Breaking; ಬಿಜೆಪಿ 'ಜನೋತ್ಸವ' ಹೆಸರು ಬದಲು, ಕಾಂಗ್ರೆಸ್ ಲೇವಡಿ
ಬೆಂಗಳೂರು, ಸೆಪ್ಟೆಂಬರ್ 08: ಕರ್ನಾಟಕದ ಬಿಜೆಪಿ ಘಟಕ 'ಜನೋತ್ಸವ ಸಮಾವೇಶ'ದ ಹೆಸರನ್ನು ಬದಲಾವಣೆ ಮಾಡಿದೆ. 'ಜನಸ್ಪಂದನ' ಎಂಬ ಹೆಸರಿನಲ್ಲಿ ಬೃಹತ್ ಸಮಾವೇಶ ದೊಡ್ಡಬಳ್ಳಾಪುರದಲ್ಲಿ ನಡೆಯಲಿದೆ.
ರಾಜ್ಯ ಬಿಜೆಪಿ ಸರ್ಕಾರದ ಮೂರು ವರ್ಷಗಳ ಸಾಧನೆಗಳ ಉತ್ಸವವೇ 'ಜನಸ್ಪಂದನ ಬೃಹತ್ ಸಮಾವೇಶ' ಎಂದು ಬಿಜೆಪಿ ಹೇಳಿದೆ. ಸೆಪ್ಟೆಂಬರ್ 10ರಂದು ದೊಡ್ಡಬಳ್ಳಾಪುರದಲ್ಲಿ ನಡೆಯುವ ಸಮಾವೇಶಕ್ಕೆ ಎಲ್ಲರೂ ಬನ್ನಿ ಎಂದು ಟ್ವೀಟ್ ಮೂಲಕ ಮನವಿ ಮಾಡಿದೆ.
ಜನರು ಜಲೋತ್ಸವದಲ್ಲಿ ನರಳಿದ್ದಾರೆ,
— Karnataka Congress (@INCKarnataka) September 8, 2022
ಸರ್ಕಾರದವರು ಜನೋತ್ಸವದಲ್ಲಿ ಮುಳುಗಿದ್ದಾರೆ!
ಜನರ ಬದುಕಿನ ಸಮಾಧಿ ಮೇಲೆ ಉತ್ಸವ ಮಾಡಲು ಹೊರಟಿರುವ @BJP4Karnataka ಸರ್ಕಾರಕ್ಕೆ ಜನರ ಬಗ್ಗೆ ಕನಿಷ್ಠ ಕಾಳಜಿ, ಕಳಕಳಿ ಇಲ್ಲದಾಗಿದೆ.@BSBommai ಅವರೇ, ತಾವು ಜನಸ್ಪಂದನೆ ಮಾಡಬೇಕಿರುವುದು ನೆರೆಪೀಡಿತ ಪ್ರದೇಶದಲ್ಲಿ ಹೊರತು ಅದ್ದೂರಿ ಆಚರಣೆಯಲ್ಲಲ್ಲ. pic.twitter.com/bkfi5cpHfe
ಪ್ರತಿಪಕ್ಷ ಕಾಂಗ್ರೆಸ್ 'ಜನೋತ್ಸವ' ಸಮಾವೇಶದ ಹೆಸರು ಬದಲಾವಣೆಗೆ ಲೇವಡಿ ಮಾಡಿದೆ. ಈ ಕುರಿತು ಟ್ವೀಟ್ ಮಾಡಿರುವ ಪಕ್ಷ, 'ಜನಬೆಂಬಲ ಇಲ್ಲ ಎಂದು ಅರಿತುಕೊಂಡ ಬಿಜೆಪಿ ಈಗ 'ಜನಸ್ಪಂದನ'ಎಂದು ಹೆಸರು ಬದಲಿಸಿದೆಯಂತೆ. ಹೆಸರು ಬದಲಾದಾಕ್ಷಣ ಪರಿಸ್ಥಿತಿ ಬದಲಾಗುವುದೇ?' ಎಂದು ಬಿಜೆಪಿಯನ್ನು ಪ್ರಶ್ನಿಸಿದೆ.

'ಮಳೆಯಲ್ಲಿ ಮುಳುಗಿದ ಜನರಿಗೆ ಸ್ಪಂದನೆ ತೋರದೆ ಇನ್ನೆಲ್ಲೋ ಬಸ್ಸು, ಲಾರಿಗಳಲ್ಲಿ ಜನರನ್ನು ಕರೆತಂದು "ಜನಸ್ಪಂದನೆ" ಎನ್ನುವುದಕ್ಕಿಂತ ಹಾಸ್ಯಾಸ್ಪದವಾದುದು ಬೇರೆ ಇದೆಯೇ?' ಎಂದು ಬಿಜೆಪಿಯನ್ನು ಟೀಕಿಸಿದೆ.
'ಜನರು ಜಲೋತ್ಸವದಲ್ಲಿ ನರಳಿದ್ದಾರೆ, ಸರ್ಕಾರದವರು ಜನೋತ್ಸವದಲ್ಲಿ ಮುಳುಗಿದ್ದಾರೆ!. ಜನರ ಬದುಕಿನ ಸಮಾಧಿ ಮೇಲೆ ಉತ್ಸವ ಮಾಡಲು ಹೊರಟಿರುವ ಬಿಜೆಪಿ ಕರ್ನಾಟಕ ಸರ್ಕಾರಕ್ಕೆ ಜನರ ಬಗ್ಗೆ ಕನಿಷ್ಠ ಕಾಳಜಿ, ಕಳಕಳಿ ಇಲ್ಲದಾಗಿದೆ' ಎಂದು ಕಾಂಗ್ರೆಸ್ ದೂರಿದೆ.
'ಬಸವರಾಜ ಬೊಮ್ಮಾಯಿ ಅವರೇ, ತಾವು ಜನಸ್ಪಂದನೆ ಮಾಡಬೇಕಿರುವುದು ನೆರೆಪೀಡಿತ ಪ್ರದೇಶದಲ್ಲಿ ಹೊರತು ಅದ್ದೂರಿ ಆಚರಣೆಯಲ್ಲಲ್ಲ' ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಕಿವಿ ಹಿಂಡಿದೆ.

ಬಿಜೆಪಿ ಜನೋತ್ಸವ ಸಮಾವೇಶವನ್ನು ಸೆಪ್ಟೆಂಬರ್ 8ರ ಗುರುವಾರ ಆಯೋಜನೆ ಮಾಡಲಾಗಿತ್ತು. ಆದರೆ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಆಹಾರ, ಅರಣ್ಯ ಸಚಿವರಾಗಿದ್ದ ಉಮೇಶ್ ಕತ್ತಿ ನಿಧನದರಾದ ಹಿನ್ನಲೆ ಸಮಾವೇಶವನ್ನು ಸೆಪ್ಟೆಂಬರ್ 11ರಂದು ನಡೆಸಲು ಬುಧವಾರ ತೀರ್ಮಾನಿಸಲಾಗಿತ್ತು.
ಆದರೆ ಮತ್ತೆ ಬುಧವಾರ ಸಂಜೆ ಸೆಪ್ಟೆಂಬರ್ 10ರಂದು ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಅಲ್ಲದೇ 'ಜನೋತ್ಸವ' ಎಂಬ ಹೆಸರನ್ನು 'ಜನಸ್ಪಂದನ' ಎಂದು ಬದಲಾವಣೆ ಮಾಡಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
'ಜನೋತ್ಸವ' ಸಮಾವೇಶವನ್ನು ಮೊದಲು ಜುಲೈ 28ರಂದು ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ದಕ್ಷಿಣ ಕನ್ನಡದಲ್ಲಿ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಸಮಾವೇಶ ಮುಂದೂಲಾಗಿತ್ತು.












Click it and Unblock the Notifications