ಫೆ.17ರಂದು ಜೆಡಿಎಸ್ನಿಂದ ಐತಿಹಾಸಿಕ ಸಮಾವೇಶ
ಬೆಂಗಳೂರು, ಫೆಬ್ರವರಿ 13 : 'ಕರ್ನಾಟಕದ ಇತಿಹಾಸದಲ್ಲಿಯೇ ಜೆಡಿಎಸ್ ಪಕ್ಷ ಬೃಹತ್ ಸಮಾವೇಶವನ್ನು ಫೆ.17ರಂದು ಹಮ್ಮಿಕೊಂಡಿದೆ. ಸುಮಾರು 10 ಲಕ್ಷ ಜನರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಕುಮಾರಸ್ವಾಮಿ ಅವರು, 'ಬಿಜೆಪಿ, ಕಾಂಗ್ರೆಸ್ ವಿರುದ್ಧ ಆರೋಪಗಳನ್ನು ಮಾಡಲು ಸಮಾವೇಶ ಮಾಡುತ್ತಿಲ್ಲ. ಪಕ್ಷದ ಚುನಾವಣಾ ತಯಾರಿಗಾಗಿ ಸಮಾವೇಶ ಹಮ್ಮಿಕೊಳ್ಳಲಾಗಿದೆ' ಎಂದರು.
'ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಮಾಡಿದ್ದಾರೆ. ನಮ್ಮ ಸಮಾವೇಶಕ್ಕೆ ಸಿಗುವ ಬೆಂಬಲ ನೋಡಿ ರಾಜ್ಯದ ಜನರಿಗೆ ಪಕ್ಷದ ಶಕ್ತಿ ಏನೆಂದು ತಿಳಿಯಲಿದೆ' ಎಂದು ಹೇಳಿದರು.

'ಸಮಾವೇಶದಲ್ಲಿ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಸುಮಾರು 140 ಅಭ್ಯರ್ಥಿಗಳು ಇರಲಿದ್ದಾರೆ, ಎಲ್ಲಾ ಹಾಲಿ ಶಾಸಕರಿಗೂ ಟಿಕೆಟ್ ನೀಡಲಾಗುತ್ತದೆ' ಎಂದು ಕುಮಾರಸ್ವಾಮಿ ವಿವರಣೆ ನೀಡಿದರು.

100 ವಾಹನಗಳಿಗೆ ಚಾಲನೆ : 'ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಡಿಜಿಟಲ್ ಪ್ರಚಾರ ನಡೆಸಲು 100 ವಾಹನಗಳಿಗೆ ಸಮಾವೇಶದಲ್ಲಿ ಚಾಲನೆ ನೀಡಲಾಗುತ್ತದೆ. ಪಕ್ಷದ ಐಟಿ ಘಟಕ ಬಡವರ ಬಗ್ಗೆ ನಮ್ಮ ಕಾಳಜಿ ಕುರಿತು ಸಾಕ್ಷ್ಯಚಿತ್ರ ತಯಾರು ಮಾಡಿದೆ. ಅದನ್ನು ಪ್ರಚಾರದ ಸಂದರ್ಭದಲ್ಲಿ ಬಳಸಿಕೊಳ್ಳಲಾಗುತ್ತದೆ' ಎಂದು ಕುಮಾರಸ್ವಾಮಿ ಹೇಳಿದರು.
10 ಲಕ್ಷ ಜನರ ನಿರೀಕ್ಷೆ : ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ರಾಜ್ಯದ ವಿವಿಧ ಭಾಗಗಳಿಂದ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಸಾರ್ವಜನಿಕರು ಸಮಾವೇಶಕ್ಕೆ ಆಗಮಿಸುತ್ತಿದ್ದಾರೆ.
'ಈಗಾಗಲೇ ರಾಜ್ಯದಲ್ಲಿ ಸಮಾವೇಶಗಳನ್ನು ಮಾಡಿರುವ ರಾಷ್ಟ್ರೀಯ ಪಕ್ಷಗಳು ಅಷ್ಟು ಲಕ್ಷ ಜನರು ಬಂದಿದ್ದರು, ಇಷ್ಟು ಬಂದಿದ್ದರು ಎಂದು ಹೇಳುತ್ತಿದ್ದಾರೆ. ಎಷ್ಟು ಜನರು ಬಂದಿದ್ದರು ಎಂಬ ಲೆಕ್ಕ ನಮಗೆ ಇದೆ. ಜೆಡಿಎಸ್ ಸಮಾವೇಶಕ್ಕೆ ಸುಮಾರು 10 ಲಕ್ಷ ಜನರು ಆಗಮಿಸುವ ಸಾಧ್ಯತೆ ಇದೆ' ಎಂದು ಕುಮಾರಸ್ವಾಮಿ ಹೇಳಿದರು.
ಮಾಯಾವತಿ ಪಾಲ್ಗೊಳ್ಳಲಿದ್ದಾರೆ : ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ, ಬಿಎಸ್ಪಿ ನಾಯಕಿ ಮಾಯಾವತಿ ಸೇರಿದಂತೆ ಹಲವು ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.












Click it and Unblock the Notifications