ಅತೃಪ್ತ ಶಾಸಕರ ಸಭೆಯಲ್ಲಿ ನೋವು ತೋಡಿಕೊಂಡು ಕ್ಷಮೆಕೋರಿದ ಕುಮಾರಸ್ವಾಮಿ
ಬೆಂಗಳೂರು, ನ 13: ಐದು ಗಂಟೆಗಳ ಕಾಲ ನಡೆದ ಸುದೀರ್ಘ ಸಭೆ ಮುಗಿಸಿ ಹೊರಬಂದ ಜೆಡಿಎಸ್ ಶಾಸಕರಲ್ಲಿ ಕೊಂಚ ಸಮಾಧಾನ ಎದ್ದು ಕಾಣುತ್ತಿತ್ತು.
ಲಂಡನ್ ಪ್ರವಾಸದಿಂದ ಕುಮಾರಸ್ವಾಮಿ ಬಂದ ಕೂಡಲೇ, ಪಕ್ಷದ ಸಭೆ ಕರೆದು ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತೇನೆ ಎಂದು ಜೆಡಿಎಸ್ ವರಿಷ್ಠ ದೇವೇಗೌಡ್ರು, ಪಕ್ಷದ ಅಸಮಾಧಾನಿತ ಶಾಸಕರಿಗೆ ಮಾತು ಕೊಟ್ಟಿದ್ದರು.
ಅದರಂತೇ, ಮಂಗಳವಾರ (ನ 12) ತಮ್ಮ ನಿವಾಸದಲ್ಲಿ ದೇವೇಗೌಡ್ರು, ಪುತ್ರ ಕುಮಾರಸ್ವಾಮಿ ಸಮ್ಮುಖದಲ್ಲಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಅತೃಪ್ತ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರು ಭಾಗವಹಿಸಿದ್ದರು.
ಎಲ್ಲರ ಸಮಸ್ಯೆ/ನೋವುಗಳನ್ನು ದೇವೇಗೌಡ್ರು ಎಂದಿನಂತೆ ತಾಳ್ಮೆಯಿಂದ ಆಲಿಸಿದ್ದಾರೆ. ಸಭೆಯಲ್ಲಿ ಎಚ್.ಡಿ.ಕುಮಾರಸ್ವಾಮಿ, ತನ್ನಿಂದಾದ ತಪ್ಪಿಗೆ ಕ್ಷಮೆಕೋರಿದ್ದಾರೆ.

ಕುಮಾರಸ್ವಾಮಿ ಸಮ್ಮುಖದಲ್ಲೇ ಸಮಸ್ಯೆ ಪರಿಹರಿಸಿಕೊಳ್ಳೋಣ, ಗೌಡ್ರು
ಪ್ರಮುಖ ಅತೃಪ್ತರನ್ನು ಗೌಡ್ರು ತಮ್ಮ ನಿವಾಸಕ್ಕೆ ಕರೆಸಿಕೊಂಡು ಮಾತುಕತೆ ನಡೆಸಿದ್ದರು. ಅವರ ಅಸಮಾಧಾನವನ್ನು ಒಂದು ಹಂತಕ್ಕೆ ಸರಿದಾರಿಗೆ ತರುವಲ್ಲಿ ಗೌಡ್ರು ಯಶಸ್ವಿಯಾಗಿದ್ದರು. ಆದರೆ, "ಕಾಯಿಲೆ ಏನೂಂತಾ ಗೊತ್ತಾದರೆ, ಔಷಧಿ ಕೊಡಬಹುದು" ಎಂದು ಕುಮಾರಸ್ವಾಮಿ, ಎಂಎಲ್ಸಿಗಳ ಭೇಟಿಯ ಬಗ್ಗೆ ವ್ಯಂಗ್ಯವಾಡಿದ್ದರು. ಇದಕ್ಕೆ ಮತ್ತೆ ಬೇಸರಿಸಿಕೊಂಡ ಎಂಎಲ್ಸಿಗಳನ್ನು ಸಮಾಧಾನ ಪಡಿಸಿದ ಗೌಡ್ರು, ಕುಮಾರಸ್ವಾಮಿ ಸಮ್ಮುಖದಲ್ಲೇ ಸಮಸ್ಯೆ ಪರಿಹರಿಸಿಕೊಳ್ಳೋಣ ಎಂದು ಹೇಳಿದ್ದರು.

ಅತೃಪ್ತರ ಎಲ್ಲಾ ವಿಷಯಗಳನ್ನು ಸಮಚಿತ್ತದಿಂದ ಗೌಡ್ರು ಮತ್ತು ಕುಮಾರಸ್ವಾಮಿ ಆಲಿಕೆ
ಅತೃಪ್ತರ ಎಲ್ಲಾ ವಿಷಯಗಳನ್ನು ಸಮಚಿತ್ತದಿಂದ ದೇವೇಗೌಡ್ರು ಮತ್ತು ಕುಮಾರಸ್ವಾಮಿ ಆಲಿಸಿದ್ದಾರೆ. ಒಬ್ಬೊಬ್ಬರು ತಮಗಾಗುತ್ತಿರುವ ನೋವನ್ನು ಸವಿಸ್ತಾರವಾಗಿ ವಿವರಿಸಿದ್ದಾರೆ. ಎಲ್ಲರ ಮಾತಿನ ನಂತರ, ಕುಮಾರಸ್ವಾಮಿ, "ನನ್ನಿಂದ ತಪ್ಪಾಗಿರುವುದು ಹೌದು, ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ" ಎಂದು ಹೇಳಿದ್ದಾರೆ.

ಅತೃಪ್ತ ಶಾಸಕರ ಸಭೆಯಲ್ಲಿ ನೋವು ತೋಡಿಕೊಂದು ಕ್ಷಮೆಕೋರಿದ ಕುಮಾರಸ್ವಾಮಿ
"ಮುಖ್ಯಮಂತ್ರಿಯಾಗಿದ್ದಾಗ, ಯಾವ ರೀತಿ ಟೆನ್ಸನ್ ನಲ್ಲಿ ನಾನಿದ್ದೆ ಎನ್ನುವುದು ಗೊತ್ತಿರುವ ವಿಚಾರ. ಆ ವೇಳೆ, ನಿಮ್ಮ ಬೇಡಿಕೆಗಳ ಬಗ್ಗೆ ಗಮನ ಹರಿಸದ ಪರಿಸ್ಥಿತಿಯಲ್ಲಿದ್ದೆ. ಇದು ಉದ್ದೇಶಪೂರ್ವಕವಲ್ಲ, ಈಗ ನೀವು ಅನುಭವಿಸಿದ ನೋವನ್ನು ವಿವರಿಸಿದ್ದೀರಿ. ಮುಂದೆ, ಎಂದೂ ಹೀಗಾಗದಂತೆ ನೋಡಿಕೊಳ್ಳುತ್ತೇನೆ" ಎಂದು ಕುಮಾರಸ್ವಾಮಿ ಭರವಸೆ ನೀಡಿದ್ದಾರೆಂದು ಹೇಳಲಾಗುತ್ತಿದೆ.

ಸರಿಯಾಗಿ ನೋಡಿಕೊಂಡಿಲ್ಲ ಎನ್ನುವ ನೋವು ನನಗೆ ಕಾಡುತ್ತಿದೆ
"ನಿಮ್ಮನ್ನು ಸರಿಯಾಗಿ ನೋಡಿಕೊಂಡಿಲ್ಲ ಎನ್ನುವ ನೋವು ನನಗೆ ಕಾಡುತ್ತಿದೆ. ಇದಕ್ಕೆ ನನಗೆ ವಿಷಾದವಿದೆ. ಮುಂದೆ ಎಲ್ಲವೂ ಸರಿಹೋಗಲಿದೆ. ನಾವೆಲ್ಲಾ ಒಗ್ಗಟ್ಟಾಗಿ ಇರಬೇಕಾಗಿರುವ ಸಮಯವಿದು. ಎಲ್ಲರೂ ಒಟ್ಟಾಗಿ ಮುಂದಕ್ಕೆ ಸಾಗೋಣ, ನಿಮ್ಮ ಸಹಕಾರವಿರಲಿ" ಎಂದು ಕುಮಾರಸ್ವಾಮಿ, ಅತೃಪ್ತರಲ್ಲಿ ಮನವಿ ಮಾಡಿದ್ದಾರೆಂದು ತಿಳಿದುಬಂದಿದೆ.

ಬಸವರಾಜ ಹೊರಟ್ಟಿ ಸೇರಿದಂತೆ, ಜೆಡಿಎಸ್ಸಿನ ಎಂಎಲ್ಸಿಗಳು
ಬಸವರಾಜ ಹೊರಟ್ಟಿ ಸೇರಿದಂತೆ, ಜೆಡಿಎಸ್ಸಿನ ಎಂಎಲ್ಸಿಗಳಿಗೆ ಪ್ರಮುಖವಾಗಿ ಅಸಮಾಧಾನ ಇರುವುದು ಕುಮಾರಸ್ವಾಮಿಯವರ ಮೇಲೆ. "ಅಧಿಕಾರದಲ್ಲಿದ್ದಾಗ ಅಥವಾ ಇಲ್ಲದಿದ್ದಾಗಲೂ, ನಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ಅಸಮಾಧಾನವಿದೆ. ಈ ಬಗ್ಗೆ ಕುಮಾರಸ್ವಾಮಿ ಅವರನ್ನಾಗಲಿ, ಹೊರಗಡೆಯಾಗಲಿ ಪ್ರಶ್ನೆ ಮಾಡಿಲ್ಲ" ಎಂದು ಹೊರಟ್ಟಿ ಹೇಳಿದ್ದರು. ಇವರ ವಿರೋಧ ಹೆಚ್ಚಾಗುತ್ತಿದ್ದಂತೆಯೇ, ದೇವೇಗೌಡ್ರು ಎಲ್ಲರನ್ನೂ ತಮ್ಮ ನಿವಾಸಕ್ಕೆ ಕರೆಸಿಕೊಂಡರು.












Click it and Unblock the Notifications