ಕುಮಾರಣ್ಣ ಬೇಕಾದ್ರೆ ಒಂದೇಟು ಹೊಡೀಲಿ, ಅದು ಬಿಟ್ಟು..: ಬಾಲಕೃಷ್ಣ
ಕುಮಾರಸ್ವಾಮಿ ಸುಮ್ನಿರೋಲ್ಲಾ.. ಅವರು ಬಿಡಲ್ಲಾ.. ಎನ್ನುವಂತಾಗಿದೆ ಜೆಡಿಎಸ್ ನಲ್ಲಿನ ಶೀತಲ ಸಮರದ ಕಥೆ. ಒಳಜಗಳ ತಾರಕಕ್ಕೇರಿದಾಗ, ಮಾಧ್ಯಮಗಳ ಮುಂದೆ ದೊಡ್ಡ ಗೌಡ್ರ ಸಮ್ಮುಖದಲ್ಲಿ ಕೈಕೈ ಹಿಡಿಯೋದು ನಂತರ ಅದೇ ಭಿನ್ನಮತದ ರಾಗ..
ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆ ಘೋಷಣೆಯಾದ ನಂತರ ರಾಜಕೀಯ ಚಟುವಟಿಕೆ ಗರಿಗೆದರಿರುವ ಬೆನ್ನಲ್ಲೇ, ಮಾಗಡಿಯ ಜನಪ್ರಿಯ ಶಾಸಕ ಎಚ್ ಸಿ ಬಾಲಕೃಷ್ಣ ಮತ್ತು ಕುಮಾರಸ್ವಾಮಿ ನಡುವಿನ ಭಿನ್ನಮತಕ್ಕೆ ಮತ್ತೆ ರಾಮನಗರ ಸಾಕ್ಷಿಯಾಗಿದೆ. (ಮಾಗಡಿಯಲ್ಲಿ ಭಿನ್ನಮತ ಮರೆತ ಜೆಡಿಎಸ್ ನಾಯಕರು)
ಶುಕ್ರವಾರ (ಜ 22) ರಾಮನಗರದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಬಾಲಕೃಷ್ಣ, ನಾವು ಜೆಡಿಎಸ್ ನಲ್ಲೇ ಇರುತ್ತೇವೆ. ನೀವೇ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಎಷ್ಟು ಮನದಟ್ಟು ಮಾಡಿದರೂ ಕುಮಾರಸ್ವಾಮಿಗೆ ನಮ್ಮ ಮೇಲೆ ನಂಬಿಕೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಬಾಲಕೃಷ್ಣ ಹೇಳಿಕೆಗೆ ರಾಮನಗರದಲ್ಲೇ ತಿರುಗೇಟು ನೀಡಿದ ಎಚ್ಡಿಕೆ, ನಮಗೆ ಯಾರೇ ಕೇಡನ್ನು ಬಯಸಿದರೂ ನಾವು ಅವರ ವಿರುದ್ದ ದ್ವೇಷ ಸಾಧಿಸುವವರಲ್ಲ ಎಂದು ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. (ನಮ್ಮ ನಡುವೆ ತಂದಿಡಬೇಡಿ: ಎಚ್ಡಿಕೆ)
ತಿಂದ ಮನೆಗೆ ದ್ರೋಹ ಬಗೆಯುವ ಜಾಯಮಾನ ನನ್ನದಲ್ಲ. ಕುಮಾರಣ್ಣ ಬೇಕಾದರೆ ನಾಲ್ಕು ಗೋಡೆಯ ಮಧ್ಯೆ ಒಂದೇಟು ಹೊಡೆಯಲಿ, ಅದು ಬಿಟ್ಟು ಬಹಿರಂಗ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕೆಂದು ಬಾಲಕೃಷ್ಣ ಹೇಳಿದ್ದಾರೆ. ಬಾಲಕೃಷ್ಣ ಮತ್ತು ಕುಮಾರಸ್ವಾಮಿಯವರ ಇಂಟರೆಸ್ಟಿಂಗ್ ಹೇಳಿಕೆಗಳು, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಕುಮಾರಸ್ವಾಮಿ ಸಂಶಯ ಬಿಡಬೇಕು
ನಾನು ಜೆಡಿಎಸ್ ಪಕ್ಷದ ನಿಯತ್ತಿನ ಕಾರ್ಯಕರ್ತ ಮತ್ತು ಶಾಸಕ. ಅದೆಷ್ಟೋ ಬಾರಿ ಇದನ್ನು ರುಜುವಾತು ಪಡಿಸಿದ್ದೇನೆ. ಆದರೂ ಕುಮಾರಸ್ವಾಮಿ ನಮ್ಮನ್ನು ಸಂಶಯದ ದೃಷ್ಟಿಯಿಂದ ನೋಡುವುದು ತಪ್ಪುತ್ತಿಲ್ಲ - ಮಾಗಡಿಯ ಜೆಡಿಎಸ್ ಶಾಸಕ ಎಚ್ ಸಿ ಬಾಲಕೃಷ್ಣ.

ರಾಜ್ ಅಭಿನಯದ ಬಂಗಾರದ ಮನುಷ್ಯ
ರಾಜ್ ಅಭಿನಯದ ಬಂಗಾರದ ಮನುಷ್ಯ ಚಿತ್ರದ ಸಂಭಾಷಣೆಯನ್ನು ಉಲ್ಲೇಖಿಸಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ಕೈಯಲ್ಲಿ ಮಣ್ಣು ಹಿಡಿದು 'ನಿನ್ನನ್ನೇ ನಂಬಿದ್ದೇನೆ, ನನ್ನ ಕುಟುಂಬವನ್ನು ಕಾಪಾಡು' ಎಂದು ಭೂತಾಯಿಯಲ್ಲಿ ರಾಜಕುಮಾರ್ ಪ್ರಾರ್ಥಿಸುತ್ತಾರೆ. ನಾನು ಹಾಗೇ ನಿಮ್ಮನ್ನೇ ನಂಬಿದ್ದೇನೆ, ನನ್ನ ಕೈಬಿಡಬೇಡಿ ಎಂದು ರಾಮನಗರದ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಎಚ್ಡಿಕೆ ಬಹಿರಂಗ ಹೇಳಿಕೆ
ಎಚ್ಡಿಕೆ ಬಹಿರಂಗ ಹೇಳಿಕೆ ನೀಡಬಾರದು ಎನ್ನುವ ಬಾಲಕೃಷ್ಣ, ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಇ ಕೃಷ್ಣಪ್ಪ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸೋಲಲು ಕುಮಾರಸ್ವಾಮಿಯೇ ಪರೋಕ್ಷ ಕಾರಣ ಎನ್ನುವ ಹೇಳಿಕೆಯನ್ನು ಬಹಿರಂಗವಾಗಿ ನೀಡಿದ್ದರು.

ಕುಮಾರಸ್ವಾಮಿ ಹೇಳಿಕೆ
ಬಂಗಾರದ ಮನುಷ್ಯ ಚಿತ್ರದ ಇನ್ನೊಂದು ಸನ್ನಿವೇಶವನ್ನು ಉದಾಹರಣೆಗೆ ತೆಗೆದುಕೊಂಡು ಮಾತನಾಡುತ್ತಿದ್ದ ಕುಮಾರಣ್ಣ, ತಾನೇ ಬೆಳೆಸಿದ ಅಕ್ಕನ ಮಕ್ಕಳು ಮಾವ ತಿನ್ನುತ್ತಿರುವುದು ನಮ್ಮ ಅನ್ನ ಎಂದಾಗ ರಾಜಣ್ಣ, ಚಪ್ಪಲಿ ಬಿಟ್ಟು ಊರು ಬಿಟ್ಟು ಹೋಗುತ್ತಾರೆ. ಹೋಗುವ ಮುನ್ನ ಇಷ್ಟು ದಿನ ನನ್ನ ಕುಟುಂಬವನ್ನು ಕೈಹಿಡಿದಿದ್ದೀಯಾ, ಇನ್ಮುಂದೆಯೂ ನನ್ನ ಅಕ್ಕನ ಕುಟುಂಬವನ್ನು ಕಾಪಾಡು ಎಂದು ಪ್ರಾರ್ಥಿಸುತ್ತಾರೆ. ನಮ್ಮ ಕುಟುಂಬವೂ ಹಾಗೇ ಎಂದು ಭಾರೀ ಕರತಾಡನದೊಂದಿಗೆ ಕುಮಾರಸ್ವಾಮಿ, ರಾಮನಗರದಲ್ಲಿ ಹೇಳಿದ್ದಾರೆ.

ಮತ್ತೆ ಕಣ್ಣೀರಿಟ್ಟ ಕುಮಾರಸ್ವಾಮಿ
ಕಾರ್ಯಕ್ರಮದಲ್ಲಿ ಭಾವೋದ್ವೇಗಕ್ಕೊಳಗಾಗಿ ಕಣ್ಣೀರಿಟ್ಟ ಕುಮಾರಸ್ವಾಮಿ, ನಾನು ರಾಮನಗರದ ಜನತೆಯನ್ನೇ ನಂಬಿದ್ದೇನೆ. ಇದು ನನ್ನ ರಾಜಕೀಯ ಕರ್ಮಭೂಮಿ, ನಮ್ಮ ಕೈಬಿಡಬೇಡಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.












Click it and Unblock the Notifications