ಎಚ್ಡಿಕೆ ಕೊಟ್ಟಿದ್ದು ಮಾಹಿತಿ ತಪ್ಪು ಎಂದು ಸಾರಲು, ಸಿಎಂ ಪ್ರೆಸ್ ಕಾನ್ಫರೆನ್ಸ್ ಕರೆದರೇ?
ಬೆಂಗಳೂರು, ಮೇ 13: ಗುರುವಾರ ಸಂಜೆ ಐದು ಗಂಟೆಗೆ ಕರೆಯಲಾಗಿದ್ದ ಮಾಧ್ಯಮ ಗೋಷ್ಠಿಯ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದವು. ಕೋವಿಡ್ ಪ್ಯಾಕೇಜ್ ಏನಾದರೂ ಸಿಎಂ ಪ್ರಕಟಿಸುತ್ತಾರಾ ಎನ್ನುವುದು ಚರ್ಚೆಯ ವಿಷಯವಾಗಿತ್ತು.
ಆದರೆ, ನಿರೀಕ್ಷೆ ಹುಸಿಯಾಗಿ, ಕೋವಿಡ್ ನಿರ್ವಹಣೆಯ ವಿಚಾರದಲ್ಲಿ ಸರಕಾರ ತೆಗೆದುಕೊಂಡ ಕ್ರಮದ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು, ಸಚಿವರಾದ ಡಾ.ಅಶ್ವಥ್ ನಾರಾಯಣ, ಆರ್.ಅಶೋಕ್, ಡಾ.ಸುಧಾಕರ್, ಅರವಿಂದ ಲಿಂಬಾವಳಿ ವಿವರಣೆಯನ್ನು ನೀಡಿದರು.
ಮಾಧ್ಯಮ ಗೋಷ್ಠಿಯಲ್ಲಿ ಸಿಎಂ ಆದಿಯಾಗಿ ಸಚಿವರು ಹೇಳಿರುವ ವಿಚಾರವೆಲ್ಲಾ ಈಗಾಗಲೇ ಗೊತ್ತಿರುವ ವಿಚಾರ. ಆದರೂ, ಸುಮಾರು ಒಂದು ಗಂಟೆಯ ಪ್ರೆಸ್ ಕಾನ್ಫರೆನ್ಸ್ ನಲ್ಲಿ ಮತ್ತೆ ಇದನ್ನೇ ರಿಪೀಟ್ ಮಾಡಿದ್ದು ಯಾಕೆ ಎನ್ನುವುದಿಲ್ಲಿ ಪ್ರಶ್ನೆ.
ಗುರುವಾರ ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡಿದಂತಹ ಟ್ವೀಟ್ ಸಂಚಲನವನ್ನು ಮೂಡಿಸಿತ್ತು. ಅದರಲ್ಲಿ ಆಕ್ಸಿಜನ್ ಸಪ್ಲೈ, ಕೇಂದ್ರದ ಮಲತಾಯಿ ಧೋರಣೆಯನ್ನು ಉಲ್ಲೇಖಿಸಿದ್ದರು. ಎಚ್ಡಿಕೆ ನೀಡಿದ ಮಾಹಿತಿ ತಪ್ಪು ಎಂದು ಸಾರಲು, ಗೋಷ್ಠಿಯಲ್ಲಿ ವಿವರಣೆ ನೀಡಿದಂತಿತ್ತು.
ಮೋದಿ ಸರಕಾರದ ವಿರುದ್ದ ಜನ ದಂಗೆ ಎದ್ದಾರು
|
ಕೋರ್ಟ್ ಆದೇಶದ ನಂತರವೂ ಕೇಂದ್ರ ರಾಜ್ಯಕ್ಕೆ ಪೂರೈಸಿದ್ದು 120MT
"ಕರ್ನಾಟಕಕ್ಕೆ ನಿತ್ಯ 1200 ಮೆಟ್ರಿಕ್ ಟನ್(MT) ಆಮ್ಲಜನಕ ಪೂರೈಸಬೇಕು ಎಂಬ ಕೋರ್ಟ್ ಆದೇಶದ ನಂತರವೂ ಕೇಂದ್ರ ರಾಜ್ಯಕ್ಕೆ ಪೂರೈಸಿದ್ದು 120MT ಮಾತ್ರ. ಅತ್ತ, ನಮಗಿಂತ ಕಡಿಮೆ ಪ್ರಕರಣಗಳಿರುವ ಉತ್ತರ ಪ್ರದೇಶಕ್ಕೆ 1680MT ಪೂರೈಸಿರುವ ಕೇಂದ್ರ ಸರ್ಕಾರ ತಾರತಮ್ಯದಲ್ಲಿ ಪಾರಮ್ಯ ಮೆರೆದಿದೆ. ಈ ಒಕ್ಕೂಟದಲ್ಲಿ ಕನ್ನಡಿಗರೇನು ತಬ್ಬಲಿ ಮಕ್ಕಳೇ?" ಇದು ಕುಮಾರಸ್ವಾಮಿ ಮಾಡಿದ ಟ್ವೀಟ್ ಆಗಿತ್ತು.
ಮಾಜಿ ಮುಖ್ಯಮಂತ್ರಿಯಾಗಿ ಟ್ವೀಟ್ ಮಾಡುವ ಮುನ್ನ ಸತ್ಯಾಂಶವನ್ನು ತಿಳಿದುಕೊಳ್ಳಿ
ಆದರೆ, ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ರಾಜ್ಯ ಸರಕಾರ ಕೊಟ್ಟ ಮಾಹಿತಿಯ ಪ್ರಕಾರ, ಕೇಂದ್ರದಿಂದ ಸಪ್ಲೈ ಆಗುತ್ತಿರುವುದು 1,065 ಮೆಟ್ರಿಕ್ ಟನ್. ಎಚ್ಡಿಕೆ ಟ್ವೀಟ್ ಗೆ ಖಾರವಾಗಿ ತಿರುಗೇಟು ನೀಡಿದ್ದ ಸಿ.ಟಿ.ರವಿ ಟ್ವೀಟ್ ಮಾಡಿದ್ದು ಹೀಗೆ, "ಒಟ್ಟಾರೆಯಾಗಿ ರಾಜ್ಯಕ್ಕೆ 1,075 ಮೆಟ್ರಿಕ್ ಟನ್ ಹಂಚಿಕೆಯಾಗಿದೆ. ನೀವು ಉಲ್ಲೇಖಿಸಿರುವ 120 ಮೆ.ಟನ್, ಆಕ್ಸಿಜನ್ ಎಕ್ಸ್ ಪ್ರೆಸ್ ನಿಂದ ಬಂದಿದ್ದು. ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ಟ್ವೀಟ್ ಮಾಡುವ ಮುನ್ನ ಸತ್ಯಾಂಶವನ್ನು ತಿಳಿದುಕೊಳ್ಳಬೇಕಲ್ಲವೇ"ಎಂದು ರವಿ ಟ್ವೀಟ್ ಮಾಡಿದ್ದರು.
|
ಆತ್ಮೀಯ ಕುಮಾರಣ್ಣ, ಕಾಲ್ಪನಿಕ ಟ್ವಿಟ್ ಗಳನ್ನು ಮಾಡುವ ಮುಂಚೆ ನಿಜಾಂಶ ತಿಳಿಯಿರಿ
ಇದಕ್ಕೆ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ತೇಜಸ್ವಿ ಸೂರ್ಯ ಕೂಡಾ ಟ್ವೀಟ್ ಮಾಡಿ ಎಚ್ಡಿಕೆಗೆ ಹೇಳಿದ್ದು ಹೀಗೆ, 'ಆತ್ಮೀಯ ಕುಮಾರಣ್ಣ, ಕಾಲ್ಪನಿಕ ಟ್ವಿಟ್ ಗಳನ್ನು ಮಾಡುವ ಮುಂಚೆ ನಿಜಾಂಶ ಅರಿತರೆ ಒಳ್ಳೆಯದು. ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಒಟ್ಟು 1015+60=1075 MT ಆಕ್ಸಿಜನ್ ಒದಗಿಸಲಾಗಿದ್ದು, ನೀವು ಉಲ್ಲೇಖಿಸಿರುವುದು ಬೆಂಗಳೂರಿಗೆ ಮೇ 11ರಂದು ಆಗಮಿಸಿರುವ ಕೇವಲ 1 ಆಕ್ಸಿ ಎಕ್ಸ್ಪ್ರೆಸ್ ರೈಲಿನ ಕುರಿತು ಮಾತ್ರ ಎನ್ನುವುದು ನಿಮ್ಮ ಗಮ್ಮನದಲ್ಲಿರಲಿ" ಎಂದು.
ಮುಖ್ಯಮಂತ್ರಿ ಮತ್ತು ಸಚಿವರ ಪತ್ರಿಕಾಗೋಷ್ಠಿಯಲ್ಲಿ ಆಮ್ಲಜನಕ ಮತ್ತು ಇತರ ವ್ಯವಸ್ಥೆಯ ಬಗ್ಗೆ ವಿವರಣೆ
ಮುಖ್ಯಮಂತ್ರಿ ಮತ್ತು ಸಚಿವರ ಪತ್ರಿಕಾಗೋಷ್ಠಿಯಲ್ಲಿ ಆಮ್ಲಜನಕ ಮತ್ತು ಇತರ ವ್ಯವಸ್ಥೆಯ ಬಗ್ಗೆ ವಿವರಣೆಯನ್ನು ನೀಡಲಾಯಿತು. "ಕೇಂದ್ರ ಸರ್ಕಾರ 965 ಮೆ. ಟನ್ ನಿಂದ 1100ಕ್ಕೆ ಹೆಚ್ಚಿಸಿದೆ. ರಾಜ್ಯದಲ್ಲಿಯೇ 750 ಮೆ. ಟನ್ ದೊರೆಯತ್ತಿದೆ. ವಿಶಾಖಪಟ್ಟಣದಿಂದ 30 ಮೆ.ಟನ್ ದೊರೆಯತ್ತಿದೆ. ಇತರ ರಾಜ್ಯಗಳಿಂದ ದೊರೆಯುವ ಆಮ್ಲಜನಕ ಪಡೆಯಲಾಗಿದೆ. ಬಹ್ರೇನ್ 40, ಕುವೈತ್ನಿಂದ 100, ಜೇಮಷೆಡ್ ಪುರದಿಂದ ಟ್ರೇನ್ ಮೂಲಕ 120 ಮೆ.ಟನ್ ಆಮ್ಲಜನಕ ತರಲಾಗಿದೆ" ಎಂದು ಸಿಎಂ ವಿವರಣೆಯನ್ನು ನೀಡಿದರು. ಒಟ್ಟಿನಲ್ಲಿ, ಕುಮಾರಸ್ವಾಮಿ ಟ್ವೀಟಿಗೆ ಸ್ಪಷ್ಟೀಕರಣ ನೀಡಲು ಕರೆದ ಪ್ರೆಸ್ ಕಾನ್ಫರೆನ್ಸ್ ಇದಾ ಎನ್ನುವ ಪ್ರಶ್ನೆ ಎದುರಾಗುತ್ತಿತ್ತು.