ಗೊತ್ತುಗುರಿಯಿಲ್ಲದೆ ತೆವಳುತ್ತಾ ಸಾಗುವ ಬುರಾಕ್ಸಿಂಗ್!
ಇವನಿಗೆ ಕೈಗಳೇ ಚಲನಾಂಗಗಳು, ಈತ ತೆವಳಿದ್ದೇ ಹಾದಿ, ಭುಜದ ಮೇಲಿನ ಎರಡು ಬ್ಯಾಗುಗಳೇ ಈತನ ಆಸ್ತಿ, ಬಂಗಾರ, ಗೊತ್ತುಗುರಿಯಿಲ್ಲದ ಈ ಅನಾಥನ ಬದುಕಿಗೆ ಮನಸ್ಸೇ ದಿಕ್ಸೂಚಿ. ದಯಾಳುಗಳು ಕೊಟ್ಟ ಆಹಾರವೇ ಇವನಿಗೆ ಮೃಷ್ಟಾನ ಭೋಜನ, ರಸ್ತೆ ಬದಿಯ ಸ್ಥಳವೇ ಈತನ ಸುಖದ ಸುಪ್ಪತ್ತಿಗೆ. ಮಳೆ, ಬಿಸಿಲಿಗೆ ಜಗ್ಗದ ಬಡಜೀವವಿದು.
ಹೌದು ನಾ ಇಷ್ಟೆಲ್ಲಾ ಹೇಳಿದ್ದು ನಮ್ಮ ನಡುವೆಯೇ ತೆವಳುತ್ತಾ ಸಾಗುವ ಬುರಾಕ್ ಸಿಂಗ್ ಎಂಬಾತನ ಬಗ್ಗೆ. ಇವನು ಮೂಲತಃ ಚತ್ತೀಸಘಡದವನು. ಹಿಂದಿ ಭಾಷೆ ಬಿಟ್ಟರೆ ಇನ್ನಿತರ ಭಾಷೆ ಅರಿವೇ ಇಲ್ಲದ ಈತನಿಗೆ ಕಾಲುಗಳು ಸ್ವಾದೀನ ಕಳೆದುಕೊಂಡಿವೆ. ಕೈಗಳ ಸಹಾಯದಿಂದ ದಿನವಿಡೀ ತೆವಳುತ್ತಾನೆ. ಹೊಟ್ಟೆ ಹಸಿವಾದಾಗ ಮಾತ್ರ ಯಾವುದಾದರೂ ಹೋಟೆಲ್ಲಿನ ಮುಂದೆ ಕೈ ಒಡ್ಡುವ ಈತನಿಗೆ ಕರ್ನಾಟಕದಲ್ಲಿ ಮನೆಯೂ ಇಲ್ಲ, ಸಂಬಂಧಿಕರಂತು ಮೊದಲೇ ಇಲ್ಲ.[ಸ್ನೇಹಿತನ ಸಂಕಷ್ಟ ಹಂಚಿಕೊಂಡ ಇವರು ನಿಜವಾದ ಗೆಳೆಯರು!]
ನಮ್ಮ ನಿಮ್ಮಂತೆಯೇ ಚೈತನ್ಯ ವ್ಯಕ್ತಿಯಾದ ಬುರಾಕ್ ಸಿಂಗ್ ಮಾಡುತ್ತಿದ್ದುದು ಟ್ರಕ್ ಡ್ರೈವರ್ ಕಾಯಕ. ಒಂದು ರಸ್ತೆ ಅಪಘಾತ ಸಂತಸದ ಬದುಕನ್ನು ಪೆಡಂಭೂತದಂತೆ ನುಂಗಿತು. ಬಾಳಲ್ಲಿ ಕತ್ತಲೆ ಕವಿಯುವಂತೆ ಮಾಡಿತು. ಹೌದು ನಡೆದ ರಸ್ತೆ ಅಪಘಾತದಲ್ಲಿ ಆತ ವಿಧಿ ಲಿಖಿತದಂತೆ ಬದುಕುಳಿದ. ಆದರೆ ಕಾಲುಗಳು ಮಾತ್ರ ಸ್ವಾಧೀನಕಳೆದುಕೊಂಡವು.[ವಿಕಲಚೇತನನನ್ನು ಸ್ವಾವಲಂಬಿಯಾಗಿ ಮಾಡಿದ ಅನ್ನಭಾಗ್ಯ]
ಕಾಲುಗಳ ಸ್ವಾಧೀನ ಕಳೆದುಕೊಂಡ ಬುರಾಕ್ ಸಿಂಗ್ ಮನೆಯವರಿಗೆ ಹೊರೆಯಾಗಿ ಪರಿಣಮಿಸಿದ. ಅಸಡ್ಡೆಯ ಮಾತುಗಳಿಗೆ ಕುಗ್ಗಿದ. ಒಂದು ದಿನ ನಿರ್ಧಾರ ಮಾಡಿ ಅಂದು ತನ್ನ ಚತ್ತೀಸಗಡದ ಮನೆಯಿಂದ ತೆವಳುತ್ತಾ ಬಂದ ಈತ ತಲುಪಿದ್ದು ಕರ್ನಾಟಕಕ್ಕೆ. ಅಂದಿನಿಂದ ಇಂದಿನವರೆಗೆ ಕರ್ನಾಟಕವೇ ಇವನ ತವರು ಮನೆ.
ಯಾರ ಹಂಗಿನಲ್ಲೂ ಬದುಕದ, ಹಸಿವಾದಾಗ ಮಾತ್ರ ಕೈ ಒಡ್ಡುವ ಬುರಾಕ್ ಸಿಂಗ್ ಕಳೆದ ಕೆಲವು ದಿನಗಳ ಹಿಂದೆ ಮಡಿಕೇರಿ, ಕುಶಾಲನಗರದಲ್ಲಿ ಕಾಣಿಸಿಕೊಂಡಿದ್ದನು. ಈತನ ಬದುಕು ಈಗಾಗಲೇ ಸೂತ್ರವಿಲ್ಲದ ಗಾಳಿಪಟದಂತಾಗಿದೆ.[ನೋಡ್ರೀ,ಗದಗ ಹೈದನ ಪ್ರತಿ ಕೈ ಕಾಲಲ್ಲಿ ಆರು ಬೆರಳುಗಳು]
ಯಾರಾದರು ದಾನಿಗಳು ಮುಂದೆ ಬಂದು ಅವನಿಗೆ ಸಹಾಯ ಮಾಡುವ ಮೂಲಕ ಯಾವುದಾದರೂ ಅನಾಥಶ್ರಮಕ್ಕೆ ಸೇರಿಸಿದರೆ ಈತನ ಬದುಕಿಗೆ ನೆಲೆ ಸಿಕ್ಕಂತಾಗುತ್ತದೆ. ಆದರೆ ಆತ ಎಲ್ಲಿದ್ದಾನೆ, ಹೇಗಿದ್ದಾನೆ ಎಂಬ ಮಾಹಿತಿ ಇಲ್ಲ. ಈತ ಸಿಕ್ಕಲ್ಲಿ ಅನಾಥಶ್ರಮಕ್ಕೆ ಸೇರಿಸುವುದರ ಮೂಲಕ ಮಾನವೀಯತೆಯ ಬದುಕಿಗೆ ಅಡಿ ಇಡಿ.