ಬೆಳಗಾವಿ ಕಾಂಗ್ರೆಸ್ ಸಂಘರ್ಷ : ಇನ್ನೂ ಶಮನವಾಗದ ಬಿಕ್ಕಟ್ಟು!
ಬೆಳಗಾವಿ, ಸೆಪ್ಟೆಂಬರ್ 02 : ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಸಹೋದರರ ನಡುವಿನ ಸಂಘರ್ಷಕ್ಕೆ ತಡೆ ಹಾಕುವ ಕಾಂಗ್ರೆಸ್ ನಾಯಕರ ಪ್ರಯತ್ನ ಇನ್ನೂ ಫಲ ಕೊಟ್ಟಿಲ್ಲ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಈ ಕೆಲಸವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಹಿಸಿದ್ದಾರೆ.
ಕರ್ನಾಟಕ ಪ್ರವಾಸದಲ್ಲಿರುವ ಕೆ.ಸಿ.ವೇಣುಗೋಪಾಲ್ ಶನಿವಾ ರಾತ್ರಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ ಪ್ರತ್ಯೇಕವಾದ ಸಭೆ ನಡೆಸಿದರು. ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಿದ್ದರಾಮಯ್ಯ ಮತ್ತು ಜಾರಕಿಹೊಳಿ ಸಹೋದರರ ವಿರುದ್ಧ ಹಲವು ದೂರುಗಳನ್ನು ಹೇಳಿದರು.
'ನೀವು ಮಾಧ್ಯಮಗಳ ಮುಂದೆ ಹೋಗಬಾರದು. ಲೋಕಸಭೆ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಎಲ್ಲಾ ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ' ಎಂದು ಕೆ.ಸಿ.ವೇಣುಗೋಪಾಲ್ ಉಭಯ ನಾಯಕರುಗಳಿಗೂ ಸೂಚನೆ ನೀಡಿದ್ದಾರೆ.
'ಬೆಳಗಾವಿಯ ಹೆಚ್ಚು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದೇವೆ. ಪಕ್ಷಕ್ಕಾಗಿ ಇಷ್ಟು ವರ್ಷ ಕೆಲಸ ಮಾಡಿದ್ದೇವೆ. ಆದರೂ ನನ್ನ ಹಾಗೂ ಸಹೋದರ ಸತೀಶ್ ವಿರುದ್ಧ ಕೆಲಸ ಮಾಡುವಂತೆ ಕಾರ್ಯಕರ್ತರಿಗೆ ಪ್ರೇರೆಪಿಸುತ್ತಾರೆ. ನಮ್ಮ ಬಳಿ ಚರ್ಚಿಸದೇ ಸರ್ವಾಧಿಕಾರಿ ಎಂಬಂತೆ ವರ್ತಿಸುತ್ತಿದ್ದಾರೆ' ಎಂದು ರಮೇಶ್ ಜಾರಕಿಹೊಳಿ ದೂರಿದರು.

ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು?
ವೇಣುಗೋಪಾಲ್ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ ಸಭೆ ನಡೆಸಿದರು. ಆಗ ಅವರು ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಹಳ ತೊಂದರೆ ಕೊಟ್ಟಿದ್ದಾರೆ. ನನ್ನ ಕ್ಷೇತ್ರದ ಆಡಳಿತದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ. ನನಗೆ ನೆಮ್ಮದಿಯಾಗಿ ಕೆಲ ಮಾಡಲು ಬಿಡುವುದಿಲ್ಲ ಎಂದು ದೂರಿದ್ದಾರೆ.
ಲೋಕೋಪಯೋಗಿ ಸೇರಿ ಹಲವು ಇಲಾಖೆಗಳಲ್ಲಿ ತಮ್ಮ ಇಷ್ಟದಂತೆ ಅಧಿಕಾರಿಗಳನ್ನು ನೇಮಿಸಿಕೊಳ್ಳುತ್ತಿದ್ದಾರೆ. ನನ್ನ ಕ್ಷೇತ್ರದಲ್ಲಿ 8 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿವೆ. ಅವರ ಕ್ಷೇತ್ರದಲ್ಲಿ ಕೇವಲ 2 ಇದೆ. ಜಾರಕಿಹೊಳಿ ಕುಟುಂಬದ ಬಗ್ಗೆ ನನಗೆ ಗೌರವವಿದೆ. ಆದರೆ, ಜಾರಕಿಹೊಳಿ ಸಹೋದರರು ಅನಗತ್ಯವಾಗಿ ಕೆಲಸಗಳಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮಾಧ್ಯಮಗಳ ಮುಂದೆ ಹೋಗಬೇಡಿ
ಸಚಿವ ರಮೇಶ್ ಜಾರಕಿಹೊಳಿ ಜೊತೆ ಸಭೆ ನಡೆಸಿದ ಕೆ.ಸಿ.ವೇಣುಗೋಪಾಲ್ ಅವರು, 'ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ವಿಚಾರವಾಗಿ ಯಾಕೆ ಗೊಂದಲ ಮಾಡಿಕೊಳ್ಳುತ್ತೀರಿ?. ನಿಮ್ಮ ಸಮಸ್ಯೆ ಏನೇ ಇದ್ದರೂ ನನ್ನ ಗಮನಕ್ಕೆ ತನ್ನಿ. ಮಾಧ್ಯಮದ ಮುಂದೆ ಏಕೆ ಹೋಗುತ್ತೀರಿ' ಎಂದು ವೇಣುಗೋಪಾಲ್ ಪ್ರಶ್ನಿಸಿದರು.
'ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಹೀಗೆ ಕಿತ್ತಾಡಿಕೊಂಡರೆ ಹೇಗೆ?. ಎಲ್ಲವನ್ನು ಸರಿಪಡಿಸುತ್ತೇವೆ' ಎಂದು ಕೆ.ಸಿ.ವೇಣುಗೋಪಾಲ್ ಕಿವಿಮಾತು ಹೇಳಿದರು.

ರಮೇಶ್ ಜಾರಕಿಹೊಳಿ ಹೇಳಿದ್ದೇನು?
'ನನ್ನ ಮತ್ತು ಸತೀಶ್ ವಿರುದ್ಧವೇ ಕಾರ್ಯಕರ್ತರನ್ನು ಎತ್ತಿಕಟ್ಟುತ್ತಿದ್ದಾರೆ. ಇದನ್ನು ನೋಡಿಕೊಂಡು ಸುಮ್ಮನೆ ಇರಲು ಸಾಧ್ಯವೇ?. ಜಿಲ್ಲೆಯಲ್ಲಿ ನಮ್ಮ ಬಳಿ ಚರ್ಚೆ ನಡೆಸದೇ ಸರ್ವಾಧಿಕಾರಿ ಎಂಬಂತೆ ವರ್ತಿಸುತ್ತಿದ್ದಾರೆ. ನನ್ನ ಜೊತೆ ಹೈಕಮಾಂಡ್ ಇದೆ ಎಂದು ಈ ರೀತಿ ವರ್ತಿಸುತ್ತಿದ್ದಾರೆ' ಎಂದು ರಮೇಶ್ ಜಾರಕಿಹೊಳಿ ಆರೋಪ ಮಾಡಿದರು.

ರಮೇಶ್ ಜಾರಕಿಹೊಳಿ ಜೊತೆ ಮಾತನಾಡಿ
ಅಂತಿಮವಾಗಿ ಕೆ.ಸಿ.ವೇಣುಗೋಪಾಲ್ ಅವರು ಸಂಘರ್ಷವನ್ನು ಬಗೆಹರಿಸುವ ಜವಾಬ್ದಾರಿಯನ್ನು ಸಿದ್ದರಾಮಯ್ಯ ಅವರಿಗೆ ನೀಡಿದರು. 'ರಮೇಶ್ ಜಾರಕಿಹೊಳಿ ನಿಮ್ಮ ಜೊತೆ ಚೆನ್ನಾಗಿದ್ದಾರೆ. ನಿಮ್ಮ ಮಾತು ಕೇಳುತ್ತಾರೆ. ನೀವೇ ಸಮಸ್ಯೆ ಬಗೆಹರಿಸಿ, ಜಾರಕಿಹೊಳಿ ಸಹೋದರರನ್ನು ಕರೆದು ಮಾತನಾಡಿ, ಆದಷ್ಟು ಬೇಗ ಎಲ್ಲವನ್ನು ಸರಿಪಡಿಸಿ' ಎಂದು ಕೆ.ಸಿ.ವೇಣುಗೋಪಾಲ್ ಸೂಚನೆ ನೀಡಿದರು.

ಸತೀಶ್ ಜಾರಕಿಹೊಳಿಗೆ ಕರೆ
ಸಿದ್ದರಾಮಯ್ಯ ಅವರು ಸತೀಶ್ ಜಾರಕಿಹೊಳಿ ಅವರಿಗೆ ಕರೆ ಮಾಡಿ 'ಎಲ್ಲವೂ ಬಗೆಹರಿಯಲಿದೆ. ಲೋಕಸಭೆ ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡಿ' ಎಂದು ಹೇಳಿದರು.
ಸಿದ್ದರಾಮಯ್ಯ ಬಳಿ ಅಸಮಾಧಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ ಅವರು, 'ಬೆಳಗಾವಿ ಕಾಂಗ್ರೆಸ್ ವಿಚಾರಕ್ಕೆ ಬಂದರೆ ಸರ್ಕಾರ ಬೀಳಿಸುತ್ತೇವೆ. ಇಲ್ಲಿ ಏನೂ ಸರಿ ಆಗಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ' ಎಂದು ತಿಳಿದುಬಂದಿದೆ.












Click it and Unblock the Notifications