ಷರೀಫ್ ಮನವೊಲಿಕೆಗೆ ಸಿಎಂ,ಪರಮೇಶ್ವರ್ ಕಸರತ್ತು!
ಬೆಂಗಳೂರು, ಮಾ. 17 : ಪಕ್ಷದ ಟಿಕೆಟ್ ಹಂಚಿಕೆಯಿಂದ ಅತೃಪ್ತಗೊಂಡಿರುವ ಹಿರಿಯ ಕಾಂಗ್ರೆಸ್ ಮುಖಂಡ ಜಾಫರ್ ಷರೀಫ್ ಜೆಡಿಎಸ್ ಅಭ್ಯರ್ಥಿಯಾಗಿ ಮೈಸೂರಿನಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ. ಪಕ್ಷದಲ್ಲಿ ಅಸಮಾಧಾನ ಉಂಟಾಗಿರುವ ಹಿನ್ನಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ಸಿಎಂ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದು, ಷರೀಫ್ ಮನವೊಲಿಕೆ ಕಾರ್ಯಕ್ಕೆ ಮುಂದಾಗಿದ್ದಾರೆ.
ಶನಿವಾರ ಜಾಫರ್ ಷರೀಫ್ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿರುವುದು ಕಾಂಗ್ರೆಸ್ ನಾಯಕರ ನಿದ್ದೆಗೆಡೆಸಿದೆ. ಷರೀಫ್ ಮೈಸೂರು ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ, ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ವಿಶ್ವನಾಥ್ ಗೆಲ್ಲುವ ಸಾಧ್ಯತೆ ಮೇಲೆ ನೇರ ಪರಿಣಾಮ ಬೀರಬಹುದು ಎಂದು ನಾಯಕರು ಲೆಕ್ಕಾಚಾರ ಹಾಕಿ, ಮನವೊಲಿಕೆ ಕಸರತ್ತು ಆರಂಭಿಸಿದ್ದಾರೆ. [ಕಾಂಗ್ರೆಸ್ 2ನೇ ಪಟ್ಟಿ]
ಆದ್ದರಿಂದ, ಸಿಎಂ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಮಾತುಕತೆ ನಡೆಸಿದ್ದು, ಜಾಫರ್ ಷರೀಫ್ ಪಕ್ಷ ತೊರೆಯದಂತೆ ಅವರ ಮನವೊಲಿಸಲು ತೀರ್ಮಾನಿಸಿ, ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆದರೆ, ಈಗಾಗಲೇ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಟಿಕೆಟ್ ತಪ್ಪಿಸಿಕೊಂಡಿರುವ ಷರೀಫ್ ಕಾಂಗ್ರೆಸ್ ನಾಯಕರ ಸಂಧಾನಕ್ಕೆ ಒಪ್ಪುತ್ತಾರಾ? ಎಂಬುದು ಸದ್ಯದ ಪ್ರಶ್ನೆ. ಷರೀಫ್ ಕೋಪಕ್ಕೆ ಕಾರಣವೇನು? [ಜಾಫರ್ ಷರೀಫ್ ಏನು ಮಾಡಬೇಕು, ಮತಹಾಕಿ]

ಟಿಕೆಟ್ ಕೈ ತಪ್ಪಿದ್ದು
ಹಿರಿಯ ಮುಖಂಡ ಜಾಫರ್ ಷರೀಫ್ ತಾವಾಗೇ ಟಿಕೆಟ್ ಕೇಳದಿದ್ದರೂ ಕೆಪಿಸಿಸಿ ಅವರ ಹೆಸರನ್ನು ಬೆಂಗಳೂರು ಸೆಂಟ್ರಲ್ ಕ್ಷೇತ್ರಕ್ಕೆ ಶಿಫಾರಸು ಮಾಡಿತ್ತು. ಆದರೆ, ಅಂತಿಮವಾಗಿ ಟಿಕೆಟ್ ನಿರಾಕರಿಸಿ ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಅರ್ಷದ್ ಅವರಿಗೆ ಟಿಕೆಟ್ ನೀಡಿತ್ತು. ಆದ್ದರಿಂದ ಅಸಮಾಧಾನಗೊಂಡಿರುವ ಷರೀಫ್, ಯುವಕರಿಗೆ ಟಿಕೆಟ್ ನೀಡುವ ಉದ್ದೇಶವಿದ್ದರೆ ಅದನ್ನು ಮೊದಲೇ ತಮಗೆ ತಿಳಿಸಬಹುದಿತ್ತು ಎಂದು ಪಕ್ಷದ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ದೇವೇಗೌಡರ ಭೇಟಿ
ಶನಿವಾರ ಜಾಫರ್ ಷರೀಫ್ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಪದ್ಮನಾಭನಗರದಲ್ಲಿನ ಅವರ ನಿವಾಸದಲ್ಲಿ ಭೇಟಿ ಮಾಡಿದ್ದರು. ಎಚ್.ಡಿ.ಕುಮಾರಸ್ವಾಮಿ ಸಹ ಆ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಷರೀಫ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು, ಮೈಸೂರು ಕ್ಷೇತ್ರದಿಂದ ಟಿಕೆಟ್ ನೀಡಲು ಜೆಡಿಎಸ್ ನಾಯಕರು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ. ಜೆಡಿಎಸ್ ಮೈಸೂರು ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಇನ್ನೂ ಘೋಷಣೆ ಮಾಡದಿರುವುದು ಈ ವಾದಕ್ಕೆ ಪುಷ್ಠಿ ನೀಡುತ್ತಿದೆ.

ಮುಸ್ಲಿಂ ಮತ ಕೈತಪ್ಪುವ ಭೀತಿ
ಒಂದು ವೇಳೆ ಮುಸ್ಲಿಂ ಜನಾಂಗದ ಪ್ರಬಲ ನಾಯಕ ಜಾಫರ್ ಷರೀಫ್ ಜೆಡಿಎಸ್ ಸೇರಿದರೆ, ರಾಜ್ಯಾದ್ಯಂತ ಮುಸ್ಲಿಂ ಮತಗಳಲ್ಲಿ ಬಿರುಕು ಮೂಡುವ ಸಂಭವವೂ ಇದೆ. ಇದು ಕಾಂಗ್ರೆಸ್ ನಾಯಕರ ಚಿಂತೆಗೆ ಕಾರಣವಾಗಿದ್ದು, ಆದ್ದರಿಂದ ಮನವೊಲಿಸುವ ಪ್ರಯತ್ನವನ್ನು ಆರಂಭಿಸಿದ್ದಾರೆ.

ಷರೀಫ್ ನಿರ್ಧಾರವೇನು?
ಷರೀಫ್ ಅವರ ಜೊತೆ ಮಾತುಕತೆ ನಡೆಸಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ತಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುವ ಭರವಸೆಯನ್ನು ಹೈಕಮಾಂಡ್ ನೀಡಿದೆ. ಯಾವ ಕಾರಣಕ್ಕೂ ಕಾಂಗ್ರೆಸ್ ತೊರೆಯಬಾರದು ಎಂದು ಮನವಿ ಮಾಡಿದ್ದಾರೆ. ಆದರೆ, ಷರೀಫ್ ಜೆಡಿಎಸ್ ಸೇರುವ ಕುರಿತು ತಮ್ಮ ಅಂತಿಮ ನಿರ್ಧಾರವನ್ನು ಇನ್ನೂ ಪ್ರಕಟಿಸಿಲ್ಲ.

ಇಂದು ಅಂತಿಮ ಚಿತ್ರಣ
ಈಗಾಗಲೇ 12 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವ ಜೆಡಿಎಸ್ ಸೋಮವಾರ ತನ್ನ 2ನೇ ಪಟ್ಟಿ ಬಿಡುಗಡೆ ಮಾಡಲಿದೆ. ಆದ್ದರಿಂದ ಇಂದು ಸ್ಪಷ್ಟ ಚಿತ್ರಣ ಲಭ್ಯವಾಗುವ ಸಾಧ್ಯತೆ ಇದೆ. ಮೈಸೂರು ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯನ್ನು ಪ್ರಕಟಿಸದಿದ್ದರೆ, ಷರೀಫ್ ಜೆಡಿಎಸ್ ಸೇರುವುದು ಖಚಿತವಾಗಲಿದೆ.












Click it and Unblock the Notifications