ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಇಲ್ಲದಂತೆ ಮಾಡಲು ಆಗಲ್ಲ: ಡಿ.ಕೆ ಶಿವಕುಮಾರ್
ಬೆಂಗಳೂರು,ಡಿಸೆಂಬರ್ 12: ದೇಶದಲ್ಲಿ ಕಾಂಗ್ರೆಸ್ ಇಲ್ಲದಂತೆ ಮಾಡಲು ಆಗಲ್ಲ. ರಾಜ್ಯದಲ್ಲಿ 140 ರಿಂದ 150 ಸ್ಥಾನಗಳನ್ನ ಗೆದ್ದು ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ನಗರದಲ್ಲಿ ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೆಲವರು ಪ್ರಧಾನ ಮಂತ್ರಿ ಹೋದ್ರೆ ದೇಶಾನೇ ಬದಲಾವಣೆ ಆಗುತ್ತೆ ಎಂದು ಹೇಳ್ತಾರೆ. ಹಿಮಾಚಲ ಪ್ರದೇಶ ಪ್ರದೇಶದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಹಾಗೇ ಕರ್ನಾಟಕಕ್ಕೂ ,ಬೇರೆ ರಾಜ್ಯಕ್ಕೂ ಸಂಬಂಧವಿಲ್ಲ. ಕರ್ನಾಟಕದಲ್ಲೂ ಆಡಳಿತ ಕೆಟ್ಟು ಹೋಗಿದೆ.
ಕರ್ನಾಟಕದಲ್ಲಿ ಜೆಡಿಎಸ್ ಮಾತ್ರ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯ : ಎಚ್.ಡಿ.ಕುಮಾರಸ್ವಾಮಿ
ದೇಶದಲ್ಲಿ ಜನ ಪ್ರಜ್ಞಾವಂತರು ಇದ್ದಾರೆ, ಕರ್ನಾಟಕ ಜನ ಬದಲಾವಣೆ ಬಯಸುತ್ತಿದ್ದಾರೆ. ಯಾಕೆ ಇವರು ಕಾರ್ಪೊರೇಷನ್, ಜಿಲ್ಲಾಪಂಚಾಯತ್, ತಾಲೂಕ ಪಂಚಾಯತ್ ಎಲೆಕ್ಷನ್ ಮಾಡಿಲ್ಲ. ಬಿಜೆಪಿಯವರ ಸರ್ವೆ ಪ್ರಕಾರವೇ ಅವರ ವಿರುದ್ದವೇ ಜನ ಇದ್ದಾರೆ. ಸೋಲುತ್ತೇವೆ ಎನ್ನುವ ಮರ್ಯಾದೆ ದೃಷ್ಟಿಯಿಂದ ಎಲೆಕ್ಷನ್ ಮಾಡಿಲ್ಲ, ಜನರ ಮುಂದೆ ಹೋಗಲು ಬಿಜೆಪಿಯವರು ಹೆದರುತ್ತಿದ್ದಾರೆ. ಕಾಂಗ್ರೆಸ್ 140 ರಿಂದ 150 ಸ್ಥಾನ ಗೆದ್ದು ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಸಿಗುತ್ತದೆ. ಮಲ್ಲಿಕಾರ್ಜುನ ಖರ್ಗೆಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ದೇಶವನ್ನ ಒಗ್ಗೂಡಿಸಲು ರಾಹುಲ್ ಗಾಂಧಿ ನಡೆಯುತ್ತಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ನವರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ಸಚಿವ ಆರ್.ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದ ಡಿ.ಕೆ ಶಿವಕುಮಾರ್, ಪಾಪ ಹತಾಶರಾಗಿರುವವರ ಜತೆ ನಾನೇನು ಮಾತನಾಡಲಿ. ಬಿಜೆಪಿಯವರಿಗೆ ಸೋಲಿನ ಭೀತಿ ಎದುರಾಗಿದೆ. ಮೊದಲು ಪಾಲಿಕೆ, ಜಿಲ್ಲಾ ಪಂಚಾಯತ್ ತಾಲ್ಲೂಕು ಪಂಚಾಯತ್ ಗೆಲ್ಲಲಿ. ಬಿಜೆಪಿ ಬಗ್ಗೆ ಜನ ಏನೆಂದು ಹೇಳ್ತಾರೆ ಅಂತಾ ಹೇಳಲಿ ಎಂದು ಟಾಂಗ್ ನೀಡಿದರು.
ಇನ್ನೂ 2023 ರ ವಿಧಾನಸಭಾ ಚುನಾವಣೆಗೆ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಹಿರಿಯ ನಾಯಕರಿಗೆ ಮಲ್ಲಿಕಾರ್ಜುನ್ ಖರ್ಗೆ ಬುಲಾವ್ ನೀಡಿದ್ದಾರೆ. ಇಂದು ಮಧ್ಯಾಹ್ನ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯಲಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ದೆಹಲಿಯತ್ತ ತೆರಳಿದರು.