ಇಲಾಖೆ ಭ್ರಷ್ಚಾಚಾರ ಬಯಲಿಗೆಳೆದ್ದಿದ್ದೇ ತಿವಾರಿ ಸಾವಿಗೆ ಕಾರಣವಾಯ್ತೆ?
ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಆಯುಕ್ತರಾಗಿ ಬಂದ ನಂತರ ಕೆಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದರು. ಇಲಾಖೆಯ ಭ್ರಷ್ಟಾಚಾರ ತಡೆಗಟ್ಟಿದ್ದೇ ಅವರ ಸಾವಿಗೆ ಕಾರಣವಾಯಿತೆ?
ಬೆಂಗಳೂರು, ಮೇ 19: ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಆಯುಕ್ತರಾಗಿ ಬಂದ ನಂತರ ಕೆಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದರು. ಇಲಾಖೆಯ ಭ್ರಷ್ಟಾಚಾರ ತಡೆಗಟ್ಟಿದ್ದೇ ಅವರ ಸಾವಿಗೆ ಕಾರಣವಾಯಿತೆ? ನಿಜಕ್ಕೂ ಇದು 2,000 ಕೋಟಿ ರು ಅಧಿಕ ಮೌಲ್ಯ ಹಗರಣವೇ? ಸಿದ್ದರಾಮಯ್ಯರಿಂದ ಮೆಚ್ಚುಗೆ ಪಡೆದ ಅಧಕಾರಿಗೆ ನಿಜಕ್ಕೂ ಕಿರುಕುಳ ನೀಡಲಾಗಿತ್ತೆ? ಅನೇಕ ಪ್ರಶ್ನೆಗಳು ಕಾಡುತ್ತಿವೆ.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಲ್ಲಿ ಸೋರಿಕೆಯಾಗುತ್ತಿದ್ದ ಪಡಿತರ ಧಾನ್ಯಗಳನ್ನು ನಿಯಂತ್ರಣಕ್ಕೆ ತಂದಿದ್ದು, ನಕಲಿ ಕಾರ್ಡ್ಗಳನ್ನು ಪತ್ತೆಹಚ್ಚಿದ್ದು, ಕಾಳಸಂತೆಯಲ್ಲಿ ಮಾರಾಟಗಾರ ಮೇಲೆ ನಿಯಂತ್ರಣ,ನ್ಯಾಯಬೆಲೆ ಅಂಗಡಿಗಳ ಮೇಲೆ ದಾಳಿ, ಅನ್ನಭಾಗ್ಯ ಅಕ್ರಮವನ್ನು ತಡೆಗಟ್ಟಿದ್ದು ಸೇರಿದಂತೆ ಹಲವು ಬಿಗಿ ಕ್ರಮಗಳನ್ನು ಕೈಗೊಂಡಿದ್ದರು. [ತಿವಾರಿ ಸಾವು: ತನಿಖೆಗೆ ಕೋರಿ ಯೋಗಿಗೆ ಪತ್ರ ಬರೆದ ಸಿದ್ದರಾಮಯ್ಯ]
ಕುಟುಂಬದಿಂದ ಆರೋಪ: ಅನುರಾಗ್ ತಿವಾರಿ ಅವರ ವರ್ಗಾವಣೆಗಾಗಿ ಆಹಾರ ಇಲಾಖೆ ಸಚಿವ ಯು.ಟಿ ಖಾದರ್ ಅವರ ಮೇಲೆ ಅನೇಕ ಬಾರಿ ಒತ್ತಡ ಬಂದಿತ್ತು. ನನ್ನ ಸೋದರ ತಿವಾರಿ ಜೀವಕ್ಕೆ ಅಪಾಯವಿತ್ತು.

ಇದೇ ಕಾರಣಕ್ಕೆ ಕರ್ನಾಟಕದಿಂದ ಬೇರೆ ರಾಜ್ಯಕ್ಕೆ ವರ್ಗಾವಣೆ ಬಯಸಿದ್ದರು. ಒಂದು ತಿಂಗಳು ರಜೆ ಕೇಳಿದರೆ ನಾಲ್ಕು ದಿನ ಮಾತ್ರ ರಜೆ ಸಿಕ್ಕಿತ್ತು. ಹಿರಿಯ ಅಧಿಕಾರಿಗಳಿಂದ ಸಾಕಷ್ಟು ಒತ್ತಡಕ್ಕೆ ಸಿಲುಕಿದ್ದ. ತಿವಾರಿ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಿ ನ್ಯಾಯ ಒದಗಿಸಿಕೊಡಿ ಎಂದು ಅನುರಾಗ್ ತಿವಾರಿ ಅವರ ಸೋದರ ಮಾಯಾಂಕ್, ತಿವಾರಿ ಅವರ ತಂದೆ, ನಿವೃತ್ತ ಪ್ರೊ . ಬಿ.ಎನ್. ತಿವಾರಿ ಹೇಳಿದ್ದಾರೆ.
ಭ್ರಷ್ಟಾಚಾರವನ್ನು ಸಿಬಿಐಗೆ ವಹಿಸುವಂತೆ ಸಚಿವರಿಗೆ ಪತ್ರ ಬರೆದಿದ್ದರು. ಸಿಬಿಐಗೆ ನೀಡಿದರೆ ಅನೇಕರ ಅವಕೃಪೆಗೆ ಒಳಗಾಗಬಹುದು ಎಂಬ ಕಾರಣಕ್ಕೆ ಸಚಿವರು ಒಪ್ಪಿರಲಿಲ್ಲ. ಇದರಿಂದ ಆತ ಬೇಸರಗೊಂಡು ಕೆಲ ದಿನಗಳವರೆಗೆ ರಜಾ ಹಾಕಿ ಡೆಹ್ರಾಡೂನ್ಗೆ ಹೆಚ್ಚಿನ ತರಬೇತಿಗೆ ಹೋಗಿದ್ದರು ಎಂದು ತಿಳಿಸಿದ್ದಾರೆ.[ತಿವಾರಿ ಸಾವಿನ ಕೇಸ್, ಶೋಭಾ ಮನವಿ ಪುರಸ್ಕರಿಸಿದ ಸಿಎಂ ಯೋಗಿ]

ಅನುರಾಗ್ ತಿವಾರಿ ಮೇಲೆ ಸರ್ಕಾರದ ಯಾವುದೇ ಒತ್ತಡ ಇರಲಿಲ್ಲ. ಸಿಎಂ ಸಿದ್ದರಾಮಯ್ಯರ ಆಪ್ತ ಅಧಿಕಾರಿಗಳಲ್ಲಿ ಒಬ್ಬರಾಗಿದ್ದರು. ಹೆಚ್ಚುವರಿ ಆಯುಕ್ತರಾಗಿ, ಕೊಡಗು ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ, ಹಣಕಾಸು ಇಲಾಖೆಯ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 2015ರಲ್ಲಿ ಅವರನ್ನು ಬೀದರ್ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿತ್ತು.
ಅನುರಾಗ್ರನ್ನು ರಾಜ್ಯ ಸರ್ಕಾರ ಸರಿಯಾಗಿಯೇ ನೋಡಿಕೊಂಡಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಪತ್ರ ಬರೆದು ಸಮಗ್ರ ತನಿಖೆ ನಡೆಸುವಂತೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಗೆ ಪತ್ರ ಬರೆದಿದ್ದಾರೆ.












Click it and Unblock the Notifications