ಬೆಂಗಳೂರಿಗೆ ಬರಬೇಕಾದರೆ ಕೊವಿಡ್-19 ನೆಗೆಟಿವ್ ವರದಿ ಕಡ್ಡಾಯ!
ಬೆಂಗಳೂರು, ಮಾರ್ಚ್ 25: ಬೆಂಗಳೂರಿಗೆ ಬರುವುದಕ್ಕೆ ಯೋಜನೆ ಹಾಕಿಕೊಂಡಿದ್ದೀರಾ. ಇನ್ನು ಮುಂದೆ ಸಿಲಿಕಾನ್ ಸಿಟಿ ಪ್ರಯಾಣ ಅಷ್ಟು ಸುಲಭವಾಗಿ ಇರುವುದಿಲ್ಲ. ಕೊರೊನಾವೈರಸ್ ಸೋಂಕಿತ ಪ್ರಕರಣ ರಾಜ್ಯ ರಾಜಧಾನಿಯ ಚಿತ್ರಣವನ್ನೇ ಬದಲಿಸಿದೆ.
ಅನ್ಯರಾಜ್ಯದಿಂದ ಬೆಂಗಳೂರಿಗೆ ಹೋಗುವ ಪ್ರತಿಯೊಬ್ಬರೂ ಕೊರೊನಾವೈರಸ್ ಸೋಂಕಿನ ನೆಗೆಟಿವ್ ವರದಿಯನ್ನು ಹೊಂದಿರಬೇಕು ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಸ್ಪಷ್ಟವಾಗಿ ಹೇಳಿದ್ದಾರೆ. ಏಪ್ರಿಲ್ 1ರಿಂದ ಈ ಹೊಸ ನಿಯಮವು ಜಾರಿಗೆ ಬರಲಿದೆ.
ಭಾರತದಲ್ಲಿ ಮೊದಲ ಲಾಕ್ಡೌನ್: ಅಂದು ಮತ್ತು ಇಂದಿನ ಕೊರೊನಾ ಸ್ಥಿತಿ
ಬೆಂಗಳೂರಿಗೆ ಆಗಮಿಸುವ ಪ್ರಯಾಣಿಕರು ಆರ್ ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಬೇಕು. ಕೊವಿಡ್-19 ಸೋಂಕಿನ ನೆಗೆಟಿವ್ ವರದಿ ಹೊಂದಿದವರಿಗೆ ಮಾತ್ರ ಬೆಂಗಳೂರು ಪ್ರವೇಶಕ್ಕೆ ಅನುಮತಿ ನೀಡಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಮೊದಲ ನಾಲ್ಕು ರಾಜ್ಯಗಳಿಗಷ್ಟೇ ನಿಯಮ ಅನ್ವಯ
ಕರ್ನಾಟಕ ಅಥವಾ ಬೆಂಗಳೂರಿಗೆ ಆಗಮಿಸುವವವರು ಕಡ್ಡಾಯವಾಗಿ ಆರ್ ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಹೊಂದಿರಬೇಕು ಎಂಬ ನಿಯಮವಿತ್ತು. ಪಂಜಾಬ್, ಚಂಡೀಘರ್, ಮಹಾರಾಷ್ಟ್ರ, ಕೇರಳ ರಾಜ್ಯದಿಂದ ಆಗಮಿಸುವವರಿಗೆ ಮಾತ್ರ ಈ ನಿರ್ಬಂಧ ವಿಧಿಸಲಾಗಿತ್ತು. ಇದೀಗ ಎಲ್ಲ ರಾಜ್ಯಗಳಿಂದ ಆಗಮಿಸುವವರಿಗೆ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ.
ಬೇರೆ ರಾಜ್ಯದ ಪ್ರಯಾಣಿಕರಿಂದಲೇ ಸೋಂಕು
ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಕೊರೊನಾವೈರಸ್ ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಿದೆ. ರಾಜ್ಯದಲ್ಲಿ ಪತ್ತೆಯಾಗುತ್ತಿರುವ ಸೋಂಕಿತ ಪ್ರಕರಣಗಳ ಪೈಕಿ ಶೇ.60ರಷ್ಟು ಪ್ರಕರಣಗಳು ಅನ್ಯರಾಜ್ಯದ ಪ್ರಯಾಣಿಕರಿಂದಲೇ ಹರಡಿರುವುದು ಪತ್ತೆಯಾಗಿದೆ. ಈ ಹಿನ್ನೆಲೆ ಹೊಸ ನಿಯಮವನ್ನು ಏಪ್ರಿಲ್ 1ರಿಂದಲೇ ಜಾರಿಗೆ ತರುವುದಕ್ಕೆ ರಾಜ್ಯ ಸರ್ಕಾರವು ತೀರ್ಮಾನಿಸಿದೆ.
ಮಾಸ್ಕ್ ಧರಿಸದೇ ಪ್ರಯಾಣಿಸಿದರೆ 250 ರೂ. ದಂಡ
ಇದರ ಜೊತೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೊರೊನಾವೈರಸ್ ಶಿಷ್ಟಾಚಾರ ಪಾಲನೆ ಮಾಡದೇ ಮಾಸ್ಕ್ ಧರಿಸದೇ ಸಂಚರಿಸುವವರಿಗೆ 250 ರೂಪಾಯಿ ದಂಡ ವಿಧಿಸಲಾಗುವುದು ಎಂದು ಬಿಬಿಎಂಪಿ ಘೋಷಿಸಿದೆ. ನಗರ ಮತ್ತು ಗ್ರಾಮೀಣ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದಿದ್ದರೆ 100 ರೂಪಾಯಿ ದಂಡ ವಿಧಿಸಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಸಭೆ, ಸಮಾರಂಭಕ್ಕೆ ನಿರ್ಬಂಧ
ಮದುವೆ ಮತ್ತು ಸಾರ್ವಜನಿಕ ಸಮಾರಂಭಗಳಲ್ಲಿ 200ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಮುಚ್ಚಿದ ಸಭಾಂಗಣದಲ್ಲಿ 200 ಮತ್ತು ತೆರೆದ ಪ್ರದೇಶಗಳಲ್ಲಿ ಆಯೋಜಿಸಿದ ಕಾರ್ಯಕ್ರಮಗಳಲ್ಲಿ ಕೇವಲ 500 ಜನರು ಭಾಗವಹಿಸುವುದಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಹುಟ್ಟುಹಬ್ಬದ ಕಾರ್ಯಕ್ರಮಗಳು ಸಭಾಂಗಣಗಳಲ್ಲಿ ನಡೆದರೆ ಪಾಲ್ಗೊಳ್ಳುವವರ ಮಿತಿಯನ್ನು 50ಕ್ಕೆ ಇಳಿಸಲಾಗಿದೆ. ತೆರೆದ ಸ್ಥಳದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಲ್ಲಿ 100 ಜನರು ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ.
ರಾಜ್ಯದಲ್ಲಿ ಒಂದೇ ದಿನ 2298 ಮಂದಿಗೆ ಕೊರೊನಾವೈರಸ್
ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ ಕ್ರಮೇಣ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ 2298 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, 12 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಪ್ರಕರಣಗಳ ಸಂಖ್ಯೆ 975955ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 12461ಕ್ಕೆ ಏರಿಕೆಯಾಗಿದ್ದು, ರಾಜ್ಯದಲ್ಲಿ 16886 ಸಕ್ರಿಯ ಪ್ರಕರಣಗಳಿವೆ.
Recommended Video