ನಿಖಿಲ್ ಕುಮಾರಸ್ವಾಮಿ ಭೇಟಿಯಾದ ಎಚ್.ವಿಶ್ವನಾಥ್
ಬೆಂಗಳೂರು, ಜೂನ್ 03 : ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ನಿಖಿಲ್ ಕುಮಾರಸ್ವಾಮಿ ರಾಜಕೀಯದಲ್ಲಿ ಮತ್ತಷ್ಟು ಸಕ್ರಿಯರಾಗಲಿದ್ದಾರೆ. ಹಲವು ನಾಯಕರನ್ನು ಭೇಟಿಯಾಗಿ ಅವರು ಸಲಹೆಗಳನ್ನು ಪಡೆಯುತ್ತಿದ್ದಾರೆ.
ಸೋಮವಾರ ಕರ್ನಾಟಕ ಜೆಡಿಎಸ್ ಅಧ್ಯಕ್ಷ ಎಚ್.ವಿಶ್ವನಾಥ್ ಅವರು ಬೆಂಗಳೂರಿನಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಭೇಟಿಯಾದರು. ಈ ಕುರಿತು ನಿಖಿಲ್ ಕುಮಾರಸ್ವಾಮಿ ಅವರು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾರೆ.
ಚುನಾವಣೆ ಸೋತ ನಿಖಿಲ್ಗೆ ಕುಮಾರಸ್ವಾಮಿಯಿಂದ ಉಡುಗೊರೆ!
ಮಂಡ್ಯ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರತಿನಿತ್ಯ ಸಾವಿರಾರು ಜನರನ್ನು ಭೇಟಿ ಮಾಡಿದ್ದೇನೆ, ಅವರ ಕುಂದು-ಕೊರತೆಗಳನ್ನು, ಅವರ ನಿರೀಕ್ಷೆಗಳನ್ನು ತಿಳಿಯುವ ಪ್ರಯತ್ನ ಮಾಡಿದ್ದೇನೆ. ಇದರಿಂದ ನನಗೆ ಸಿಕ್ಕ ಅನುಭವ ನನ್ನಲ್ಲಿರುವ ರಾಜಕಾರಣಿಯನ್ನು ರೂಪಿಸುತ್ತಿರುವುದು ಮಾತ್ರವಲ್ಲ, ಸಾರ್ವಜನಿಕ ಜೀವನದ ವಾಸ್ತವ ಮುಖವನ್ನು ಪರಿಚಯ ಮಾಡಿಕೊಟ್ಟಿದೆ ಎಂದು ನಿಖಿಲ್ ಕುಮಾರಸ್ವಾಮಿ ಫೇಸ್ಬುಕ್ನಲ್ಲಿ ಬರೆದಿದ್ದಾರೆ.
ಮಂಡ್ಯದಲ್ಲಿ ಜಮೀನಿಗಾಗಿ ಹುಡುಕಾಟ ನಡೆಸಿದ್ದಾರೆ ನಿಖಿಲ್ ಕುಮಾರಸ್ವಾಮಿ!
ಎಚ್.ವಿಶ್ವನಾಥ್ ಅವರು ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು. ಕೆಲವು ದಿನಗಳಿಂದ ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದ ಅವರು ಇಂದು ಕುಮಾರಸ್ವಾಮಿ ಭೇಟಿ ಮಾಡಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.
ಸೋಲು-ಗೆಲುವು ಇರುವುದೇ
ಚುನಾವಣೆಯಲ್ಲಿ ಸೋಲು-ಗೆಲುವುಗಳು ಇದ್ದದ್ದೇ. ಇದರ ನಂತರ ನಾನು ಹೇಗೆ ಮುಂದುವರಿಯಬೇಕು, ಜನರು, ನನ್ನ ಪಕ್ಷ ನನ್ನ ಮೇಲೆ ಇಟ್ಟಿರುವ ನಂಬಿಕೆ-ವಿಶ್ವಾಸಗಳನ್ನು ಹೇಗೆ ಉಳಿಸಿಕೊಳ್ಳಬೇಕು, ಅವರ ನಿರೀಕ್ಷೆಗಳಿಗೆ ಸ್ಪಂದಿಸಬೇಕು ಎನ್ನುವುದನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಹಲವಾರು ವಿಚಾರ ಚರ್ಚಿಸಿದೆ
ಹಿರಿಯ ನಾಯಕರು, ರಾಜಕಾರಣದ ಒಳ-ಹೊರಗನ್ನು ಚೆನ್ನಾಗಿ ತಿಳಿದುಕೊಂಡಿರುವ ನಮ್ಮ ರಾಜ್ಯಾಧ್ಯಕ್ಷರಾದ ಎಚ್.ವಿಶ್ವನಾಥ್ ಅವರನ್ನು ಭೇಟಿ ಮಾಡಿ ಹಲವಾರು ವಿಷಯಗಳನ್ನು ಚರ್ಚಿಸಿ, ಅವರಿಂದ ಮಾರ್ಗದರ್ಶನ ಪಡೆದುಕೊಂಡೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಸಲಹೆ ಸೂಚನೆಗಳು ಅಗತ್ಯ
ರಾಜಕಾರಣದಲ್ಲಿ ಈಗ ತಾನೆ ಕಾಲಿಡುತ್ತಿರುವ ನನ್ನಂಥ ಯುವ ಕಾರ್ಯಕರ್ತರಿಗೆ, ಪಕ್ಷದ ಎಲ್ಲ ಹಿರಿಯರ, ನಾಯಕರ ಸಲಹೆ, ಸೂಚನೆಗಳು, ಆಶೀರ್ವಾದ, ಮಾರ್ಗದರ್ಶನ ಅತ್ಯವಶ್ಯಕವಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಫೇಸ್ಬುಕ್ನಲ್ಲಿ ಬರೆದಿದ್ದಾರೆ.
ಎಚ್.ವಿಶ್ವನಾಥ್ ರಾಜೀನಾಮೆ
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಹಬ್ಬಿದೆ. ಮಂಗಳವಾರ ಅವರು ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.