ಟೊಮೆಟೊ ಬೆಳೆದ ಆಂಧ್ರ ರೈತನಿಗೆ ಜಾಕ್ಪಾಟ್: 45 ದಿನಗಳಲ್ಲಿ ಗಳಿಸಿದ್ದು ಎಷ್ಟು ಕೋಟಿ ಗೊತ್ತೇ? ನೀವು ಕೇಳಿದರೆ ಗಾಬರಿ ಗ್ಯಾರಂಟಿ
ಕೋಲಾರ, ಜುಲೈ 29: ದೇಶದಾದ್ಯಂತ ಟೊಮೆಟೊ ಬೆಲೆ ಗಗನಕ್ಕೇರಿದೆ. ಒಂದು ಕಡೆ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದ್ದರೆ, ಇನ್ನೊಂದು ಕಡೆ ಟೊಮೆಟೊ ಬೆಳೆದ ರೈತರಿಗೆ ಜಾಕ್ಪಾಟ್ ಹೊಡೆದಿದೆ. ಆಂಧ್ರ ಹಾಗೂ ಕರ್ನಾಟಕದ ರೈತರು ಎರಡು ತಿಂಗಳಲ್ಲಿ ಕೋಟಿಗಟ್ಟಲೇ ಹಣ ಮಾಡಿರುವುದು ವರದಿಯಾಗಿದೆ. ಅದರಲ್ಲೂ ಕೋಲಾರ ಮಾರುಕಟ್ಟೆಯಲ್ಲಿನ ಟೊಮೆಟೊಗೆ ಭಾರೀ ಬೇಡಿಕೆ ಇರುವುದರಿಂದ ಇಲ್ಲಿನ ರೈತರು ಭಾರೀ ಪ್ರಮಾಣದ ಲಾಭ ಮಾಡುತ್ತಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ರೈತರಾದ ( 48 ವರ್ಷ ) ಮುರಳಿ ಎಂಬುವವರು ಒಂದುವರೆ ತಿಂಗಳಲ್ಲಿ ಕೋಟಿಗಟ್ಟಲೇ ಹಣ ಸಂಪಾದಿಸಿದ್ದಾರೆ. ರೈತರ ಮಗನಾಗಿರುವ ಮುರುಳಿ ಇದೇ ಮೊದಲ ಬಾರಿಗೆ ಟೊಮೆಟೊದಿಂದ ಅಪಾರ ಪ್ರಮಾಣದ ಹಣ ಗಳಿಸಿದ್ದಾರೆ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.

'ಟೈಮ್ಸ್ ಆಫ್ ಇಂಡಿಯಾ' ವರದಿ ಪ್ರಕಾರ, ಮುರಳಿ ಅವರು ಕೇವಲ 45 ದಿನಗಳಲ್ಲಿ 4 ಕೋಟಿ ರೂಪಾಯಿಗಳಷ್ಟು ಹಣ ಸಂಪಾದನೆ ಮಾಡಿದ್ದಾರೆ. ಅವರು ತಾವು ಬೆಳೆದ ಟೊಮೆಟೊವನ್ನು ಕೋಲಾರದ ಮಾರುಕಟ್ಟೆಗೆ ಕಳುಹಿಸುತ್ತಾರೆ.
ಇಲ್ಲಿನ ಎಪಿಎಂಸಿ ಯಾರ್ಡ್ನಲ್ಲಿ ಉತ್ತಮ ಬೆಲೆ ಸಿಗುತ್ತದೆ ಎಂಬ ಕಾರಣಕ್ಕೆ ಕೋಲಾರದಲ್ಲಿ ಟೊಮೆಟೊ ಮಾರಾಟ ಮಾಡುತ್ತಾರೆ. ತಮ್ಮ ಊರಿನಿಂದ ಕೋಲಾರಕ್ಕೆ ಸುಮಾರು 130 ಕಿ.ಮೀ ಇದೆ. ಮುರಳಿ ಅವರು ಅಷ್ಟು ದೂರ ಪ್ರಯಾಣಿ ತಮ್ಮ ಟೊಮೊಟೊವನ್ನು ಕೋಲಾರದ ಎಪಿಎಂಸಿಗೆ ತಂದು ಮಾರುತ್ತಾರೆ.

ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿರುವ ಅವರು, ಕಳೆದ ಎಂಟು ವರ್ಷಗಳಿಂದ ಟೊಮೆಟೊ ಕೃಷಿಯಲ್ಲಿ ತೊಡಗಿದ್ದರೂ, ಈ ವರ್ಷದಷ್ಟು ಬೇಡಿಕೆ ಕಂಡಿರಲಿಲ್ಲ. ಇದು ಅದೃಷ್ಟವನ್ನು ತಂದು ಕೊಟ್ಟಿದೆ ಎಂದು ಹೇಳಿದ್ದಾರೆ.
ಕರಕಮಂಡಲ ಗ್ರಾಮದಲ್ಲಿರುವ ಮುರಳಿ ಅವರ ಅವಿಭಕ್ತ ಕುಟುಂಬಕ್ಕೆ ಪಿತ್ರಾರ್ಜಿತವಾಗಿ 12 ಎಕರೆ ಜಮೀನು ಬಂದಿದೆ. ಕೆಲ ವರ್ಷಗಳ ಹಿಂದೆ ಹೆಚ್ಚುವರಿಯಾಗಿ 10 ಎಕರೆ ಜಮೀನು ಖರೀದಿಸಿದ್ದರು. ಕಳೆದ ವರ್ಷ ಜುಲೈನಲ್ಲಿ, ಬೆಲೆ ಕುಸಿತದಿಂದಾಗಿ ಅವರ ಕುಟುಂಬವು ಭಾರಿ ನಷ್ಟವನ್ನು ಅನುಭವಿಸಿತು. ಬೀಜ, ರಸಗೊಬ್ಬರ, ಕೂಲಿ, ಸಾಗಾಣಿಕೆ ಮತ್ತಿತರ ಲಾಜಿಸ್ಟಿಕ್ಸ್ ಮೇಲೆ ಹೂಡಿಕೆ ಮಾಡಿದ್ದ ಅವರು 1.5 ಕೋಟಿ ಸಾಲಕ್ಕೆ ಸಿಲುಕಿದ್ದರು.

ಆದರೆ, ಈ ಬಾರಿ ಅವರ ಅದೃಷ್ಟ ಖುಲಾಯಿಸಿದೆ. ಈ ವರ್ಷ ಬೆಳೆ ಉತ್ತಮ ಗುಣಮಟ್ಟದ್ದಾಗಿದ್ದು, ಇದುವರೆಗೆ 35 ಕಟಾವು ಸಾಧ್ಯವಾಗಿದೆ. ಇನ್ನೂ 15ರಿಂದ 20ಕ್ಕೂ ಹೆಚ್ಚು ಕಟಾವು ಮಾಡುವ ಸಾಧ್ಯತೆ ಇದೆ ಎಂದು ಮುರಳಿ ತಿಳಿಸಿದ್ದಾರೆ. ಮಗ ಇಂಜಿನಿಯರಿಂಗ್, ಮಗಳು ಮೆಡಿಕಲ್ ಓದುತ್ತಿದ್ದಾರೆ. ಅವರು ತಮ್ಮ ಸಾಲವನ್ನೆಲ್ಲ ತೀರಿಸಿದರೂ 45 ದಿನದಲ್ಲಿ 2 ಕೋಟಿ ರೂಪಾಯಿಗಳಷ್ಟು ಉಳಿಸಲಿದ್ದಾರೆ.
ಮುರಳಿ ಅವರು ಈಗ ಭೂಮಿಯನ್ನು ಖರೀದಿಸಲು ಚಿಂತನೆ ನಡೆಸಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ದೊಡ್ಡ ಪ್ರಮಾಣದ ತೋಟಗಾರಿಕೆಯಲ್ಲಿ ತೊಡಗಿಸಿಕೊಳ್ಳುವ ಬಯಕೆಯನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಗ್ರಾಮದಲ್ಲಿ ಸುಮಾರು 20 ಎಕರೆ ಭೂಮಿಯನ್ನು ಖರೀದಿಸಲು ಯೋಜಿಸಿದ್ದಾರೆ. ಬೆಳೆ ವೈಫಲ್ಯ ಮತ್ತು ಸಾಲದ ಸುಳಿಯಲ್ಲಿ ಸಿಲುಕಿರುವ ಎಲ್ಲಾ ರೈತರಿಗೆ ಅವರು ಸಲಹೆಯ ಮಾತುಗಳನ್ನು ಸಹ ಹೇಳಿದ್ದಾರೆ. 'ಕೃಷಿಯನ್ನು ನಂಬುವ ಮತ್ತು ಗೌರವಿಸುವವನು ಎಂದಿಗೂ ಹೋರಾಟವನ್ನು ನಿಲ್ಲಿಸುವುದಿಲ್ಲ' ಎಂದು ತಿಳಿಸಿದ್ದಾರೆ.












Click it and Unblock the Notifications