ಮಹಿಳೆಯರನ್ನು ಸೆಳೆಯುವ ಮೂಲಕ ಹೊಸ ಮತಬ್ಯಾಂಕ್ ಸೃಷ್ಟಿಸಿಕೊಳ್ಳುತ್ತಿದೆಯೇ ಕಾಂಗ್ರೆಸ್?
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಐದು ಭರವಸೆಗಳನ್ನು ಈಡೇರಿಸುವುದಾಗಿ ಹೇಳಿದ್ದ ಸಿದ್ದರಾಮಯ್ಯ ಸದ್ಯ ಅವುಗಳನ್ನು ಜಾರಿಗೆ ತರಲು ನಿರ್ಧರಿಸಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಐದು ಭರವಸೆಗಳನ್ನು ನೀಡಿತ್ತು. ಈ ಐದು ಭಯರವಸೆಗಳಿಂದಲೇ ಕಾಂಗ್ರೆಸ್ ಬಹುಮತ ಪಡೆದು ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎನ್ನಲಾಗುತ್ತಿದೆ.
ವಿಶೇಷವಾಗಿ ಕಾಂಗ್ರೆಸ್ ಕೊಟ್ಟ ಗ್ಯಾರಂಟಿಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿತ್ತು. ಹೀಗಾಗಿ ಮಹಿಳೆಯರಿಗಾಗಿ ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಶಕ್ತಿ ಯೋಜನೆಗಳ ಮೂಲಕ ಕೊಟ್ಟ ಭರವಸೆಗಳು ಕಾಂಗ್ರೆಸ್ ಕೈ ಹಿಡಿದಿವೆ ಎನ್ನಲಾಗುತ್ತಿದೆ. ಈ ಬಾರಿ ಕಾಂಗ್ರೆಸ್ ಭರ್ಜರಿ ಗೆಲುವುಗೆ ಮಹಿಳೆಯರು ಚಲಾಯಿಸಿದ ಮತಗಳೇ ಕಾರಣ ಎನ್ನುವ ಮಾತುಗಳು ಕೇಳಿ ಬಂದಿವೆ. ಹಾಗಾದರೆ ಕಾಂಗ್ರೆಸ್ ಕೊಟ್ಟಿದ್ದ ಆ ಐದು ಭರವಸೆಗಳು ಯಾವವು?

ಕಾಂಗ್ರೆಸ್ 'ಪಂಚ' ಗ್ಯಾರೆಂಟಿ: -
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೃಹ ಜ್ಯೋತಿ ಯೋಜನೆಯಡಿ ತಿಂಗಳಿಗೆ 200 ಯುನಿಟ್ವರೆಗೆ ವಿದ್ಯುತ್ ಉಚಿತ ಎಂದು ಕಾಂಗ್ರೆಸ್ ಭರವಸೆಯನ್ನು ನೀಡಿತ್ತು. ಗೃಹ ಲಕ್ಷ್ಮೀ ಯೋಜನೆಯಡಿ ಮನೆಯೊಡತಿಗೆ ತಿಂಗಳಿಗೆ 2000 ರೂಪಾಯಿ ನೀಡುವುದಾಗಿ ಗ್ಯಾರೆಮಟಿ ಕೊಟ್ಟಿತ್ತು. ಜೊತೆಗೆ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪಾಸ್ (ಕರ್ನಾಟಕದ ಮಹಿಳೆಯರಿಗೆ ಮಾತ್ರ), ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ದಾರರಿಗೆ ಪ್ರತಿ ತಿಂಗಳು ಹತ್ತು ಕೆ.ಜಿ ಅಕ್ಕಿ ಉಚಿತವಾಗಿ ನೀಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು. ಮಾತ್ರವಲ್ಲದೆ ಯುವನಿಧಿ ಯೋಜನೆಯಡಿ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3000 (2 ವರ್ಷ ಮಾತ್ರ) ನೀಡುವುದಾಗಿ ಭರವಸೆ ಕೊಟ್ಟಿತ್ತು.
ಕೊಟ್ಟ ಮಾತಿನಂತೆ ನಡೆದುಕೊಂಡ ಸರ್ಕಾರ!
ಕೊಟ್ಟ ಮಾತಿನಂತೆ ಐದು ಭರವಸೆಗಳನ್ನು ಜಾರಿಗೆ ತರುವುದಾಗಿ ಇಂದು ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ ಕ್ಯಾಬಿನೆಟ್ ಸಭೆ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಮುಖ್ಯವಾಗಿ ಗೃಹಲಕ್ಷ್ಮೀ ಯೋಜನೆ ಅಡಿ 2000 ರೂಪಾಯಿ ಪಡೆಯುವವರು ತಮ್ಮ ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ ಒದಗಿಸಬೇಕಾಗುತ್ತದೆ. ಮನೆ ಯಜಮಾನಿಗೆ ಈ ಗ್ಯಾರಂಟಿ ಅನ್ವಯವಾಗುತ್ತದೆ. ಅವರ ಖಾತೆಗೆ ಹಣ ಜಮಾ ಮಾಡಲು ಜೂನ್ 15ರಿಂದ ಜುಲೈ 15ವರೆಗೆ ಆನ್ಲೈನ್ ಅರ್ಜಿ ಹಾಕಬೇಕು. ಜುಲೈ 15 ಆಗಸ್ಟ್ 15ರವರೆಗೆ ಪರಿಶೀಲಿಸಿದ ನಂತರ ಅವರಿಗೆ ಪ್ರತಿ ತಿಂಗಳು ಖಾತೆಗೆ ಹಣ ಜಮೆ ಮಾಡಲಾಗುತ್ತದೆ. ಇದರಲ್ಲಿ ಬಿಪಿಎಲ್ ಹಾಗೂ ಎಪಿಎಲ್ ಎರಡಕ್ಕೂ ಅನ್ವಯವಾಗುತ್ತದೆ ಎಂದು ಹೇಳಿದರು.

ಇನ್ನೂ ಜುಲೈ 1ರಂದು ಅನ್ನಭಾಗ್ಯ ಯೋಜನೆಯಡಿಯಲ್ಲಿ 10 ಕೆಜಿ ಆಹಾರ ಧಾನ್ಯ ನೀಡಲಾಗುತ್ತದೆ. ಮಾತ್ರವಲ್ಲದೆ ಜೂನ್ 11ರಿಂದ ಮಹಿಳೆಯರು ಉಚಿತವಾಗಿ ಬಸ್ನಲ್ಲಿ ಪ್ರಯಾಣ ಮಾಡಬಹುದು. 2022- 23ರಲ್ಲಿ ವ್ಯಾಸಂಗ ಮಾಡಿ ಪಾಸ್ ಆದ ಎಲ್ಲ ಪದವೀಧರರಿಗೆ ಪ್ರತಿ ತಿಂಗಳಿಗೆ 3,000 ರೂ ಪಾತಿವತಿ, ಜುಲೈ 1ರಿಂದ ಗೃಹಜ್ಯೋತಿ ಯೋಜನಯಡಿ 200 ಯುನಿಟ್ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಅಂದರೆ ಅಲ್ಪಸಂಖ್ಯಾತರ ಕಡೆ ಮಾತ್ರ ಒಲವನ್ನು ಹೊಂದಿದೆ, ಕಾಂಗ್ರೆಸ್ನ ಮತ ಬ್ಯಾಂಕ್ ಅಂದರೆ ಅಲ್ಪಸಂಖ್ಯಾತರು ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು. ಆದರೀಗ ಕಾಂಗ್ರೆಸ್ ಭರವಸೆಗಳಿಂದಾಗಿ ಗೆಲುವು ಸಾಧಿಸಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಕಾಂಗ್ರೆಸ್ ಕೊಟ್ಟ ಭರವಸೆಗಳಲ್ಲಿ ಮಹಿಳೆಯರ ಆರ್ಥಿಕ ಅಭಿವೃದ್ಧಿ ಕಡೆಗೆ ಹೆಚ್ಚು ಗಮನ ಕೊಡಲಾಗಿದೆ. ಹೀಗಾಗಿ ಮಹಿಳಾ ಮತದಾರರೇ ಕಾಂಗ್ರೆಸ್ ಕೈ ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಕೊಟ್ಟ ಗ್ಯಾರಂಟಿಗಳನ್ನ ನಂಬಿ ಮಹಿಳೆಯರು ಮತ ಚಲಾಯಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಕಾಂಗ್ರೆಸ್ ಜಾತಿ ಆಧಾರಿತ ಮತಬ್ಯಾಂಕ್ ಅಂತ ಹೇಳಲಾಗುತ್ತಿತ್ತು. ಆದರೀಗ ಮಹಿಳೆಯರನ್ನು ಸೆಳೆದು ಬಹುದೊಡ್ಡ ಮತಬ್ಯಾಂಕ್ ಅನ್ನು ಸೃಷ್ಟಿ ಮಾಡಿತಾ ಕಾಂಗ್ರೆಸ್ ಅನ್ನೋ ಅನುಮಾನ ಜನ ಸಾಮಾನ್ಯರಲ್ಲಿ ಮೂಡಿಸಿದೆ.












Click it and Unblock the Notifications