ರಾಜ್ಯದಲ್ಲಿ ಅಂತಾರಾಷ್ಟ್ರೀಯ ವಿವಿಗಳ ಕ್ಯಾಂಪಸ್ ಸ್ಥಾಪನೆ: ಅಶ್ವತ್ಥ್ ನಾರಾಯಣ
ಬೆಂಗಳೂರು, ಜೂ. 09: ರಾಜ್ಯದ ಉನ್ನತ ಶಿಕ್ಷಣ ಅಂತಾರಾಷ್ಟ್ರೀಕರಣಕ್ಕೆ ಮೇಲ್ದರ್ಜೆಗೇರುವ ಸಂಬಂಧ ಯುನೈಟೆಡ್ ಕಿಂಗ್ ಡಮ್ ನ (ಯುಕೆ) 22 ವಿಶ್ವವಿದ್ಯಾಲಯಗಳನ್ನು ಪ್ರತಿನಿಧಿಸುವ ಉಪ ಕುಲಪತಿಗಳ ನಿಯೋಗವು ಎರಡು ದಿನಗಳ ಭೇಟಿಗಾಗಿ ಬೆಂಗಳೂರಿಗೆ ಗುರುವಾರ ಆಗಮಿಸಿದೆ.
ರಾಜ್ಯದಲ್ಲಿ, ಉನ್ನತ ಶಿಕ್ಷಣ ಕ್ರಮದಲ್ಲಿ ಅನುಷ್ಠಾನಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ- 2020)ಯು ಶಿಕ್ಷಣದ ಅಂತಾರಾಷ್ಟ್ರೀಕರಣಕ್ಕೆ ಒತ್ತು ನೀಡುವ ಆಶಯ ಹೊಂದಿದೆ. ಸಹಭಾಗಿತ್ವ ಪಾಲುದಾರಿಕೆ ಸಾಧ್ಯತೆಗಳನ್ನು ಗುರುತಿಸಲು ಈ ನಿಯೋಗ ಆದ್ಯತೆ ಕೊಡಲಿದೆ.
ಭಾರತ ಮತ್ತು ಇಂಗ್ಲೆಂಡ್ ಉನ್ನತ ಶಿಕ್ಷಣ ಸಂಸ್ಥೆಗಳ ನಡುವೆ ವಿದ್ಯಾರ್ಥಿಗಳ ಹಾಗೂ ಬೋಧಕರ ವಿನಿಮಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಸಂಶೋಧನಾ ಉತ್ಕೃಷ್ಟತೆ ಸಾಧಿಸಲು ಪೂರಕವಾಗುವಂತೆ ಸಹಭಾಗಿತ್ವದ ಸಾಧ್ಯತೆಗಳನ್ನು ಗುರುತಿಸಲು ಯು.ಕೆ. ಉಪ-ಕುಲಪತಿಗಳ ತಂಡವು ಉತ್ಸಾಹ ದಿಂದಿದೆ. ಇದೇ ಸಂದರ್ಭದಲ್ಲಿ ನಗರದಲ್ಲಿ ಎರಡು ದಿನಗಳ ದುಂಡುಮೇಜಿನ ಶೈಕ್ಷಣಿಕ ಸಮಾಲೋಚನಾ ಸಭೆಯನ್ನು ಏರ್ಪಡಿಸಲಾಗಿದೆ.

ನಿಯೋಗ ಬಗ್ಗೆ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಗಳು ಭಾರತ- ಯುನೈಟೆಡ್ ಕಿಂಗ್ಡಮ್ ನಡುವಿನ ಸಂಬಂಧ ಆಧಾರಸ್ತಂಭಗಳಾಗಿವೆ. ಎನ್ಇಪಿಗೆ ತಕ್ಕಂತೆ ಎರಡೂ ಕಡೆಯ ವಿ.ವಿ.ಗಳ ನಡುವೆ ಸಹಕಾರ ಬಲವರ್ಧನೆಯ ಉದ್ದೇಶದೊಂದಿಗೆ ಹೋದ ವರ್ಷವೇ ಭಾರತ-ಯುಕೆ ನೀಲನಕ್ಷೆ-2030' ಕಾರ್ಯಕ್ರಮವನ್ನು ಘೋಷಿಸಲಾಗಿದೆ. ಸಹಭಾಗಿತ್ವದಿಂದಾಗಿ ವಿದ್ಯಾರ್ಥಿಗಳು, ಬೋಧಕರು ಮತ್ತು ಸಂಶೋಧಕರ ದ್ವಿಮುಖ ವಿನಿಮಯ ಸುಗಮವಾಗಿ ನಡೆಯಲಿದೆ ಎಂದರು.
ವಿಶ್ವದ ಪ್ರತಿಷ್ಠಿತ ವಿ.ವಿ.ಗಳು ಕರ್ನಾಟಕದಲ್ಲಿ ತಮ್ಮ ಕ್ಯಾಂಪಸ್ ತೆರೆಯಲು ಉತ್ಸುಕವಾಗಿವೆ. ಎನ್ಇಪಿ ಜಾರಿಯಲ್ಲಿ ರಾಜ್ಯವು ಮುಂಚೂಣಿಯಲ್ಲಿರುವುದು ವರದಾನವಾಗಿ ಪರಿಣಮಿಸಿದ್ದು, ಇದರಿಂದ ಆತ್ಮನಿರ್ಭರ ಭಾರತ ನಿರ್ಮಾಣ ಕೂಡ ಸಾಕಾರಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.

ದೇಶದ ಮುಂಚೂಣಿ ಸಂಸ್ಥೆಗಳು, ಅಗ್ರಪಂಕ್ತಿಯ ವಿ.ವಿ.ಗಳು ಮತ್ತು ಸಂಶೋಧನಾ ಕೇಂದ್ರಗಳು ರಾಜ್ಯದಲ್ಲಿ ನೆಲೆಯೂರಿವೆ. ಇದರಿಂದಾಗಿ ರಾಜ್ಯವು ನಾವೀನ್ಯತೆ, ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯ ಆಗರವಾಗಿದೆ. ಮುಂಬರುವ ದಿನಗಳಲ್ಲಿ ಕರ್ನಾಟಕ ಮತ್ತು ಬ್ರಿಟನ್ ನಡುವಿನ ಶೈಕ್ಷಣಿಕ ಸಹಭಾಗಿತ್ವ ಮತ್ತಷ್ಟು ವಿಸ್ತೃತಗೊಳ್ಳಲಿದೆ ಎಂದು ಸಚಿವರು ತಿಳಿಸಿದರು.
ಎನ್ಇಪಿ ಸಂಚಾಲನಾ ಸಮಿತಿ ಮುಖ್ಯಸ್ಥ ಡಾ.ಕೆ.ಕಸ್ತೂರಿರಂಗನ್ ಮಾತನಾಡಿ, ಎನ್ಇಪಿ ನೀತಿಯು 21ನೇ ಶತಮಾನದ ಅಗತ್ಯಗಳನ್ನು ಪೂರೈಸಲಿದೆ. ಭಾರತೀಯ ಮೌಲ್ಯ ವ್ಯವಸ್ಥೆಯನ್ನು ಆಧರಿಸಿರುವ ಈ ನೀತಿಯು ಬಹುಶಿಸ್ತೀಯ ಕಲಿಕೆಯನ್ನು ಪರಿಚಯಿಸುತ್ತಿದೆ. ಇದಲ್ಲದೆ, ಉನ್ನತ ಶಿಕ್ಷಣ ವಲಯದಲ್ಲಿ ಸಂಶೋಧನೆ ಮತ್ತು ಬೋಧನೆಗೆ ಸರಿಸಮನಾದ ಪ್ರಾಶಸ್ತ್ಯ ಕೊಡಲಾಗಿದೆ. ಇದಕ್ಕೆಂದೇ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವನ್ನು ಹುಟ್ಟು ಹಾಕnep ಲಾಗಿದೆ ಎಂದರು.
ರಾಜ್ಯದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ಮತ್ತು ಯುನೈಟೆಡ್ ಕಿಂಗ್ಡಮ್ ನ ನಾಟಿಂಗ್ಹ್ಯಾಮ್ ಟ್ರೆಂಟ್ ವಿಶ್ವವಿದ್ಯಾಲಯಗಳು ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ಸಹಭಾಗಿತ್ವ ಒಪ್ಪಂದಕ್ಕೆ ಅಂಕಿತ ಹಾಕಿದವು. ಬ್ರಿಟಿಷ್ ಕೌನ್ಸಿಲ್ ನ ರಾಷ್ಟ್ರೀಯ ನಿರ್ದೇಶಕಿ ಬಾರ್ಬರಾ ವಿಕ್ ಹ್ಯಾಮ್ ಮತ್ತು ದಕ್ಷಿಣ ಭಾರತ ನಿರ್ದೇಶಕರಾದ ಜನಕ ಪುಷ್ಪನಾಥನ್, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಬಿ.ತಿಮ್ಮೇಗೌಡ, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ರಶ್ಮಿ ಮಹೇಶ್, ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಅನ್ನಾ ಶಾಟ್ಬೋಲ್ಟ್ ಉಪಸ್ಥಿತರಿದ್ದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications