ಮಳೆ ಹಾನಿ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಪತ್ರ ಬರೆದ JDS ಶಾಸಕ ಶರಣಗೌಡ ಕಂದಕೂರ
ಯಾದಗಿರಿ, ಸೆಪ್ಟೆಂಬರ್ 30: ಅತಿವೃಷ್ಟಿ ಹಾಗೂ ನೆರೆಯಿಂದಾಗಿ ಉತ್ತರ ಕರ್ನಾಟಕ ಭಾಗ ತತ್ತರಿಸಿ ಹೋಗಿದೆ. ಈ ವರ್ಷದ ಮುಂಗಾರ ಅಬ್ಬರದ ಬಳಿಕ ಉತ್ತರ ಕರ್ನಾಟಕದಲ್ಲಿನ ಪ್ರವಾಹದಿಂದಾಗಿ ಜನತೆ ತೀವ್ರ ಸಂಕಷ್ಟಕ್ಕೆ ಒಳಗಾಗೊದ್ದಾರೆ. ಹೀಗಾಗಿ ಕೇಂದ್ರ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಕೋರಿ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಅವರು ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.
'ಒಮ್ಮೆ ಬರ, ಮಗದೊಮ್ಮೆ ನೆರೆ ಹೀಗೆ ಪ್ರಕೃತಿವಿಕೋಪದಿಂದ ಉತ್ತರ ಕರ್ನಾಟಕ ಜಿಲ್ಲೆಗಳು ನಲುಗುತ್ತಿವೆ. ಕಳೆದ ಕೆಲವು ದಿನಗಳಿಂದ ಯಾದಗಿರಿ, ಕಲಬುರಗಿ, ಬೀದರ್, ರಾಯಚೂರು, ವಿಜಯಪುರ, ಬಾಗಲಕೋಟೆ ಸೇರಿ ರಾಜ್ಯದ ವಿವಿಧೆಡೆ ಸುರಿದ ಮಳೆ ಹಾಗೂ ನದಿಗಳ ಪ್ರವಾಹದಿಂದ ಭಾರಿ ಅನಾಹುತಗಳು ಸಂಭವಿಸಿವೆ. ಒಂದು ವಾರದಲ್ಲಿ ಭೀಮಾ ನದಿಗೆ 24 ಲಕ್ಷ ಕ್ಯುಸೆಕ್ ಪ್ರಮಾಣದಷ್ಟು ನೀರನ್ನು ಹೊರಬಿಡಲಾಗಿದೆ. ಇದು ಪ್ರವಾಹಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಪ್ರವಾಹದಿಂದ ಸೇತುವೆ, ಹಳ್ಳಕೊಳ್ಳಗಳು ಜಲಾವೃತಗೊಂಡಿವೆ. ಗ್ರಾಮೀಣ ಭಾಗದ ರಸ್ತೆಗಳ ಸಂಪರ್ಕ ಕಡಿತಗೊಂಡಿವೆ. ಮನೆಗಳು ಕುಸಿದು ಬಿದ್ದಿವೆ, ವಿದ್ಯುತ್ ಸರಬರಾಜು ಸ್ಥಗಿತವಾಗಿದೆ. ಜನ-ಜಾನುವಾರುಗಳ ಜೀವಹಾನಿ ಕಂಡಿವೆ. ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿ, ನೂರಾರು ಕೋಟಿ ರುಪಾಯಿಗಳ ಬೆಳೆಹಾನಿ ನಷ್ಟವಾಗಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದ್ದಾರೆ.
ಹತ್ತಿ, ತೊಗರಿ, ಭತ್ತ, ಸಜ್ಜೆ, ಹೆಸರು, ಮೆಣಸಿನಕಾಯಿ, ಸೋಯಾಬೀನ್ ಸೇರಿದಂತೆ ರೈತರ ಕೈಹಿಡಿಯಲಿದ್ದ ಬೆಳೆಗಳು ಅತೀವೃಷ್ಟಿ ಹಾಗೂ ಪ್ರವಾಹದಿಂದಾಗಿ ಹಾಳಾಗಿವೆ. ಯಾದಗಿರಿ ಜಿಲ್ಲೆಯೊಂದರಲ್ಲೇ ಈವರೆಗೆ (2025 ಸೆ.28) ಸುಮಾರು 1.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಅಂದಾಜಿಸಲಾಗಿದ್ದು, ಮುಂದಿನ ಸಮೀಕ್ಷೆಯಲ್ಲಿ ಬೆಳೆಹಾನಿ ಅಂಕಿಅಂಶ ಭಾರಿ ಪ್ರಮಾಣದಲ್ಲಿ ಹೆಚ್ಚಾಗಲಿದೆ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.
ಈ ಹಿಂದೆ, ತಾವು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಇಂತಹ ಸಂದಿಗ್ಧ ಪರಿಸ್ಥಿತಿ ಉಂಟಾಗಿದ್ದಾಗ, ಅಂದಿನ ಕೇಂದ್ರ ಸರ್ಕಾರದ ಮನವೊಲೈಸಿ, ರಾಜ್ಯಕ್ಕೆ ಕೋಟ್ಯಂತರ ರುಪಾಯಿಗಳ ನೆರವು ಸಿಗುವಂತೆ ಮಾಡಿದ್ದೀರಿ. ರೈತರ ಹಾಗೂ ಜನಸಾಮಾನ್ಯರ ಕಷ್ಟಕಾರ್ಪಣ್ಯಗಳಿಗೆ ತಾವು ಆಳವಾಗಿ ಸ್ಪಂದಿಸಿದ್ದೀರಿ. ರೈತರ ಬೆಳೆ ಪರಿಹಾರ, ಸಾಲಮನ್ನಾ ಮುಂತಾದವುಗಳ ಮೂಲಕ ಕೋಟ್ಯಂತರ ಜನರ ಬದುಕಿಗೆ ಆಸರೆಯಾಗಿದ್ದೀರಿ. ಸಂತ್ರಸ್ತರಿಗೆ ನೀರಿನಿಂದ ಹಿಡಿದು ಸೂರಿನವರೆಗೂ ವ್ಯವಸ್ಥೆ ಕಲ್ಪಿಸುವ ಮೂಲಕ ಜನಮಾನಸದಲ್ಲಿ ಮನೆ ಮಾತಾಗಿದ್ದೀರಿ.
ಸದ್ಯ, ರಾಜ್ಯ ಸರ್ಕಾರ ಇಂದಿನ ನೆರೆ ಪರಿಸ್ಥಿತಿಗೆ ಸ್ಪಂದಿಸುವಲ್ಲಿ ವಿಫಲವಾದಂತಿದೆ. ಜಾತಿ ಜಾತಿಗಳ ನಡುವೆ ಜಗಳ ಹಚ್ಚುತ್ತಿರುವ ಹುನ್ನಾರಕ್ಕೆ ಮುಂದಾಗಿರುವ ಇಂದಿನ ರಾಜ್ಯ ಕಾಂಗ್ರೆಸ್ ಸರ್ಕಾರವು ನೆರೆ ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ, ರೈತರಿಗೆ ನೆರವು ಸಿಗುವುದು ಮರೀಚಿಕೆಯಾದಂತಾಗಿದೆ. ಅಳುವವರ ದನಿಗೆ ಆಳುವವರು ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಜನಸಾಮಾನ್ಯರದ್ದಾಗಿದೆ. ಸಮರ್ಥ ವಿರೋಧ ಪಕ್ಷದ ಕೊರತೆ ಕಾಣುತ್ತಿದೆ, ನಿಮ್ಮ ಅನುಪಸ್ಥಿತಿ ನಮ್ಮನ್ನು ಕಾಡುತ್ತಿದೆ. ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗೆ ಮಾತ್ರ ಸೀಮಿತವಾದಂತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಗ್ರಹಣ ಹಿಡಿದಂತಾಗಿದೆ. ಸದ್ಯದ ಕ್ಲಿಷ್ಟಕರ ವೇಳೆಯಲ್ಲಿ ಕೇಂದ್ರ ಸರ್ಕಾರದೊಡನೆ ಸಮನ್ವಯತೆ ಸಾಧಿಸಿ, ತಾಳ್ಮೆಯಿಂದ ವರ್ತಿಸಿ ಜನರಿಗೆ ನೆರವು-ಪರಿಹಾರ ನೀಡಬೇಕಾಗಿರುವ ರಾಜ್ಯ ಸರ್ಕಾರ, ಇದ ಮರೆತು ಆನೆ ನಡೆದಿದ್ದೇ ದಾರಿ ಎನ್ನುವಂತೆ ತನ್ನ ತೀರ್ಮಾನವೇ ಅಂತಿಮ ಎಂದು ವರ್ತಿಸುತ್ತಿರುವುದು ಆಘಾತಕಾರಿ.
ನಾನು, ಯಾದಗಿರಿ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದಾಗ, ಬೆಳೆ ಕಳೆದುಕೊಂಡ ರೈತರು ಶೋಚನೀಯ ಸ್ಥಿತಿಯಲ್ಲಿದ್ದಾರೆ. ಕೃಷಿ ಹಾಗೂ ಕಂದಾಯ ಇಲಾಖೆಗಳ ಬೆಳೆಹಾನಿ ಹಾಗೂ ನೆರೆಯಿಂದಾದ ಹಾನಿ ಕುರಿತ ಸರ್ವೆ ಕಾರ್ಯ ತೋರಿಕೆಗಷ್ಟೇ ಎನ್ನುವಂತಿದೆ. ವಾಸ್ತವಾಂಶವನ್ನು ಅಧಿಕಾರಿಗಳು ನೀಡುತ್ತಿಲ್ಲ ಎಂಬ ಆಪಾದನೆಗಳು ಮೂಡಿದ್ದು, ಮೇಲ್ನೋಟಕ್ಕೆ ಇದು ಕಂಡುಬರುತ್ತಿದೆ. ಅಧಿಕಾರಿಗಳು ತಮ್ಮ ಕರ್ತವ್ಯ ಮರೆತಂತಾಗಿದ್ದು, ಹಾನಿಗೊಳಗಾದ ಪ್ರದೇಶದ ಫೋಟೋಗಳನ್ನು ತೆಗೆದು ಕಚೇರಿಗೆ ಕಳುಹಿಸುವಂತೆ ರೈತರಿಗೆ ಸೂಚಿಸುತ್ತಿರುವುದು ದುರದೃಷ್ಟಕರ. ಇದು ಅಧಿಕಾರಿಗಳ ಕಾರ್ಯವೈಖರಿ ಪ್ರಶ್ನಿಸುವಂತಿದೆ. ನೆರೆ ಬಾಧಿತರಿಗೆ ಸರ್ಕಾರದ ಕಾಳಜಿ ಕೇಂದ್ರಗಳಲ್ಲಿ ಕಾಳಜಿ ಮಾಡಲಾಗುತ್ತಿಲ್ಲ, ತೋರಿಕೆಗೆ ಎಂಬುದಾಗಿ ಕೇಂದ್ರಗಳನ್ನು ಆರಂಭಿಸಲಾಗಿದೆ ಮಾತ್ರವೆಂಬಂತೆ ಸಂತ್ರಸ್ತರು ಅಳಲು ಕಾಳಜಿ ತೋಡಿಕೊಳ್ಳುತ್ತಿದ್ದಾರೆ. ಜನ-ಜಾನವಾರುಗಳು ನೀರು ಮೇವಿಗಾಗಿ ಪರದಾಡುವಂತಾಗಿದೆ.
ಯಾದಗಿರಿ ಜಿಲ್ಲೆಯಲ್ಲಿ ಬೆಳೆ ಕಳೆದುಕೊಂಡ ರೈತರು ಶೋಚನೀಯ ಸ್ಥಿತಿಯಲ್ಲಿದ್ದಾರೆ. ತೋರಿಕೆಗೆ ಹಾನಿಯ ಸಮೀಕ್ಷೆ ನಡೆಯುತ್ತಿದ್ದ, ಅಧಿಕಾರಿಗಳು ವಾಸ್ತವ ಅಂಶ ನೀಡುತ್ತಿಲ್ಲ ಎಂಬ ಆಪಾದನೆ ಇದೆ. ಅಧಿಕಾರಿಗಳು ತಮ್ಮ ಕರ್ತವ್ಯ ಮರೆತ್ತಿದ್ದಾರೆ. ಜನ-ಜಾನವಾರುಗಳು ನೀರು ಮೇವಿಗಾಗಿ ಪರದಾಡುವಂತಾಗಿದೆ. ಹೀಗಾಗಿ, ಕೇಂದ್ರ ಸಚಿವರಾದ ತಾವು ನೆರೆ ಪೀಡಿತ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಕೋರಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ, ನೆರೆಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ಹಾಗೂ ಸೂಕ್ತ ಪರಿಹಾರ-ನೆರವು ಕೊಡುವಿರೆಂದು ಆಶಾಭಾವನೆಯಿದೆ ಎಂದು ಹೇಳಿದ್ದಾರೆ.












Click it and Unblock the Notifications