ಒಲ್ಲದ ಮನಸ್ಸಿನಿಂದ ಟಿ.ಬಿ. ಜಯಚಂದ್ರಗೆ ಟಿಕೆಟ್ ಕೊಟ್ಟ ಹೈಕಮಾಂಡ್?
ಬೆಂಗಳೂರು, ಅ. 09: ಶಿರಾ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಟಿ.ಬಿ. ಜಯಚಂದ್ರ ಕುರಿತಂತೆ ಹೈಕಮಾಂಡ್ ನಿಲುವಿನ ಕುರಿತು, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಾತನಾಡಿಕೊಂಡಿರುವ ವಿಚಾರ, ಕಾಂಗ್ರೆಸ್ ಪಕ್ಷದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಮಾಜಿ ಸಚಿವ ಜಯಚಂದ್ರ ಅವರು ಶಿರಾ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಆದರೆ ಅವರು ಸ್ಪರ್ಧಿಸುವ ವಿಚಾರ ಕುರಿತಂತೆ ಹೈಕಮಾಂಡ್ ನಿಲುವು ಇದೀಗ ಕಾಂಗ್ರೆಸ್ ಪಾಳೆಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಹೌದು, ಕಳೆದ ಭಾನುವಾರ (ಅ. 04)ದಂದು ಕಾಂಗ್ರೆಸ್ ನಾಯಕರು ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನು ಮಾಡಿದ್ದರು. ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುವ ಮೊದಲು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಮೆಲು ದನಿಯಲ್ಲಿ ಮಾತನಾಡಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಮೈಕ್ ಬಂದ್ ಮಾಡಿ ಇಬ್ಬರೂ ನಾಯಕರು ಮೇಲು ಧ್ಚನಿಯಲ್ಲಿ ಮಾತನಾಡಿಕೊಂಡಿದ್ದಾರೆ. ಅದು ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿದ್ದು ತಡವಾಗಿ ಬ ಎಳಕಿಗೆ ಬಂದಿದೆ.
ಹಾಗಾದರೆ ಹಾಲಿ ಶಿರಾ ಕ್ಷೇತ್ರದ ಹುರಿಯಾಳು, ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರ ಕುರಿತು ಹೈಕಮಾಂಡ್ ಅಭಿಪ್ರಾಯ ಏನಿತ್ತು? ಇಬ್ಬರೂ ನಾಯಕರು ಮಾತನಾಡಿಕೊಂಡಿದ್ದು ಏನು? ಮುಂದಿದೆ ಮಾಹಿತಿ.

ಶಿರಾ ಉಪ ಚುನಾವಣೆ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿದ್ದ ಬಿ. ಸತ್ಯನಾರಾಯಣ ಅವರ ಎದುರು ಮಾಜಿ ಸಚಿವ ಟಿ.ಬಿ. ಜಯಚಂದ್ರ ಸುಮಾರು 10 ಸಾವಿರ ಮತಗಳ ಅಂತರದರಿಂದ ಸೋತಿದ್ದರು. ಕಳೆದ ಕೆಲವು ದಿನಗಳ ಹಿಂದೆ ಶಾಸಕರಾಗಿದ್ದ ಬಿ. ಸತ್ಯನಾರಾಯಣ ಅವರು ಅಕಾಲಿಕವಾಗಿ ನಿಧನರಾಗದ್ದರಿಂದ ಶಿರಾ ಉಪ ಚುನಾವಣೆ ಎದುರಾಗಿದೆ. ಚುನಾವಣೆ ಘೋಷಣೆ ಆಗುತ್ತಿದ್ದಂತೆಯೆ ಕಾಂಗ್ರೆಸ್ ಹಿರಿಯ ನಾಯಕ ಕೆ.ಎನ್. ರಾಜಣ್ಣ ಅವರು ನಾನೂ ಕೂಡ ಶಿರಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದು ಬಹಿರಂಗವಾಗಿಯೆ ಹೇಳಿಕೊಂಡಿದ್ದರು. ಅದಾದ ಬಳಿಕ ಅವರ ಮನವೊಲಿಸಿ ಜಯಚಂದ್ರ ಅವರಿಗೆ ರಾಜ್ಯ ಕಾಂಗ್ರೆಸ್ ನಾಯಕರು ಟಿಕೆಟ್ ಫೈನಲ್ ಮಾಡಿದ್ದರು.
ಜಯಚಂದ್ರ ಅವರ ಹೆಸರನ್ನು ಶಿರಾ ಕ್ಷೇತ್ರಕ್ಕೆ ಶಿಫಾರಸು ಮಾಡಿ ಹೈಕಮಾಂಡ್ಗೆ ಡಿಕೆ ಶಿವಕುಮಾರ್ ಅವರು ಪಟ್ಟಿ ಕಳುಹಿಸಿದ್ದರು. ಆದರೆ ಅದಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಆಕ್ಷೇಪ ವ್ಯಕ್ತಪಡಿಸಿರುವುದು ಇಬ್ಬರ ನಾಯಕರ ಸೆರೆಯಾದ ಸಂಭಾಷಣೆಯಲ್ಲಿದೆ.

ಟಿಕೆಟ್ ಕೊಡಲು ಸುರ್ಜವಾಲಾ ಆಕ್ಷೇಪ!
ಜಯಚಂದ್ರ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿಕೊಂಡಿರುವುದು ಹೀಗಿದೆ.
ಡಿಕೆ ಶಿವಕುಮಾರ್: ಸಾಹೇಬ್ರು ಕಾಲ್ ಮಾಡಿದ್ರು
ಜಯಚಂದ್ರಗೆ ಕೊಡಬಾರದಾಗಿತ್ತು
ರಾಜೇಶ್ಗೌಡಗೆ ಕೊಡಬೇಕಿತ್ತು
1979ರಿಂದ ಅವ್ರಿಗೆ ಟಿಕೆಟ್ ಕೊಡ್ತಿದ್ದೀರಾ
ಈಗಾಗಲೇ 9 ಬಾರಿ ಟಿಕೆಟ್ ಕೊಟ್ಟಿದ್ದೇವೆ
ಮತ್ತೆ ಅವರನ್ನೇ ಆಯ್ಕೆ ಮಾಡುತ್ತಿದ್ದೀರಾ?
ನಿಮಗೇನು ಕಾಮನ್ಸೆನ್ಸ್ ಇಲ್ವಾ?
ಸಿದ್ದರಾಮಯ್ಯ: ಯಾರು ಹೇಳಿದ್ದು?
ಡಿಕೆಶಿ: ಅವ್ರೇ ಸುರ್ಜೇವಾಲಾ.
ಹೀಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ಸಂಭಾಷಣೆ ಸಾಗಿದೆ. ಜಯಚಂದ್ರ ಅವರಿಗೆ ಶಿರಾ ಕ್ಷೇತ್ರದ ಟಿಕೆಟ್ ಕೊಡಲು ಸುರ್ಜೆವಾಲಾ ಅವರಿಗೆ ಮನಸ್ಸಿರಲಿಲ್ಲ ಎಂಬುದನ್ನು ಸಿದ್ದರಾಮಯ್ಯ ಅವರಿಗೆ ಡಿಕೆಶಿ ವೇದಿಕೆ ಮೇಲೆ ಮೇಲು ಧ್ವನಿಯಲ್ಲಿ ಹೇಳಿದ್ದಾರೆ.

ರಾಜೇಶ್ಗೌಡಗೆ ಕೊಡಬಹುದಿತ್ತು
ಡಿಕೆ ಶಿವಕುಮಾರ್: ರಾಜೇಶ್ಗೌಡಗೆ ಕೊಡಬಹುದಿತ್ತು ಅಲ್ವಾ ಅಂದ್ರು
ನಾವು ಕೂತ್ಕೊಂಡು ಮಾತಾಡಿದ್ವಿ, ಹಾಗೆಲ್ಲಾ ಮಾಡಕ್ಕೆ ಆಗಲ್ಲ ಅಂತ
ಈಗ ಯೋಚನೆ ಮಾಡಿ ನೋಡು ಅಂದ್ರು
ಸಿದ್ದರಾಮಯ್ಯ: ಅವ್ನು ಬಿಜೆಪಿ ಸೇರಿ ಆಯ್ತಲ್ವಾ?
ಡಿಕೆ ಶಿವಕುಮಾರ್: ನಾನು ಹೇಳಿದೆ ಅವ್ರು ಬಿಜೆಪಿ ಸೇರಿದ್ರು ಅಂತ
ಡಿಕೆ ಶಿವಕುಮಾರ್: ಲಾಸ್ಟ್ ಟೈಮೂ ದಳಕ್ಕೇ ಮಾಡಿದ್ದ ಅವ್ನು ಅಂತ
ಸಿದ್ದರಾಮಯ್ಯ: ಅವ್ನು ದಳದಲ್ಲೂ ಟಿಕೆಟ್ ಕೇಳ್ತಿದ್ದ, ಬಿಜೆಪಿಯಲ್ಲೂ ಕೇಳ್ತಿದ್ದ, ಸುಮ್ನೆ ನಾಮಕಾವಸ್ತೆಗೆ ನಮ್ಮಲ್ಲಿದ್ದ
ಡಿಕೆ ಶಿವಕುಮಾರ್ : ಹೇಳ್ದೆ ನಾನು ಹೇಳ್ದೆ
ಸಿದ್ದರಾಮಯ್ಯ : ಆಗಲ್ಲ ಆಗಲ್ಲ
ಡಿಕೆ ಶಿವಕುಮಾರ್: ಈಗ ಫ್ಯಾಕ್ಸ್ ಹೋಗಿದೆ ಅದನ್ನ ನೋಡಿ ಈಗ ಹೇಳ್ತಿದ್ದಾರೆ
ಸಿದ್ದರಾಮಯ್ಯ : ಆಗಲ್ಲ ಆಗಲ್ಲ
ಡಿಕೆ ಶಿವಕುಮಾರ್: ಅಲ್ಲ, ನಿಮ್ಮ ಗಮನಕ್ಕೆ ತರ್ತಿದ್ದೀನಿ ಅಷ್ಟೇ ಎಂದು ಇಬ್ಬರೂ ನಾಯಕರು ಮಾತು ಮುಗಿಸಿದ್ದಾರೆ. ಇದೀಗ ಈ ಸಂಭಾಷಣೆ ಕಾಂಗ್ರೆಸ್ ಸೇರಿದಂತೆ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಅದಕ್ಕೆ ಕಾರಣವೂ ಇದೆ.

ರಾಜೇಶ್ಗೌಡ ಬಗ್ಗೆ ಎಚ್ಡಿಕೆ ಹೇಳಿದ್ದರು
ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರು ಸಂಭಾಷಣೆಯಲ್ಲಿ ಬರುವ ರಾಜೇಶ್ಗೌಡ ಬಗ್ಗೆ ಎರಡು ದಿನಗಳ ಹಿಂದೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಮೇಲೆ ಆರೋಪ ಮಾಡಿದ್ದರು.
ವೈಯಕ್ತಿಕ ನೆಲೆಯಲ್ಲಿ ಸ್ನೇಹ ವಿಶ್ವಾಸವೇ ಬೇರೆ, ಆದರೆ, ಉಪ ಚುನಾವಣೆ ಘೋಷಣೆಯಾದ ನಂತರ ಪುತ್ರನ ಸ್ನೇಹಿತ (ರಾಜೇಶ್ಗೌಡ)ನನ್ನು ದಾಳವಾಗಿ ಬಳಸಿಕೊಂಡು ಮತ್ತೊಂದು ಪಕ್ಷಕ್ಕೆ ಕಳುಹಿಸುವ ಜಾಯಮಾನ ನನ್ನದಲ್ಲ. ಪುತ್ರನ ಗೆಳೆಯನನ್ನು, ಸಿದ್ದರಾಮಯ್ಯ ಅವರು ಬಿಜೆಪಿಗೆ ಕಳುಹಿಸಿರುವ ಮರ್ಮವನ್ನು ಕಾಂಗ್ರೆಸ್ಸಿಗರೂ ಬಲ್ಲರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ರಾಜೇಶ್ಗೌಡ ಅವರನ್ನು ಸಿದ್ದರಾಮಯ್ಯ ಅವರೇ ಬಿಜೆಪಿಗೆ ಕಳುಹಿಸಿದ್ದಾರೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದರು. ಹೀಗಾಗಿ ಇದೀಗ ಜಯಚಂದ್ರ ಅವರಿಗೆ ಟೆನ್ಶನ್ ಶುರುವಾಗಿದೆ.
Recommended Video

ಟಿ.ಬಿ. ಜಯಚಂದ್ರಗೆ ಶುರುವಾಯ್ತು ಟೆನ್ಶನ್
ಮಾಜಿ ಸಿಎಂ ಕುಮಾರಸ್ವಾಮಿ ಅವರು ಹೇಳಿದಂತೆ ಇದೀಗ ರಾಜೇಶ್ಗೌಡ ಅವರ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ಗೆ ತಲುಪಿಸಿದ್ದು ಯಾರು ಎಂಬ ಟೆನ್ಶನ್ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಅವರಿಗೆ ಶುರುವಾಗಿದೆ ಎನ್ನಲಾಗಿದೆ.
ಯಾಕೆಂದರೆ ರಾಜೇಶ್ಗೌಡ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋಗಿರುವುದನ್ನೂ ಸಿದ್ದರಾಮಯ್ಯ ಅವರು ಗೌಪ್ಯ ಸಂಭಾಷಣೆಯಲ್ಲಿ ಉಲ್ಲೇಖ ಮಾಡಿದ್ದಾರೆ. ಒಟ್ಟಾರೆಯಾಗಿ ಈ ಚುನಾವಣೆ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರಿಗೆ ಅತ್ಯಂತ ಮಹತ್ವದ ಚುನಾವಣೆಯಾಗಿ ಪರಿಣಮಿಸಿರುವುದಂತೂ ನಿಜ!












Click it and Unblock the Notifications