ನೀಟ್ ಎಕ್ಸಾಂ ನಲ್ಲಿ ಕನ್ನಡಿಗರಿಗೆ ಆದ್ಯತೆ ಕೋರಿ ವೈದ್ಯರ ಪ್ರತಿಭಟನೆ
ಮಲ್ಲೇಶ್ವರಂನ ಪರೀಕ್ಷಾ ಪ್ರಾಧಿಕಾರದ ಕಚೇರಿ ಮುಂದೆ ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ನಡೆಸಲು ನಿರ್ಧಾರ.
ಬೆಂಗಳೂರು, ಮಾರ್ಚ್ 3: ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸುಗಳಿಗಾಗಿ ನಡೆಸಲಾಗುವ ಪ್ರವೇಶ ಪರೀಕ್ಷೆಯಲ್ಲಿ (ನೀಟ್) ಹಾಸುಹೊಕ್ಕಿರುವ ವಿವಾದಗಳು, ಹಗರಣಗಳ ವಿರುದ್ಧ ದನಿಯೆತ್ತಿರುವ ಭಾರತೀಯ ವೈದ್ಯರ ಸಂಘದ ಯುವ ವೈದ್ಯರ ಘಟಕದ ಬೆಂಗಳೂರು ಶಾಖೆಯ ವೈದ್ಯರು ಮಾರ್ಚ್ 4ರಂದು ರಾಜ್ಯಮಟ್ಟದ ಬೃಹತ್ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದಾರೆ.

ನೀಟ್ ಪ್ರವೇಶ ಪರೀಕ್ಷೆಯಲ್ಲಿ ಸೀಟು ಪಡೆಯಲು ಅರ್ಹತೆ ಪಡೆದ ವಿದ್ಯಾರ್ಥಿಗಳಿಗೆ ಅವಸರವಾಗಿ ಕೌನ್ಸಿಲಿಂಗ್ ಮಾಡುವುದು, ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಸರ್ಕಾರಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಸರ್ಕಾರಗಳು ವಿಫಲವಾಗಿರುವುದು, ಅಲ್ಲದೆ ನೀಟ್ ಪ್ರವೇಶ ಪರೀಕ್ಷೆಯ ಕೌನ್ಸಿಲಿಂಗ್ ನಲ್ಲಿ ಕನ್ನಡಿಗರಿಗೆ ಆದ್ಯತೆ ನೀಡದಿರುವುದರ ವಿರುದ್ಧ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆ ಹೇಳಿದೆ.
ಬೆಂಗಳೂರಿನಲ್ಲಿ ಮಲ್ಲೇಶ್ವರಂ ಬಳಿಯ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಚೇರಿಯ ಮುಂದೆ ಬೆಳಗ್ಗೆ 10:30ಕ್ಕೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಘಟಕದ ವಕ್ತಾರರು ತಿಳಿಸಿದ್ದಾರೆ.












Click it and Unblock the Notifications