68 ರೀಲಿನ 'ಅಮ್ಮ' ಸಿನಿಮಾ ಮತ್ತು ಕನ್ನಡ ದಿನಪತ್ರಿಕೆಗಳು
ಇದು ತುಂಬ ವಿಚಿತ್ರವಾದ ಸನ್ನಿವೇಶ. ಯಾವುದೇ ವ್ಯಕ್ತಿಯ ಅನಾರೋಗ್ಯ ನಿಗೂಢವಾಗಿ ಉಳಿದು, ತೀರಿಕೊಂಡರು ಎಂದು ಸುದ್ದಿಯಾಗಿ, ಅದು ಸುಳ್ಳು ಅಂತಾಗಿ, ಮತ್ತೆ ನಿಧನರಾದರು ಎಂಬ ಮಾಹಿತಿ ಹಾಕಬೇಕಾದ ಸನ್ನಿವೇಶ ಎದುರಾಗುವುದು ತೀರಾ ಬೇಸರದ ವಿಷಯ. ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ವಿಚಾರದಲ್ಲಿ ಹೀಗಾಗಿದೆ.
[ಗ್ಯಾಲರಿ: ಶೋಕಸಾಗರದಲ್ಲಿ 'ಅಮ್ಮ'ನ ಮಕ್ಕಳು]
ಎಪ್ಪತ್ನಾಲ್ಕು ದಿನಗಳ ಕಾಲ ಆಕೆಯನ್ನು ನೋಡಿದವರು ಬೆರಳೆಣಿಕೆ ಮಂದಿ ಮಾತ್ರ. ನಿತ್ಯವೂ ಹರಿದು ಬರುತ್ತಿದ್ದ ವದಂತಿ, ಸುಮ್ಮಸುಮ್ಮನೆ ಸುಳ್ಳು ಸುದ್ದಿ ಹರಡುತ್ತಿದ್ದವರ ಬಂಧನ, ಅಪನಗದೀಕರಣದ ನಂತರ ಜಯಲಲಿತಾ ಬಗೆಗಿನ ಸುದ್ದಿಗೆ ಅಷ್ಟು ಪ್ರಾಮುಖ್ಯ ಸಿಗಲಿಲ್ಲವೇನೋ ಎಂಬುದು ಬಿಟ್ಟರೆ ಆಕೆ ಅನಾರೋಗ್ಯದ ವಿಚಾರಕ್ಕೆ ವಿಪರೀತ ಮಹತ್ವ ಇದ್ದೇ ಇರುತ್ತಿತ್ತು.[ಎಂಜಿಆರ್ ಸಮಾಧಿ ಬಳಿ ಜಯಲಲಿತಾ ಅಂತ್ಯ ಸಂಸ್ಕಾರ]
ಡಿಸೆಂಬರ್ 5ರ ರಾತ್ರಿ 68 ವಯಸ್ಸಿನ ಜಯಲಲಿತಾ ನಿಧನರಾಗಿದ್ದಾರೆ. ಕನ್ನಡ ಪತ್ರಿಕೆಗಳಲ್ಲಿ ಜಯಲಲಿತಾ ಸಾವಿನ ಸುದ್ದಿಯ ಶೀರ್ಷಿಕೆ ಏನಿದೆ, ಯಾವ ಪತ್ರಿಕೆಯಲ್ಲಿ ಈ ಸುದ್ದಿಗೆ ಹೆಚ್ಚಿನ ಮಹತ್ವ ಸಿಕ್ಕಿದೆ, ಆಕೆಯ ಜೀವನ ಚಿತ್ರವನ್ನು ಯಾರು ಹೆಚ್ಚು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ ಎಂದು ನಿಮ್ಮ ಮುಂದಿಡುವ ಪ್ರಯತ್ನ ಇದು.
ಒಂದು ವೇಳೆ ನಿಮಗೆ ಶೀರ್ಷಿಕೆ ನೀಡುವ ಅವಕಾಶ ಸಿಕ್ಕಿದ್ದರೆ ಏನು ನೀಡುತ್ತಿದ್ದಿರಿ ಎಂಬುದನ್ನು ನಮಗೆ ತಿಳಿಸಿ. ಜಯಲಲಿತಾ ಬದುಕಿನಲ್ಲಿ ಗೆಲುವಿತ್ತು. ಪಾತಾಳಕ್ಕೆ ತಲುಪಿಸಿದ ಸೋಲಿತ್ತು. ಸೇಡು, ಅವಮಾನ, ಮಾತ್ಸರ್ಯ... ಹೀಗೆ ಎಲ್ಲವನ್ನೂ ಕಂಡ ಬದುಕು ಆಕೆಯದು. ಅದನ್ನು ಹೀಗೆ ಹೇಳಬಹುದೇ? 68 ರೀಲಿನ 'ಅಮ್ಮ' ಸಿನಿಮಾ ಕೊನೆ...[ಚಿತ್ರಗಳಲ್ಲಿ: ಜಯಲಲಿತಾಗೂ ಮೈಸೂರಿಗೂ ಅವಿನಾಭಾವ ಸಂಬಂಧ]
ವಿಜಯವಾಣಿ
ಅಮ್ಮ ಅಮರ ಎಂಬುದು ಶೀರ್ಷಿಕೆ. ಜಯಲಲಿತಾ ಯುಗಾಂತ್ಯ ಎಂಬುದು ಕಿಕ್ಕರ್ ಆಗಿದೆ. ಅಂತ್ಯಕ್ರಿಯೆ ಯಾವಾಗ, ಹೊಸ ಮುಖ್ಯಮಂತ್ರಿ ಯಾರು, ಆಸ್ಪತ್ರೆ ಬುಲೆಟಿನ್ ವಿವರಗಳು ಸಹ ಇವೆ. ಉತ್ತರಾಧಿಕಾರಿ ಗೊಂದಲ, ಪ್ರಧಾನಿ ಮೋದಿ-ರಾಷ್ಟ್ರಪತಿ ಪ್ರಣವ್ ಮುಖರ್ಜಿ ಚೆನ್ನೈಗೆ ಬರುತ್ತಾರೆ ಎಂಬ ಮಾಹಿತಿಯನ್ನು ನೀಡಿದ್ದು, ನಾಲ್ಕು ಪುಟಗಳನ್ನು ನುಡಿನಮನಕ್ಕಾಗಿ ಮೀಸಲಿಟ್ಟಿದ್ದಾರೆ.
ವಿಜಯ ಕರ್ನಾಟಕ
ಅಮ್ಮ ಇನ್ನು ನೆನಪು ಎಂಬುದು ಶೀರ್ಷಿಕೆ. ಎಪ್ಪತ್ತೈದು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದದ್ದು, ನಿಧನ ಸಮಯ, ಹೊಸ ಮುಖ್ಯಮಂತ್ರಿ ಯಾರು, ಸಾವಿನ ಘೋಷಣೆಗೆ ಸಿದ್ಧತೆ ನಡೆದಿದ್ದು, ದಿನದಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಮಾಹಿತಿ ಇದೆ. ಎರಡು ವಿಶೇಷ ಪುಟವನ್ನು ಜಯಲಲಿತಾ ಬಗ್ಗೆ ಇನ್ನಷ್ಟು ಮಾಹಿತಿ ನೀಡಲು ಮೀಸಲಿಡಲಾಗಿದೆ.
ಪ್ರಜಾವಾಣಿ
ತಮಿಳರ 'ಅಮ್ಮ' ಇನ್ನಿಲ್ಲ ಎಂಬುದು ಪ್ರಜಾವಾಣಿ ಶೀರ್ಷಿಕೆ. ಚಿಕಿತ್ಸೆ ಫಲಿಸಲಿಲ್ಲ, ಏಳು ದಿನ ಶೋಕಾಚರಣೆ, ಇಂದು ಅಂತ್ಯಕ್ರಿಯೆ ಸಾಧ್ಯತೆ ಹಾಗೂ ಪನ್ನೀರ್ ಸೆಲ್ವಂ ಹೊಸ ಮುಖ್ಯಮಂತ್ರಿ ಎಂಬ ಮಾಹಿತಿಗೆ ಆದ್ಯತೆ ಸಿಕ್ಕಿದೆ. ಜತೆಗೆ ಸೋನಿಯಾ ಗಾಂಧಿ, ನರೇಂದ್ರ ಮೋದಿ ಟ್ವಿಟ್ಟರ್ ಸಂದೇಶ ಹಾಕಲಾಗಿದೆ. ವಾಹನ ಸಂಚಾರ ಸ್ಥಗಿತ ಎಂಬ ಮಾಹಿತಿಗೆ ಪ್ರಾಶಸ್ತ್ಯ ನೀಡಿರುವುದು ಗಮನಾರ್ಹ. ಎರಡು ಪುಟ ಜಯಲಲಿತಾ ಬಗ್ಗೆ ಇತರೆ ಸುದ್ದಿಗಾಗಿ.
ಉದಯವಾಣಿ
ಯಾರಾದರೂ ತೀರಿಕೊಂಡಾಗ ಹೇಳುವ ಮಾತಿದು. ಓದುಗರ ತಕ್ಷಣದ ಪ್ರಶ್ನೆಗಳಿಗೆ ಉತ್ತರದ ರೀತಿಯಲ್ಲಿ ಮಾಹಿತಿಗಳಿವೆ. ಶಾಲೆ-ಕಾಲೇಜಿಗೆ ರಜೆ, ಎಲ್ಲಿ ಅಂತ್ಯಕ್ರಿಯೆ ಎಂಬ ವಿವರಗಳಿದ್ದು, ಭಾರತದ ಧೀಮಂತ ನಾಯಕಿಯೊಬ್ಬಳ ಯುಗಾಂತ್ಯ ಎಂಬ ಕಿಕ್ಕರ್ ಗಮನ ಸೆಳೆಯುತ್ತದೆ
ಕನ್ನಡಪ್ರಭ
ಈ ಪತ್ರಿಕೆಯ ಶೀರ್ಷಿಕೆಯನ್ನು ನೀವೇ ನೋಡಬೇಕು. ಆದಿ ಪ್ರಾಸವಿರಲಿ ಎಂಬ ಕಾರಣಕ್ಕೆ ಮೂರು ಪದ ಬಳಸಿ ತಮಿಳುನಾಡಿನ ಪರಿಸ್ಥಿತಿಯನ್ನು ತಿಳಿಸಿದ್ದರೆ, ಪುಟ ವಿನ್ಯಾಸ ತುಂಬ ಚೆನ್ನಾಗಿದೆ. ಜಯಲಲಿತಾ ಅವರ ಭಾಷಣದಿಂದ ಆಯ್ದ ಮಾತೊಂದನ್ನು ನೀಡಲಾಗಿದೆ. ಸಾವಿನ ನಂತರ ತೀರಿಕೊಂಡವರು, ಪನ್ನೀರ್ ಸೆಲ್ವಂ ಅಧಿಕಾರ ಸ್ವೀಕಾರ, ಕಾಲದ ಹೆಜ್ಜೆಯ ಗುರುತು ಎಂದು ದಿನದ ಬೆಳವಣಿಗೆಯನ್ನು ಸಮಯ ಸಹಿತ ನೀಡಲಾಗಿದೆ.
ವಿಶ್ವವಾಣಿ
ಜಯಲಲಿತಾ ಇನ್ನಿಲ್ಲ ತಮಿಳುನಾಡಿಗೆ ಹೃದಯಾಘಾತ ಎಂಬ ಶೀರ್ಷಿಕೆ ಎಲ್ಲವನ್ನೂ ಹೇಳಿದಂತಿದೆ. ಜಯಲಲಿತಾ ಅವರ ಫೋಟೋ ಹಾಗೂ ಶೀರ್ಷಿಕೆಯ ಏನನ್ನೋ ಧ್ವನಿಸಬೇಕೋ ಅದನ್ನು ಧ್ವನಿಸುತ್ತಿದೆ.
ಸಂಯುಕ್ತ ಕರ್ನಾಟಕ
ಅಮ್ಮ ಅಸ್ತಂಗತ ಎಂಬುದು ಶೀರ್ಷಿಕೆ. ಪುಟ ವಿನ್ಯಾಸಕ್ಕಿಂತ ಮಾಹಿತಿ ನೀಡುವುದಕ್ಕೆ ಒತ್ತು ನೀಡಿದಂತಿದೆ. ಶಾಲೆ-ಕಾಲೇಜು ರಜೆ, ಪನ್ನೀರ್ ಸೆಲ್ವಂಗೆ ಪಟ್ಟ, ನಾಲ್ವರು ಮೃತಪಟ್ಟಿರುವುದು..ಹೀಗೆ ಮಾಹಿತಿಯನ್ನು ನೀಡಲಾಗಿದೆ.