ಕುಮಾರಸ್ವಾಮಿಯೇ ಈಗಿನ ಸತ್ಯ ಹರಿಶ್ಚಂದ್ರ ಹೇಳಿಕೆ: ಜೆಡಿಎಸ್ ಕೊಡ್ತು ಸರಿಯಾದ ಟಕ್ಕರ್
ಸತ್ಯ ಹರಿಶ್ಚಂದ್ರನ ಬಳಿಕ ಎಚ್.ಡಿ.ಕುಮಾರಸ್ವಾಮಿ ಅವರೇ ನಿಜವಾದ ಹರಿಶ್ಚಂದ್ರ ಎಂದು ವ್ಯಂಗ್ಯವಾಡಿದ್ದ ಕಾಂಗ್ರೆಸ್ ಸಚಿವ ಚಲುವರಾಯಸ್ವಾಮಿ ಅವರಿಗೆ ಜೆಡಿಎಸ್ ತಿರುಗೇಟು ನೀಡಿದೆ. ಸತ್ಯಕ್ಕಾಗಿ ಸಿಂಹಾಸನವನ್ನೇ ತೃಣದಂತೆ ಕಂಡಿದ್ದ ಸತ್ಯ ಹರಿಶ್ಚಂದ್ರ ಮಹಾರಾಜರಿಗೆ ಅಪಮಾನ ಮಾಡಬೇಡಿ. ಆ ಪುಣ್ಯ ಪುರುಷರ ಹೆಸರಿಗೆ ಮಸಿ ಬಳಿದು ಪಾಪ ಕಟ್ಟಿಕೊಳ್ಳಬೇಡಿ ಎಂದು ಟಾಂಗ್ ನೀಡಿದೆ.
ಸತ್ಯ ನಮ್ಮಪ್ಪನ ಮನೆ ಜಹಗೀರು ಎಂದು ಪೋಸು ಕೊಡುತ್ತಿರುವ ಸಚಿವರೇ, ಸುಳ್ಳು ಹೇಳುವುದನ್ನು, ಹಬ್ಬಿಸುವುದನ್ನು ನಿಲ್ಲಿಸಿ. ಹಿಟ್ಲರನ ಮಂತ್ರಿ ಗೋಬೆಲ್ ಚಾಳಿ ಬಿಡಿ ಎಂದು ಕುಟುಕಿದೆ. ಸುಮಲತಾ ಅವರು ಬಳಸಿದ್ದ ಕಾರು ಬಳಸುವುದಿಲ್ಲ ಎಂದು ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರಾ? ಒಂದು ವೇಳೆ ಹೇಳಿದ್ದರೆ ಎಲ್ಲಿ, ಯಾವಾಗ, ಯಾರಿಗೆ ಹೇಳಿದ್ದರು? ಅಥವಾ ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರವನ್ನೇನಾದರೂ ಬರೆದಿದ್ದರೇ? ನೀವು ದಾಖಲೆ ಸಮೇತ ಹೇಳಬೇಕಲ್ಲವೇ? ಎಂದು ಸವಾಲು ಹಾಕಿದೆ.

ಸಂಸದರಿಗೆ ಕೊಡಲಾಗುವ ಕಾರಿನ ಮೇಲೆ ಯಾರ ಮಾಲೀಕತ್ವವೂ ಇರುವುದಿಲ್ಲ. ಅದು ಹಿಂದಿನ ಸಂಸದರದೂ ಅಲ್ಲ, ಈಗಿನ ಸಂಸದರದೂ ಅಲ್ಲ ಎಂಬ ಸಾಮಾನ್ಯ ತಿಳಿವಳಿಕೆ ಸಂಪುಟ ದರ್ಜೆ ಸಚಿವರಾದ ನಿಮಗಿಲ್ಲವಲ್ಲ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ. ರಾಜ್ಯದ ಎಲ್ಲ ಸಂಸದರಿಗೂ ಕಾಂಗ್ರೆಸ್ ಸರ್ಕಾರದ ವತಿಯಿಂದ ಹೊಸ ಕಾರುಗಳನ್ನು ಕೊಡಲಾಯಿತು. ಆದರೆ, ಮಂಡ್ಯ, ಕೋಲಾರದ ಸಂಸದರಾದ ಎಚ್.ಡಿ.ಕುಮಾರಸ್ವಾಮಿ ಮತ್ತು ಮಲ್ಲೇಶ್ ಬಾಬು ಅವರಿಗೆ ಹಳೆಯ ಕಾರುಗಳನ್ನು ಕೊಡಲಾಯಿತು. ಇದು ಯಾಕೆ ಎಂದು ಹೇಳುತ್ತೀರಾ ಚೆಲುವರಾಯಸ್ವಾಮಿ ಅವರೇ? ಎಂದು ಪ್ರಶ್ನಿಸಿದೆ.
ಐದು ವರ್ಷಗಳ ಹಳೆಯ ಕಾರಿನ ಬದಲು ಹೊಸ ಕಾರು ಕೊಡಿ ಎಂದು ಮಾನ್ಯ ಕೇಂದ್ರ ಸಚಿವರು ಕೇಳಿದ್ದರು. ಅದರಲ್ಲಿ ತಪ್ಪೇನಿದೆ? ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯಲ್ಲಿ ಹೊಸ ಕಾರುಗಳ ಕಥೆ ಹೊಸದಲ್ಲ, ನಿಮ್ಮ ಕಾರುಬಾರು ಕೂಡ ಜೋರಾಗಿ ನಡೆದಿದೆಯಲ್ಲ? ಎಂದು ತಿರುಗೇಟು ನೀಡಿದೆ.
ಚಲುವರಾಯಸ್ವಾಮಿ ಹೇಳಿದ್ದೇನು?: ಇತ್ತೀಚೆಗೆ ಮಂಡ್ಯದಲ್ಲಿ ಮಾತನಾಡಿದ್ದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಯಾವ ಲಂಚದ ಹಣವನ್ನೂ ಮುಟ್ಟದ ಸತ್ಯಹರಿಶ್ಚಂದ್ರ ಇದ್ರೆ, ಅದು ಕುಮಾರಸ್ವಾಮಿ ಮಾತ್ರ ಎಂದು ವ್ಯಂಗ್ಯವಾಡಿದ್ದರು. ಕೇಂದ್ರ ಸಚಿವ ಕುಮಾರಸ್ವಾಮಿ ಮಾಡೋದೆಲ್ಲ ಗಂಭೀರ ಆರೋಪ. ಆದ್ರೆ ಅವರು ತಮ್ಮ ಬಾಯಿ ಚಪಲಕ್ಕೆ ಮಾತನಾಡುತ್ತಾರೆ ಎಂದಿದ್ದರು.
ರಾಜ್ಯದಲ್ಲಿ ಮೂರು ಕ್ಷೇತ್ರದ ಉಪ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಆಗ ಕೂಡ ಕುಮಾರಸ್ವಾಮಿ ಬಾಯಿ ಚಪಲಕ್ಕೆ ಏನೇನೋ ಹೇಳಿದ್ದರು. ಇನ್ನು ಒಬ್ಬ ಮಾಜಿ ಸಿಎಂ ಮಾತನಾಡುವುದಕ್ಕೆ ನಾನು ಉತ್ತರಿಸಲು ನೂರು ಸಲ ಯೋಚಿಸುವಂತಿರಬೇಕು. ಆದರೆ ಅವರು ಮಾತಿನ ಶೂರತ್ವ ತೋರಿತ್ತಾರೆ ಎಂದು ಹೇಳಿದ್ದರು.
ಸುಮಲತಾ ಅಂಬರೀಶ್ ಬಳಸುತ್ತಿದ್ದ ಕಾರು ನನಗೆ ಬೇಡ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂದೂ ಚಲುವರಾಯಸ್ವಾಮಿ ಹೇಳಿದ್ದರು. ಇದಕ್ಕೆ ನಾವೇನು ಮಾಡಲು ಸಾಧ್ಯ? ಸುಮಲತಾ ಅವರು ಬಳಸುತ್ತಿದ್ದ ಕಾರನ್ನು ಕುಮಾರಸ್ವಾಮಿ ಏಕೆ ಬೇಡ ಅಂತಿದ್ದಾರೋ ಗೊತ್ತಿಲ್ಲ. ನಾವೇನು ಕಾರು ಕೊಡಲ್ಲ ಎಂದು ಹೇಳಿಲ್ಲ. ಕುಮಾರಸ್ವಾಮಿ ಅವರೇ ಕಾರು ಬೇಡ ಅಂದಿರೋದು ಎಂದು ಚಲುವರಾಯಸ್ವಾಮಿ ಟಾಂಗ್ ನೀಡಿದ್ದರು.












Click it and Unblock the Notifications