ಮೈಸೂರು ಭಾಗದಲ್ಲಿ ಜೆಡಿಎಸ್ 'ಹಿಟ್ ವಿಕೆಟ್' ಮಾಡಿಕೊಳ್ತಾ?
Recommended Video
ಮೈಸೂರು, ಮಾ 29: ಜೆಡಿಎಸ್ ಪಕ್ಷ ರಾಜ್ಯದಲ್ಲಿ ಪ್ರಭಾವಿಯಾಗಿರುವುದು ಹಳೇ ಮೈಸೂರು ಬೆಲ್ಟಿನಲ್ಲಿ, ಆ ಭಾಗದ ಅಸೆಂಬ್ಲಿ ಕ್ಷೇತ್ರದ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾದರೆ, ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳಬೇಕಾದ ಪಕ್ಷ ಮೈಸೂರು ನಗರ ಭಾಗದ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಹಿಟ್ ವಿಕೆಟ್ ಮಾಡಿಕೊಳ್ತಾ?
ಜೆಡಿಎಸ್ ನಲ್ಲೇ ಗುರುತಿಸಿಕೊಂಡು ಬಂದಿದ್ದ ಆ ಭಾಗದ ಪಕ್ಷದ ಪ್ರಭಾವಿ ಮುಖಂಡ ಮತ್ತು ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್, ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಜೊತೆ ಮುನಿಸಿಕೊಂಡ ವಿಚಾರ ಗೊತ್ತೇ ಇದೆ.
ಜೆಡಿಎಸ್ ಮೊದಲ ಪಟ್ಟಿ ಬಿಡುಗಡೆ : ಅಸಮಾಧಾನ ಸ್ಫೋಟ
ಈಗ, ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಸಂದೇಶ್, ಪಕ್ಷಕ್ಕೇ ಗುಡ್ ಬೈ ಹೇಳಲು ನಿರ್ಧರಿಸಿದ್ದಾರೆ ಎನ್ನುವ ಮಾಹಿತಿಯಿದೆ. ಬಲ್ಲ ಮೂಲಗಳ ಪ್ರಕಾರ, ಮಾರ್ಚ್ 30ಕ್ಕೆ ಮೈಸೂರಿಗೆ ಆಗಮಿಸಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಮ್ಮುಖದಲ್ಲಿ ಸಂದೇಶ್ ನಾಗರಾಜ್ ಬಿಜೆಪಿ ಸೇರಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ಮೈಸೂರು ನಗರ ನರಸಿಂಹರಾಜ ಕ್ಷೇತ್ರದಿಂದ ತಮ್ಮ ಸಹೋದರ ಸಂದೇಶ್ ಸ್ವಾಮಿಯವರಿಗೆ ಟಿಕೆಟ್ ನೀಡಬೇಕೆಂದು ಸಂದೇಶ್ ನಾಗರಾಜ್ ಪಟ್ಟುಹಿಡಿದಿದ್ದರು. ಆದರೆ, ಜೆಡಿಎಸ್ ಬಿಡುಗಡೆ ಮಾಡಿದ್ದ ಮೊದಲ ಪಟ್ಟಿಯಲ್ಲಿ ಸಂದೇಶ್ ಸಹೋದರನಿಗೆ ಟಿಕೆಟ್ ನೀಡದೇ ಅಬ್ದುಲ್ಲಾ ಎನ್ನುವವರಿಗೆ ಟಿಕೆಟ್ ನೀಡಲಾಗಿತ್ತು.
ತಮ್ಮ ಅಸಮಾಧಾನವನ್ನು ಮಾಧ್ಯಮದವರ ಮುಂದೆ ಹೊರಹಾಕಿದ್ದ ಸಂದೇಶ್ ನಾಗರಾಜ್ ಅವರಿಗೆ ಕುಮಾರಸ್ವಾಮಿ ಕಿವಿಮಾತನ್ನು ಹೇಳಿದ್ದರು. ಸಂದೇಶ್ ನಾಗರಾಜ್ ಸಹೋದರರಿಗೆ ಪಕ್ಷದಿಂದ ತುಂಬಾ ಅನುಕೂಲವಾಗಿದೆ. ಅವರು ಹಿಂದಿನಿಂದ ಮಾತಾನಾಡುವುದನ್ನು ನಿಲ್ಲಿಸಬೇಕು. ಪಕ್ಷಕ್ಕೆ ಬರುವವರಿಗೆ ಸ್ವಾಗತ, ಹೋಗುವವರನ್ನು ತಡೆಯುವುದಿಲ್ಲ ಎಂದು ಎಚ್ಡಿಕೆ ಕಿಡಿಕಾರಿದ್ದರು.
ಇಷ್ಟ ಇದ್ರೆ ಇರಿ, ಇಲ್ಲ ಬಿಟ್ಟು ಹೋಗಿ: ಕುಮಾರಸ್ವಾಮಿ ಖಡಕ್ ಎಚ್ಚರಿಕೆ!
ಇದಾದ ನಂತರ, ಮಾರ್ಚ್ ಹತ್ತರವರೆಗೆ ಕಾಯುವಂತೆ ಜೆಡಿಎಸ್ ವರಿಷ್ಠ ದೇವೇಗೌಡ್ರು ಸೂಚಿಸಿದ್ದರು. ಇದೂ ವರ್ಕೌಟ್ ಆಗದ ಹಿನ್ನಲೆಯಲ್ಲಿ, ಈಗ ಅಮಿತ್ ಶಾ ಸಮ್ಮುಖದಲ್ಲಿ ಸಂದೇಶ್ ನಾಗರಾಜ್ ಮತ್ತು ಅವರ ಪುತ್ರ ಬಿಜೆಪಿ ಸೇರಲು ಮುಂದಾಗಿದ್ದಾರೆ ಎನ್ನುವ ಮಾಹಿತಿಯಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಆದರೆ, ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮತ್ತು ಮಾಜೀ ಮೇಯರ್ ಸಂದೇಶ್ ಸ್ವಾಮಿ ತಮ್ಮ ಸಹೋದರನ ಜೊತೆ ಬಿಜೆಪಿ ಸೇರಲಿದ್ದಾರಾ ಎನ್ನುವುದರ ಬಗ್ಗೆ ಸದ್ಯಕ್ಕೆ ಮಾಹಿತಿಯಿಲ್ಲ. ಸಂದೇಶ್ ನಾಗರಾಜ್, ಬಿಜೆಪಿಗೆ ಸೇರಿದ್ದೇ ಆದಲ್ಲಿ, ಮೈಸೂರು ನಗರ ಭಾಗದಲ್ಲಿ ಪಕ್ಷದ ಚುನಾವಣಾ ಪ್ರಚಾರಕ್ಕೆ ಇನ್ನಷ್ಟು ಬಲಬರಲಿದೆ.