ವಿಧಾನಪರಿಷತ್ ಸಭಾಪತಿ ಆಯ್ಕೆ ಇನ್ನೂ ಕಗ್ಗಂಟು!
ಬೆಂಗಳೂರು, ಜುಲೈ 03 : ವಿಧಾನಪರಿಷತ್ ಸಭಾಪತಿ ಆಯ್ಕೆ ವಿಚಾರ ಕಗ್ಗಂಟಾಗಿದೆ. ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡು ಕಾಂಗ್ರೆಸ್-ಜೆಡಿಎಸ್ ಸರ್ಕಾರ ನಡೆಸುತ್ತಿವೆ. ಆದರೆ, ಪರಿಷತ್ ಸಭಾಪತಿ ಆಯ್ಕೆ ವಿಚಾರದಲ್ಲಿ ಇದುವರೆಗೂ ಎರಡೂ ಪಕ್ಷಗಳ ನಡುವೆ ಸಹಮತ ಮೂಡಿಲ್ಲ.
ಡಿ.ಎಚ್.ಶಂಕರಮೂರ್ತಿ ವಿಧಾನಪರಿಷತ್ ಸಭಾಪತಿಯಾಗಿದ್ದರು. ಅವರು ನಿವೃತ್ತಿ ಹೊಂದಿದ ಬಳಿಕ ಸಭಾಪತಿ ಸ್ಥಾನ ತೆರವಾಗಿದೆ. ರಾಜ್ಯಪಾಲ ವಜುಭಾಯಿ ವಾಲಾ ಅವರು ಜೆಡಿಎಸ್ನ ಹಿರಿಯ ನಾಯಕ ಬಸವರಾಜ ಹೊರಟ್ಟಿ ಅವರನ್ನು ಹಂಗಾಮಿ ಸಭಾಪತಿಯಾಗಿ ನೇಮಿಸಿದ್ದಾರೆ.
ಪರಿಷತ್ ವಿಪಕ್ಷ ನಾಯಕರಾಗಿ ಶ್ರೀನಿವಾಸ ಪೂಜಾರಿ ಆಯ್ಕೆ
ಕಾಂಗ್ರೆಸ್ ವಿಧಾನಪರಿಷತ್ತಿನಲ್ಲಿ ಹೆಚ್ಚು ಸದಸ್ಯ ಬಲ ಹೊಂದಿದೆ. ಆದ್ದರಿಂದ, ಸಭಾಪತಿ ಸ್ಥಾನ ನಮಗೆ ಬೇಕು ಎಂದು ಪಟ್ಟು ಹಿಡಿದಿದೆ. ಆದರೆ, ಜೆಡಿಎಸ್ ಪಕ್ಷ ಇದಕ್ಕೆ ಒಪ್ಪಿಗೆ ನೀಡಿಲ್ಲ. ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಮಾಡಬೇಕು ಎಂದು ಪಕ್ಷ ಬಯಸಿದೆ.
ಚಿಂತಕರ ಚಾವಡಿ ಬಿಟ್ಟು ಹೊರಟ ಡಿ.ಎಚ್.ಶಂಕರಮೂರ್ತಿ!
ಬಜೆಟ್ ಅಧಿವೇಶನದ ಬಳಿಕ ಸಭಾಪತಿ ಆಯ್ಕೆಯಾಗುವ ಸಾಧ್ಯತೆ ಇದೆ. ಹೊಸ ಸಭಾಪತಿ ಆಯ್ಕೆ ನಡೆಯುವ ತನಕ ಹಂಗಾಮಿ ಸಭಾಪತಿಗಳು ಕಲಾಪವನ್ನು ನಡೆಸಲಿದ್ದಾರೆ. ವಿಧಾನಸಭೆಯಲ್ಲಿ ಸ್ಪೀಕರ್ ಸ್ಥಾನ ಕಾಂಗ್ರೆಸ್ ಪಾಲಾಗಿದೆ. ಆದ್ದರಿಂದ, ಜೆಡಿಎಸ್ ಪರಿಷತ್ ಸಭಾಪತಿ ಸ್ಥಾನವನ್ನು ಕೇಳುತ್ತಿದೆ.
ಹಂಗಾಮಿ ಸ್ಪೀಕರ್ ಹೇಳುವುದೇನು?
'ಸಭಾಪತಿ ಆಯ್ಕೆಗೆ ಸಂಬಂಧಿಸಿದಂತೆ ರಾಜಭವನ ಅಥವ ಸರ್ಕಾರದಿಂದ ಯಾವುದೇ ಪತ್ರ ಬಂದಿಲ್ಲ. ಅಲ್ಲಿಂದ ಸಂದೇಶ ಬಂದ ಬಳಿಕ ಸಭಾಪತಿ ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತದೆ. ಅಧಿಸೂಚನೆ ಹೊರಡಿಸಬೇಕು, ಚುನಾವಣೆ ನಡೆಸಬೇಕು ಅವಿರೋಧವಾಗಿ ಆಯ್ಕೆ ಆಗುವುದಾದದರೂ ಎಲ್ಲಾ ಪ್ರಕ್ರಿಯೆ ನಡೆಸಬೇಕು' ಎಂದು ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಅಧಿಸೂಚನೆ ಪ್ರಕಟಗೊಂಡು ನೂತನ ಸಭಾಪತಿ ಆಯ್ಕೆ ನಡೆಯುವ ತನಕ ಹಂಗಾಮಿ ಸಭಾಪತಿಗಳೇ ಮುಂದುವರೆಯಲಿದ್ದಾರೆ. ಸಭಾಪತಿ ಯಾರಾಗಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ವೇಣುಗೋಪಾಲ್ಗೆ ಮನವಿ
ಕಾಂಗ್ರೆಸ್ನ 20 ವಿಧಾನಪರಿಷತ್ ಸದಸ್ಯರು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರಿಗೆ ಮನವಿ ಸಲ್ಲಿಸಿದ್ದು, ಪರಿಷತ್ ಸಭಾಪತಿ ಸ್ಥಾನ ಕಾಂಗ್ರೆಸ್ ಬಳಿಯೇ ಇರಲಿ ಎಂದು ಬೇಡಿಕೆ ಇಟ್ಟಿದ್ದಾರೆ.
ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್ ಹೆಚ್ಚು ಸದಸ್ಯ ಬಲ ಹೊಂದಿದೆ. ಆದ್ದರಿಂದ, ಕಾಂಗ್ರೆಸ್ ಸಭಾಪತಿ ಪಟ್ಟಕ್ಕಾಗಿ ಬೇಡಿಕೆ ಇಟ್ಟಿದೆ. ಆದರೆ, ಜೆಡಿಎಸ್ ಪಕ್ಷ ಇದಕ್ಕೆ ಇನ್ನೂ ಒಪ್ಪಿಗೆ ನೀಡಿಲ್ಲ. ಆದ್ದರಿಂದ, ಸಭಾಪತಿ ಆಯ್ಕೆ ಬಗ್ಗೆ ಹಗ್ಗ-ಜಗ್ಗಾಟ ಮುಂದುವರೆದಿದೆ.
ಸಿದ್ದರಾಮಯ್ಯ ಪಟ್ಟು
ಸಭಾಪತಿ ಹುದ್ದೆ ಕಾಂಗ್ರೆಸ್ ಪಕ್ಷಕ್ಕೆ ಬೇಕು ಎನ್ನುವ ಬೇಡಿಕೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲವಿದೆ. ಆದ್ದರಿಂದ, ಸಭಾಪತಿ ಹುದ್ದೆ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ.
ಸಿದ್ದರಾಮಯ್ಯ ಅವರು ಮಾಜಿ ಸಚಿವ ಎಸ್.ಆರ್.ಪಾಟೀಲ್ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಬಾದಾಮಿ ಕ್ಷೇತ್ರದಲ್ಲಿ ತಮ್ಮನ್ನು ಗೆಲ್ಲಿಸಿದ ಎಸ್.ಆರ್.ಪಾಟೀಲ್ ಅವರನ್ನು ಸಭಾಪತಿ ಮಾಡಿ ಎಂದು ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಜೆಡಿಎಸ್ ಹೇಳುವುದೇನು?
ವಿಧಾನಸಭೆ ಸ್ಪೀಕರ್ ಸ್ಥಾನ ಕಾಂಗ್ರೆಸ್ ಪಾಲಾಗಿದೆ. ಆದ್ದರಿಂದ, ಪರಿಷತ್ ಸಭಾಪತಿ ಸ್ಥಾನ ನಮಗೆ ಬೇಕು ಎಂಬುದು ಜೆಡಿಎಸ್ ಪಕ್ಷದ ಬೇಡಿಕೆ. ಜೆಡಿಎಸ್ ಹಿರಿಯ ನಾಯಕ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಮಾಡಬೇಕು ಎಂಬುದು ಜೆಡಿಎಸ್ ಚಿಂತನೆ. ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರಲು ಬಸವರಾಜ ಹೊರಟ್ಟಿ ಪ್ರಯತ್ನ ನಡೆಸಿದ್ದರು. ಆದರೆ, ಅದು ಸಾಧ್ಯವಾಗಿಲ್ಲ. ಆದ್ದರಿಂದ, ಅವರನ್ನು ಸಭಾಪತಿ ಮಾಡಲು ಪಕ್ಷ ಬಯಸಿದೆ.