ನಿಖಿಲ್ ಹೇಳಿಕೆಗೆ ಜೆಡಿಎಸ್ ಕಾರ್ಯಕರ್ತರು ಶಾಕ್: ಏನಾಯಿತು?
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ತುಮಕೂರಿನಲ್ಲಿ ನೀಡಿದ ಹೇಳಿಕೆ ಕಾರ್ಯಕರ್ತರನ್ನು ದಿಗ್ಬ್ರಮೆಗೆ ದೂಡಿದೆ. ಯಾಕಾಗಿ, ನಿಖಿಲ್ ಈ ಹೇಳಿಕೆಯನ್ನು ನೀಡಿದರು ಎನ್ನುವ ಚರ್ಚೆ ಆರಂಭವಾಗಿದೆ.
ಚುನಾವಣಾ ವರ್ಷದಲ್ಲಿ ಜೆಡಿಎಸ್ ಸೇರಿದಂತೆ ಮೂರೂ ಪಕ್ಷಗಳು ತಮ್ಮದೇ ರೀತಿಯಲ್ಲಿ ಪೂರ್ವ ತಯಾರಿಯನ್ನು ಮಾಡಿಕೊಂಡು ಬರುತ್ತಿವೆ. ಈ ವೇಳೆ, ನಿಖಿಲ್ ನೀಡಿದ ಹೇಳಿಕೆಯನ್ನು ಕಾರ್ಯಕರ್ತರು ಮತ್ತು ಮುಖಂಡರು ಯಾವ ರೀತಿಯಲ್ಲಿ ತೆಗೆದುಕೊಳ್ಳಲಿದ್ದಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಅಸೆಂಬ್ಲಿ ಚುನಾವಣೆಗೆ ಕೆಲವು ತಿಂಗಳು ಇರುವ ಹೊತ್ತಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಪಕ್ಕದ ತೆಲಂಗಾಣ ಪ್ರವಾಸದಲ್ಲಿದ್ದರು. ಅಲ್ಲಿನ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರನ್ನು ಕುಮಾರಸ್ವಾಮಿ ಭೇಟಿಯಾಗಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿಯವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ನಂತರ ಕೆಸಿಆರ್, ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯ ಶಕ್ತಿಯಾಗಿ ವೇದಿಕೆ ರೂಪಿಸಲು ಸಜ್ಜಾಗಿದ್ದು ವಿಜಯದಶಮಿಯ ಮಹೂರ್ತವನ್ನು ಫಿಕ್ಸ್ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ನಿಖಿಲ್ ಹೇಳಿಕೆ ಮಹತ್ವವನ್ನು ಪಡೆದುಕೊಂಡಿದೆ.

ಹೃದಯ ಚಿಕಿತ್ಸೆಗೆ ನಮ್ಮ ತಂದೆಯವರು ಒಳಗಾಗಿದ್ದಾಗ
"ಹೃದಯ ಚಿಕಿತ್ಸೆಗೆ ನಮ್ಮ ತಂದೆಯವರು ಒಳಗಾಗಿದ್ದಾಗ ಅವರು ಬದುಕಿದ್ದೇ ಹೆಚ್ಚು, ಭಗವಂತನ ದಯೆಯಿಂದ ಉಳಿದಿದ್ದಾರೆ. ಎಷ್ಟೋ ಹೆಣ್ಣುಮಕ್ಕಳು ಕುಮಾರಣ್ಣನಿಗೆ ಏನೂ ಆಗಬಾರದು ಎಂದು ಮನೆಯಲ್ಲಿ ದೀಪವನ್ನು ಹಚ್ಚಿದ್ದಾರೆ. ಇವರೆಲ್ಲಾ ಏನೂ ಅಪೇಕ್ಷೆ ಇಟ್ಟುಕೊಳ್ಳದೇ ನೂರಾರು ವರ್ಷ ಬದುಕಬೇಕೆಂದು ಪ್ರಾರ್ಥನೆಯನ್ನು ಮಾಡಿದ್ದಾರೆ"ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ದೇವೇಗೌಡ್ರು ಅಷ್ಟಾಗಿ ಹೊರಗಡೆ ಕಾಣಿಸಿಕೊಂಡಿರಲಿಲ್ಲ
"ಕಳೆದ ಎರಡ್ಮೂರು ತಿಂಗಳಿನಿಂದ ದೇವೇಗೌಡ್ರು ಅಷ್ಟಾಗಿ ಹೊರಗಡೆ ಕಾಣಿಸಿಕೊಂಡಿರಲಿಲ್ಲ, ಇದು ಬಹುತೇಕ ಹೆಚ್ಚಿನ ಕಾರ್ಯಕರ್ತರಿಗೆ ಗೊಂದಲಕ್ಕೆ ಕಾರಣವಾಗಿತ್ತು. ಮೊನ್ನೆಯ ದಿನ ಗಣೇಶ ಹಬ್ಬದ ದಿನ ನಾನು ಕೂಡಾ ಅವರ ಜೊತೆಗೆ ಊಟವನ್ನು ಮಾಡಿದ್ದೇನೆ. ಮಾಧ್ಯಮಗಳಿಗೆ ಎರಡು ತಿಂಗಳು ಆದ ಮೇಲೆ ಪ್ರತಿಕ್ರಿಯೆಯನ್ನು ದೇವೇಗೌಡ್ರು ಕೊಟ್ಟರು"ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

2023ರ ಚುನಾವಣೆ ನಮ್ಮ ಪಾಲಿಗೆ ಇದು ಒಂದು ರೀತಿ ಕೊನೆಯ ಚುನಾವಣೆ
"ಪ್ರತಿಯೊಬ್ಬರಲ್ಲೂ ನಾನು ಹೇಳುವುದು ಇಷ್ಟೇ, ದೇವೇಗೌಡ್ರು ನಮ್ಮ ಜೊತೆಯಲ್ಲಿ ಇನ್ನೂ ನೂರಾರು ವರ್ಷ ಬದುಕಿ ಬಾಳಬೇಕು. 2023ರ ಚುನಾವಣೆ ನಮ್ಮ ಪಾಲಿಗೆ ಇದು ಒಂದು ರೀತಿ ಕೊನೆಯ ಚುನಾವಣೆ ಎಂದು ನಿಖಿಲ್ ಹೇಳಿದ್ದಾರೆ. ಕೂಡಲೇ ಸಾವರಿಸಿಕೊಂಡು, "ಇಲ್ಲಿಂದ ಹೊಸ ಅಧ್ಯಾಯ ಆರಂಭವಾಗಬೇಕು. ಜಾತ್ಯಾತೀತ ಜನತಾದಳ ಮುಂದಿನ 25ವರ್ಷ ರಾಜ್ಯಭಾರ ಮಾಡಬೇಕು"ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಯಾಕಾಗಿ, ನಿಖಿಲ್ ಇದು ಕೊನೆಯ ಚುನಾವಣೆ ಎನ್ನುವ ಮಾತನ್ನಾಡಿದರು ಎನ್ನುವ ಚರ್ಚೆ ಜೆಡಿಎಸ್ ವಲಯದಲ್ಲಿ ಆರಂಭವಾಗಿದೆ.

ಬಹುಮತ ಬರದೇ ಇದ್ದಲ್ಲಿ ಜೆಡಿಎಸ್ ಪಕ್ಷ ವಿಸರ್ಜನೆ
ಮುಂದಿನ ಚುನಾವಣೆ ನಮ್ಮ ಕೊನೆಯ ಚುನಾವಣೆ ಎನ್ನುವ ಮಾತನ್ನು ಮಾಜಿ ಸಿಎಂ ಕುಮಾರಸ್ವಾಮಿ ಈ ಹಿಂದೆ ಕೂಡಾ ಆಡಿದ್ದುಂಟು. ಬಹುಮತ ಬರದೇ ಇದ್ದಲ್ಲಿ ಜೆಡಿಎಸ್ ಪಕ್ಷವನ್ನೇ ವಿಸರ್ಜಿಸುವ ಮಾತನ್ನೂ ಕುಮಾರಣ್ಣ ಆಡಿದ್ದರು. ಹಾಗಾಗಿ, ತಂದೆ ಮತ್ತು ಮಗನ ಹೇಳಿಕೆಯ ಹಿಂದೆ ಇನ್ನೇನಾದರೂ ರಾಜಕೀಯ ಅಡಗಿದಿಯೇ ಎನ್ನುವ ಕುತೂಹಲ ಜೆಡಿಎಸ್ ವಲಯದಲ್ಲಿ ಮನೆ ಮಾಡಿದೆ.












Click it and Unblock the Notifications