ಬಜೆಟ್ ಅಧಿವೇಶನ ಬಳಿಕ 'ಜನತಾ ಜಲಧಾರೆಯ ಗಂಗಾ ರಥಯಾತ್ರೆ': ಎಚ್.ಡಿ. ಕುಮಾರಸ್ವಾಮಿ
ಬೆಂಗಳೂರು, ಮಾ.7: ಮೇಕೆದಾಟು ಪಾದಯಾತ್ರೆ ಪೂರ್ಣಗೊಂಡ ಬೆನ್ನಲ್ಲೇ ಜೆಡಿಎಸ್ನಿಂದ 'ಜನತಾ ಜಲಧಾರೆಯ ಗಂಗಾ ರಥಯಾತ್ರೆ' ನಡೆಸಲು ನಿರ್ಧರಿಸಲಾಗಿದೆ.
ಜನತಾ ಜಲಧಾರೆಗೆ ಈ ಹಿಂದೆಯೇ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಕೋವಿಡ್ ಮೂರನೇ ಅಲೆಯ ತೀವ್ರತೆಯಿಂದಾಗಿ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಈಗ ಮತ್ತೊಮ್ಮೆ ಚಾಲನೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಬಜೆಟ್ ಅಧಿವೇಶನ ಮುಗಿದ ನಂತರ 'ಜನತಾ ಜಲಧಾರೆಯ ಗಂಗಾ ರಥಯಾತ್ರೆ' ಆರಂಭ ಮಾಡಲು ಜೆಡಿಎಸ್ ನಿರ್ಧಾರ ಮಾಡಲಾಗಿದ್ದು, ಈ ಸಂಬಂಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು 4 ಜಿಲ್ಲೆಗಳ ಶಾಸಕರು, ಮುಖಂಡರ ಜತೆ ಮಹತ್ವದ ಸಭೆ ನಡೆಸಿದರು.

ಈಗಾಗಲೇ ಬೀದರ್ ಜಿಲ್ಲೆಯ ಶಾಸಕರು, ಮುಖಂಡರ ಜತೆ ಕುಮಾರಸ್ವಾಮಿ ಅವರು ಚರ್ಚೆ ನಡೆಸಿದ್ದಾರೆ. ನಗರದಲ್ಲಿ ಇಂದು ನಡೆದ ಸಭೆಯಲ್ಲಿ ಕಣಕಂಬಿ, ಮಹದಾಯಿ, ಕೃಷ್ಣಾ ಜಲಾನಯನ ಪ್ರದೇಶ, ಮಲಪ್ರಭಾ, ಘಟಪ್ರಭಾ ಜಲಾನಯನ ಪ್ರದೇಶದ ಶಾಸಕರು, ಮುಖಂಡರ ಜತೆ ಅವರು ಸಮಾಲೋಚನೆ ನಡೆಸಿದರು.
ಬೆಳಗಾವಿ ಜಿಲ್ಲೆಯಲ್ಲಿ ನಮ್ಮ ಪಕ್ಷಕ್ಕೆ ಉತ್ತಮ ನೆಲೆ ಇದ್ದು, ಈ ಭಾಗದ ಎಲ್ಲ ತಾಲೂಕು ಕೇಂದ್ರಗಳಲ್ಲಿ ರಥಯಾತ್ರೆ ಹಾದು ಹೋಗಬೇಕು. ಅದಕ್ಕೆ ಪಕ್ಷದ ಎಲ್ಲ ಮುಖಂಡರು ಒಟ್ಟಾಗಿ ಕೆಲಸ ಮಾಡಿ ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕು ಎಂದು ತಾಕೀತು ಮಾಡಿದರು.
ಮನೆ ಮನೆಗೂ ಕರಪತ್ರ ಹಂಚಿ ಜಲಧಾರೆಯನ್ನು ಯಾಕೆ ಮಾಡುತ್ತಿದ್ದೇವೆ? ರಾಜ್ಯದ ನೀರಾವರಿ ಸಮಸ್ಯೆಗಳಿಗೆ ಜೆಡಿಎಸ್ ಹೇಗೆ ಪರಿಹಾರ ನೀಡುತ್ತದೆ ಮತ್ತು ಎಂಬ ಮಾಹಿತಿಯನ್ನು ಕೊಡಬೇಕು. ಮುಖಂಡರು ಪರಿಣಾಮಕಾರಿಯಾಗಿ ಈ ವಿಷಯಗಳನ್ನು ಅರಿತುಕೊಂಡು ಹೇಳಬೇಕು. ಜನರ ವಿಶ್ವಾಸ ಗಳಿಸಿಕೊಳ್ಳುವ ರೀತಿಯಲ್ಲಿ ಶ್ರಮ ವಹಿಸಬೇಕು ಎಂದು ಅವರು ಸೂಚನೆ ನೀಡಿದರು.
ಮುಖ್ಯವಾಗಿ ಯುವ ಕಾರ್ಯಕರ್ತರು ಸಕ್ರಿಯವಾಗಿ ಯಾತ್ರೆಯಲ್ಲಿ ಭಾಗಿಯಾಗಬೇಕು. ಜನರು ಕೂಡ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ನಾವು ಪ್ರೆರೇಪಿಸಬೇಕು. ಈ ಭಾಗದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ಕಣಕಂಬಿ, ಮಹದಾಯಿ, ಕೃಷ್ಣಾ ಜಲಾನಯನ ಪ್ರದೇಶ, ಮಲಪ್ರಭಾ, ಘಟಪ್ರಭಾ ಜಲಾಶಯ ಸೇರಿ 7 ಜಾಗಗಳಲ್ಲಿ ಜಲ ಸಂಗ್ರಹ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿಗಳು ಈ ಸಭೆಯಲ್ಲಿ ಹೇಳಿದರು.
ಮಹದಾಯಿ ಅನ್ಯಾಯದ ಮಾಹಿತಿ ನೀಡಿ:
ಮಹದಾಯಿ ನದಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ದೊಡ್ಡ ದನಿಯಲ್ಲಿ ಜನತೆಗೆ ತಿಳಿಸಿ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಾಡಬಹುದಾದ ಕಾರ್ಯಗಳ ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಡಬೇಕು. ಸ್ಥಳೀಯ ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಜನರಿಗೆ ಜಲಧಾರೆ ಮಹತ್ವವನ್ನು ತಿಳಿಸಬೇಕು ಎಂದು ಕುಮಾರಸ್ವಾಮಿ ಹೇಳಿದರು.
ಜತೆಗೆ, ಹೆಚ್.ಡಿ.ದೇವೇಗೌಡರು ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಗಳಾಗಿ, ನಾನು ಮುಖ್ಯಮಂತ್ರಿ ಆಗಿದ್ದಾಗ ಮಹದಾಯಿ ಹಾಗೂ ಉತ್ತರ ಕರ್ನಾಟಕಕ್ಕೆ ನೀಡಿರುವ ಕೊಡುಗೆಯನ್ನು ಜನತೆ ಸಮಗ್ರವಾಗಿ ತಿಳಿಸಬೇಕು ಎಂದು ಮುಖಂಡರಿಗೆ ಸೂಚನೆ ನೀಡಿದರು.
ಈಗಾಗಲೇ ಜಲಧಾರೆ ತಡವಾಗಿದೆ. ಜನರಿಗೆ ಯಾವುದೇ ಗೊಂದಲ ಆಗದಂತೆ, ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಿ. ನಾನು ಅದಷ್ಟು ಬೇಗ ಯಾತ್ರೆ ಆರಂಭ ಮಾಡುವ ದಿನಾಂಕವನ್ನು ಪ್ರಕಟಿಸುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಬಂಡೆಪ್ಪ ಖಾಶೆಂಪೂರ್, ವಿಧಾನ ಪರಿಷತ್ ಸದಸ್ಯ ಕೆ.ಎನ್.ತಿಪ್ಪೇಸ್ವಾಮಿ, ಹಿರಿಯ ಶಾಸಕ ವೆಂಕಟ ರಾವ್ ನಾಡಗೌಡ ಮುಂತಾದವರು ಹಾಜರಿದ್ದರು.












Click it and Unblock the Notifications