ಇಂತಹ ಅಯೋಗ್ಯರಿಗೆ ಅಧಿಕಾರ ಕೊಟ್ಟ ಜನತೆ ಈಗ ಬರುವ ಚುನಾವಣೆಗೆ ಕಾಯುತ್ತಿದ್ದಾರೆ: ಸರ್ಕಾರದ ವಿರುದ್ದ ಜೆಡಿಎಸ್ ಕಿಡಿ
ಇಂತಹ ಅಯೋಗ್ಯರಿಗೆ ಅಧಿಕಾರ ಕೊಟ್ಟ ನಾಡಿನ ಜನತೆ ಈಗ ಬರುವ ಚುನಾವಣೆಗೆ ಕಾಯುತ್ತಿದ್ದಾರೆ. ರಾಜ್ಯ ಬಿಜೆಪಿ ನಾಯಕರೇ, ಜನತೆ ನಿಮ್ಮ ದುರಾಡಳಿತಕ್ಕೆ ಪೂರ್ಣವಿರಾಮ ಇಡಲಿದ್ದಾರೆ ಎಂದು ಟ್ವೀಟ್ ಮೂಲಕ ಜೆಡಿಎಸ್ ವಾಗ್ದಾಳಿ ನಡಸಿದೆ.
ಬೆಂಗಳೂರು,ಫೆಬ್ರವರಿ6: ಜಲಸಂಪನ್ಮೂಲ ಇಲಾಖೆಯ 22,200 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಎಂದು ಸ್ವತಃ ರಾಜ್ಯ ಬಿಜೆಪಿ ಸರ್ಕಾರದ ಶಾಸಕ ಹಾಗೂ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೂಳಿಹಟ್ಟಿ ಶೇಖರ್ ಅವರು ಆರೋಪಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರೇ, ಸರ್ಕಾರದ ಹಾಡು-ಪಾಡಿನ ಬಗ್ಗೆ ನಿಮ್ಮವರೆ ಪ್ರಮಾಣಪತ್ರ ಕೊಟ್ಟಿದ್ದಾರೆ, ನೋಡಿ ಎಂದು ಜೆಡಿಎಸ್ ರಾಜ್ಯ ಘಟಕ ಕಿಡಿಕಾರಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಜೆಡಿಎಸ್ ರಾಜ್ಯ ಘಟಕ, ರಾಜ್ಯ ಸರ್ಕಾರವು ಭ್ರಷ್ಟಾಚಾರದ ಕೂಪದಲ್ಲಿ ಬಿದ್ದಿದೆ ಎಂದು ಸಕಾರಣವಾಗಿ ವಿರೋಧ ಪಕ್ಷಗಳು ಟೀಕಿಸುವುದು ಒಂದು ಕಡೆ ಇರಲಿ; ಸ್ವತಃ ನಿಮ್ಮವರೇ ಈ ಕುರಿತು ಬಾಯಿಬಿಡುತ್ತಿರುವುದು ಏನನ್ನು ಹೇಳುತ್ತಿದೆ? ತಮ್ಮ ಲೂಟಿಕೋರತನವು ಚೆನ್ನಾಗಿಯೇ ಪ್ರತಿಫಲಿತವಾಗಿದೆ ಅಲ್ಲವೆ, ಬಸವರಾಜ ಬೊಮ್ಮಾಯಿ ಅವರೆ? ಲಜ್ಜೆಗೆಟ್ಟವರೆಂದು ತಮ್ಮವರೇ ಹೇಳಿದಂಗಾಗಿದೆ ಎಂದು ಜೆಡಿಎಸ್ ಹೇಳಿದೆ.
ಬೇಲಿಯೇ ಎದ್ದು ಹೊಲ ಮೇಯುವ ಹಾಗೆ, ಸರ್ಕಾರವೇ ಮುಂದೆ ನಿಂತು ಇಂತಹ ಅಕ್ರಮಗಳನ್ನು ನಡೆಸುತ್ತಿರುವುದಕ್ಕೆ ಇದಕ್ಕಿಂತ ಪ್ರಬಲ ಸಾಕ್ಷಿ ಇನ್ನೇನು ಬೇಕು? ಇಂತಹ ಅಯೋಗ್ಯರಿಗೆ ಅಧಿಕಾರ ಕೊಟ್ಟ ನಾಡಿನ ಜನತೆ ಈಗ ಬರುವ ಚುನಾವಣೆಗೆ ಕಾಯುತ್ತಿದ್ದಾರೆ. ರಾಜ್ಯ @BJP4Karnataka ಅವರೆ, ಜನತೆ ನಿಮ್ಮ ದುರಾಡಳಿತಕ್ಕೆ ಪೂರ್ಣವಿರಾಮ ಇಡಲಿದ್ದಾರೆ.
— Janata Dal Secular (@JanataDal_S) February 6, 2023
6/6
ಇಲಾಖೆಯ ವಿವಿಧ ನಿಗಮಗಳ ಹಲವು ಕಾಮಗಾರಿಗಳಲ್ಲಿ ಇಷ್ಟು ದೊಡ್ಡ ಮೊತ್ತದ ಟೆಂಡರ್ ಅಕ್ರಮ ನಡೆದಿದ್ದು, ಟೆಂಡರ್ ಕೂಡಲೇ ರದ್ದುಪಡಿಸಬೇಕೆಂದು ಗೂಳಿಹಟ್ಟಿ ಶೇಖರ್ ಅವರು ಇಲಾಖೆಯ ಅಪರ ಕಾರ್ಯದರ್ಶಿಗೆ ದೂರು ನೀಡಿರುವ ಗಂಭೀರ ಸುದ್ದಿ ಈಗ ಬಹಿರಂಗವಾಗಿದೆ. ಮಾನಗೇಡಿತನದ ತುತ್ತ-ತುದಿ ಎಂದರೆ ಇದೇ ಇರಬೇಕು ಎಂದು ಜೆಡಿಎಸ್ ಕಿಡಿಕಾರಿದೆ.
ನಿಗದಿತ ಕಾಮಗಾರಿಗಳ ಟೆಂಡರ್ ನೀಡುವ ಮುನ್ನವೇ ಅಕ್ರಮ ಕೂಟ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿರುವ ಶಾಸಕರಿಗೆ ಯಾವ ಕಾರಣಕ್ಕೆ ಜ್ಞಾನೋದಯವಾಗಿರಬಹುದು? ಕಮಿಷನ್ ದೊರೆಯಲಿಲ್ಲ ಎಂಬ ಕಾರಣವೊ? ಅಥವಾ ಜನದ್ರೋಹದ ಬಗ್ಗೆ ತಾಳಲಾರದ ಒಡಲ ಆಕ್ರೋಶವೊ? ಎಂದು ಪ್ರಶ್ನಿಸಿದೆ.
ಎಲ್ಲ ನಿಯಮಗಳನ್ನು ಗಾಳಿಗೆ ತೂರಿ, ಪಾರದರ್ಶಕತೆ ಕಾಪಾಡಿಕೊಳ್ಳದೇ, ಕೆಲವೇ ದಿನಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಕಾಮಗಾರಿಗಳ ಟೆಂಡರ್ ಪೂರ್ಣಗೊಳಿಸಲಾಗಿದೆ. ಇದೇನು ಸರ್ಕಾರವೊ ಅಥವಾ ಕಾಳಸಂತೆ ವ್ಯಾಪಾರವೊ? ಇದು ನೀಚತನದ ಪರಮಾವಧಿ ಅಲ್ಲವೆ? ಕೇವಲ ಒಂದು ಇಲಾಖೆಯ ಕತೆಯೇ ಹೀಗಿದೆ! ಎಂದು ಜೆಡಿಎಸ್ ಸರ್ಕಾರದ ವಿರುದ್ಧವಾಗಿ ವಾಗ್ದಾಳಿ ನಡೆಸಿದೆ.
ಬೇಲಿಯೇ ಎದ್ದು ಹೊಲ ಮೇಯುವ ಹಾಗೆ, ಸರ್ಕಾರವೇ ಮುಂದೆ ನಿಂತು ಇಂತಹ ಅಕ್ರಮಗಳನ್ನು ನಡೆಸುತ್ತಿರುವುದಕ್ಕೆ ಇದಕ್ಕಿಂತ ಪ್ರಬಲ ಸಾಕ್ಷಿ ಇನ್ನೇನು ಬೇಕು? ಇಂತಹ ಅಯೋಗ್ಯರಿಗೆ ಅಧಿಕಾರ ಕೊಟ್ಟ ನಾಡಿನ ಜನತೆ ಈಗ ಬರುವ ಚುನಾವಣೆಗೆ ಕಾಯುತ್ತಿದ್ದಾರೆ. ರಾಜ್ಯ ಬಿಜೆಪಿ ನಾಯಕರೇ, ಜನತೆ ನಿಮ್ಮ ದುರಾಡಳಿತಕ್ಕೆ ಪೂರ್ಣವಿರಾಮ ಇಡಲಿದ್ದಾರೆ ಎಂದು ಟ್ವೀಟ್ ಮೂಲಕ ಜೆಡಿಎಸ್ ವಾಗ್ದಾಳಿ ನಡಸಿದೆ.