ರಾಜ್ಯಪಾಲ ವಾಲಾ ಇಲ್ಲಿ ಇರೋದೇ ವ್ಯವಹಾರ ನಡೆಸೋಕೆ: ಎಚ್ಡಿಕೆ
ಕಾಂಗ್ರೆಸ್ ಮತ್ತು ಬಿಜೆಪಿಯನ್ನು ತರಾಟೆಗೆ ತೆಗೆದುಕೊಳ್ಳುವಲ್ಲಿ ಮಂಚೂಣಿಯಲ್ಲಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿಯವರ ಕಣ್ಣು ಈಗ ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ಮೇಲೆ ನೆಟ್ಟಿದೆ.
ವಾರಕ್ಕೊಮ್ಮೆ ಗುಜರಾತಿಗೆ ಯಾಕೆ ರಾಜ್ಯಪಾಲರು ಹೋಗುತ್ತಾರೆ ಎನ್ನುವುದನ್ನು ತನಿಖೆ ನಡೆಸುವುದು ಸೂಕ್ತ ಎಂದ ಕುಮಾರಸ್ವಾಮಿ, ಪ್ರತೀ ಬಾರೀ ಆರೋಪ ಹೊರಿಸುವಾಗ ಹೇಳುವ 'ದಾಖಲೆ ಬಿಡುಗಡೆ ಮಾಡುತ್ತೇನೆ' ಎನ್ನುವ ಪದವನ್ನು ಬಳಸಲಿಲ್ಲ. (ರಾಜಭವನ ಗುಜರಾತ್ ಭವನ ಆಗಿದೆ)
ಮೈಸೂರಿನಲ್ಲಿ ಸೋಮವಾರ (ಮೇ 23) ಮಾತನಾಡುತ್ತಿದ್ದ ಕುಮಾರಸ್ವಾಮಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವುದು ಲೂಟಿ ಮಾಡಲು. ಖುದ್ದು ಮುಖ್ಯಮಂತ್ರಿಗಳೇ ಲೂಟಿಕೋರರಿಗೆ ರಕ್ಷಣೆ ನೀಡುತ್ತಿದ್ದಾರೆಂದು ಎಚ್ಡಿಕೆ ಆರೋಪಿಸಿದ್ದಾರೆ.
ಕೆಲವು ದಿನಗಳ ಹಿಂದೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರಿಗೆ ಭೇಟಿಗೆ ಅವಕಾಶ ಕಲ್ಪಿಸಿದ್ದ ರಾಜ್ಯಪಾಲರು, ಗೌಡ್ರನ್ನು ಕಾಯಿಸಿ ಭೇಟಿ ಮಾಡದೇ ತಮ್ಮ ಸಚಿವಾಲಯದ ಅಧಿಕಾರಿಗಳ ಮೂಲಕ ಮನವಿ ಪತ್ರ ಪಡೆದುಕೊಂಡು ವಾಪಸ್ ಕಳುಹಿಸಿದ್ದರು. (ರಾಜಭವನಕ್ಕೆ 4 ಕೋಟಿ ಖರ್ಚು ಮಾಡಿದ ವಾಲಾ)
ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಕುಮಾರಸ್ವಾಮಿ, ಗುಜರಾತ್ ನಿಂದ ಬರುವಾಗ ಸಿಹಿ ತರುವ ರಾಜ್ಯಪಾಲರು ಇಲ್ಲಿಂದ ಹೋಗುವಾಗ ಏನು ತೆಗೆದುಕೊಂಡು ಹೋಗುತ್ತಾರೆ ಎನ್ನುವುದನ್ನು ತನಿಖೆ ನಡೆಸಿದರೆ ಉತ್ತಮ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ರಾಜ್ಯಪಾಲರು ಇಲ್ಲಿ ಇರೋದೇ ವ್ಯವಹಾರ ನಡೆಸೋಕೆ
ರಾಜ್ಯಪಾಲರು ವಾರಕ್ಕೊಮ್ಮೆ ಗುಜರಾತಿಗೆ ಹೋಗುತ್ತಾರೆ. ಅವರು ಇಲ್ಲಿ ಇರೋದೇ ವ್ಯವಹಾರ ನಡೆಸೋಕೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ವ್ಯಂಗ್ಯ ಮಿಶ್ರಿತ ವಾಗ್ದಾಳಿ
ಗುಜರಾತ್ ನಿಂದ ಬರುವಾಗ ಸ್ವೀಟ್ ತರುತ್ತಾರೆ, ಆದರೆ ಇಲ್ಲಿಂದ ಪ್ರತೀ ವಾರ ಹೋಗುತ್ತಾರಲ್ವಾ, ಇಲ್ಲಿಂದ ಏನು ತೆಗೆದುಕೊಂಡು ಹೋಗುತ್ತಾರೆ. ಇದನ್ನು ತನಿಖೆಗೆ ಒಳಪಡಿಸಿದರೆ ನಿಜಾಂಶ ಹೊರಬರಬಹುದು - ಕುಮಾರಸ್ವಾಮಿ.

ತನಿಖೆಯಾಗಲಿ ಎಂದ ಕುಮಾರಸ್ವಾಮಿ
ರಾಜ್ಯದ ಜನರ ರಕ್ಷಣೆಗೆ ರಾಜ್ಯಪಾಲ ವಾಲಾ ಅವರು ಇಲ್ಲಿಗೆ ಬಂದಿಲ್ಲ. ಅವರು ಬಂದಿರೋದು, ಬೇರೆ ಕಾರಣಕ್ಕೆ. ಇಲ್ಲಿಂದ ವಾರ ವಾರ ಗುಜರಾತಿಗೆ ಏನು ಸರಬರಾಜು ಆಗುತ್ತಿದೆ ಎನ್ನುವುದರ ಬಗ್ಗೆ ಕೂಲಂಕುಷ ತನಿಖೆಯಾಗಲಿ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಸಿದ್ದು ಸರಕಾರ ಯಾರ ಪರವಾಗಿಯೂ ಇಲ್ಲ
ಸಿದ್ದರಾಮಯ್ಯನವರ ಸರಕಾರ ದಲಿತರ ಪರವಾಗಿಯೂ ಇಲ್ಲ, ಅಹಿಂದ ವರ್ಗದ ಪರವಾಗಿಯೂ ಇಲ್ಲ, ಅವರ ಸರಕಾರ ಲೂಟಿಕೋರರ ಪರವಾಗಿದೆ, ಲೂಟಿ ಕೋರರಿಗೆ ರಕ್ಷಣೆ ನೀಡುವುದೇ ಸಿದ್ದರಾಮಯ್ಯನವರ ಏಕೈಕ ಗುರಿಯೆಂದು ಜೆಡಿಎಸ್ ರಾಜ್ಯಧ್ಯಕ್ಷ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಜನತಾ ದರ್ಶನ ಎನ್ನುವ ಕಪಟ ನಾಟಕ
ಮುಖ್ಯಮಂತ್ರಿಗಳ ಜನತಾ ದರ್ಶನ ಎನ್ನುವುದು ದೊಡ್ಡ ಕಪಟ ನಾಟಕ. ಅಧಿಕಾರಿಗಳು ಮುಖ್ಯಮಂತ್ರಿಗಳ ಮಾತನ್ನು ಕೇಳುತ್ತಿಲ್ಲ. ಜನತಾ ದರ್ಶನಕ್ಕೆ ಬಂದಂತಹ ಮಹಿಳೆಯ ಜೊತೆ ಮುಖ್ಯಮಂತ್ರಿ ಕಾರ್ಯಾಲಯದ ಅಧಿಕಾರಿಗಳು ಮನುಷ್ಯತ್ವ ಇಲ್ಲದವರ ಹಾಗೆ ನಡೆದುಕೊಂಡಿದ್ದಾರೆ - ಕುಮಾರಸ್ವಾಮಿ ಆರೋಪ.












Click it and Unblock the Notifications