ಕುಮಾರಸ್ವಾಮಿಗೆ ಮಾತು ಕೊಟ್ಟ ಜೆಡಿಎಸ್ ಸಚಿವರು, ಶಾಸಕರು
ಬೆಂಗಳೂರು, ಜೂನ್ 05: ಲೋಕಸಭೆ ಚುನಾವಣೆಯಲ್ಲಿ ಸೋತು ಮುಳುಗುತ್ತಿರುವ ಹಡಗು ಎನಿಸಿಕೊಂಡಿದ್ದ ಜೆಡಿಎಸ್ ಪಕ್ಷವನ್ನು ಉಳಿಸಿಕೊಳ್ಳುವುದೇ ಸವಾಲು ಎನ್ನಲಾಗುತ್ತಿತ್ತು. ಆದರೆ ಆ ಕಾರ್ಯವನ್ನು ಕುಮಾರಸ್ವಾಮಿ ಅವರು ಚಾಕಚಕ್ಯತೆಯಿಂದ ಮಾಡಿದ್ದಾರೆ.
ನಿನ್ನೆ ನಡೆದ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಜೆಡಿಎಸ್ನ ಎಲ್ಲ ಶಾಸಕರು, ಸಚಿವರು ಒಕ್ಕೂರಿಲಿನಿಂದ ಕುಮಾರಸ್ವಾಮಿಗೆ ಆ ಮೂಲಕ ಸಮ್ಮಿಶ್ರ ಸರ್ಕಾರಕ್ಕೆ ಭಾರಿ ಬೆಂಬಲ ಸೂಚಿಸಿದ್ದಾರೆ.
ಜೆಡಿಎಸ್ ನ ಸಚಿವರಂತೂ ಒಂದು ಹೆಜ್ಜೆ ಮುಂದೆ ಹೋಗಿ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಹ ಸಿದ್ಧ ಎಂದು ಕುಮಾರಸ್ವಾಮಿ ಅವರಿಗೆ ಆತ್ಮವಿಶ್ವಾಸ ತುಂಬಿದ್ದಾರೆ.
ಮೈತ್ರಿಯಲ್ಲಿ ದೊಡ್ಡ ಪಕ್ಷವಾದ ಕಾಂಗ್ರೆಸ್ನಲ್ಲಿ ಅತೃಪ್ತತೆ ಮೇರೆ ಮೀರುತ್ತಿರುವ ಹೊತ್ತಿನಲ್ಲಿ ಕುಮಾರಸ್ವಾಮಿ ಅವರು ತಮ್ಮ ಪಕ್ಷದ ಶಾಸಕರನ್ನು, ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವುದು ಮೈತ್ರಿಯಲ್ಲಿ ಕುಮಾರಸ್ವಾಮಿ ಅವರ ವರ್ಚಸ್ಸು ಹೆಚ್ಚಿಸಲಿದೆ. ಜೊತೆಗೆ ಸರ್ಕಾರವನ್ನು ಕೆಡವುವ ಕನಸು ಕಾಣುತ್ತಿರುವ ಬಿಜೆಪಿಗೆ ಹಿನ್ನಡೆಯನ್ನೂ ಉಂಟು ಮಾಡಲಿದೆ.

ಬದಲಾವಣೆ ಮಾಡಿದ್ದಾರೆ ಕುಮಾರಸ್ವಾಮಿ
ಲೋಕಸಭೆ ಚುನಾವಣೆ ಸೋಲಿನ ಬಳಿಕ ಕುಮಾರಸ್ವಾಮಿ ಅವರು ಆಡಳಿತ ಮತ್ತು ಪಕ್ಷದ ಆಡಳಿತ ವಿಚಾರದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ, ಮತ್ತು ಬದಲಾವಣೆಗೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಶ್ವಾಸ ಉಳಿಸಿಕೊಂಡ ಕುಮಾರಸ್ವಾಮಿ
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಶ್ವನಾಥ್ ಅವರು ರಾಜೀನಾಮೆ ನೀಡಿ ಪಕ್ಷದ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ನಂತರವೂ ಕುಮಾರಸ್ವಾಮಿ ಅವರು ಎಲ್ಲ ಶಾಸಕರ ಮತ್ತು ಸಚಿವರ ವಿಶ್ವಾಸವನ್ನು ಉಳಿಸಿಕೊಂಡಿರುವುದು ಆಶ್ಚರ್ಯವಾಗಿಯೂ ಕಾಣುತ್ತಿದೆ.

ಕುಮಾರಸ್ವಾಮಿಗೆ ವಾಗ್ದಾನ ನೀಡಿದ ಸಚಿವರು, ಶಾಸಕರು
ಸಚಿವರ ಜೊತೆಗೆ ಜೆಡಿಎಸ್ ಶಾಸಕರೂ ಸಹ ಕುಮಾರಸ್ವಾಮಿ ಅವರು ವಾಗ್ದಾನ ನೀಡಿದ್ದು, ಸರ್ಕಾರದ ಉಳಿವಿಗಾಗಿ ಶಕ್ತಿ ಮೀರಿ ಯತ್ನಿಸುವುದಾಗಿ, ಇತರ ಪಕ್ಷದ ಆಮೀಷಗಳಿಗೆ ಬಲಿ ಆಗದೆ, ಮೈತ್ರಿ ಸರ್ಕಾರವನ್ನು ಉಳಿಸಿಕೊಂಡು ಹೋಗುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

ಜೆಪಿ ನಗರ ನಿವಾಸದಲ್ಲಿ ಸಭೆ
ನಿನ್ನೆ ಸಂಜೆ ಕುಮಾರಸ್ವಾಮಿ ಅವರು ಜೆಪಿ ನಗರ ನಿವಾಸದಲ್ಲಿ ಜೆಡಿಎಸ್ನ ಶಾಸಕಾಂಗ ಸಭೆ ನಡೆಯಿತು, ಸಭೆಯಲ್ಲಿ ಕುಮಾರಸ್ವಾಮಿ ಅವರು ಭಾವನಾತ್ಮಕವಾಗಿ ಮಾತನಾಡಿದರು ಎನ್ನಲಾಗಿದೆ.












Click it and Unblock the Notifications