ಜಾರಕಿಹೊಳಿ ದೌರ್ಬಲ್ಯತೆಯ ಲಾಭ ಕಾಂಗ್ರೆಸ್ಸಿಗೆ ಅನಿವಾರ್ಯವೇ?
ಬಿಜೆಪಿ ಮುಖಂಡ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದ ವಿಚಾರಣೆಯನ್ನು ಚುರುಕುಗೊಳಿಸಿರುವ ವಿಶೇಷ ತನಿಖಾ ದಳ ಹಲವು ಮಹತ್ವದ ಮಾಹಿತಿಗಳನ್ನು ಕಲೆಹಾಕಿದೆ. ಈ ಪ್ರಕರಣದಲ್ಲಿ ಚಿಕ್ಕಮಗಳೂರು ಮೂಲದ ಇಬ್ಬರನ್ನು ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ.
ಈ ವಿಚಾರವನ್ನು ಇಟ್ಟುಕೊಂಡು ಬಿಜೆಪಿಯ ವಿರುದ್ದ ತಿರುಗಿ ಬಿದ್ದಿದ್ದ ಕಾಂಗ್ರೆಸ್ ಮುಖಂಡರು, ಇನ್ನು ಮುಂದೆ ಅಂತರವನ್ನು ಕಾಪಾಡಿಕೊಂಡು ಎಚ್ಚರಿಕೆಯಿಂದ ಹೆಜ್ಜೆಯಿಡಲು ನಿರ್ಧರಿಸಿದ್ದಾರೆ.
ಡಿಕೆಶಿ ಜಿದ್ದಿಗೆ ಬಿದ್ದು ಜಾರಕಿಹೊಳಿಯ ಈ ಒಂದು ನಿರ್ಧಾರ ಅವರ ಭವಿಷ್ಯವನ್ನೇ ಮಂಕಾಗಿಸಿತೇ?
ಎಸ್ಐಟಿಗೆ ಪ್ರಕರಣ ವಹಿಸಿದ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿನಾ ಕಾರಣ ಹೇಳಿಕೆಯನ್ನು ನೀಡಿದರು ಎನ್ನುವ ಅಸಮಾಧಾನ ಕಾಂಗ್ರೆಸ್ನಲ್ಲಿನ ಹಿರಿಯರ ಗುಂಪು ತೋರಿದ್ದರಿಂದ, ಅಳೆದು ತೂಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಕಾಂಗ್ರೆಸ್ ನಿರ್ಧರಿಸಿದೆ.
ಸೋಮವಾರ (ಮಾ 15) ನಡೆದ ಕಾಂಗ್ರೆಸ್ ಸಭೆಯಲ್ಲಿ ಪಕ್ಷದ ಹಲವು ಹಿರಿಯ ಮುಖಂಡರು, ಸಿಡಿ ಪ್ರಕರಣದಲ್ಲಿ ಪಕ್ಷ ಯಾವ ರೀತಿ ಎಚ್ಚರಿಕೆಯಿಂದ ಇರಬೇಕು ಎನ್ನುವುದರ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆಂದು ವರದಿಯಾಗಿದೆ.
ಡಿಕೆಶಿಗೆ ಕೆಟ್ಟಕಾಲ ಶುರು: ಎಚ್ಡಿಕೆ ಸುತ್ತ ಇದ್ದ ಗ್ರಹಗಳು ಈಗ ಡಿಕೆಶಿ ಹಿಂದೆ ಮುಂದೆ
ಕುಂಬಳಕಾಯಿ ಕಳ್ಳ ಎಂದರೆ ಹೆಗಲ ಮುಟ್ಟಿ ಯಾಕೆ ನೋಡಬೇಕು
ಎಸ್ಐಟಿಗೆ ಪ್ರಕರಣ ವಹಿಸಿದ ನಂತರ ಡಿಕೆಶಿ, "ಕಾಂಗ್ರೆಸ್ ಪಕ್ಷದ ಕೆಲವರ ಹೆಸರು ಪಟ್ಟಿಯಲ್ಲಿದೆ ಎಂದು ತಿಳಿದು ಬಂದಿದೆ. ಪಕ್ಷದ ಆಂತರಿಕ ವೇದಿಕೆಯಲ್ಲಿ ಮತ್ತು ಕಾನೂನು ಪಂಡಿತರ ಜೊತೆ ಚರ್ಚಿಸಿ, ಹೇಗೆ ಹೆಜ್ಜೆಯಿಡಬೇಕೆಂದು ನಿರ್ಧರಿಸಲಾಗುವುದು"ಎಂದು ಹೇಳಿದ್ದರು. ಕುಂಬಳಕಾಯಿ ಕಳ್ಳ ಎಂದರೆ ಹೆಗಲ ಮುಟ್ಟಿ ಯಾಕೆ ನೋಡಬೇಕೆಂದು, ಕೆಪಿಸಿಸಿ ವಲಯದಲ್ಲಿ ಡಿಕೆಶಿಯವರ ಈ ಹೇಳಿಕೆ ಅಸಮಾಧಾನಕ್ಕೆ ಕಾರಣವಾಗಿತ್ತು.
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಿರ್ಧರಿಸಲಿ
ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ರಾಜ್ಯ ರಾಜಕಾರಣದಲ್ಲಿ ಅತ್ಯಂತ ಸೂಕ್ಷ್ಮ ವಿಚಾರ ಇದಾಗಿದ್ದು, ಎಚ್ಚರಿಕೆಯಿಂದ ವರ್ತಿಸಬೇಕಾದ ಸಮಯವಿದು ಎಂದು ಹಲವು ಹಿರಿಯ ಕಾಂಗ್ರೆಸ್ ಮುಖಂಡರು ಸಭೆಯಲ್ಲಿ ಅಭಿಪ್ರಾಯ ಪಟ್ಟರು ಎಂದು ಹೇಳಲಾಗುತ್ತಿದೆ. ಸದನದಲ್ಲಿ ಈ ವಿಚಾರವನ್ನು ಪ್ರಸ್ತಾವಿಸಬೇಕೇ ಅಥವಾ ಬೇಡವೇ ಎನ್ನುವುದನ್ನು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಿರ್ಧರಿಸಲಿ ಎನ್ನುವ ತೀರ್ಮಾನಕ್ಕೆ ಸಭೆಯಲ್ಲಿ ಬರಲಾಗಿದೆ.
ಇನ್ನೊಬ್ಬರ ದೌರ್ಬಲ್ಯತೆಯನ್ನು ಮುಂದಿಟ್ಟುಕೊಂಡು ಹೋಗುವ ಅವಶ್ಯಕತೆ ಕಾಂಗ್ರೆಸ್ಸಿಗೆ ಇಲ್ಲ
ನಮ್ಮದು ರಾಷ್ಟ್ರೀಯ ಪಕ್ಷ, ಇನ್ನೊಬ್ಬರ ದೌರ್ಬಲ್ಯತೆಯನ್ನು ಮುಂದಿಟ್ಟುಕೊಂಡು ಸಂಘಟನೆ ಮಾಡುವ ಅವಶ್ಯಕತೆ ಕಾಂಗ್ರೆಸ್ಸಿಗೆ ಇಲ್ಲ. ನಾವು ಸಕಾರಾತ್ಮಕವಾಗಿ ಮುನ್ನಡೆಯೋಣ. ಈ ಪ್ರಕರಣದಿಂದ ಪಕ್ಷದ ಇಮೇಜಿಗೆ ಧಕ್ಕೆ ಆಗಬಾರದು, ಎಚ್ಚರಿಕೆಯಿಂದ ಇರೋಣ ಎನ್ನುವ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.
Recommended Video
ಬಹುತೇಕ ಎಲ್ಲಾ ಪ್ರಮುಖ ನಾಯಕರು ಸಭೆಯಲ್ಲಿ ಭಾಗಿ
ಬಿಜೆಪಿ ವಿರುದ್ದ ಹೋರಾಟ ನಡೆಸಲು ಬೇಕಾದಷ್ಟು ವಿಚಾರಗಳಿವೆ. ಅದನ್ನು ಮುಂದಿಟ್ಟುಕೊಂಡು ಜನರ ಬಳಿಗೆ ಹೋಗೋಣ. ಬಜೆಟ್ ಅಧಿವೇಶನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸದ್ವಿನಿಯೋಗ ಮಾಡಿಕೊಳ್ಳೋಣ ಎನ್ನುವ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಮುನಿಯಪ್ಪ, ಎಸ್.ಆರ್.ಪಾಟೀಲ್, ಮೊಯ್ಲಿ, ಹರಿಪ್ರಸಾದ್ ಸೇರಿದಂತೆ ಬಹುತೇಕ ಎಲ್ಲಾ ಪ್ರಮುಖ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.