Jaggesh: ಮಂತ್ರಾಲಯ ರಾಯರ ಮಠಕ್ಕೆ ಜಾತಿಗಳನ್ನ ತರಬೇಡಿ: ಜಗ್ಗೇಶ್ ಹೀಗಂದಿದ್ದೇಕೆ?
ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ ಹಾಗೂ ಹಾಲಿ ಬಿಜೆಪಿ ರಾಜ್ಯಸಭಾ ಸಂಸದ ಜಗ್ಗೇಶ್ ಅವರು ಮಂತ್ರಾಲಯದ ಶ್ರೀಗುರುರಾಘವೇಂದ್ರ ಸ್ವಾಮಿಯ ಅಪ್ಪಟ ಭಕ್ತರು. ಬಿಡುವು ಸಿಕ್ಕಾಗಲೆಲ್ಲ ತಪ್ಪದೇ ಅವರು ರಾಯರ ಮಠಕ್ಕೆ ತೆರಳಿ, ದರ್ಶನ ಹಾಗೂ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿಯೂ ರಾಯರ ಫೋಟೋಗಳನ್ನು ಹಂಚಿಕೊಳ್ಳುತ್ತಾ ನಮಿಸುತ್ತಿರುತ್ತಾರೆ. ಆದರೆ, ಜಗ್ಗೇಶ್ ಅವರು ಮಂತ್ರಾಲಯಕ್ಕೆ ಹೋಗುವ ಸಂಬಂಧ ಜಾತಿ ವಿಚಾರ ಉಲ್ಲೇಖಿಸಿ ಅವಮಾನ ಮಾಡಿರುವುದಾಗಿ ಖುದ್ದು ಅವರೇ ಬೇಸರ ಹಂಚಿಕೊಂಡಿದ್ದಾರೆ. ರಾಯರ ಮಠಕ್ಕೆ ಜಾತಿಗಳನ್ನು ತರಬೇಡಿ ಎಂದು ಜಗ್ಗೇಶ್ ಮನವಿ ಮಾಡಿದ್ದಾರೆ.
"ರಾಯರ ದರ್ಶನ" ಆಲ್ಬಮ್ ಸಾಂಗ್ ಬಿಡುಗಡೆ ಸಮಾರಂಭದಲ್ಲಿ ಜಗ್ಗೇಶ್ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. 'ನಾನು ಮಂತ್ರಾಲಯಕ್ಕೆ ಹೋದರೆ ಗುರುಗಳಿಗೆ ಪಾದಸೇವೆ ಮಾಡದೆ ಬರಲ್ಲ. ಅದನ್ನ ಕೆಲವರು ಅವಮಾನಕಾರಿಯಾಗಿ ಮಾತನಾಡಿದ್ದಾರೆ. ಹೋಗಿ ಬ್ರಾಹ್ಮಣರ ಕಾಲಿಗೆ ಬೀಳ್ತಾನೆ, ಅಯೋಗ್ಯ ಅಂತೆಲ್ಲ ಅಂದಿದ್ದಾರೆ. ಆ ಪುಣ್ಯಾತ್ಮರಿಗೆ ನಾನು ಉತ್ತರ ಕೊಡಲು ಬಯಸುತ್ತೇನೆ' ಎಂದಿದ್ದಾರೆ.

'ರಾಘವೇಂದ್ರ ಸ್ವಾಮಿಗಳು ಕುಳಿತ ಜಾಗದಲ್ಲಿ ಈ ಸ್ವಾಮೀಜಿಗಳು ಕುಳಿತುಕೊಳ್ತಾರೆ. ರಾಯರು ಬಳಸಿದ್ದ ವಸ್ತುಗಳಿಂದಲೇ ಇವರು ಪೂಜೆ ಮಾಡ್ತಾರೆ. ಹೀಗಾಗಿ ಇವರು ಸಂಪೂರ್ಣ ರಾಯರ ಪ್ರತಿನಿಧಿಗಳು. ಆ ಪೀಠದಲ್ಲಿ ಅವರನ್ನು ಸುಮ್ಮನೆ ನೋಡಿದರೆ ಸಾಕು, ಅನೇಕ ಸಂಕಷ್ಟಗಳು ದೂರವಾಗುತ್ತೆ. ಇನ್ನು ಅವರ ಪಾದ ಮುಟ್ಟಿ ಸೇವೆ ಮಾಡುವುದು ಸಾಕ್ಷಾತ್ ರಾಯರಿಗೆ ಮಾಡಿದಂತೆ' ಎಂದು ಹೇಳಿದ್ದಾರೆ.
'ಅದು ಜಾತ್ಯಾತೀತ ಮಠ'
'ರಾಯರು ಏನಾದ್ರೂ ಈ ಕಾಲದಲ್ಲಿದ್ದು, ನಾವು ಅವರ ಪಾದ ಮುಟ್ಟಿ ಸೇವೆ ಮಾಡಿದ್ರೆ ಏನು ಫಲ ಬರುತ್ತೋ? ಅವರ ಪಾದ ಮುಟ್ಟಿದರೂ ಅಷ್ಟೇ ಸಿಗುತ್ತೆ. ದಯವಿಟ್ಟು ರಾಯರ ಮಠದಲ್ಲಿ ಜಾತಿಗಳನ್ನ ತರಬೇಡಿ. ಅದು ಜಾತ್ಯಾತೀತ ಮಠ. ಒಂದು ವೇಳೆ ಅಂತಹ ಭಾಷೆ ನಿಮ್ಮ ಬಾಯಲ್ಲಿ ಬಂದರೆ ನಿಮ್ಮ ಬದುಕಿಗೆ, ಬೆಳವಣಿಗೆಗೆ ಬಹಳ ಕುಂಠಿತವಾಗುತ್ತೆ. ತುಂಬಾ ತೊಂದರೆಗಳನ್ನು ಎದುರಿಸುತ್ತೀರಿ' ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
'ಈ ರೀತಿ ಮಾತನಾಡುವವರಿಗೆ ರಾಯರೇ ನಿಮಗೆ ಒಂದು ದಿನ ಎಚ್ಚರಿಸುತ್ತಾರೆ. ದಯವಿಟ್ಟು ಆ ವಿಚಾರವನ್ನ ಯಾರೂ ಮಾತನಾಡಬೇಡಿ. ನಾನು ಇರುವುದೇ ರಾಯರ ಮಠಕ್ಕೆ ಸೇವೆ ಮಾಡಲು, ಈ ಹಿಂದೆಯೂ ನಾನು ಇದನ್ನು ಮಾಡಿಕೊಂಡು ಬಂದಿದ್ದೇನೆ. ಇವತ್ತಲ್ಲ, ಕೊನೆಯ ಉಸಿರಿರುವವರೆಗೆ ರಾಯರು ಅವರಲ್ಲಿದ್ದಾರೆ ಎನ್ನುವುದು ನನ್ನ ನಂಬಿಕೆ' ಎಂದು ಜಗ್ಗೇಶ್ ಹೇಳಿದ್ದಾರೆ.












Click it and Unblock the Notifications