ಡಿ ರೂಪಾ ವರ್ಗಾವಣೆ: ಕುಮಾರಸ್ವಾಮಿಯವರೇ ನಾಲಿಗೆ ಒಂದಿರಲಿ!
ಡಿಐಜಿ ಡಿ ರೂಪಾ ವರ್ಗಾವಣೆ ವಿಚಾರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ವ್ಯತಿರಿಕ್ತ ಹೇಳಿಕೆಯನ್ನು ನೀಡಿದ್ದಾರೆ. ಈ ಹಿಂದೆ ರೂಪಾ ಅವರನ್ನು ರಜೆಯ ಮೇಲೆ ಕಳುಹಿಸಿ ಎಂದಿದ್ದ ಕುಮಾರಸ್ವಾಮಿ, ರೂಪಾ ವರ್ಗಾವಣೆಯನ್ನು ಖಂಡಿಸಿದ್ದಾರೆ
ಮುಂಬರುವ ಕರ್ನಾಟಕ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ ಕೆಲವೊಂದು ಸೂಕ್ಷ್ಮ ವಿಚಾರದಲ್ಲಿ ಹೇಳಿಕೆ ನೀಡುವಾಗ ಯೋಚಿಸಿ ಪ್ರತಿಕ್ರಿಯಿಸುವುದು ಸೂಕ್ತ.
ಊರೆಲ್ಲಾ ಈಗ ಸುದ್ದಿಯಾಗಿ ಕೂತಿರುವ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನ ಭ್ರಷ್ಟಾಚಾರ, ಡಿಐಜಿ ರೂಪಾ ವರ್ಗಾವಣೆ ವಿಚಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ನೀಡುತ್ತಿರುವ ಹೇಳಿಕೆ ಒಂದಕ್ಕೊಂದು ತಾಳೆಯೇ ಆಗದೇ 'ರಾಜಕಾರಣಿಗಳೆಲ್ಲಾ ಹೀಗೇನಾ' ಎಂದು ಪ್ರಶ್ನಿಸುವಂತಾಗಿದೆ.
Recommended Video
ಡಿಐಜಿ ರೂಪಾ ವರ್ಗಾವಣೆ ಖಂಡನೀಯ, ಎಚ್ಡಿಕೆ
ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಕೆಲವು ಐಪಿಎಸ್ ಅಧಿಕಾರಿಗಳ ಸಾವು, ಗಿನ್ನೆಸ್ ದಾಖಲೆಯಂತಾಗಿರುವ ನಿಷ್ಟಾವಂತ ಪೊಲೀಸ್ ಅಧಿಕಾರಿಗಳ ವರ್ಗಾವಣೆಯ ವಿಚಾರದಲ್ಲಿ ಸಾರ್ವಜನಿಕರು ಬೇಸತ್ತು ಹೋಗಿರುವಾಗ ಕುಮಾರಸ್ವಾಮಿಯವರ ದ್ವಂದ್ವ ಹೇಳಿಕೆ ಜನತೆಗೆ ಇನ್ನಷ್ಟು ಬೇಸರ ತರುವುದು ನಿಶ್ಚಿತ.
ಡಿ ರೂಪಾ ಮತ್ತು ಪರಪ್ಪನ ಅಗ್ರಹಾರದ ಡಿಐಜಿ ಸತ್ಯನಾರಾಯಣ ರಾವ್ ಆರೋಪ, ಪ್ರತ್ಯಾರೋಪಕ್ಕೆ ತೊಡಗಿ ಬೆಂಗಳೂರು ಪೊಲೀಸರ ಮಾನ ಬೀದಿಗೆ ಬಂದಾಗ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ರೂಪಾ ವಿರುದ್ದ ಗಂಭೀರ ಹೇಳಿಕೆಯನ್ನು ನೀಡಿದ್ದರು.
ಸೋಮವಾರ (ಜುಲೈ 17) ರೂಪಾ ಅವರನ್ನು ಸರಕಾರ ಟ್ರಾಫಿಕ್ ಇಲಾಖೆಗೆ ವರ್ಗಾವಣೆ ಮಾಡಿದ ನಂತರ, ಕುಮಾರಸ್ವಾಮಿ ನೀಡಿರುವ ಹೇಳಿಕೆ ಹಿಂದಿನ ಹೇಳಿಕೆಗಿಂತ ವ್ಯತಿರಿಕ್ತವಾಗಿ ಇದು ಅವಕಾಶವಾದಿ ರಾಜಕಾರಣ ಮತ್ತಿನ್ನೇನು ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಮಾಧ್ಯಮಗಳು ಹೇಳಿಕೆಯನ್ನು ತಿರುಚಿವೆ
ಮಾಧ್ಯಮಗಳು ನನ್ನ ಹೇಳಿಕೆಯನ್ನು ತಿರುಚಿವೆ, ಬೇರೆ ಅರ್ಥ ಬರುವಂತೆ ಪ್ರೊಜೆಕ್ಟ್ ಮಾಡಿವೆ ಎನ್ನುವ ರಾಜಕಾರಣಿಗಳ ಸ್ಟ್ಯಾಂಡರ್ಡ್ ಹೇಳಿಕೆಯ ನಡುವೆ, ಎರಡು ದಿನದ ಹಿಂದೆ ಕುಮಾರಸ್ವಾಮಿ ನೀಡಿದ ಹೇಳಿಕೆ ಮತ್ತು ಸೋಮವಾರದ (ಜು 17) ಕುಮಾರಸ್ವಾಮಿ ನೀಡಿದ ಹೇಳಿಕೆ ಜೆಡಿಎಸ್ ಫೇಸ್ ಬುಕ್ ಅಕೌಂಟ್ 'ನಮ್ಮ ಎಚ್ಡಿಕೆ' ನಲ್ಲಿ ಅಪ್ಡೇಟ್ ಆಗಿದ್ದು ಹೀಗೆ..
ಕುಮಾರಸ್ವಾಮಿ ಎರಡು ದಿನದ ಹಿಂದೆ ಹೇಳಿದ್ದು
ಕಾರಾಗೃಹ ಡಿಜಿಪಿ ಸತ್ಯನಾರಾಯಣ ರಾವ್, ಡಿಐಜಿ ರೂಪಾ, ಅವರು ಹಣದ ಹಂಚಿಕೆ ಕಾರಣಕ್ಕೆ ಪರಸ್ಪರ ರಾದ್ದಾಂತ ಮಾಡಿಕೊಂಡಿದ್ದು ಕೂಡಲೇ ಇಬ್ಬರು ಅಧಿಕಾರಿಗಳನ್ನು ಕಡ್ದಾಯ ರಜೆಯ ಮೇಲೆ ಕಳುಹಿಸಬೇಕು ಎನ್ನುವ ಗಂಭೀರ ಹೇಳಿಕೆಯನ್ನು ಕುಮಾರಸ್ವಾಮಿ ನೀಡಿದ್ದರು.
ಕೆಂಪಯ್ಯನವರ ಉಸ್ತುವಾರಿಯಲ್ಲಿ ಗೃಹ ಇಲಾಖೆ ಅಪಹಾಸ್ಯಕ್ಕೀಡಾಗಿದೆ
ಇದಾದ ನಂತರ, ಕೆಂಪಯ್ಯನವರ ಉಸ್ತುವಾರಿಯಲ್ಲಿ ಗೃಹ ಇಲಾಖೆ ಅಪಹಾಸ್ಯಕ್ಕೀಡಾಗಿದೆ. ಸರ್ಕಾರ ಬೌದ್ಧಿಕವಾಗಿ ಪೂರ್ಣ ದಿವಾಳಿಯಾಗಿದೆ. ನಿನ್ನೆ ಏಕಾಏಕಿ ಕೈದಿಗಳನ್ನು ಸ್ಥಳಾಂತರ ಮಾಡಿದೆ. ಕೈದಿಗಳು ಎಲ್ಲಿದ್ದಾರೆ ಎಂಬುದು ಕೈದಿಗಳ ಕುಟುಂಬಕ್ಕೇ ಗೊತ್ತಿಲ್ಲ. ಕೇಂದ್ರ ಕಾರಾಗೃಹದಿಂದ 30-35 ಖೈದಿಗಳನ್ನು ಬೇರೆ ಕಡೆ ವರ್ಗಾವಣೆ ಮಾಡಿದ್ದಾರೆ. ಗೃಹ ಇಲಾಖೆಯ ಮೇಲಿನ ಹಿಡಿತ ತಪ್ಪಿದೆ, ಅಧಿಕಾರಿಗಳನ್ನು ಹೇಳುವವರು ಕೇಳುವವರು ಯಾರೂ ಇಲ್ಲವಾಗಿದೆ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದರು.
ರಜೆಯ ಮೇಲೆ ಕಳುಹಿಸಬೇಕಿಂದಿದ್ದ ಕುಮಾರಸ್ವಾಮಿ
ರೂಪಾ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಬೇಕೆಂದು ಹೇಳಿದ್ದ ಎಚ್ಡಿಕೆ, ಪ್ರಕರಣ ಬೆಳಕಿಗೆ ಬಂದಾಗಲೇ ಇದು ಹಳ್ಳ ಹಿಡಿಯುತ್ತದೆ ಎಂದು ಹೇಳಿದ್ದೆ. ಪ್ರಕರಣ ಬೆಳಕಿಗೆ ತಂದವರನ್ನೇ ವರ್ಗಾವಣೆ ಮಾಡುವ ಮೂಲಕ ಈ ಪ್ರಕರಣವನ್ನು ಹಳ್ಳ ಹಿಡಿಸುತ್ತೇವೆ ಎಂಬ ಸಂದೇಶವನ್ನು ಸಿದ್ದರಾಮಯ್ಯ ನೀಡಿದ್ದಾರೆ - ಕುಮಾರಸ್ವಾಮಿ.
ಕಾಂಗ್ರೆಸ್ ಸರ್ಕಾರದಲ್ಲಿ ನ್ಯಾಯಕ್ಕೆ ಬೆಲೆಯಿಲ್ಲ
'ಕಾಂಗ್ರೆಸ್ ಸರ್ಕಾರದಲ್ಲಿ ನ್ಯಾಯಕ್ಕೆ ಬೆಲೆಯಿಲ್ಲ. ಸರ್ಕಾರಕ್ಕೆ ಅಕ್ರಮ ದಂಧೆಗಳನ್ನು ಬೆಂಬಲಿಸುವುದರಲ್ಲೇ ಹೆಚ್ಚು ಆಸಕ್ತಿ. ಕಾರಾಗೃಹದಲ್ಲಿನ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಹೊರಟ ಕಾರಾಗೃಹ ಡಿಐಜಿ ರೂಪಾ ಅವರ ಪ್ರಾಮಾಣಿಕತೆ ಸರ್ಕಾರ ನೀಡಿದ ಬೆಲೆ ಇದು...' ಎಂದು ಎಚ್ ಡಿ ಕುಮಾರಸ್ವಾಮಿ, ಸಿದ್ದು ಸರ್ಕಾರದ ವಿರುದ್ಧ ಹರಿಹಾಯುವ ಮೂಲಕ, ರೂಪಾ ವಿಚಾರದಲ್ಲಿ ದ್ವಂದ್ವ ನಿಲುವು ತಾಳಿದ್ದಾರೆ.