ವಿಧಾನ ಪರಿಷತ್ ಕಲಾಪ: ದ್ವಂದ್ವ ನಿಲುವು ತಾಳಿದ ಜೆಡಿಎಸ್!
ಬೆಂಗಳೂರು, ಡಿ. 15: ವಿಧಾನ ಪರಿಷತ್ ಕಲಾಪ ಕುರಿತಂತೆ ಕೊನೆಯ ಕ್ಷಣದಲ್ಲಿ ಜೆಡಿಎಸ್ ಪಕ್ಷ ದ್ವಂದ್ವ ನಿಲುವು ತಾಳಿದೆ. ಪರಿಷತ್ ಸಭಾಪತಿ ಕೆ. ಪ್ರತಾಪ್ ಚಂದ್ರ ಶೆಟ್ಟಿ ಅವರ ವಿರುದ್ಧ ಬಿಜೆಪಿ ಸಲ್ಲಿಸಿದ್ದ ಅವಿಶ್ವಾಸ ಗೊತ್ತುವಳಿಗೆ ಬೆಂಬಲ ಕೊಡುವುದಾಗಿ ಈ ಹಿಂದೆ ಜೆಡಿಎಸ್ ನಾಯಕರು ಹೇಳಿದ್ದರು. ಆದರೆ ದಿಢೀರ್ ತನ್ನ ನಿರ್ಧಾರ ಬದಲಿಸಿರುವಂತೆ ಕಂಡು ಬಂದಿದೆ.
ತಮ್ಮ ವಿರುದ್ಧ ಸಲ್ಲಿಸಿದ್ದ ಅವಿಶ್ವಾಸ ಗೊತ್ತುವಳಿ ಕ್ರಮಬದ್ಧವಾಗಿದಲ್ಲ ಎಂದು ಸಭಾಪತಿ ಕೆ. ಪ್ರತಾಪ್ ಚಂದ್ರ ಶೆಟ್ಟಿ ಅವರು ಈಗಾಗಲೇ ಪರಿಷತ್ನಲ್ಲಿ ಪ್ರಕಟಿಸಿದ್ದಾರೆ. ಜೊತೆಗೆ ಗೊತ್ತುವಳಿ ನೋಟಿಸ್ ಕೊಟ್ಟಿದ್ದ ಬಿಜೆಪಿಯ 11 ಸದಸ್ಯರಿಗೆ ಈ ಬಗ್ಗೆ ಈಗಾಗಲೇ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ. ಆದರೂ ಬಿಜೆಪಿ ಸರ್ಕಾರ ಮತ್ತೆ ವಿಧಾನ ಪರಿಷತ್ ಕಲಾಪ ಕರೆದಿರುವುದು ಸಾಂವಿಧಾನಿಕ ಬಿಕ್ಕಟ್ಟು ಎದುರಾಗುವ ಸಾಧ್ಯತೆಗಳನ್ನು ತಂದಿಟ್ಟಿದೆ ಎನ್ನಲಾಗುತ್ತಿದೆ. ಇದೇ ಸಂದರ್ಭದಲ್ಲಿ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ್ ಹೊರಟ್ಟಿ ಅವರು ವಿಧಾನಸೌಧದಲ್ಲಿ ದ್ವಂದ್ವ ಮೂಡಿಸುವಂತಹ ಹೇಳಿಕೆ ನೀಡಿದ್ದಾರೆ. ವಿಧಾನ ಪರಿಷತ್ನಲ್ಲಿ ಇವತ್ತು ಏನಾಗಲಿದೆ?

ಬಸವರಾಜ್ ಹೊರಟ್ಟಿ ಆಕ್ಷೇಪ
ಮತ್ತೆ ವಿಧಾನಪರಿಷತ್ ಕಲಾಪ ಕರೆದಿರುವ ಬಗ್ಗೆ ಸರ್ಕಾರದ ನಡೆಗೆ ಮಾಜಿ ಸಭಾಪತಿ, ಜೆಡಿಎಸ್ ಸದಸ್ಯ ಬಸವರಾಜ್ ಹೊರಟ್ಟಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿರುವ ಅವರು, ಇವತ್ತು ಪರಿಷತ್ ಕಲಾಪ ಕರೆದಿದ್ದೇ ತಪ್ಪು ಎಂದಿದ್ದಾರೆ. ಸದನದ ನಿಯಮಾವಳಿಗಳ ಪ್ರಕಾರ ಈ ರೀತಿಯಾಗಿ ಸದನ ಕರೆಯುವಂತಿಲ್ಲ.
ಸರ್ಕಾರ ಹೇಳಿದಂತೆ ವಿಧಾನ ಪರಿಷತ್ ಕಾರ್ಯದರ್ಶಿ ಅವರು ಕೇಳಿದ್ದು ತಪ್ಪು. ಸಂಪುಟದಲ್ಲಿ ಸರ್ಕಾರ ಕಲಾಪ ನಡೆಸುವ ಬಗ್ಗೆ ತೀರ್ಮಾನಿಸುತ್ತದೆ. ಒಂದು ಬಾರಿ ಸಭೆ ಕರೆದ ಮೇಲೆ ಅದು ಸಭಾಪತಿಗಳ ವಿವೇಚನೆಗೆ ಬಿಟ್ಟ ವಿಚಾರ. ಜೊತೆಗೆ ಕಲಾಪ ಸಲಹಾ ಸಭೆಯಲ್ಲಿಯೂ ಇದೇ ತೀರ್ಮಾನವಾಗಿತ್ತು ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್ ಬಣ್ಣ ಬಯಲಾಗುತ್ತೆ
ಇನ್ನು ಇದೇ ವಿಚಾರಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ವಿಧಾನ ಪರಿಷತ್ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕ ನಾರಾಯಣಸ್ವಾಮಿ ಅವರೂ ಕೂಡ ಬಸವರಾಜ್ ಹೊರಟ್ಟಿ ಅವರು ಹೇಳಿರುವ ಮಾತನ್ನೇ ಹೇಳಿದ್ದಾರೆ. ವಿಧಾನಪರಿಷತ್ನಲ್ಲಿ ಜೆಡಿಎಸ್ ನಮ್ಮೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಹಂಚಿಕೊಂಡಿದ್ದೇವೆ.
ಈ ಬಗ್ಗೆ ಮೊನ್ನೆ ಮಾತನಾಡಿರುವ ಬಸವರಾಜ್ ಹೊರಟ್ಟಿ ಅವರು ಅವಿಶ್ವಾಸ ನಿರ್ಣಯ ವಿಚಾರದಲ್ಲಿ ಬಿಜೆಪಿ ಪರ ಇರುತ್ತೇವೆ ಎಂದು ಹೇಳಿದ್ದಾರೆ. ಉಪಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಜೆಡಿಎಸ್ನವರು ಅವಿಶ್ವಾಸ ನಿರ್ಣಯ ನೋಟೀಸ್ಗೆ ಸಹಿ ಹಾಕಿ ಕೊಡಲಿ ಎಂದು ಸವಾಲು ಹಾಕಿದ್ದಾರೆ. ಮಾಧ್ಯಮಗಳ ಮುಖಾಂತರ ಜೆಡಿಎಸ್ ನಡೆ ಜನರಿಗೆ ಗೊತ್ತಾಗಲಿ ಎಂದೂ ಹೇಳಿದ್ದಾರೆ.

ದೇವೇಗೌಡರ ನಿರ್ಧಾರ
ಮುಂದುವರೆದು ಮಾತನಾಡಿರುವ ನಾರಾಯಣಸ್ವಾಮಿ ಅವರು, ನಾವು ಇಬ್ಬರು ಸೇರಿಕೊಂಡು ಹಿಂದೆ ಸರ್ಕಾರ ನಡೆಸಿದ್ದೇವೆ. ಭೂ ಸುಧಾರಣೆ ಕಾಯ್ದೆಗೆ ಬೆಂಬಲವಿದೆ. ಗೋ ಹತ್ಯೆ ನಿಷೇಧ ವಿಧೇಯಕ್ಕೆ ನಮ್ಮ ವಿರೋಧ ಇದೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಈಗಾಗಲೇ ಹೇಳಿದ್ದಾರೆ. ಹೀಗಾಗಿ ಇವತ್ತಿನ ಪರಿಷತ್ ಕಲಾಪದಲ್ಲಿ ಏನಾಗುತ್ತದೆ ಎಂಬುದ್ನು ನೋಡುತ್ತೇವೆ. ಆ ಮೇಲೆ ನಮ್ಮ ಮುಂದಿನ ನಡೆಯ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಕಾಂಗ್ರೆಸ್ ಮುಖ್ಯ ಸಚೇತಕ ನಾರಾಯಣಸ್ವಾಮಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸದನ ಕರೆದಿದ್ದು ತಪ್ಪು
ಇಂದು ಪರಿಷತ್ ಕಲಾಪ ಕರೆದಿದ್ದೇ ತಪ್ಪು ಎಂದೂ ನಾರಾಯಣಸ್ವಾಮಿ ಅವರು ಹೇಳಿದ್ದಾರೆ. ಸರ್ಕಾರದ ಒತ್ತಡಕ್ಕೆ ಮಣಿದು ಪರಿಷತ್ ಕಲಾಪ ನಡೆಸುತ್ತಿದ್ದಾರೆ. ಸಭಾಪತಿ ಕೆ. ಪ್ರತಾಪ್ ಚಂದ್ರ ಶೆಟ್ಟಿ ಅವರು ಸ್ವಾಭಿಮಾನದ ರಾಜಕಾರಣ ಮಾಡಿಕೊಂಡು ಬಂದವರು. ಬಿಜೆಪಿಯ ಅವಿಶ್ವಾಸ ನಿರ್ಣಯ ಪರಿಷತ್ನಲ್ಲಿ ಬಿದ್ದು ಹೋಗಿದೆ. ಹೀಗಾಗಿ ಈಗ ಹೊಸದಾಗಿ ಅವಿಶ್ವಾಸ ಗೊತ್ತುವಳಿ ನೋಟಿಸ್ ಕೊಡಬೇಕಾಗುತ್ತೆ ಎಂದು ಅವರು ಹೇಳಿಕೆ ನೀಡಿದ್ದಾರೆ.

ತಿರಸ್ಕಾರ ಸಾಧ್ಯವಿಲ್ಲ: ಮಾಧುಸ್ವಾಮಿ
ಇನ್ನು ಇದೇ ವಿಚಾರದ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿರುವ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು, ಅವಿಶ್ವಾಸ ಸೂಚನಾ ಪತ್ರ ತಿರಸ್ಕರಿಸಲು ಸಾಧ್ಯವಿಲ್ಲ. ಆ ಅಧಿಕಾರ ಸಭಾಪತಿಗಳಿಗೆ ಇಲ್ಲ. ಈ ಬಗ್ಗೆ ಸದನದಲ್ಲಿಯೇ ನಾವು ಪ್ರಶ್ನಿಸುತ್ತೇವೆ ಎಂದಿದ್ದಾರೆ.
ಸದನವನ್ನು ಮುಂದುವರಿಸುವ ಅಧಿಕಾರ ಸಭಾಪತಿಗಳಿಗೆ ಇದೆ. ನಮಗೆ ಜೆಡಿಎಸ್ ಪಕ್ಷದ ಸದಸ್ಯರು ಬೆಂಬಲ ನೀಡಲಿದೆ ಎಂಬ ನಿರೀಕ್ಷೆ ಇದೆ. ಗೋ ಹತ್ಯೆ ನಿಷೇಧ ಕಾಯ್ದೆ 1964ರಲ್ಲಿ ತರಲಾಗಿತ್ತು. ಇವತ್ತು ಅದನ್ನೂ ಮೇಲ್ಮನೆಯಲ್ಲಿ ಮಂಡಿಸುತ್ತೇವೆ. ವಿಧೇಯಕಕ್ಕೆ ಮಾರ್ಪಾಟು ಮಾಡುವ ಬಗ್ಗೆ ಜೆಡಿಎಸ್ ಏನೂ ತಿಳಿಸಿಲ್ಲ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಹೇಳಿಕೆ ನೀಡಿದ್ದಾರೆ.
Recommended Video

ಸಭಾಪತಿ ಸ್ಥಾನದ ಮೇಲೆ ಜೆಡಿಎಸ್ ಕಣ್ಣು?
ವಿಧಾನ ಪರಿಷತ್ ಸಭಾಪತಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಜೆಡಿಎಸ್ ಈ ದ್ವಂದ್ವ ನಿಲುವು ತಾಳಿದೆ ಎನ್ನಲಾಗಿದೆ. ಭೂ ಸುಧಾರಣಾ ತಿದ್ದುಪಡಿ ವಿಧೇಯಕಕ್ಕೆ ಬೆಂಬಲ ಕೊಟ್ಟಿರುವ ಜೆಡಿಎಸ್, ಗೋ ಹತ್ಯೆ ನಿಷೇಧ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದೆ. ಜೊತೆಗೆ ಸಭಾಪತಿಗಳ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಬೆಂಬಲಿಸುವುದಾಗಿ ಈ ಮೊದಲು ಜೆಡಿಎಸ್ ಸ್ಪಷ್ಟಪಡಿಸಿತ್ತು. ಹೀಗಾಗಿ ಒಟ್ಟಾರೆ ಗೊಂದಲದ ನಿಲುವುಗಳನ್ನು ಜೆಡಿಎಸ್ ಕಗೊಂಡಿದ್ದು, ಅಂತಿಮವಾಗಿ ಯಾವ ನಿರ್ಧಾರಕ್ಕೆ ಬದ್ಧವಾಗಲಿದೆ ಎಂಬುದು ಬಿಜೆಪಿ-ಕಾಂಗ್ರೆಸ್ ನಾಯಕರಲ್ಲಿಯೂ ಕುತೂಹಲ ಮೂಡಿಸಿದೆ.












Click it and Unblock the Notifications