ಎಸ್ಎಸ್ಎಲ್ಸಿ ಟಾಪರ್ ವಿಶ್ವಜೀತ್ ಹೆಗಡೆ ಕಣ್ಣಲ್ಲಿ ಐಐಟಿ ಕನಸು
ಬೆಂಗಳೂರು.ಮೇ. 13: ಎಸ್ ಎಸ್ ಎಲ್ ಸಿ ಟಾಪರ್ ವಿಶ್ವಜೀತ ಪ್ರಕಾಶ್ ಹೆಗಡೆಗೆ ಐಐಟಿ ಓದುವ ಕನಸು. 625 ಕ್ಕೆ 623 ಅಂಕ ಗಳಿಸಿ ಸಾಧನೆ ಮೆರೆದಿರುವ ಶಿರಸಿ ಬಾಲಕನ ಪರೀಕ್ಷಾ ಅನುಭವ ಮತ್ತು ಮುಂದಿನ ಗುರಿಯನ್ನು ಆತನ ಬಾಯಿಯಲ್ಲೇ ಕೇಳಬೇಕು.
ಶಿರಸಿಯ ಲಯನ್ಸ್ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿಶ್ವಜೀತ್ ಕನಸುಗಳ ಮೂಟೆಯನ್ನೇ ಹೊತ್ತಿದ್ದಾರೆ. ಅವರನ್ನು ಒನ್ ಇಂಡಿಯಾ ಮಾತಿಗೆ ಎಳೆದಾಗ ಅಧ್ಯಯನ ಮಾಡಿದ ರೀತಿ, ಪರೀಕ್ಷೆ ಗುರಿಯಾಗಿರಿಸಿಕೊಂಡು ಮಾಡಿದ ತಯಾರಿ, ಮಾರ್ಗದರ್ಶನ ಪಡೆದ ವಿವರಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. [ಫಲಿತಾಂಶ, ಅಂಕಪಟ್ಟಿಗಾಗಿ ಇಲ್ಲಿ ಕ್ಲಿಕ್ಕಿಸಿ]
ನಿಮ್ಮ ಮುಂದಿನ ಗುರಿ ಏನು?
ನನ್ನ ಗುರಿ ಸ್ಪಷ್ಟ ಪಿಸಿಎಂಸಿ ಅಧ್ಯಯನ ಮಾಡಿ ಇಂಜಿನೀಯರ್ ಆಗಬೇಕು ಎಂಬ ಕನಸು ಕಟ್ಟಿಕೊಂಡಿದ್ದೇನೆ. ರಾಜ್ಯದಲ್ಲಿ ಐಐಟಿ ಸ್ಥಾಪನೆಯಾದರೆ ಸಾವಿರಾರು ವಿದ್ಯಾರ್ಥಿಗಳಿಗೆ ಅನೂಕೂಲವಾಗಲಿದೆ.

ದಿನದಲ್ಲಿ ಎಷ್ಟು ಗಂಟೆ ವ್ಯಾಸಂಗ ಮಾಡುತ್ತಿದ್ರೀ?
ನಿದ್ದೆ ಬಿಟ್ಟು ಓದಿದ ದಾಖಲೆಗಳಿಲ್ಲ. 3 ರಿಂದ 4 ಗಂಟೆ ಅಭ್ಯಾಸ ಮಾಡುತ್ತಿದ್ದೆ, ಅನುಮಾನಗಳು ಉಂಟಾದರೆ ಸಂಬಂಧಿಸಿದ ಶಿಕ್ಷಕರ ಜತೆ ಮಾತನಾಡಿ ಬಗೆಹರಿಸಿಕೊಳ್ಳುತ್ತಿದ್ದೆ, ನಿಧಾನವಾಗಿ ಓದುತ್ತಿದ್ದೆ ಆದರೆ ಅಧ್ಯಯನ ಮಾಡಿದ ಎಲ್ಲವನ್ನು ಮನನ ಮಾಡಿಕೊಂಡೇ ಮುಂದೆ ಸಾಗುತ್ತಿದ್ದೆ. [ದಿಶಾ ಹೆಗಡೆಗೆ ಸಂಶೋಧನೆ ಮಾಡುವ ಕನಸು]
ನಿಮ್ಮ ಸಾಧನೆಗೆ ನಿಜವಾದ ಕಾರಣ?
ನನ್ನ ಓದು, ಶಿಕ್ಷಕರ ಮಾರ್ಗದರ್ಶನ ಮತ್ತು ಮನೆಯವರ ಸಹಕಾರ ಸಾಧನೆಗೆ ಕಾರಣವಾಯಿತು. ಸಮಸ್ಯೆಗಳಿಗೆ ತಾರ್ಕಿಕ ಉತ್ತರವನ್ನು ಕಂಡುಕೊಂಡೇ ಮುಂದೆ ಸಾಗಿದ್ದು ಈ ಪರಿಯ ಸಾಧನೆ ಮಾಡಲು ನೆರವಾಯಿತು. ನನ್ನ ಗುರುಗಳಾದ ಮೋಹನ ಹೆಗಡೆಯವರ ಸಮಯೋಚಿತ ಸಲಹೆ ಮತ್ತು ಪ್ರಶ್ನೆ ಪತ್ರಿಕೆ ಬಿಡಿಸಿವ ರೀತಿ ಹೆಚ್ಚಿನ ಅಂಕ ತಂದುಕೊಟ್ಟಿತು. [SSLC ಜಿಲ್ಲಾವಾರು ಫಲಿತಾಂಶ]
ಸದ್ಯದ ಶಿಕ್ಷಣದ ಗುಣಮಟ್ಟದ ಬಗ್ಗೆ ನಿಮ್ಮ ಅಭಿಪ್ರಾಯ?
ಶಿಕ್ಷಣ ವ್ಯವಸ್ಥೆಯ ಬಗ್ಗೆ ನನ್ನ ಅಭಿಪ್ರಾಯಗಳೇನಿಲ್ಲ, ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿಯ ಬಗೆಗೂ ಮಾತನಾಡಲಾಗುತ್ತಿದೆ. ನಾವು ಉನ್ನತ ಮಟ್ಟದಲ್ಲಿ ಅಧ್ಯಯನ ಮಾಡಿದರೆ ತಕ್ಕ ಪ್ರತಿಫಲ ಸಿಗುತ್ತದೆ ಎಂಬುದಕ್ಕೆ ನನ್ನ -ಫಲಿತಾಂಶವೇ ಉದಾಹರಣೆ.
ಅಕ್ಕ ಎಂಬಿಬಿಎಸ್ : ಪ್ರಕಾಶ ಹೆಗಡೆ ಮತ್ತು ಜಯಶ್ರೀ ಹೆಗಡೆಯವರ ಪುತ್ರನಾಗಿರುವ ವಿಶ್ವಜೀತ ಮೂಡಬಿದಿರೆಯ ಎಕ್ಸ್ ಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆಯಬೇಕು ಎಂದಿದ್ದಾನೆ. ಶಿರಸಿಯಲ್ಲಿ ಗಂಧರ್ವ ಎಂಬ ಹೆಸರಿನ ಪಾತ್ರೆ ಅಂಗಡಿ ನಡೆಸುತ್ತಿರುವ ಪ್ರಕಾಶ ಹೆಗಡೆ ಅವರಿಗೆ ಇಬ್ಬರು ಮಕ್ಕಳು. ಹಿರಿಯ ಮಗಳು ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದರೆ, ವಿಶ್ವಜೀತ್ ಮಹತ್ತರ ಸಾಧನೆ ಮಾಡಿದ್ದಾನೆ.
ಸಚಿವ ಆರ್. ವಿ, ದೇಶಪಾಂಡೆ, ಶಾಸಕ ಕಾಗೇರಿ ಮತ್ತು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ವಿಶ್ವಜೀತ್ ನನ್ನು ಅಭಿನಂದಿಸಿದ್ದಾರೆ. ಶಿರಸಿ ಲಯನ್ಸ್ ಶಾಲೆಯವರು ಹೆಮ್ಮೆಯ ವಿದ್ಯಾರ್ಥಿಗೆ ಸನ್ಮಾನ ಮಾಡಿದ್ದಾರೆ. ಶಿರಸಿ ಗೋಳಿ ಸಮೀಪದ ಸಂತೆಮನೆಯವರಾದ ಪ್ರಕಾಶ ಹೆಗಡೆ ಕುಟುಂಬ ಕಳೆದ ಅನೇಕ ವರ್ಷಗಳಿಂದ ಶಿರಸಿಯಲ್ಲಿ ಉದ್ಯಮ ನಡೆಸಿಕೊಂಡು ಬಂದಿದೆ.












Click it and Unblock the Notifications