Get Updates
Get notified of breaking news, exclusive insights, and must-see stories!

ನಿಷ್ಠಾವಂತ ಅಧಿಕಾರಿ ಮಧುಕರಶೆಟ್ಟಿ ಸಾವಿಗೆ ಸಿಗದ ನ್ಯಾಯ: ಡಾ. ದೇವಿ ಶೆಟ್ಟಿ ಪಾತ್ರವೇನು?

ಬೆಂಗಳೂರು, ಡಿ. 17: ಕರ್ನಾಟಕ ಕಂಡ ನಿಷ್ಠಾವಂತ ಪೊಲೀಸ್ ಅಧಿಕಾರಿಗಳ ಪಟ್ಟಿಯಲ್ಲಿ ಅಗ್ರಗಣ್ಯ ಸ್ಥಾನ ಅಲಂಕರಿಸಿದ್ದ ದಿವಂಗತ ಡಾ. ಕೆ. ಮಧುಕರಶೆಟ್ಟಿ ಅವರ ಸಾವಿಗೆ ನ್ಯಾಯ ಕೊಡಿಸುವಲ್ಲಿ ಡಾ. ದೇವಿಶೆಟ್ಟಿ ನೇತೃತ್ವದ ಸಮಿತಿ ಸಂಪೂರ್ಣ ವಿಫಲವಾಗಿದೆ. ರಾಜ್ಯ ಕಂಡ ಸರ್ವ ಶ್ರೇಷ್ಠ ಪೊಲೀಸ್ ಅಧಿಕಾರಿಯ ಸಾವಿಗೆ ನ್ಯಾಯ ಕೊಡಿಸುವಲ್ಲಿ ದೇವಿಶೆಟ್ಟಿ ಸಮಿತಿ ಮಾತ್ರವಲ್ಲ ಕರ್ನಾಟಕ ಸರ್ಕಾರ ಕೂಡ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡಿದೆ.

ಕರ್ನಾಟಕ ಕಂಡ ನಿಷ್ಠಾವಂತ ಪೊಲೀಸ್ ಅಧಿಕಾರಿಗಳ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವವರು ಡಾ. ಕೆ. ಮಧುಕರಶೆಟ್ಟಿ. ನಮ್ಮನ್ನು ಅಗಲಿ ಡಿಸೆಂಬರ್ 2021ರ 28 ಕ್ಕೆ ಮೂರು ವರ್ಷಗಳು ಕಳೆಯುತ್ತವೆ. ಮೂರು ವರ್ಷವಾದರೂ ಒಬ್ಬ ದಕ್ಷ ಅಧಿಕಾರಿಯ ಸಾವಿಗೆ ತಾರ್ಕಿಕ ಅಂತ್ಯ ಕೊಡಿಸುವಲ್ಲಿ ದೇವಿಶೆಟ್ಟಿ ನೇತೃತ್ವದ ಸಮಿತಿ ವಿಫಲವಾಗಿದೆ. ವೈದ್ಯಕೀಯ ವೃತ್ತಿಯಲ್ಲಿದ್ದುಕೊಂಡು ಇನ್ನೊಂದು ವೈದ್ಯಕೀಯ ಸಂಸ್ಥೆಯನ್ನು ರಕ್ಷಿಸುವ ದುರುದ್ದೇಶದಿಂದಲೇ ಕಮಿಟಿ ಸಾವಿನ ಸತ್ಯವನ್ನು ಮರೆ ಮಾಚಿ ಅಡ್ಡ ಗೋಡೆ ಮೇಲೆ ದೀಪ ಇಟ್ಟು ನಿಷ್ಪ್ರಯೋಜಕ ವರದಿ ಕೊಟ್ಟು ಕೈತೊಳೆದುಕೊಂಡಿದೆ ಎಂಬ ಮಾತುಗಳು ಕೇಳಿಬಂದಿವೆ. ಆರಂಭದಲ್ಲಿ ನ್ಯಾಯಂಗ ತನಿಖೆ ಮಾಡಿಸುವ ಮಾತನ್ನಾಡಿದ್ದ ರಾಜ್ಯ ಸರ್ಕಾರ ಡಾ. ದೇವಿಶೆಟ್ಟಿ ಕೊಟ್ಟ ವರದಿಯನ್ನು ಕಾಲು ಬುಡದ ಕಸದ ಡಬ್ಬಿಗೆ ಹಾಕಿ ಕೈತೊಳೆದುಕೊಂಡಂತೆ ಕಾಣುತ್ತಿದೆ.

ಪ್ರಾಮಾಣಿಕತೆಯ ಪ್ರತೀಕ:

ಮಧುಕರ ಶೆಟ್ಟಿ- ಒಂದಡೆಗೆ ಪ್ರಾಮಾಣಿಕತೆ, ಮತ್ತೊಂದೆಡೆ ಪೊಲೀಸ್ ಸಿಬ್ಬಂದಿಯನ್ನೇ ಪ್ರಾಮಾಣಿಕರನ್ನಾಗಿ ಮಾಡಬೇಕೆಂಬ ಅವರ ಮಹದಾಸೆ, ಸಮಾಜದ ಬಗ್ಗೆ ಅವರಿಗಿದ್ದ ಮಾನವೀಯತೆ ಅವರಿಗೊಂದು ಮೇರು ಕೀರ್ತಿಯನ್ನು ತಂದುಕೊಟ್ಟಿತ್ತು. ಲೋಕಾಯುಕ್ತದಲ್ಲಿ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ಮಧುಕರಶೆಟ್ಟಿ ತನ್ನ ನಿಷ್ಠಾವಂತ ಪೊಲೀಸ್ ಅಧಿಕಾರಿಗಳ ತಂಡ ಕಟ್ಟಿಕೊಂಡು ಭ್ರಷ್ಟ ರಾಜಕಾರಣಿಗಳನ್ನು ಜೈಲಿಗೆ ಕಳುಹಿಸಿ ನಡುಕ ಹುಟ್ಟಿಸಿದ್ದರು. ಪೊಲೀಸ್ ಇಲಾಖೆಯಲ್ಲಿ ಮಧುಕರಶೆಟ್ಟಿಗೆ ಇರುವ ಸ್ಥಾನ ಬಹುಶಃ ಇನ್ನೊಬ್ಬ ಅಧಿಕಾರಿಗೆ ಸಿಗಲಾರದು. ಅಂತಹ ದಕ್ಷ ಐಪಿಎಸ್ ಅಧಿಕಾರಿಯ ಸಾವಿನ ಪ್ರಕರಣವನ್ನೇ ಕಳೆದ ಮೂರು ವರ್ಷಗಳಲ್ಲಿ ರಾಜ್ಯವನ್ನು ಆಳಿದ ಎಲ್ಲರೂ ಮುಚ್ಚಿ ಹಾಕಲು ಹೊರಟಂತೆ ಕಾಣಿಸುತ್ತಿರುವುದು ಅನುಮಾನಗಳಿಗೆ ಕಾರಣವಾಗಿದೆ.

ಅವತ್ತು ನಿಜವಾಗಿಯೂ ನಡೆದಿದ್ದೇನು?

ಅವತ್ತು ನಿಜವಾಗಿಯೂ ನಡೆದಿದ್ದೇನು?

ಡಿಐಜಿಯಾಗಿದ್ದ ಡಾ. ಕೆ. ಮಧುಕರಶೆಟ್ಟಿ ಕೇಂದ್ರ ಸೇವೆಗೆ ಮರಳಿದ್ದರು. ಹೈದರಾಬಾದ್‌ನಲ್ಲಿರುವ ಲಾಲ್ ಬಹದೂರ್ ಶಾಸ್ತ್ರಿ ಪೊಲೀಸ್ ಅಕಾಡೆಮಿಗೆ ನಿಯೋಜನೆಗೊಂಡಿದ್ದರು. 2018 ಡಿಸೆಂಬರ್ 25 ರಂದು ಬೆಳಗ್ಗೆ 8.30ರ ಸುಮಾರಿಗೆ ಮಧುಕರಶೆಟ್ಟಿ ಅವರಿಗೆ ಉಸಿರಾಟದ ಸಮಸ್ಯೆ ಹಾಗೂ ಎದೆಯ ಭಾಗದಲ್ಲಿ ಅಸಹಜತೆ ಕಾಣಸಿಕೊಂಡಿತ್ತು. ನ್ಯಾಷನಲ್ ಪೊಲೀಸ್ ಅಕಾಡೆಮಿಯಲ್ಲಿದ್ದ ವೈದ್ಯರ ಬಳಿ ಪರೀಕ್ಷಿಸಿಕೊಂಡಿದ್ದರು. ತುರ್ತಾಗಿ ಆಸ್ಪತ್ರೆಗೆ ದಾಖಲಾಗುವಂತೆ ವೈದ್ಯರು ನೀಡಿದ ಸಲಹೆ ಮೇರೆಗೆ ಮಧುಕರಶೆಟ್ಟಿ ಅವರು ಬೆಳಗ್ಗೆ 10.30 ರ ವೇಳೆಗೆ ಹೈದರಾಬಾದ್ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಾಗಿದ್ದರು.

ಪ್ರಾಥಮಿಕ ಪರೀಕ್ಷೆ ನಡೆಸಿದ ವೈದ್ಯರು ಎಕೋ ಹಾಗೂ ಇಸಿಜಿ ಪರೀಕ್ಷೆ ಮಾಡಿದಾಗ ಮಧುಕರಶೆಟ್ಟಿ ಸಹಜವಾಗಿಯೇ ಇದ್ದರು. ಇದಾದ ಮರು ಕ್ಷಣದಿಂದಲೇ ಮಧುಕರಶೆಟ್ಟಿ ಅವರಿಗೆ ಎಚ್‌ 1 ಎನ್ 1 ಸೋಂಕು ತಗುಲಿರುವ ಶಂಕೆ ಮೇರೆಗೆ ಕಾಂಟನೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದರು. ಇದೇ ವೇಳೆ ಮಧುಕರಶೆಟ್ಟಿ ಅವರನ್ನು ಐಸಿಯುಗೆ ವರ್ಗಾಯಿಸಿ ಸ್ವೈನ್ ಪ್ಲೂಗೆ ಚಿಕಿತ್ಸೆ ಕೊಟ್ಟಿದ್ದರು. ಹೀಗೆ ಸುಮಾರು 30 ಗಂಟೆ ಮಧಕರಶೆಟ್ಟಿಯನ್ನು ಐಸಿಯುನಲ್ಲಿಟ್ಟು, ಕಾಂಟಿನೆಂಟಲ್ ಆಸ್ಪತ್ರೆ ವೈದ್ಯರು H1N1 ಅಂತಲೇ ಭಾವಿಸಿ ಚಿಕಿತ್ಸೆ ನೀಡಿದ್ದರು. ಈ ಮೂಲಕ ಹೃದಯ ಸಂಬಂಧಿ ಕಾಯಿಲೆಯನ್ನು ತ್ವರಿತವಾಗಿ ಪತ್ತೆ ಮಾಡದೇ ಇನ್ಯಾವುದೋ ಕಾಯಿಲೆಗೆ ಚಿಕಿತ್ಸೆ ಕೊಟ್ಟು ಜೀವ ಉಳಿಸಲು ಅಮೂಲ್ಯವಾಗಿದ್ದ ಆರಂಭದ ಸಮಯವನ್ನು ವ್ಯರ್ಥ ಮಾಡಿದ್ದರು.

ಗೋಲ್ಡನ್ ಅವರ್‌ ಮಿಸ್‌ ಆಗಿದ್ದೇ ಸಮಸ್ಯೆ

ಗೋಲ್ಡನ್ ಅವರ್‌ ಮಿಸ್‌ ಆಗಿದ್ದೇ ಸಮಸ್ಯೆ

2018 ಡಿಸೆಂಬರ್ 26 ರಂದು ಸಂಜೆ ಆರು ಗಂಟೆವರೆಗೂ ಮಧುಕರಶೆಟ್ಟಿ ಅವರನ್ನು ಐಸಿಯು ಹಾಸಿಗೆಯಲ್ಲಿಯೇ ಮಲಗಿಸಿ ಎಚ್‌ 1ಎನ್ 1 ಗೆ ಚಿಕಿತ್ಸೆ ನೀಡಿ ಅಮೂಲ್ಯವಾದ 30 ತಾಸು ಸುಮ್ಮನಾಗಿದ್ದರು. ಸಂಜೆ 6.30 ರ ವೇಳೆಗೆ ಮಧುಕರಶೆಟ್ಟಿ ಅವರಿಗೆ ಲೋ ಬಿಪಿ ಆಗಿತ್ತು. ಆ ಬಳಿಕ ಪುನಃ ಎಕೋ ಪರೀಕ್ಷೆ ನಡೆಸಿದಾಗ ಮಧುಕರಶೆಟ್ಟಿ ಅವರಿಗೆ ಹೃದಯ ಸಂಬಂಧಿ ಅಯೋಟಿಕ್ ಡಿಸೆಕ್ಷನ್ ಇರುವುದನ್ನು ವೈದ್ಯರು ಪತ್ತೆ ಮಾಡಿದ್ದರು. ಅದಾಗಲೇ ಅಮೂಲ್ಯವಾದ 30 ತಾಸು ಐಸಿಯುನಲ್ಲಿ ಉಸಿರಾಡಿದ್ದ ಮಧುಕರಶೆಟ್ಟಿ ಅವರ ಲಿವರ್ ಸೇರಿದಂತೆ ಅಂಗಾಂಗಗಳ ಕಾರ್ಯ ಸ್ಥಗಿತಗೊಳ್ಳುತ್ತಿದ್ದವು. ಇದಾಗಿ ಸಿಟಿ ಅಂಜಿಯೋಗ್ರಾಮ್ ಪರೀಕ್ಷೆ ನಡೆಸಿ ಅರೋಟಿಕ್ ಗೆ ಶಸ್ತ್ರ ಚಿಕಿತ್ಸೆ ನಡೆಸಲು ಪ್ರಯತ್ನಿಸಿದ್ದಾರೆ. ಶಸ್ತ್ರ ಚಿಕಿತ್ಸೆ ಮಾಡುವ ಸಮಯದಲ್ಲಿ ಡಾ. ಮಧುಕರಶೆಟ್ಟಿ ಅವರಿಗೆ ಹೃದಯಾಘಾತವಾಗಿದೆ. ಕೂಡಲೇ ಶಾಕ್ ಟ್ರೀಟ್ ಮೆಂಟ್ ಕೊಟ್ಟು ಚಿಕಿತ್ಸೆ ಮುಂದುವರೆಸಿದ್ದಾರೆ.

ವಿಶೇಷ ಏನೆಂದರೆ, ಇದೇ ವೇಳೆ ಡಾ. ದೇವಿಶೆಟ್ಟಿ ಅವರ ಸಲಹೆ ಮೇರೆಗೆ ECMO (Extracorporeal Membrane Oxygenation) ಮೂಲಕ ಹೃದಯ ಮತ್ತು ಶ್ವಾಸಕೋಶ ಕಾರ್ಯ ನಿರ್ವಹಣೆ ಮಾಡಲು ಯತ್ನಿಸಿದ್ದಾರೆ. ಇದ್ಯಾವುದೂ ಫಲ ನೀಡದೇ ಮಧುಕರಶೆಟ್ಟಿ ಅವರ 2018 ಡಿಸೆಂಬರ್ 28 ರಂದು ರಾತ್ರಿ ಸಾವನ್ನಪ್ಪಿದ್ದರು. ಆಯೋಟಿಕ್ ಡಿಸೆಕ್ಷನ್ ಎಂಬ ಹೃದಯ ಸಂಬಂಧಿ ಕಾಯಿಲೆಯಿಂದ ಮಧುಕರಶೆಟ್ಟಿ ಸಾವನ್ನಪ್ಪಿದ್ದಾರೆ ಎಂಬ ಸಂಗತಿ ಹೊರ ಬಂದಿತ್ತು.

ಆಪ್ತರ ಅನುಮಾನ, ತನಿಖೆಗೆ ಆಗ್ರಹ

ಆಪ್ತರ ಅನುಮಾನ, ತನಿಖೆಗೆ ಆಗ್ರಹ

ಮಧುಕರಶೆಟ್ಟಿ ಅವರಿಗೆ ಅರಂಭದಲ್ಲಿಯೇ ಅಯೋಟಿಕ್ ಡಿಸೆಕ್ಷನ್ ಹೃದಯ ಸಂಬಂಧಿ ಕಾಯಿಲೆ ಇರುವುದನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಿದ್ದರೆ ಅವರ ಬಳಿ ಸಾವು ಎಂಬ ಅಕ್ಷರ ಸಮೀಪಿಸುತ್ತಿರಲಿಲ್ಲ. ಒಬ್ಬ ದಕ್ಷ ಅಧಿಕಾರಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದರೆ 30 ತಾಸು ಎಚ್‌ 1 ಎನ್ 1 ಗೆ ಚಿಕಿತ್ಸೆ ನೀಡಿ ಕಾಲಾಹರಣ ಮಾಡಿದ್ದನ್ನು ವೈದ್ಯಕೀಯ ಪರಿಭಾಷೆಯಲ್ಲಿ ನಿರ್ಲಕ್ಷ್ಯ ಎನ್ನದೇ ಬೇರೆ ಪದವಿರಲಿಲ್ಲ. ಹೀಗಾಗಿಯೇ ಮಧುಕರಶೆಟ್ಟಿ ಸಾವಿಗೆ ವೈದ್ಯಕೀಯ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬ ಆರೋಪಿಸಿತ್ತು. ಮಿಗಿಲಾಗಿ ಅವರ ಆಪ್ತ ಬಳಗ ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿತ್ತು. ಆಗ ಹುಟ್ಟಿಕೊಂಡಿದ್ದೇ ಡಾ. ದೇವಿಶೆಟ್ಟಿ ನೇತೃತ್ವದ ಐದು ಮಂದಿಯನ್ನು ಒಳಗೊಂಡ ಸಮಿತಿ.

Recommended Video

    ಅಹಂಕಾರ ಬಿಟ್ಟು ದೇಶಕ್ಕಾಗಿ ಆಡ್ಬೇಕಂತೆ ಕೊಹ್ಲಿ!! ಹಾಗಾದ್ರೆ ಇಷ್ಟು ದಿನ ಮಾಡಿದ್ದೇನು?? | Oneindia Kannada
    ಜನಾರೋಗ್ಯದ ಮುಂದಾಳುಗಳ ಬಣ್ಣ

    ಜನಾರೋಗ್ಯದ ಮುಂದಾಳುಗಳ ಬಣ್ಣ

    ಡಾ. ಮಧುಕರಶೆಟ್ಟಿ ಸಾವಿಗೆ ವೈದ್ಯಕೀಯ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪದ ಕುರಿತು ತನಿಖೆ ನಡೆಸಿ ಪ್ರಾಮಾಣಿಕ ಅಧಿಕಾರಿ ಸಾವಿಗೆ ನ್ಯಾಯ ಸಲ್ಲಿಸಬೇಕಿದ್ದ ಡಾ. ದೇವಿಶೆಟ್ಟಿ ನೇತೃತ್ವದ ಸಮಿತಿ ಕೊಟ್ಟಿದ್ದು ಅಡ್ಡಗೋಡೆ ಮೇಲೆ ದೀಪ ಇಟ್ಟಿರುವಂತಹ ವರದಿ.

    'ಮಧುಕರಶೆಟ್ಟಿ ಅವರ ಸಾವಿಗೆ ವೈದ್ಯಕೀಯ ನಿರ್ಲಕ್ಷ್ಯವೇ ಕಾರಣ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಇದಕ್ಕೆ ಮತ್ತಷ್ಟು ಸಾಕ್ಷಾಧಾರಗಳು ಬೇಕಾಗಿವೆ, ಇನ್ನು ಈ ಬಗ್ಗೆ ತನಿಖೆ ನಡೆಸುವ ಅಗತ್ಯವಿದೆ, ಇದಕ್ಕಾಗಿ ತೆಲಂಗಾಣ ಸರ್ಕಾರದ ಅನುಮತಿ ಬೇಕು,' ಎಂಬ ವರದಿ ನೀಡಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ತೆಲಂಗಾಣ ಸರ್ಕಾರದ ಅನುಮತಿ ಬೇಕು ಎಂದು ವರದಿ ನೀಡಲು ದೇವಿಶೆಟ್ಟಿ ನೇತೃತ್ವದ ಕಮಿಟಿ ರಚನೆ ಮಾಡುವ ಅಗತ್ಯವೇನಿತ್ತು? ಮಧುಕರ ಶೆಟ್ಟಿ ಅವರಿಗೆ ವಿಫಲ ಚಿಕಿತ್ಸೆ ನೀಡುವ ಸಮಯದಲ್ಲಿ ಪಾಲುದಾರರಾದವರನ್ನೇ ನಂತರ ತನಿಖೆಗೆ ನೇಮಿಸುವ ಹಿಂದಿರುವ ಹಕೀಕತ್ತು ಏನಿತ್ತು? ಆರಂಭದಲ್ಲಿ ನ್ಯಾಯಾಂಗ ತನಿಖೆಗೆ ಒಳಪಡಿಸುವ ಮಾತುಗಳನ್ನಾಡಿದ್ದ ಕರ್ನಾಟಕ ಸರ್ಕಾರ ಆಮೇಲೆ ಜಾಣಮರೆವಿಗೆ ಜಾರಿದ್ದೇಕೆ? ಇಂತಹ ಪ್ರಶ್ನೆಗಳನ್ನು ಮುಂದಿಟ್ಟುಕೊಂಡೇ ಮಧುಕರ ಶೆಟ್ಟಿ ಅವರ ಮೂರನೇ ಪುಣ್ಯಸ್ಮರಣೆಗೆ ಕುಟುಂಬ ಹಾಗೂ ಆಪ್ತವರ್ಗ ಮುಂದಾಗುತ್ತಿದೆ.


    ಈ ಕುರಿತು ಪ್ರತಿಕ್ರಿಯೆಗಾಗಿ 'ಒನ್‌ಇಂಡಿಯಾ' ಡಾ. ದೇವಿಪ್ರಸಾದ್ ಶೆಟ್ಟಿ ಅವರನ್ನು ಸಂಪರ್ಕಿಸಿತಾದರೂ ಪ್ರತಿಕ್ರಿಯೆ ಲಭ್ಯವಾಗಲಿಲ್ಲ.

    More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+