ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಈ ಸಲವೂ 'ಜುಲೈ ಕಂಟಕ"?
ಬೆಂಗಳೂರು, ಜು. 24: ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ 'ಜುಲೈ ತಿಂಗಳ' ಕಂಟಕವಾ? ಹೌದು ಅಂಥದ್ದೊಂದು ಚರ್ಚೆ ಇದೀಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅದಕ್ಕೆ ಕಾರಣವೂ ಇದೆ. ನಾಯಕತ್ವ ಬದಲಾವಣೆಯ ಮಾತು ರಾಜ್ಯ ಬಿಜೆಪಿಯಲ್ಲಿ ಶುರುವಾಗಿ ಒಂದು ವರ್ಷವಾಗುತ್ತ ಬಂದಿದೆ. ಕಳೆದ ತಿಂಗಳೂ ಕೂಡ ನಾಯಕತ್ವ ಬದಲಾವಣೆ ಮಾಡುವುದಿಲ್ಲ ಎಂದು ಸ್ವತಃ ಹೈಕಮಾಂಡ್, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರಿಂದ ಹೇಳಿಕೆ ಕೊಡಿಸಿತ್ತು.
ಹೀಗಾಗಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಬದಲಾವಣೆ ಮಡಲಾಗುತ್ತದೆ ಎಂಬುದು ಬರಿ ವದಂತಿ ಮಾತ್ರ ಎಂಬ ಮಾಹಿತಿ ಬಿಜೆಪಿ ವಲಯದಿಂದಲೇ ಬಂದಿತ್ತು. ಜೊತೆಗೆ ಹೈಕಮಾಂಡ್ ಕೂಡ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಮುಂದಿನ ವಿಧಾನಸಭಾ ಚುನಾವಣೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಎದುರಿಸಲು ಸಿದ್ಧತೆ ಮಾಡಿಕೊಳ್ಳಿ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಸೂಚಿಸಿತ್ತು. ಅಷ್ಟಾದ ಮೇಲೆ ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮತ್ತಷ್ಟು ಆತ್ಮವಿಶ್ವಾಸದಿಂದಲೇ ಬೆಂಗಳೂರಿಗೆ ಹಿಂದಿರುಗಿದ್ದರು. ದೆಹಲಿ ಭೇಟಿಯ ಬಳಿಕ ಒಂದು ವಾರದ ಹಿಂದೆ ಬೆಂಗಳೂರಿನಲ್ಲಿ ಮಾತನಾಡಿದ್ದ ಅವರು, "ರಾಜೀನಾಮೆ ಕೊಡುವಂತೆ ನನಗೇ ಯಾರೂ ಸೂಚಿಸಿಲ್ಲ. ಹೀಗಾಗಿ ರಾಜೀನಾಮೆ ಪ್ರಶ್ನೆಯೇ ಇಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸೀಟ್ಗಳನ್ನು ಗೆಲ್ಲುವುದು ನಮ್ಮ ಮುಂದಿನ ಗುರಿ" ಎಂದಿದ್ದರು. ಹೀಗಾಗಿ ಉಳಿದಿರುವ ಎರಡು ವರ್ಷಗಳ ಅವಧಿಗೆ ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂಬುದು ಖಚಿತವಾಗಿತ್ತು.
ಆದರೆ ಕೇವಲ ಒಂದು ವಾರದಲ್ಲಿ ಇಡೀ ರಾಜ್ಯ ರಾಜಕೀಯದ ಚಿತ್ರಣವೇ ದಿಢೀರ್ ಬದಲಾಗಿದೆ. ಕಳೆದ ಎರಡು ವರ್ಷಗಳಿಂದ ಸಂಭಾಳಿಸಿಕೊಂಡು ಬಂದಿದ್ದ ಹಿಡಿತವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಳೆದುಕೊಂಡಂತೆ ಕಾಣುತ್ತಿದೆ. ಅವರು ಸಿಎಂ ಸ್ಥಾನಕ್ಕೆ ಇದೇ ಜುಲೈ 26ರಂದು ರಾಜೀನಾಮೆ ಕೊಡುತ್ತಾರೆ ಎಂಬ ಸುದ್ದಿ ಬಿಜೆಪಿಯಲ್ಲಿ ಜೋರಾಗಿಯೇ ಕೇಳಿ ಬರುತ್ತಿದೆ. ಜೊತೆಗೆ ಇದು ಜುಲೈ ತಿಂಗಳು ಎಂಬುದು ಗಮನಿಸಬೇಕಾದ ಸಂಗತಿ. ಅಷ್ಟಕ್ಕೂ ಜುಲೈ ತಿಂಗಳು ಯಡಿಯೂರಪ್ಪ ಅವರಿಗೆ ಕಂಟಕವಾ? ಯಾಕೆ? ಮುಂದಿದೆ ಮಾಹಿತಿ!
ಏನಿದು ಯಡಿಯೂರಪ್ಪಗೆ ಜುಲೈ ಕಂಟಕ?
ಜುಲೈ ತಿಂಗಳು ಅದರಲ್ಲೂ ಆಷಾಢ ಮಾಸ ಯಡಿಯೂರಪ್ಪ ಅವರಿಗೆ ಕಂಟಕ ಎಂಬ ಮಾತು ಹಿಂದಿನಿಂದಲೂ ಇದೆ. ಅದು ಕೇವಲ ವದಂತಿ ಅಥವಾ ಸುಮ್ಮನೇ ಕೇಳಿ ಬರುತ್ತಿರುವ ಮಾತಲ್ಲ. ಅದಕ್ಕೆ ಕಾರಣವೂ ಇದೆ. ಅದೂ ರಾಜೀನಾಮೆ ವಿಚಾರಕ್ಕೆ ಬಂದಾಗ, ಜುಲೈ ತಿಂಗಳು ಯಡಿಯೂರಪ್ಪ ಅವರಿಗೆ ಈ ಮೊದಲೂ ಇನ್ನಿಲ್ಲದಂತೆ ಕಾಡಿದೆ. ಎಲ್ಲವೂ ಸುಗಮವಾಗಿ ನಡೆಯುತ್ತಿದೆ ಎಂಬ ವಿಶ್ವಾಸ ಇದ್ದಾಗಲೇ ಯಡಿಯೂರಪ್ಪ ಅವರಿಗೆ ಹಿನ್ನಡೆ ಆಗುತ್ತದೆ. ಅದು ಜುಲೈ ತಿಂಗಳಿನಲ್ಲಿಯೇ ಆಗುತ್ತದೆ ಎಂಬುದು ಗಮನಿಸಬೇಕಾದ ಅಂಶ.
ಪ್ರತಿ ವರ್ಷವೂ ಜುಲೈ ತಿಂಗಳಿನಲ್ಲಿಯೇ ಹೆಚ್ಚಾಗಿ ಆಷಾಢ ಮಾಸ ಬರುತ್ತದೆ. ವಿಚಿತ್ರ ಎಂದರೆ ಈ ಆಷಾಢ ಮಾಸ ಒಂದರ್ಥದಲ್ಲಿ ಯಡಿಯೂರಪ್ಪ ಅವರಿಗೆ ಸಹಾಯಕವೂ ಆಗಿದೆ. ಇದೇ ಆಷಾಢವೇ ಯಡಿಯೂರಪ್ಪ ಅವರನ್ನು ಎರಡೇರಡು ಬಾರಿ ರಾಜೀನಾಮೆ ಕೊಡುವುದರಿಂದ ತಪ್ಪಿಸಿದೆ. ಆದರೆ ಜುಲೈ ಎಂಬುದು ಯಡಿಯೂರಪ್ಪ ಅವರಿಗೆ ಸಂಕಷ್ಟ ತಂದೊಡ್ಡಿರುವುದು ಈ ಹಿಂದೆಯೂ ಕಂಡು ಬಂದಿದೆ. ಅದಕ್ಕೆ ಕಾರಣ ಮೊದಲ ಸಲ ಬಿಜೆಪಿ ಅಧಿಕಾರಕ್ಕೆ ಬಂದಾಗ ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ಆಷಾಡ ಮುಗಿದ ಬಳಿಕ ಜುಲೈ ತಿಂಗಳಿನಲ್ಲಿ. ಹೌದು 2011ರ ಜುಲೈ 31 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟಿದ್ದರು. ಆಗಲೂ ಅವರು ರಾಜೀನಾಮೆ ಕೊಡುವುದನ್ನು ಸ್ವಲ್ಪ ಕಾಲ ವಿಳಂಬ ಮಾಡಿದ್ದು ಆಷಾಢ.
ಹತ್ತು ವರ್ಷಗಳ ಹಿಂದೆಯೂ ಜುಲೈ ಕಂಟಕ!
ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದ ಪತನದ ಬಳಿಕ 2008ರಲ್ಲಿ ಮೊದಲ ಬಾರಿ ಕರ್ನಾಟಕದಲ್ಲಿ ಸ್ವಂತ ಬಲದ ಮೇಲೆ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಆಗಲೂ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದು ಈಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಎನ್ನುವುದರಲ್ಲಿ ಎರಡು ಮಾತಿಲ್ಲ. 2008ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಬಳಿಕ 2011ರಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು.
ಆಗಲೂ ಕೂಡ ಜುಲೈ ತಿಂಗಳಿನಲ್ಲಿಯೇ ರಾಜೀನಾಮೆ ಕೊಟ್ಟಿದ್ದು ಕಾಕತಾಳೀಯ. ಜುಲೈ 31, 2011ರಂದು ಆಗ ಅವರು ವಾಸವಾಗಿದ್ದ ಸಿಎಂ ಅಧಿಕೃತ ನಿವಾಸವಾಗಿದ್ದ ರೇಸ್ಕೋರ್ಸ್ ರಸ್ತೆಯ ಕೃಷ್ಣಾದಿಂದ ರಾಜಭವನಕ್ಕೆ ಪಾದಯಾತ್ರೆಯಲ್ಲಿ ತೆರಳಿ, ಆಗಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದರು. ಆಗಲೂ ಅವರನ್ನು ಕೆಲ ದಿನಗಳ ಕಾಲ ರಾಜೀನಾಮೆ ಕೊಡದಂತೆ ಕಾಪಾಡಿದ್ದು ಆಷಾಡವೇ. ಆಷಾಡ ಮಾಸ ಕಳೆದ ಬಳಿಕ ರಾಜೀನಾಮೆ ಕೊಡುವುದಾಗಿ ಹೇಳಿಕೆಯಲ್ಲಿ ಯಡಿಯೂರಪ್ಪ ತಿಳಿಸಿದ್ದರು. ಆ ಅಧಿಕೃತ ಹೇಳಿಕೆ 'ಒನ್ಇಂಡಿಯಾ ಕನ್ನಡ'ದ ಬಳಿಯಿದೆ.
ಆಷಾಢದ ಬಳಿಕ ರಾಜೀನಾಮೆ ಎಂದಿದ್ದರು!
ಭ್ರಷ್ಟಾಚಾರದ ಆರೋಪದಿಂದ 2011ರ ಜುಲೈ ತಿಂಗಳಿನಲ್ಲಿ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರಿಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಸೂಚಿಸಿತ್ತು. ಹೀಗಾಗಿ ರಾಜೀನಾಮೆ ನಿರ್ಧಾರಕ್ಕ ಬಂದಿದ್ದ ಯಡಿಯೂರಪ್ಪ ಅವರು ಆಷಾಡ ಮಾಸ ಕಳೆದ ಬಳಿಕ ರಾಜೀನಾಮೆ ಕೊಡುವುದಾಗಿ ಹೈಕಮಾಂಡ್ ಗಮನಕ್ಕೆ ಬರುವಂತೆ ಆಗ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದ್ದರು.
"ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಪಕ್ಷದ ಸೂಚನೆಯಂತೆ ನಾನು ಸಿಎಂ ಹುದ್ದೆಗೆ ರಾಜೀನಾಮೆ ಕೊಡುತ್ತೇನೆ. ಜುಲೈ 30, 2011ರಂದು ಅಮವಾಸ್ಯೆಯಂದು ಆಷಾಡ ಮಾಸ ಮುಗಿಯಲಿದೆ. ಹೀಗಾಗಿ ಜುಲೈ 31, 2011ರಂದು ಮಧ್ಯಾಹ್ನ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡುತ್ತೇನೆ. ಪಕ್ಷ ಕಟ್ಟಲು ಸತತವಾಗಿ 40 ವರ್ಷಗಳ ಕಾಲ ದುಡಿದಿದ್ದೇನೆ. ಪಕ್ಷವನ್ನು ಈ ಮಟ್ಟಕ್ಕೆ ಬೆಳೆಸಿರುವುದು ನನಗೆ ಸಮಾಧಾನವಿದೆ. ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಟ್ಟ ಬಳಿಕವೂ ಪಕ್ಷದ ಏಳ್ಗೆಗಾಗಿ ನಾನು ಕೆಲಸ ಮಾಡುತ್ತೇನೆ ಎಂದು ಜುಲಯ 28, 2011ರಂದು ಅಧಿಕೃತ ಪ್ರಕಟೆಣೆ ಹೊರಡಿಸಿದ್ದರು. ಅದರಂತೆ ಜುಲೈ 31, 2011ರ ಮಧ್ಯಾಹ್ನ 12.15ಕ್ಕೆ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ತಮ್ಮ ರಾಜೀನಾಮೆಯನ್ನು ಯಡಿಯೂರಪ್ಪ ಸಲ್ಲಿಸಿದ್ದರು.
ಈಗಲೂ ಆಷಾಢ ಕಾಪಾಡುತ್ತದೆಯಾ?
ಈಗ ಮತ್ತೆ ಇತಿಹಾಸ ಮರುಕಳಿಸಿದೆ. ಆದರೆ ಯಾವುದೇ ಆರೋಪಗಳಿಲ್ಲದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡಬೇಕಾಗಿ ಬಂದಿದೆ ಎನ್ನಲಾಗಿದೆ. ಈಗಲೂ ಕೂಡ ಯಡಿಯೂರಪ್ಪ ಅವರು ಹೈಕಮಾಂಡ್ ಸೂಚನೆಯಂತೆ ನಾನು ನಡೆದುಕೊಳ್ಳುತ್ತೇನೆ ಎಂದು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ. ತಮ್ಮ ಅಭಿಮಾನಿಗಳು ಹಾಗೂ ಆಪ್ತರಿಗೂ ಕೂಡ ಇದೇ ಮಾತನ್ನು ಯಡಿಯೂರಪ್ಪ ಅವರು ಹೇಳಿದ್ದಾರೆ.
ಹತ್ತು ವರ್ಷಗಳ ಹಿಂದಿನಂತೆ ಮತ್ತೆ ರಾಜೀನಾಮೆ ಕೊಡಲು ಯಡಿಯೂರಪ್ಪ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಕಳೆದ ಜುಲೈ 10 ರಂದು ಮಣ್ಣೆತ್ತಿನ ಅಮವಾಸ್ಯೆಂದು ಆಷಾಢ ನಾಸ ಬಂದಿದೆ. ಆಗಸ್ಟ್ 8 ರಂದು ನಾಗರ ಅಮವಾಸ್ಯೆಯಂದು ಆಷಾಢ ಮಾಸ ಮುಗಿಯಲಿದೆ. ಹೀಗಾಗಿ ಈ ಸಲವೂ ಆಷಾಢ ಮಾಸದ ಕಾರಣಕೊಟ್ಟು ಯಡಿಯೂರಪ್ಪ ಅವರು ರಾಜೀನಾಮೆ ಕೊಡುವುದನ್ನು ಮುಂದಕ್ಕೆ ಹಾಕುತ್ತಾರಾ? ಅದಕ್ಕೆ ಬಿಜೆಪಿ ಹೈಕಮಾಂಡ್ ಒಪ್ಪಿಗೆ ಕೊಡಲಿದೆಯಾ? ಎಂಬುದು ಕುತೂಹಲ ಮೂಡಿಸಿದೆ.
ಒಟ್ಟಾರೆ ಜುಲೈ ತಿಂಗಳು ಮಾತ್ರ ಯಡಿಯೂರಪ್ಪ ಅವರಿಗೆ ಸಂಕಷ್ಟ ತಂದೊಡ್ಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹೀಗಾಗಿ ಎರಡೂ ಬಾರಿಯೂ ತಾವೇ ಗಳಿಸಿಕೊಂಡಿದ್ದ ಮುಖ್ಯಮಂತ್ರಿ ಹುದ್ದೆಯನ್ನು ಜುಲೈ ತಿಂಗಳಿನಲ್ಲಿ ತಾವೇ ಕಳೆದುಕೊಳ್ಳುತ್ತಿರುವುದು ವಿಪರ್ಯಾಸ!