ಪರಿಷತ್ ಟಿಕೆಟ್ ಆಕಾಂಕ್ಷಿಯಾಗಿದ್ದ ಈರಣ್ಣ ಕಡಾಡಿ ರಾಜ್ಯಸಭೆಗೆ!
ಬೆಂಗಳೂರು, ಜೂನ್ 09 : "32 ವರ್ಷಗಳ ಕಾಲ ಪಕ್ಷಕ್ಕಾಗಿ ನಾನು ಮಾಡಿದ ಕೆಲಸವನ್ನು ಗುರುತಿಸಲಾಗಿದೆ. ಪ್ರತಿಯೊಬ್ಬ ಕಾರ್ಯಕರ್ತನಿಗೂ ಒಂದು ಸ್ಥಾನ-ಮಾನ ಸಿಗಬೇಕು" ಎಂದು ರಾಜ್ಯಸಭೆ ಚುನಾವಣೆಗೆ ಕರ್ನಾಟಕದಿಂದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಈರಣ್ಣ ಕಡಾಡಿ ಹೇಳಿದರು.
Recommended Video
ಸೋಮವಾರ ಬಿಜೆಪಿ ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಕರ್ನಾಟಕ ವಿಧಾನಸಭೆಯಿಂದ ನಾಲ್ವರು ರಾಜ್ಯಸಭಾ ಸದಸ್ಯರ ಆಯ್ಕೆಗೆ ನಡೆಯಲಿರುವ ಚುನಾವಣೆಯಲ್ಲಿ ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿ ಅಭ್ಯರ್ಥಿಗಳು.
54 ವರ್ಷದ ಈರಣ್ಣ ಕಡಾಡಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನವರು. ಪಂಚಮಸಾಲಿ ಲಿಂಗಾಯಿತ ಸಮುದಾಯಕ್ಕೆ ಸೇರಿದವರು. ಎಬಿವಿಪಿ ಮೂಲಕ ರಾಜಕೀಯ ಜೀವನ ಆರಂಭಿಸಿದ ಈರಣ್ಣ ಪ್ರಸ್ತುತ ಬಿಜೆಪಿ ಬೆಳಗಾವಿ ವಿಭಾಗದ ಪ್ರಭಾರಿಗಳು.
32 ವರ್ಷಗಳ ಕಾಲ ಬಿಜೆಪಿ ಪಕ್ಷಕ್ಕಾಗಿ ದುಡಿದ ಈರಣ್ಣ ಕಡಾಡಿಗೆ ರಾಜ್ಯಸಭೆಗೆ ಹೋಗುವ ಅವಕಾಶ ಸಿಕ್ಕಿದೆ. ವಿಧಾನ ಪರಿಷತ್ ಸದಸ್ಯರಾಗುವ ಬಯಕೆ ಹೊಂದಿದ್ದ ಈರಣ್ಣ ಅವರಿಗೆ ಪಕ್ಷ ರಾಜ್ಯಸಭಾ ಸದಸ್ಯರಾಗಲು ಅವಕಾಶ ನೀಡಿದೆ.

ಈರಣ್ಣ ಹೇಳಿದ್ದೇನು?
ಟಿಕೆಟ್ ಸಿಕ್ಕ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಈರಣ್ಣ ಕಡಾಡಿ, "ಮೊನ್ನೆ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಯಾಗಬೇಕು ಎಂದು ಇಚ್ಛೆ ಪಟ್ಟಿದ್ದೆ. ಈ ಸಂದರ್ಭದಲ್ಲಿ ಪಕ್ಷದ ವರಿಷ್ಠರು ನನ್ನನ್ನು ರಾಜ್ಯಸಭೆಗೆ ಕಳಿಸುವ ನಿರ್ಣಯ ತೆಗೆದುಕೊಂಡು ಆಯ್ಕೆ ಮಾಡಿದ್ದಾರೆ" ಎಂದು ಹೇಳಿದರು.

ಸ್ಥಾನ-ಮಾನ ಸಿಗಬೇಕು
"ರಾಜಕೀಯ ಪಕ್ಷದಲ್ಲಿ ಪ್ರತಿಯೊಬ್ಬ ಕಾರ್ಯಕರ್ತನಿಗೂ ಯಾವುದಾದರೂ ಒಂದು ಸ್ಥಾನ-ಮಾನ ಸಿಗಬೇಕು ಎಂಬುದು ನನ್ನ ಅಭಿಮತ. 32 ವರ್ಷಗಳಿಂದ ಭಾರತೀಯ ಜನತಾ ಪಾರ್ಟಿಯ ನಿಷ್ಠಾವಂತ ಕಾರ್ಯಕರ್ತಗಾಗಿ ಇದುವರೆಗೂ ನಾನು ಕೆಲಸ ಮಾಡಿದ್ದೇನೆ. ನಾನು ಹಲವಾರು ಸಂದರ್ಭದಲ್ಲಿ ಅವಕಾಶಗಳನ್ನು ಕೇಳಿದ್ದೆ" ಎಂದು ಈರಣ್ಣ ಕಡಾಡಿ ಹೇಳಿದರು.

ಪಕ್ಷಕ್ಕಾಗಿ ಕೆಲಸ ಮಾಡು
"ನಾನು ಅವಕಾಶ ಕೇಳಿದಾಗಲೆಲ್ಲಾ ಪಕ್ಷದ ವರಿಷ್ಠರು ಆ ಸಂದರ್ಭ ಬಂದಾಗ ಕೊಡುತ್ತೇವೆ. ಅಲ್ಲಿಯ ತನಕ ನೀನು ಕಾಯಬೇಕು, ಪಕ್ಷಕ್ಕಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದರು. ಪಕ್ಷ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ ನೀಡಿದೆ. ಈ ಮೂಲಕ ಪಕ್ಷ ಕಾರ್ಯಕರ್ತರ ಪರವಾಗಿದೆ ಎಂಬ ಸಂದೇಶವನ್ನು ಹೇಳಿದೆ" ಎಂದರು.

ಎಲ್ಲರ ಮಾರ್ಗದರ್ಶನದಲ್ಲಿ ಕೆಲಸ
"ಪ್ರಭಾಕರ ಕೋರೆ ಅವರು ತಂದೆಯ ಸ್ಥಾನದಲ್ಲಿ, ರಮೇಶ್ ಕತ್ತಿ ಸಹೋದರನ ಸ್ಥಾನದಲ್ಲಿ ಇದ್ದಾರೆ. ನಾನು ಅವರ ಜೊತೆಗೆ ಹಿಂದೆಯೂ ಕೆಲಸ ಮಾಡಿದ್ದೇನೆ. ಮುಂದೆ ಸಹ ಗುಂಪುಗಾರಿಕೆ, ಒಳ ಒಪ್ಪಂದ ಇಲ್ಲದೇ ಮಾರ್ಗದರ್ಶನ ಪಡೆದು ಕೆಲಸ ಮಾಡುತ್ತೇನೆ" ಎಂದು ಈರಣ್ಣ ಕಡಾಡಿ ಹೇಳಿದರು.












Click it and Unblock the Notifications