ಜೆಡಿಎಸ್ ತೊರೆಯಬೇಡಿ, ಎಲ್ಲರೂ ಸೇರಿ ಪಕ್ಷ ಕಟ್ಟೋಣ
ಬೆಂಗಳೂರು, ಆ.19 : "ಯಾರು ಜೆಡಿಎಸ್ ಬಿಟ್ಟು ಹೋಗುವುದು ಬೇಡ, ನಾನು ಕಾಂಗ್ರೆಸ್ ಅಥವ ಬಿಜೆಪಿಗೆ ಹೋಗುವುದಿಲ್ಲ ಎಲ್ಲರೂ ಸೇರಿ ಪಕ್ಷ ಕಟ್ಟೋಣ" ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಕಾರ್ಯಕರ್ತರಿಗೆ ಮತ್ತು ನಾಯಕರಿಗೆ ಕರೆ ನೀಡಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕರ್ತರು ಮತ್ತು ರಾಜ್ಯ ಮಟ್ಟದ ನಾಯಕರ ಸಮಾವೇಶ ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ ಅವರು ದೇವೇಗೌಡರು ಹೇಳಿದ ಮಾತುಗಳಿಗೆ ವಿರುದ್ಧವಾದ ಮಾತುಗಳನ್ನು ಆಡಿದರು. [ದೇವೇಗೌಡರ ಖಡಕ್ ನುಡಿಗಳು ಇಲ್ಲಿವೆ]

ದೇವೇಗೌಡರ ಮಾತುಗಳನ್ನು ಅನ್ಯಥಾ ಭಾವಿಸುವುದು ಬೇಡ. ಹಣ ಇಲ್ಲದಿದ್ದರೆ ಪಕ್ಷ ಕಟ್ಟುವುದು ಕಷ್ಟ ಎಂಬ ಮನಸ್ಥಿತಿ ಎಲ್ಲರಲ್ಲೂ ಇರುವುದರಿಂದ ಬೇಸರವಾಗಿ ಅವರು ಮಾತನಾಡಿದ್ದಾರೆ. ಆದರೆ, ಯಾರೂ ಪಕ್ಷ ಬಿಟ್ಟು ಹೋಗುವುದು ಬೇಡ ಎಂದು ಕುಮಾರಸ್ವಾಮಿ ಹೇಳಿದರು.
ಕಾರ್ಯಕರ್ತರು ಮತ್ತು ನಾಯಕರು ಪಕ್ಷದ ಆಸ್ತಿ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಮರೆತು ಒಂದೇ ತಾಯಿ ಮಕ್ಕಳಂತೆ ಪಕ್ಷ ಕಟ್ಟೋಣ, ರಾಜ್ಯದಲ್ಲಿ ಪಕ್ಷವನ್ನು ಪುನಃ ಅಧಿಕಾರಕ್ಕೆ ತರೋಣ ಎಂದು ಕುಮಾರಸ್ವಾಮಿ ಕಾರ್ಯಕರ್ತರಿಗೆ ಮನವಿ ಮಾಡಿದರು.
ರಾಜಕೀಯದಲ್ಲಿ ಇರುವುದಾದರೆ ಜಾತ್ಯತೀತ ಜನತಾದಳ ಕಾರ್ಯಕರ್ತರ ಜತೆಯಲ್ಲೇ ಇರಬೇಕು. ಯಾವ ಪಕ್ಷದ ಮನೆ ಬಾಗಿಲಿಗೂ ಹೋಗಬಾರದು ಎಂದು ದೇವೇಗೌಡರು ಸಲಹೆ ನೀಡಿದ್ದಾರೆ. ಎಂತಹ ಪರಿಸ್ಥಿತಿಯಲ್ಲೂ ನಾನು ಜೆಡಿಎಸ್ ಶಕ್ತಿ ಕಡಿಮೆ ಆಗಲು ಬಿಡುವುದಿಲ್ಲ ಎಂದು ಕುಮಾರಸ್ವಾಮಿ ಘೋಷಿಸಿದರು. [ಶಿಕಾರಿಪುರದಲ್ಲಿ ಕಾಂಗ್ರೆಸ್ ಕೈಹಿಡಿದ ಜೆಡಿಎಸ್]
ಸಿದ್ದರಾಮಯ್ಯ ಷಡ್ಯಂತ್ರ : ಜೆಡಿಎಸ್ ಪಕ್ಷವನ್ನು ಮುಗಿಸಲು ಸಿಎಂ ಸಿದ್ದರಾಮಯ್ಯ ಅವರು ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದ ಕುಮಾರಸ್ವಾಮಿ, ಈ ಪ್ರಯತ್ನ ಫಲ ನೀಡುವುದಿಲ್ಲ ಎಂದು ಹೇಳಿದರು. ಶಿಕಾರಿಪುರದಲ್ಲಿ ಜೆಡಿಎಸ್ನಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಅಭ್ಯರ್ಥಿ ಮನೆಗೆ ಖುದ್ದು ಸಿದ್ದರಾಮಯ್ಯ ಹೋಗಿ ಬೆಂಬಲ ಯಾಚಿಸಿದ್ದಾರೆ. ಇಂತಹ ಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ಬರಬಾರದಿತ್ತು ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಸಮಾವೇಶದಲ್ಲಿ ಮೊದಲು ಮಾತನಾಡಿದ್ದ ಎಚ್.ಡಿ.ದೇವೇಗೌಡರು, ಜೆಡಿಎಸ್ ಪಕ್ಷವನ್ನು ಉಳಿಸಲು ನಿರ್ಣಾಯಕ ಹೋರಾಟಕ್ಕೆ ಇಳಿದಿದ್ದೇನೆ. ಯಾವುದೇ ಫಲಾಪೇಕ್ಷೆ ಇಲ್ಲದವರ ನನ್ನೊಂದಿಗೆ ಬನ್ನಿ, ಬರದಿದ್ದರೆ ನಿಮ್ಮ ದಾರಿ ನಿಮಗೆ ಎಂದು ಗೌಡರು ಗುಡುಗಿದ್ದರು.
ರಾಜ್ಯಾಧ್ಯಕ್ಷರ ಆಯ್ಕೆ ನಡೆಯಲಿಲ್ಲ : ಸಮಾವೇಶದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರ ಆಯ್ಕೆ ನಡೆಯಲಿಲ್ಲ. ಆದರೆ, ಕುಮಾರಸ್ವಾಮಿ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ನೀಡ ಬೇಕೆಂದು ಕಾರ್ಯಕರ್ತರು ಒತ್ತಾಯಿಸಿದರು.
ನಾಯಕರು ಗೈರು : ಜೆಡಿಎಸ್ ಸಮಾವೇಶಕ್ಕೆ ಶಾಸಕ ಜಮೀರ್ ಅಹಮದ್, ಇಕ್ಬಾಲ್ ಅನ್ಸಾರಿ, ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಂ ಗೈರು ಹಾಜರಾಗಿದ್ದರು. ಮಾಜಿ ಸಚಿವರಾದ ಚೆಲುವರಾಯಸ್ವಾಮಿ, ಎಂ.ಸಿ.ನಾಣಯ್ಯ, ಬಸವರಾಜ ಹೊರಟ್ಟಿ, ಶಾಸಕ ವೈ.ಎಸ್.ವಿ.ದತ್ತ ಗೌಡರ ಭಾಷಣ ಮುಗಿಯುತ್ತಲೇ ನಿರ್ಗಮಿಸಿದರು.












Click it and Unblock the Notifications