಂದ ಬರುತ್ತಿದೆ. ಇದು ರಾಜ್ಯದ ಜನತೆಗೆ ತಪ್ಪು ಸಂದೇಶ ರವಾನಿಸಿದಂತಾಗುವುದಿಲ್ಲವೇ ಎಂದು ಗೌಡ್ರು ಖಾರವಾಗಿ ಪ್ರಶ್ನಿಸಿದ್ದಾರೆ.

ಮೈತ್ರಿಧರ್ಮ ಪಾಲಿಸಲು ನಮ್ಮಿಂದ ಏನೂ ಅಡ್ಡಿಯಿಲ್ಲ
ಮೈತ್ರಿಧರ್ಮ ಪಾಲಿಸಲು ನಮ್ಮಿಂದ ಏನೂ ಅಡ್ಡಿಯಿಲ್ಲ, ಆದರೆ ನಿಮ್ಮವರು ಸಹಕಾರ ನೀಡದೇ ಇದ್ದರೆ, ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ಗೌಡ್ರು, ಕೆಲವೊಂದು ವಿಚಾರದಲ್ಲಿ ನೀವು ಮಧ್ಯಪ್ರವೇಶಿಸಿದರೆ, ಎರಡು ಪಕ್ಷಗಳ ನಡುವಿನ ಗೊಂದಲ ಸರಿದಾರಿಗೆ ಬರಬಹುದು ಎಂದು ಗೌಡ್ರು, ತಮ್ಮ ಪತ್ರದಲ್ಲಿ ಬರೆದಿದ್ದಾರೆ ಎನ್ನಲಾಗುತ್ತಿದೆ.

ಏಳು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಜೆಡಿಎಸ್ ಫಲಿತಾಂಶ
ಏಳು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಜೆಡಿಎಸ್ ಫಲಿತಾಂಶ, ಸೋನಿಯಾ ಗಾಂಧಿ ಪಾಲಿಗೂ ತುಂಬಾ ಮಹತ್ವದ ಪಾತ್ರವಹಿಸಲಿದೆ. ಒಂದು ವೇಳೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರದಿದ್ದರೇ, ಜೆಡಿಎಸ್, ಯುಪಿಎ ಮೈತ್ರಿಕೂಟದ ಭಾಗವಾಗಲು, ಗೌಡ್ರ ಸಹಕಾರ ಅತ್ಯಗತ್ಯ. ಹಾಗಾಗಿ, ಗೌಡ್ರ ಪತ್ರ ಮಹತ್ವವನ್ನು ಪಡೆದುಕೊಂಡಿದೆ.












Click it and Unblock the Notifications