ಕುಮಾರಸ್ವಾಮಿ ವಿರುದ್ಧ ಷಡ್ಯಂತ್ರ, ಪತ್ರಕರ್ತರ ವಿರುದ್ಧ ದೂರು
ಬೆಂಗಳೂರು, ನವೆಂಬರ್ 23 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಸುಳ್ಳುಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಜೆಡಿಎಸ್ ಪೊಲೀಸರಿಗೆ ದೂರು ನೀಡಿದೆ. ಮೂವರು ನಕಲಿ ಪರ್ತಕರ್ತರ ವಿರುದ್ಧ ಕೇಂದ್ರ ವಿಭಾಗದ ಡಿಸಿಪಿ ಅವರಿಗೆ ದೂರು ಕೊಡಲಾಗಿದೆ.
ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ಆರ್.ಪ್ರಕಾಶ್ ಅವರು ನಕಲಿ ಪತ್ರಕರ್ತರ ವಿರುದ್ಧ ದೂರು ನೀಡಿದ್ದಾರೆ. ಪತ್ರಕರ್ತರ ಸೋಗಿನಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಕ್ಕೆ ಬಂದು ಅಮಾಯಕ ಜನರಿಂದ ಮುಖ್ಯಮಂತ್ರಿಗಳ ವಿರುದ್ಧ ಹೇಳಿಕೆ ಪಡೆಯಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಸುಸಜ್ಜಿತ ಮಹಾತ್ಮ ಗಾಂಧಿ ಮಾಧ್ಯಮ ಕೇಂದ್ರ ಉದ್ಘಾಟಿಸಿದ ಕುಮಾರಸ್ವಾಮಿ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಹೇಳಿಕೆಗಳನ್ನು ಪಡೆದು, ಅದನ್ನು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವ್ಯವಸ್ಥಿತವಾಗಿ ಹರಡುವ ಷಡ್ಯಂತ್ರ ರಚಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಾಧ್ಯಮಗಳ ಕ್ಯಾಮೆರಾಗಳಿಗೆ ಪೊಲೀಸರನ್ನು ಅಡ್ಡ ನಿಲ್ಲಿಸಿದ ಸಿಎಂ
22/11/2018ರಂದು ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ನೂರಾರು ಜನರು ಮುಖ್ಯಮಂತ್ರಿಗಳಿಗಾಗಿ ಕಾಯುತ್ತಿದ್ದರು. ಆಗ ಅಲ್ಲಿಗೆ ಬಂದ ಮೂವರು ನಕಲಿ ಪತ್ರಕರ್ತರು (ಇಬ್ಬರು ಯುವತಿ, ಒಬ್ಬ ಯುವಕ) ಅಲ್ಲಿದ್ದ ಅಂಗವಿಕಲರು, ವೃದ್ಧರು, ರೈತರನ್ನು ಒತ್ತಾಯಪಡಿಸಿ ಮಾತನಾಡಿಸಿದ್ದಾರೆ.
ಮಾಧ್ಯಮದವರಿಗೆ ಬೈದಿಲ್ಲ, ಆತ್ಮಾವಲೋಕನ ಮಾಡಿಕೊಳ್ಳಿ ಎಂದಿದ್ದೆ: ಸಿಎಂ
ಮುಖ್ಯಮಂತ್ರಿಗಳ ವಿರುದ್ಧ ಅಪಪ್ರಚಾರ ನಡೆಸುವಂತಹ ಹೇಳಿಕೆಗಳನ್ನು ನೀಡುವಂತೆ ಪ್ರಚೋದಿಸಿದ್ದಾರೆ. ಗೃಹ ಕಚೇರಿಯಲ್ಲಿ ಪೊಲೀಸ್ ದೌರ್ಜನ್ಯ ನಡೆಯುತ್ತಿದೆ ಎಂಬ ಹೇಳಿಕೆ ಕೊಡಿ ಎಂದು ಅಮಾಯಕರನ್ನು ಪೀಡಿಸಿದ್ದಾರೆ.
ಈ ಕುರಿತು ಅನುಮಾನಗಳು ಬಂದು ಪೊಲೀಸರು ಪ್ರಶ್ನೆ ಮಾಡಿದಾಗ ಅವರು ಅಲ್ಲಿಂದ ಪರಾರಿಯಾಗಿದ್ದಾರೆ. ಅಪರಿಚಿತರು ಈ ರೀತಿ ರಾಜಾರೋಷವಾಗಿ ಕೃಷ್ಣಾ ಸುತ್ತಮುತ್ತ ಓಡಾಟ ನಡೆಸುವುದು ಮುಖ್ಯಮಂತ್ರಿಗಳ ಭದ್ರತೆಗೂ ಅಪಾಯ ತರುವ ವಿಚಾರವಾಗಿದೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಜನಪರವಾಗಿ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರಕ್ಕೆ ಮಸಿ ಬಳಿಯುವ ಉದ್ದೇಶದಿಂದ ಈ ರೀತಿಯ ಕೃತ್ಯ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.