ಮೈತ್ರಿ ಸರ್ಕಾರ ಪತನ: ಜೆಡಿಎಸ್ ಪಕ್ಷದ ಮುಂದಿನ ನಡೆ ಏನು?
ಬೆಂಗಳೂರು, ಜುಲೈ 24 : ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ವಿಶ್ವಾಸಮತದಲ್ಲಿ ಸೋಲು ಕಂಡಿದೆ. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದಂತೆ ಪಕ್ಷದ ನಾಯಕರು ಮೌನಕ್ಕೆ ಶರಣಾಗಿದ್ದಾರೆ.
ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಿದ್ದಂತೆ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಂತಸ ಮುಗಿಲು ಮುಟ್ಟಿತ್ತು. 14 ತಿಂಗಳ ಆಡಳಿತ ನಡೆಸಿದ ಕುಮಾರಸ್ವಾಮಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಆದರೆ, ರಾಜಕೀಯ ಷಡ್ಯಂತ್ರಗಳಿಂದಾಗಿ ಅಧಿಕಾರ ಬಿಟ್ಟು ಕೆಳಗಿಳಿದಿದ್ದಾರೆ.
ನುಡಿದಂತೆ ನಡೆದ ಕುಮಾರಣ್ಣ, ಸರ್ಕಾರಿ ಕಾರು ಬಳಸಲೇ ಇಲ್ಲ
ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಲಾಗಿತ್ತು. ಲೋಕಸಭಾ ಚುನಾವಣೆಯಲ್ಲಿಯೂ ಜೆಡಿಎಸ್ ಕಾಂಗ್ರೆಸ್ ಜೊತೆ ಮೈತ್ರಿ ಮುಂದುವರೆಸಿತ್ತು. ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಜೆಡಿಎಸ್ ಏಕಾಂಗಿಯಾಗಲಿದೆಯೇ? ಕಾದು ನೋಡಬೇಕಿದೆ.
ದೇವೇಗೌಡರಿಗೆ ಸಾಲು ಸಾಲು ಸೋಲು ನೀಡಿದ 2019: ಏನಿದರ ರಹಸ್ಯ?
ಲೋಕಸಭಾ, ವಿಧಾನಸಭೆ ಚುನಾವಣೆ ಸದ್ಯಕ್ಕೆ ಎದುರಾಗುವುದಿಲ್ಲ. ಜೆಡಿಎಸ್ ಪಕ್ಷ ತಕ್ಷಣ ಪಕ್ಷ ಸಂಘಟನೆ ಮಾಡಲು ಆರಂಭಿಸಿದರೆ 2023ರ ಚುನಾವಣೆ ವೇಳೆಗೆ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಪಕ್ಷವನ್ನು ಬಲಿಷ್ಠವಾಗಿಸಬಹುದಾಗಿದೆ. ಜೆಡಿಎಸ್ ಪಕ್ಷದ ಮುಂದಿನ ನಡೆ ಏನು?.....
ಆಗಸ್ಟ್ 20ರಿಂದ ಪಾದಯಾತ್ರೆ ಆರಂಭ : ವೈ.ಎಸ್.ವಿ.ದತ್ತಾ
ಸೋಲು, ಸರ್ಕಾರ ಪತನ
ಕರ್ನಾಟಕ ಜೆಡಿಎಸ್ ಪಾಲಿಗೆ 2019ರ ಆರಂಭ ಅಷ್ಟು ಶುಭವಾಗಿರಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಪಕ್ಷ ನಿರೀಕ್ಷೆ ಮಾಡಿದಷ್ಟು ಸ್ಥಾನ ಗೆಲ್ಲವು ಸಾಧ್ಯವಾಗಲಿಲ್ಲ. ಸ್ವತಃ ಅವರದ್ದೇ ಸರ್ಕಾರವಿದ್ದರೂ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ಎಚ್. ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಚುನಾವಣೆಯಲ್ಲಿ ಸೋಲು ಅನುಭವಿಸಿದರು. ಚುನಾವಣಾ ಫಲತಾಂಶ ಪ್ರಕಟವಾದ ಎರಡು ತಿಂಗಳಿಗೆ ಪಕ್ಷ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದೆ.
ಪಕ್ಷ ಸಂಘಟನೆಗೆ ಆದ್ಯತೆ
ಜೆಡಿಎಸ್ ಪಕ್ಷ ಸಂಘಟನೆಗೆ ಆದ್ಯತೆ ನೀಡುವುದು ಅನಿವಾರ್ಯವಾಗಿದೆ. ಈಗಾಗಲೇ ಎಚ್. ಕೆ. ಕುಮಾರಸ್ವಾಮಿ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ದೇವೇಗೌಡರು ಸಹ ಪಕ್ಷ ಸಂಘಟನೆಯತ್ತ ಗಮನಹರಿಸಿದ್ದಾರೆ. ಈಗ ಎಚ್. ಡಿ. ಕುಮಾರಸ್ವಾಮಿ ಸಹ ಇತ್ತ ಗಮನಹರಿಸಲಿದ್ದಾರೆ.
ಪಾದಯಾತ್ರೆಯ ಘೋಷಣೆ
ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಲು ವಿಚಾರ, ವಿಕಾಸ ಮತ್ತು ವಿಶ್ವಾಸ ಎಂಬ ಪರಿಕಲ್ಪನೆಯಲ್ಲಿ ಪಾದಯಾತ್ರೆ ನಡೆಸುವುದಾಗಿ ಜೆಡಿಎಸ್ ಘೋಷಣೆ ಮಾಡಿತ್ತು. ಆಗಸ್ಟ್ 20 ರಿಂದ ಪಾದಯಾತ್ರೆ ನಂಜನಗೂಡಿನಿಂದ ಆರಂಭವಾಗಬೇಕಿತ್ತು. ಸರ್ಕಾರ ಪತನವಾಗಿದ್ದರಿಂದ ಪಕ್ಷ ತಕ್ಷಣ ಪಾದಯಾತ್ರೆ ಆರಂಭಿಸುವುದೇ? ಅಥವ ಕೆಲವು ದಿನದ ಮಟ್ಟಿಗೆ ಅದನ್ನು ಮುಂದೂಡುವುದೇ? ಎಂದು ಕಾದು ನೋಡಬೇಕಿದೆ.
ಮೂವರು ಶಾಸಕರು ಟಾರ್ಗೆಟ್
ಜೆಡಿಎಸ್ನ ಮೂವರು ಶಾಸಕರ ರಾಜೀನಾಮೆ ಪಕ್ಷದ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಪಕ್ಷಕ್ಕೆ ದ್ರೋಹ ಮಾಡಿದವರಿಗೆ ತಕ್ಕ ಪಾಠ ಕಲಿಸಬೇಕು ಎಂದು ದೇವೇಗೌಡರು ತೀರ್ಮಾನಿಸಿದ್ದಾರೆ. ಎಚ್. ವಿಶ್ವನಾಥ್ (ಹುಣಸೂರು), ಕೆ. ಗೋಪಾಲಯ್ಯ (ಮಹಾಲಕ್ಷ್ಮಿ ಲೇಔಟ್), ನಾರಾಯಣ ಗೌಡ (ಕೆ. ಆರ್. ಪೇಟೆ) ಮೂವರನ್ನು ಅನರ್ಹಗೊಳಿಸಲು ತೀರ್ಮಾನಿಸಲಾಗಿದ್ದು, ಸ್ಪೀಕರ್ ರಮೇಶ್ ಕುಮಾರ್ಗೆ ಈ ಕುರಿತು ಮನವಿ ಸಲ್ಲಿಸಲಾಗಿದೆ.