ಕೊನೆಯ 7 ಸುತ್ತು, 'ಕೈ'ಗೆ ಬಂದ ತುತ್ತು ಬಾಯಿ ತಪ್ಪುವುದರಲ್ಲಿತ್ತು
ಬೆಂಗಳೂರು, ಜೂನ್ 13: ಇಂದು ಜಯನಗರ ವಿಧಾನಸಭೆ ಚುನಾವಣೆಯ ಮತ ಎಣಿಕೆ ರೋಚಕ ತಿರುವುಗಳನ್ನು ಒಳಗೊಂಡಿತ್ತು. ಆರಂಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಭರ್ಜರಿ ಮತಗಳನ್ನು ಪಡೆದು, 15 ಸಾವಿರಕ್ಕೂ ಹೆಚ್ಚು ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ ಕೊನೆ ಕೊನೆಗೆ ಅವರ ಮುನ್ನಡೆ ಕುಸಿಯುತ್ತಾ ಬಂದು ಸೋಲಿನ ಭಯ ಆವರಿಸಿತ್ತು.
ಹಾಗೂ ಹೀಗೂ ಕೊನೆಗೆ 16ನೇ ಸುತ್ತು ತಲುಪುವಷ್ಟೊತ್ತಿಗೆ ಕಾಂಗ್ರೆಸ್ ಪ್ರಯಾಸದ ಗೆಲುವು ಕಂಡಿತು.
ತಿರುವು ನೀಡಿದ ಸುತ್ತು
ಮೊದಲ ಎರಡು ಸುತ್ತುಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಮಬಲದ ಹೋರಾಟ ಏರ್ಪಟ್ಟಿತ್ತು. ಆದರೆ ಮೂರು ಮತ್ತು ನಾಲ್ಕನೇ ಸುತ್ತಿನಲ್ಲಿ ಸೌಮ್ಯ ರೆಡ್ಡಿ ಬಿಜೆಪಿಯ ಬಿ.ಎನ್. ಪ್ರಹ್ಲಾದ್ ವಿರುದ್ಧ ಬರೋಬ್ಬರಿ 3 ಮತ್ತು ಎರಡೂವರೆ ಸಾವಿರ ಮತಗಳನ್ನು ಮುನ್ನಡೆ ಕಾಯ್ದುಕೊಂಡಿದ್ದು ತಿರುವು ನೀಡಿತು.

4 ನೇ ಸುತ್ತಿನ ವೇಳೆ ಭರ್ಜರಿ 5,348 ಮತಗಳ ಮುನ್ನಡೆಯಲಿದ್ದರು. ಆದರೆ 5ನೇ ಸುತ್ತು ಸೌಮ್ಯ ರೆಡ್ಡಿಯವರಿಗೆ ಅನಿರೀಕ್ಷಿತವಾಗಿತ್ತು. ಈ ಸುತ್ತಿನಲ್ಲಿ ಪ್ರಹ್ಲಾದ್ ರೆಡ್ಡಿಗಿಂತ ಸುಮಾರು ನಾಲ್ಕೂವರೆ ಸಾವಿರ ಹೆಚ್ಚಿನ ಮತಗಳಿಸಿ ತಿರುಗೇಟು ನೀಡಿದರು. 6ನೇ ಸುತ್ತು ಮತ್ತೆ ಸಮಬಲದಿಂದ ಕೂಡಿತ್ತು.
ಇದಕ್ಕೆ 7ನೇ ಸುತ್ತಿನಲ್ಲಿ ಸೌಮ್ಯ ರೆಡ್ಡಿ ಪ್ರತ್ಯುತ್ತರ ನೀಡಿದರು. ಈ ಸುತ್ತಿನಲ್ಲಿ ಸೌಮ್ಯ ರೆಡ್ಡಿ 4 ಸಾವಿರ ಮತಗಳ ಹೆಚ್ಚುವರಿ ಮುನ್ನಡೆ ಪಡೆದರು. ಮತ್ತೆ 8ನೇ ಸುತ್ತಿನಲ್ಲಿ 3 ಸಾವಿರ ಹೆಚ್ಚುವರಿ ಮತಗಳನ್ನು ಪಡೆದರು.
9ನೇ ಸುತ್ತಿನಲ್ಲಂತೂ ಭರ್ಜರಿ 5 ಸಾವಿರ ಹೆಚ್ಚುವರಿ ಮುನ್ನಡೆ ಪಡೆದು ತಮ್ಮ ಮುನ್ನಡೆಯನ್ನು 15,345 ಮತಗಳಿಗೆ ಏರಿಸಿಕೊಂಡರು. ಈ ಸಂದರ್ಭದಲ್ಲಿ ಸೌಮ್ಯ ರೆಡ್ಡಿ ಸುಲಭ ಗೆಲುವು ಸಾಧಿಸುತ್ತಾರೆ ಎಂದುಕೊಳ್ಳಲಾಗಿತ್ತು.
ಆದರೆ 10 ನೇ ಸುತ್ತಿನಿಂದ ಸೌಮ್ಯ ರೆಡ್ಡಿಯವರ ಮುನ್ನಡೆಯ ಅಂತರ ಕಡಿಮೆಯಾಗಲು ಆರಂಭವಾಯಿತು. ಮುಂದೆ ನಿರಂತರ ಕುಸಿತ ಕಂಡು 14ನೇ ಸುತ್ತಿನ ಅಂತ್ಯಕ್ಕೆ 6,900 ಮತಗಳಿಗೆ ಇಳಿಕೆಯಾಯಿತು. ಈ ಸಂದರ್ಭದಲ್ಲಿ ಸೋಲಿನ ಭಯ ಆವರಿಸಿತ್ತು.
ಆದರೆ ಈ ಮೊದಲು ಪಡೆದಿದ್ದ ಮತಗಳು ಅವರ ಸಹಾಯಕ್ಕೆ ಬಂದವು. ಅಂತರ ಹೆಚ್ಚಾಗಿದ್ದರಿಂದ 15 ಮತ್ತು 16ನೇ ಸುತ್ತುಗಳಲ್ಲಿ ಬಿ.ಎನ್ ಪ್ರಹ್ಲಾದ್ ಹೆಚ್ಚಿನ ಮತಗಳನ್ನು ಪಡೆದರೂ ಸೌಮ್ಯ ರೆಡ್ಡಿ ಗೆಲುವಿಗೇನೂ ಅಡ್ಡಿಯಾಗಲಿಲ್ಲ.
ಅಂತಿಮವಾಗಿ 16ನೇ ಸುತ್ತಿಗೆ ಮತ ಎಣಿಕೆಯ ಅಂತ್ಯಕ್ಕೆ ಸೌಮ್ಯ ರೆಡ್ಡಿ 54,457 ಮತಗಳನ್ನು ಪಡೆದು 51,568 ಮತಗಳನ್ನು ಪಡೆದ ಬಿಜೆಪಿಯ ಬಿ.ಎನ್. ಪ್ರಹ್ಲಾದ್ ಅವರನ್ನು 2,889 ಮತಗಳಿಂದ ಸೋಲಿಸಿದ್ದಾರೆ.












Click it and Unblock the Notifications