ಕಾಂಗ್ರೆಸ್ಸಿಗೆ ನ್ಯಾಯಾಲಯದಲ್ಲಿ ಉತ್ತರ : ಅನಂತ್ ಕುಮಾರ್
ಬೆಂಗಳೂರು, ಅಕ್ಟೋಬರ್ 09 : 'ಕಾಂಗ್ರೆಸ್ ತೀವ್ರ ಹತಾಶೆಯಿಂದಾಗಿ ಅಮಿತ್ ಶಾ ಪುತ್ರ ಜಯ್ ಶಾ ವಿರುದ್ಧ ಆರೋಪಗಳನ್ನು ಮಾಡುತ್ತಿದೆ. ನ್ಯಾಯಾಲಯದಲ್ಲಿ ಉತ್ತರ ನೀಡಲು ಜಯ್ ಶಾ ಸಿದ್ಧರಾಗಿದ್ದಾರೆ' ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದರು.
ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸಂಜೆ ಪ್ರತಿಕಾಗೋಷ್ಠಿ ನಡೆಸಿದ ಕೇಂದ್ರ ಸಚಿವ ಅನಂತ್ ಕುಮಾರ್, 'ಕಾಂಗ್ರೆಸ್ ಕಟ್ಟು ಕಥೆಗಳ ಮೂಲಕ ಚಾರಿತ್ರ್ಯ ವಧೆ ಮಾಡುತ್ತಿದೆ' ಎಂದು ಆರೋಪಿಸಿದರು.

'ಅಮಿತ್ ಶಾ ಅವರು ಬಿಜೆಪಿ ಅಧ್ಯಕ್ಷರಾದ ಮೇಲೆ ಸತತವಾಗಿ ಚುನಾವಣೆಗಳಲ್ಲಿ ಪಕ್ಷ ಜಯಗಳಿಸುತ್ತಿದೆ. ಇದರಿಂದ ಕಾಂಗ್ರೆಸ್ ಪಕ್ಷ ಹತಾಶೆಗೊಂಡಿದೆ. ಆದ್ದರಿಂದ, ಅವರ ವಿರುದ್ಧ ಹುನ್ನಾರ ಮಾಡಿ ಜಯ್ ಶಾ ವಿರುದ್ಧ ಲೇಖನ ಬರೆಸಲಾಗಿದೆ' ಎಂದು ದೂರಿದರು.
'ಕಾಂಗ್ರೆಸ್ ಆರೋಪಗಳಿಗೆ ನ್ಯಾಯಾಲಯದಲ್ಲಿ ಉತ್ತರ ನೀಡಲು ಜಯ್ ಶಾ ಸಿದ್ಧರಾಗಿದ್ದಾರೆ. ಮಾನನಷ್ಟ ಮೊಕದ್ದಮೆ ಹೂಡಲು ಅವರು ನಿರ್ಧರಿಸಿದ್ದಾರೆ. ಕಾನೂನಿನ ಮೂಲಕವೇ ಉತ್ತರ ನೀಡಲಿದ್ದಾರೆ' ಎಂದು ಅನಂತ್ ಕುಮಾರ್ ಹೇಳಿದರು.
ಇದಕ್ಕೆಲ್ಲ ಬಗ್ಗಲ್ಲ-ಜಗ್ಗಲ್ಲ : ಅನಂತ್ ಕುಮಾರ್, ಬಿ.ಎಸ್.ಯಡಿಯೂರಪ್ಪ ನಡುವಿನ ಸಂಭಾಷಣೆಯ ಪ್ರಕರಣವನ್ನು ಎಸಿಬಿಗೆ ವಹಿಸುವ ಕುರಿತು ಪ್ರತಿಕ್ರಿಯೆ ನೀಡಿದ ಅನಂತ್ ಕುಮಾರ್, 'ಕಾಂಗ್ರೆಸ್ ಸರ್ಕಾರದ ಈ ಬೆದರಿಕೆಗೆ ಜಗ್ಗಲ್ಲ-ಬಗ್ಗಲ್ಲ' ಹೇಳಿದರು.
'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ದಮನ ಮಾಡುವ ಕೆಲಸ ಮಾಡುತ್ತಿದ್ದಾರೆ. ತುರ್ತುಪರಿಸ್ಥಿತಿ ನಿರ್ಮಾಣ ಮಾಡುವ ಕಾರ್ಯ ಮಾಡುತ್ತಿದ್ದಾರೆ' ಎಂದು ಅನಂತ್ ಕುಮಾರ್ ಆರೋಪಿಸಿದರು.












Click it and Unblock the Notifications