ಹೂಡಿಕೆದಾರರು ನೇರವಾಗಿ ರೈತರಿಂದ ಭೂಮಿ ಖರೀದಿಸಿ, ಸರ್ಕಾರ ನೀರು ರಸ್ತೆ ಕೊಡುತ್ತದೆ
ಬೆಂಗಳೂರು, ಜು.5: ಉದ್ದಿಮೆದಾರರು ಭೂಮಿ ಮಂಜೂರು ಮಾಡಿಸಿಕೊಳ್ಳಲು ಮುಂಚೆ ಕೆಐಎಡಿಬಿ ಮೊರೆ ಹೋಗಬೇಕಾಗಿತ್ತು. ಆದರೆ ಈಗ ಆ ಪರಿಸ್ಥಿತಿ ಇಲ್ಲ ಎಂದು ಐಟಿಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದರು.
ಹೂಡಿಕೆದಾರರು ತಮಗೆ ಅಗತ್ಯವಾದ ಭೂಮಿಯನ್ನು ನೇರವಾಗಿ ರೈತರಿಂದ ಭೂಮಿ ಖರೀದಿಸಬಹುದು. ಸರ್ಕಾರವು ನೀರು, ರಸ್ತೆ ಮತ್ತಿತರ ಸೌಕರ್ಯಗಳನ್ನು ಒದಗಿಸಲಿದೆ ಎಂದು ವಿವರಿಸಿದರು.
ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ "ಮುಕ್ತ ಭೂಸುಧಾರಣೆ ಕಾರ್ಯನೀತಿ" ಬಳಸಿಕೊಳ್ಳುವ ಮೂಲಕ ಹೂಡಿಕೆದಾರರು ಸೆಮಿಕಂಡಕ್ಟರ್ ವಲಯದ ಮೇಲೆ ಹೆಚ್ಚು ಬಂಡವಾಳ ತೊಡಗಿಸಲು ಮುಂದಾಗಬೇಕು ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.

'ಭಾರತೀಯ ಎಲೆಕ್ಟ್ರಾನಿಕ್ಸ್ ಹಾಗೂ ಸೆಮಿಕಂಡಕ್ಟರ್ ಸಂಸ್ಥೆಯು (ಐಇಎಸ್ಎ) ಮಂಗಳವಾರ ನಗರದಲ್ಲಿ ಏರ್ಪಡಿಸಿದ್ದ "ಸೆಮಿಕಂಡಕ್ಟರ್ ಇಂಡಸ್ಟ್ರಿ ಕನೆಕ್ಟ್ 2022- ಕರ್ನಾಟಕದಲ್ಲಿ ಸೆಮಿಕಂಡಕ್ಟರ್ ಕಾರ್ಯಪರಿಸರ" ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸುಧಾರಣೆಗಳು ದೂರದೃಷ್ಟಿಯಿಂದ ಕೂಡಿದ್ದಾಗಿವೆ ಎಂದರು.
"ಸರ್ಕಾರವು ಹಲವಾರು ವಿಷಯಗಳಲ್ಲಿ ಸುಧಾರಣೆಗಳನ್ನು ತಂದಿದೆ. ಈಗ ಹೂಡಿಕೆದಾರರು ತಮಗೆ ಬೇಕಾದ ವಿದ್ಯುತ್ತನ್ನು ಕೂಡ ತಾವೇ ಉತ್ಪಾದಿಸಿಕೊಳ್ಳಬಹುದು. ಕೇಂದ್ರ ಸರ್ಕಾರವು ಇ.ಎಸ್.ಡಿ.ಎಂ. (ಎಲೆಕ್ಟ್ರಾನಿಕ್ ಸಿಸ್ಟಮ್ ಡಿಜೈನ್ ಅಂಡ್ ಮ್ಯಾನಫ್ಯಾಕ್ಚರಿಂಗ್) ಬೆಳವಣಿಗೆಗಾಗಿ ರೂಪಿಸಿರುವ ಕಾರ್ಯನೀತಿಗೆ ಅನುಗುಣವಾಗಿ ರಾಜ್ಯದಲ್ಲೂ ಈ ಬದಲಾವಣೆಗಳನ್ನು ಮಾಡಲಾಗಿದೆ" ಎಂದು ಅಶ್ವತ್ಥನಾರಾಯಣ ತಿಳಿಸಿದರು.
ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ಸರ್ಕಾರದ ನೇತೃತ್ವ ವಹಿಸಿದ್ದಾಗ, ಬಹಳಷ್ಟು ಸವಾಲುಗಳ ಮಧ್ಯೆ ಮುಕ್ತ ಭೂಸುಧಾರಣೆ ಕಾರ್ಯನೀತಿಯನ್ನು ಜಾರಿಗೊಳಿಸಿದ್ದರು ಎಂದು ಅವರು ಹೇಳಿದರು.

ಕೋವಿಡ್ ನಂತರದ ಕಾಲಘಟ್ಟದಲ್ಲಿ ಸಣ್ಣಪುಟ್ಟ ಪಟ್ಟಣಗಳಿಗೂ ಬೆಳೆಯುವ ಅವಕಾಶಗಳು ಸೃಷ್ಟಿಯಾಗಿವೆ. ಪ್ರತಿಯೊಬ್ಬ ವ್ಯಕ್ತಿಯೂ ಉದ್ಯಮಶೀಲನಾಗಬಹುದಾಗಿದೆ. ಇದರ ಜೊತೆಗೆ, ರಾಷ್ಟ್ರೀಯ ಶಿಕ್ಷಣ ನೀತಿಯ ಅಳವಡಿಕೆ, ಐಟಿಐ ಗಳ ಉನ್ನತೀಕರಣ, ಕೌಶಲಕ್ಕೆ ಒತ್ತು ನೀಡುವ ಜಿಟಿಟಿಸಿ ಗಳು, ಶೇ 100ಕ್ಕೆ ಏರಿರುವ ಪಾಲಿಟೆಕ್ನಿಕ್ ಪ್ರವೇಶಾತಿ, ಇವೆಲ್ಲವೂ ಮುಂಬರುವ ದಿನಗಳಲ್ಲಿ ಸದೃಢ ಇ.ಎಸ್.ಡಿ.ಎಂ. ಕಾರ್ಯಪರಿಸರ ನಿರ್ಮಾಣಕ್ಕೆ ತಮ್ಮದೇ ಕೊಡುಗೆ ನೀಡಲಿವೆ ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಸೆಮಿಕಂಡಕ್ಟರ್ ಪಾರ್ಕ್ ಹಾಗೂ ಇ.ಎಸ್.ಡಿ.ಎಂ. ಪರೀಕ್ಷಾ ಪ್ರಯೋಗಾಲಯ ಸ್ಥಾಪನೆ ಮಾಡುವ ಬಗ್ಗೆ ಸರ್ಕಾರವು ಪರಿಶೀಲನೆ ನಡೆಸಲು ಉತ್ಸುಕವಾಗಿದೆ ಎಂದು ಇದೇ ಸಂದರ್ಭದಲ್ಲಿ ಸಚಿವರು ತಿಳಿಸಿದರು.
ಎಲೆಕ್ಟ್ರಾನಿಕ್ಸ್, ಐಟಿ/ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್, ಉದ್ಯಮಿ ಹಾಗೂ ಕೇಂದ್ರದ ಮಾಜಿ ಮಂತ್ರಿ ಎಂ.ಎಂ.ಪಲ್ಲಂರಾಜು, ಕೆಡಿಇಎಂ ಅಧ್ಯಕ್ಷ ಬಿ,ವಿ.ನಾಯ್ಡು, ಸಿಇಒ ಸಂಜೀವ್ ಗುಪ್ತ ಮತ್ತಿತರ ಸೆಮಿಕಂಡಕ್ಟರ್ ಕ್ಷೇತ್ರದ ಉದ್ಯಮಿಗಳು ಈ ಸಂದರ್ಭದಲ್ಲಿ ಇದ್ದರು.












Click it and Unblock the Notifications