SSLC ಟಾಪರ್ ಶಿರಸಿಯ ಮಹಿಮಾ ಭಟ್ ಸಂದರ್ಶನ
ಶಿರಸಿ, ಮೇ 17: 'ನೋಂದಣಿ ಸಂಖ್ಯೆಯನ್ನು ಬೆಂಗಳೂರಲ್ಲಿದ್ದ ನೆಂಟರಿಗೆ ಕಳುಹಿಸಿಕೊಟ್ಟಿದ್ದೆ. ಫಲಿತಾಂಶ ನೋಡಿದವರು ಮಧ್ಯಾಹ್ನ 3.30ಕ್ಕೆ ಕರೆ ಮಾಡಿದರು. ನನಗೆ ನಂಬಲೇ ಸಾಧ್ಯವಾಗಲಿಲ್ಲ, ಅಯ್ಯಪ್ಪಾ ಭಾರಿ ಖುಷಿ ಆಯ್ತು...'
ಹೀಗೆಂದು ಎಸ್ಎಸ್ ಎಲ್ ಸಿ ಕನ್ನಡ ವಿಭಾಗದಲ್ಲಿ ಮೊದಲ ಸ್ಥಾನ ಪಡೆದ ಮಹಿಮಾ ಭಟ್ ಹೇಳುವಾಗ ಅವರ ಧ್ವನಿಯಲ್ಲಿ ಮುಂದೆ ಏನನ್ನಾದರೂ ಸಾಧಿಸುವ ಛಲ ಎದ್ದು ಕಾಣುತ್ತಿತ್ತು. ಕನ್ನಡ ವಿಭಾಗದಲ್ಲಿ ಮೊದಲ ಸ್ಥಾನ, 625 ಕ್ಕೆ 624 ಅಂಕ ಗಳಿಸಿದ ಶಿರಸಿಯ ಮಹಿಮಾ ಭಟ್ ಒನ್ ಇಂಡಿಯಾ ಕನ್ನಡದೊಂದಿಗೆ ಮಾತನಾಡಿದ್ದಾರೆ.[ಎಸೆಸ್ಸೆಲ್ಸಿ ಮಾರ್ಕ್ಸ್ ಕಾರ್ಡ್ ನೋಡಿ ಟೆನ್ಶನ್ ಆಗ್ಬೇಡಿ!]

ನಾನು ನಿದ್ದೆ ಬಿಟ್ಟು ಓದುವ ಕೆಲಸ ಮಾಡಿಲ್ಲ. ಟಿವಿಯಲ್ಲಿ ವಾರ್ತೆ ವೀಕ್ಷಣೆ ಮಾಡುವುದನ್ನು ಮರೆತಿಲ್ಲ. ಕೋಚಿಂಗ್ ಗೆ ಎಲ್ಲಿಯೂ ತೆರಳಿಲ್ಲ. ಶಿರಸಿಯಿಂದ ನಮ್ಮ ಶಾಲೆಗೆ ಬಂದು ಕ್ಲಾಸ್ ನೀಡಿದನ್ನು ಅಟೆಂಡ್ ಮಾಡಿದ್ದೆ ಅಷ್ಟೆ. 620 ಅಂಕ ನಿರೀಕ್ಷೆ ಮಾಡಿದ್ದೆ. ಆದರೆ 624 ಅಂಕ ಬಂದಿದೆ ಎಂದು ಮಹಿಮಾ ಹೇಳುತ್ತಾರೆ.[SSLC ರಿಸಲ್ಟ್ : ಬೆಂಗಳೂರು ಗ್ರಾಮಾಂತರ ಫಸ್ಟ್, ಬಳ್ಳಾರಿ ಲಾಸ್ಟ್]
ಏರೋಸ್ಪೇಸ್ ಶಿಕ್ಷಣ ಗುರಿ
ಕೃಷಿ ವಿಭಾಗದಲ್ಲಿ ಬಿಎಸ್ ಸಿ ಅಥವಾ ಏರೋಸ್ಪೇಸ್ ಶಿಕ್ಷಣ ಪಡೆಯುವ ಗುರಿ ನನ್ನದು. ಶಿರಸಿಯ ಕಾಲೇಜಿನಲ್ಲಿ ಓದಬೇಕು ಅಂದುಕೊಂಡಿದ್ದೇನೆ. ನನ್ನ ಸಾಧನೆಗೆ ಕಾರಣರಾದ ಎಲ್ಲರಿಗೂ ಅನಂತ ಅಭಿನಂದನೆ ಎಂದು ಮಹಿಮಾ ಹೇಳುತ್ತಾರೆ.
ಮಹಿಮಾ ಅಂಕ ಪಟ್ಟಿ
ಸಂಸ್ಕೃತ 125ಕ್ಕೆ 125, ಕನ್ನಡ, ವಿಜ್ಞಾನ, ಸಮಾಜ ಹಾಗೂ ಗಣಿತದಲ್ಲಿ ನೂರಕ್ಕೆ 100 ಅಂಕ ಪಡೆದಿದ್ದು, ಇಂಗ್ಲಿಷ್ನಲ್ಲಿ ಮಾತ್ರ 99 ಅಂಕ ಪಡೆದಿದ್ದಾರೆ. ಕನ್ನಡ ಮಾಧ್ಯಮದಲ್ಲೇ ಪರೀಕ್ಷೆ ಬರೆದು ಸಾಧನೆ ಮಾಡಿರುವುದು ವಿಶೇಷ.[2016ರ ಎಸ್ಎಸ್ಎಲ್ಸಿ ಫಲಿತಾಂಶದ ಮುಖ್ಯಾಂಶಗಳು]
ಕ್ರೀಡಾ ಸಾಧಕಿ
ನಾನು ಯಾವಾಗಲೂ ಒತ್ತಡ ತೆಗೆದುಕೊಂಡು ಅಧ್ಯಯನ ಮಾಡಿಲ್ಲ. ದಿನಕ್ಕೆ 3 ಗಂಟೆ ಮಾತ್ರ ಓದುತ್ತಿದ್ದೆ ಎನ್ನುವ ಮಹಿಮಾ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಸತತ ಎರಡು ವರ್ಷ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಮಿಂಚಿದ್ದಾರೆ.
ಸಿಹಿ ಹಂಚಿ ಸಂಭ್ರಮ
ಮಹಿಮಾ ಸಾಧನೆಗೆ ಊರಿನಲ್ಲಿ ಸಿಹಿ ಹಂಚಿ ಸಂಭ್ರಮಿಸಲಾಗಿದೆ. ಬಿಜೆಪಿ ಮುಖಂಡ, ಶಾಸಕ, ಮಾಜಿ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಆರ್ ವಿ ದೇಶಪಾಂಡೆ ಸೇರಿದಂತೆ ಅನೇಕರು ಕರೆ ಮಾಡಿ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.
ಹುಟ್ಟೂರು ಬೆಣಗಾಂವ್
ಈಕೆ ಓದಿದ್ದು ಹುಲೇಕಲ್ನಲ್ಲಿಯಾದರೂ ಮಹಿಮಾ ಹುಟ್ಟೂರು ಶಿರಸಿ ತಾಲೂಕಿನ ಬೆಣಗಾಂವ್. ಮಂಜುನಾಥ್ ಭಟ್ಟ ಹಾಗೂ ಮಧುರಾ ಭಟ್ಟ ದಂಪತಿಯ ಹಿರಿಯ ಪುತ್ರಿ. ಹುಲೇಕಲ್ ಸಮೀಪದ ಸೊಣಗೇಜಡ್ಡಿಯಲ್ಲಿನ ಅಜ್ಜ ಮಂಜುನಾಥ ಹೆಗಡೆ ಅವರ ಮನೆಯಲ್ಲಿ ಉಳಿದು ಹುಲೇಕಲ್ ನ ಶ್ರೀದೇವಿ ಪ್ರೌಢಶಾಲೆಗೆ ತೆರಳುತ್ತಿದ್ದರು.












Click it and Unblock the Notifications