ಜೆಡಿಎಸ್ ಶಾಸಕ ಮಾನಪ್ಪ ವಜ್ಜಲ್ ಮನೆ ಮೇಲೆ ಐಟಿ ದಾಳಿ
ರಾಯಚೂರು, ಮಾ. 12 : ಲಿಂಗಸಗೂರು ಕ್ಷೇತ್ರದ ಜೆಡಿಎಸ್ ಶಾಸಕ ಮಾನಪ್ಪ ವಜ್ಜಲ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. 2013ರಲ್ಲಿಯೂ ಮಾನಪ್ಪ ವಜ್ಜಲ್ ಅವರ ಮನೆ ಮೇಲೆ ಐಟಿ ದಾಳಿ ನಡೆದಿತ್ತು.
ಗುರುವಾರ ಬೆಳಗ್ಗೆ ಬೆಂಗಳೂರಿನಿಂದ ಆಗಮಿಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಲಿಂಗಸಗೂರು ಪಟ್ಟಣದಲ್ಲಿರುವ ಶಾಸಕ ಮಾನಪ್ಪ ವಜ್ಜಲ್ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ನಡೆಯುವ ಸಂದರ್ಭದಲ್ಲಿ ಶಾಸಕರು ಬೆಂಗಳೂರಿನಲ್ಲಿದ್ದರು.

ಮಾನಪ್ಪ ವಜ್ಜಲ್ ಮನೆಯಲ್ಲಿದ್ದ ಅವರ ಸಹೋದರರಿಗೆ ಇಲಾಖೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. ದಾಳಿಯ ವೇಳೆ 2 ಕೋಟಿ ನಗದು ಮತ್ತು ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. [ಮಾನಪ್ಪ ವಜ್ಜಲ್ ಮನೆ ಮೇಲೆ ಐಟಿ ದಾಳಿ]
ದಾಳಿ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮಾನಪ್ಪ ವಜ್ಜಲ್ ಅವರು, 'ನಾನು ಹಾಗೂ ನನ್ನ ಸಹೋದರ ಗುತ್ತಿಗೆದಾರರಾಗಿದ್ದೇವೆ. ಕೆಲವು ದಾಖಲೆಗಳನ್ನು ಸಲ್ಲಿಸುವಂತೆ ಐಟಿ ಅಧಿಕಾರಿಗಳು ಸೂಚಿಸಿದ್ದಾರೆ' ಎಂದು ತಿಳಿಸಿದ್ದಾರೆ.
2013ರಲ್ಲಿಯೂ ದಾಳಿ ನಡೆದಿತ್ತು : ಶಾಸಕ ಮಾನಪ್ಪ ವಜ್ಜಲ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ. ಲಿಂಗಸಗೂರಿನಲ್ಲಿ ವೈಭವೋಪೇತ ಬಂಗಲೆ ನಿರ್ಮಿಸಿದ್ದಾರೆ ಎಂಬ ದೂರಿನ ಅನ್ವಯ 2013ರಲ್ಲಿಯೂ ಅವರ ಮನೆ ಮೇಲೆ ದಾಳಿ ನಡೆದಿತ್ತು.
ವಜ್ಜಲ್ ಕುರಿತು : 2008ರ ಚುನಾವಣೆಯಲ್ಲಿ ಮಾನಪ್ಪ ವಜ್ಜಲ್ ಲಿಂಗಸಗೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದರು. 2013ರ ಚುನಾವಣೆ ವೇಳೆಯಲ್ಲಿ ಬಿಜೆಪಿಯಿಂದ ಹೊರಬಂದ ವಜ್ಜಲ್ ಜೆಡಿಎಸ್ ಸೇರಿದ್ದರು. ಲಿಂಗಸಗೂರು ಕ್ಷೇತ್ರದಿಂದ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದಾರೆ.












Click it and Unblock the Notifications