ಸಿದ್ದುಗೆ ಧರ್ಮಸಂಕಟ: ನಾಲ್ವರು ಸಚಿವರ ಮೇಲೆ ಐಟಿ ಅಧಿಕಾರಿಗಳ ಕಣ್ಣು?
ಹಳೇ ನೋಟನ್ನು ಹೊಸ ನೋಟಿಗೆ ಪರಿವರ್ತಿಸುವ ದಂಧೆಯಲ್ಲಿ ಸಿಕ್ಕಿಬಿದ್ದಿರುವ ತಮಿಳುನಾಡು ಮೂಲದ ವ್ಯಕ್ತಿ, ವಿಚಾರಣೆಯ ವೇಳೆ ಬಾಯ್ಬಿಟ್ಟ ಮಾಹಿತಿಯ ಪ್ರಕಾರ, ರಾಜ್ಯದ ನಾಲ್ವರು ಸಚಿವರುಗಳನ್ನು ಐಟಿ ಅಧಿಕಾರಿಗಳು ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ.
ಬೆಂಗಳೂರು, ಡಿ 16: ಎಚ್ ವೈ ಮೇಟಿ ಹಗರಣದಿಂದ ತೀವ್ರ ಮುಜುಗರಕ್ಕೀಡಾಗಿರುವ ಸಿದ್ದರಾಮಯ್ಯ ಸರಕಾರಕ್ಕೆ ಮತ್ತೊಂದು ಕಂಟಕ ಎದುರಾಗುವ ಸಾಧ್ಯತೆ ದಟ್ಟವಾಗಿದೆ.
ನಾಲ್ವರು ಸಚಿವರು ಮತ್ತು ಕೆಲವು ಶಾಸಕರು ಭಾರೀ ಪ್ರಮಾಣದ ಅಕ್ರಮ ಹಣವನ್ನು ಹೊಂದಿದ್ದಾರೆ ಎನ್ನುವ ಕಾರಣಕ್ಕಾಗಿ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಆದಾಯ ತೆರಿಗೆ (ಐಟಿ) ಅಧಿಕಾರಿಗಳು, ಕೆಲವರು ಸಚಿವರು ಮತ್ತು ಶಾಸಕರ ಮೇಲೆ ಹದ್ದಿನ ಕಣ್ಣಿಟ್ಟಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಐನೂರು ಮತ್ತು ಸಾವಿರ ರೂಪಾಯಿಯ ನೋಟು ಬ್ಯಾನ್ ಆದ ನಂತರ ಸಚಿವರು ಮತ್ತು ಶಾಸಕರು ಭಾರೀ ಪ್ರಮಾಣದಲ್ಲಿ ಬ್ಯಾಂಕ್ ಮತ್ತು ಸರಕಾರದ ಇತರ ಅಧಿಕಾರಿಗಳ ಸಹಕಾರದಿಂದ ಹಳೇ ನೋಟನ್ನು ಹೊಸ ನೋಟಿಗೆ ಪರಿವರ್ತಿಸಿರುವುದು ಇಡಿ ಮತ್ತು ಐಟಿ ಅಧಿಕಾರಿಗಳ ಗಮನಕ್ಕೆ ಬಂದಿದೆ ಎನ್ನಲಾಗುತ್ತಿದೆ. (ಐಟಿ ಅಧಿಕಾರಿಗಳು ದಾಳಿಗೆ ಹೋದರೆ ನಾಯಿ ಛೂ ಬಿಟ್ಟ ಅಜ್ಜಿ)
ಹಾಗಾಗಿ, ಈ ಸಚಿವರ ಮತ್ತು ಶಾಸಕರುಗಳ ಹಣಕಾಸಿನ ವ್ಯವಹಾರದ ಮೇಲೆ ಎರಡು ಇಲಾಖೆಯ ಅಧಿಕಾರಿಗಳು ನಿಗಾ ವಹಿಸಿರುವುದು ಸರಕಾರದ ಗಮನಕ್ಕೆ ಬಂದಿದ್ದು, ಸಿದ್ದರಾಮಯ್ಯ ಸರಕಾರ ಮತ್ತೊಂದು ಸುತ್ತಿನ ಮುಜುಗರಕ್ಕೆ ಈಡಾಗುವ ಸಾಧ್ಯತೆ ಇಲ್ಲದಿಲ್ಲ.
ಇದರ ಜೊತೆಗೆ ಮೇಟಿ ರಾಸಲೀಲೆ ಸಿಡಿ ಬಹಿರಂಗಗೊಳಿಸಿದ್ದ ಆರ್ಟಿಐ ಕಾರ್ಯಕರ್ತ ರಾಜಶೇಖರ್ ಮುಲಾಲಿ, ರಾಜ್ಯ ಸಂಪುಟದ ಕೆಲವು ಸಚಿವರು ಸೇರಿದಂತೆ ಶಾಸಕರುಗಳು ಅವ್ಯವಹಾರ ನಡೆಸಿರುವ ಬಗ್ಗೆ ಖಚಿತ ಮಾಹಿತಿಯಿದೆ ಎಂದಿರುವುದು ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ಐಟಿ ಅಧಿಕಾರಿಗಳು ಕಣ್ಣಿಟ್ಟಿರುವ ರಾಜ್ಯದ 4 ಸಚಿವರು ಯಾರು ಎನ್ನುವುದನ್ನು ಸದ್ಯಕ್ಕೆ ಬಹಿರಂಗವಾಗಿಲ್ಲ. ಮುಂದೆ ಓದಿ..
ಬ್ಲ್ಯಾಕ್ ಎಂಡ್ ವೈಟ್
ಕಪ್ಪುಹಣವನ್ನು ವೈಟ್ ಮಾಡಿರುವ ಆರೋಪದಲ್ಲಿ ಸಿಕ್ಕಿಬಿದ್ದಿರುವ ತಮಿಳುನಾಡು ಮೂಲದ ರಾಮಲಿಂಗಂ ಚಂದ್ರಕಾಂತ್ ಎನ್ನುವ ವ್ಯಕ್ತಿ ಸಿಬಿಐ ವಿಚಾರಣೆಯ ವೇಳೆ ಹಲವು ವಿಷಯವನ್ನು ಬಹಿರಂಗ ಪಡಿಸಿದ್ದಾನೆ ಎನ್ನುವ ಸುದ್ದಿ ಲಭ್ಯವಾಗಿದೆ.
ರಾಮಲಿಂಗಂ ಚಂದ್ರಕಾಂತ್
ಎರಡು ಸಾವಿರ ರೂಪಾಯಿ ಮುಖಬೆಲೆಯ 5.7 ಕೋಟಿ ರೂಪಾಯಿ ಹಣವನ್ನು ಎರಡು ಇಲಾಖೆಯ ಅಧಿಕಾರಿಗಳು ರಾಮಲಿಂಗಂ ಚಂದ್ರಕಾಂತ್ ನಿಂದ ಜಪ್ತಿ ಮಾಡಿದ್ದರು. ಈ ಸಂದರ್ಭದಲ್ಲಿನ ವಿಚಾರಣೆಯ ಸಮಯದಲ್ಲಿ ರಾಜ್ಯದ ಪ್ರಭಾವಿ ಸಚಿವರ ಮತ್ತು ಶಾಸಕರು ಶಾಮೀಲಾಗಿರುವ ವಿಚಾರವನ್ನು ಅಧಿಕಾರಿಗಳ ಮುಂದೆ ರಾಮಲಿಂಗಂ ಹೇಳಿದ್ದಾರೆ ಎನ್ನಲಾಗುತ್ತಿದೆ.
ಐಟಿ ಇಲಾಖೆ
ರಾಮಲಿಂಗಂ ನೀಡಿರುವ ಹೇಳಿಕೆಯನ್ನು ಆಧರಿಸಿ, ಐಟಿ ಮತ್ತು ಇಡಿ ಅಧಿಕಾರಿಗಳು, ಪ್ರಭಾವಿ ಸಚಿವರ ಹಣಕಾಸಿನ ವ್ಯವಹಾರದ ಮೇಲೆ ಕಣ್ಣಿಟ್ಟಿದ್ದು, ಯಾವುದೇ ಸಮಯದಲ್ಲಿ ದಾಳಿ ನಡೆಸುವ ಸಾಧ್ಯತೆಯಿದೆ. ಹೆಸರು ಕೇಳಿ ಬರುತ್ತಿರುವ ಸಚಿವರುಗಳಿಗೆ ಬಂಧಿತರಾಗಿರುವ ಚಿಕ್ಕರಾಯಪ್ಪ ಮತ್ತು ಜಯಚಂದ್ರ ನಡುವೆ ಒಡನಾಟವಿತ್ತು ಎನ್ನಲಾಗುತ್ತಿದೆ.
ಮೈಸೂರು ಬ್ಯಾಂಕ್ ಖಾತೆ
ತನ್ನ ಖಾತೆಯಿಂದ ಪ್ರಭಾವಿ ಸಚಿವರೊಬ್ಬರ ಪುತ್ರನ ಮೈಸೂರು ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿರುವುದನ್ನೂ ವಿಚಾರಣೆಯ ವೇಳೆ ರಾಮಲಿಂಗಂ ಬಾಯ್ಬಿಟ್ಟಿದ್ದಾನೆ ಎನ್ನುವ ಮಾಹಿತಿಯಿದೆ.
ರಾಜಶೇಖರ ಮುಲಾಲಿ
ರಾಜ್ಯ ಸಂಪುಟದ ಮಂತ್ರಿಗಳು, 2 ವಿಧಾನಸಭಾ ಸದಸ್ಯರು ಮತ್ತು 1 ವಿಧಾನ ಪರಿಷತ್ ಸದಸ್ಯರ ಬ್ಲ್ಯಾಕ್ ಎಂಡ್ ವೈಟ್ ಹಗರಣದ ಬಗ್ಗೆ ಮಾಹಿತಿ ಇದೆ. ಈ ಸಂಬಂಧ ದಾಖಲೆಗಳನ್ನು ಸಂಗ್ರಹಿಸುತ್ತಿದ್ದೇನೆ, ಅವುಗಳನ್ನು ಶೀಘ್ರವೇ ಬಿಡುಗಡೆಗೊಳಿಸುತ್ತೇನೆ ಎಂದು ಹೇಳಿರುವ ಮೇಟಿ ಕೇಸ್ ಹೊರಹಾಕಿದ ರಾಜಶೇಖರ್ ಮುಲಾಲಿ, ಆ ಸಚಿವರು, ಶಾಸಕರು ಯಾರು ಎನ್ನುವುದನ್ನು ಖಚಿತವಾಗಿ ಹೇಳಲಿಲ್ಲ.
ಐಟಿ, ಇಡಿ, ಸಿಸಿಬಿ ಮತ್ತು ಸಿಬಿಐ
ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಭ್ರಷ್ಟಾಚಾರ ನಿಗ್ರಹ ದಳ, ಕಪ್ಪುಹಣ ವೈಟ್ ಮಾಡುತ್ತಿರುವವರ ಹಿಂದೆ ಬಿದ್ದಿದ್ದು,ಇನ್ನೂ ಭಾರೀ ಪ್ರಮಾಣದಲ್ಲಿ ಕುಳಗಳು ಸಿಕ್ಕಿಬೀಳುವ ಸಾಧ್ಯತೆಯಿದೆ.