ಮಂಡ್ಯದಲ್ಲಿ ಅಂಬರೀಶ್ ಮಾತಿಗೆ ಸೊಪ್ಪು ಹಾಕದ ಆಪ್ತ!
ಮಂಡ್ಯ, ಫೆಬ್ರವರಿ 09 : ಮಂಡ್ಯ ಕಾಂಗ್ರೆಸ್ ಭಿನ್ನಮತ ಮತ್ತೊಮ್ಮೆ ಬಹಿರಂಗಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಅವರ ಆಪ್ತ ಕೆಬ್ಬಳ್ಳಿ ಆನಂದ್ ಪತ್ನಿ ಜಿಲ್ಲಾ ಪಂಚಾಯತ್ ಚುನಾವಣೆಗೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
ಸಚಿವ ಅಂಬರೀಶ್ ಅವರ ಮಾತನ್ನು ಆಪ್ತರು ಕೇಳುತ್ತಿಲ್ಲ ಎಂಬುದು ಇದಕ್ಕೆ ಸಾಕ್ಷಿಯಾಗಿದೆ. ಮಹಿಳಾ ಮೀಸಲು ಕ್ಷೇತ್ರವಾಗಿದ್ದ ಹೊಳಲು ಜಿಲ್ಲಾ ಪಂಚಾಯಿತಿಗೆ ಕಾಂಗ್ರೆಸ್ ಪಕ್ಷದಿಂದ ಕೆಬ್ಬಳ್ಳಿ ಆನಂದ್ ಅವರು ತಮ್ಮ ಪತ್ನಿ ರಾಣಿ ಅವರನ್ನು ಕಣಕ್ಕಿಳಿಸಲು ಎಲ್ಲ ತಯಾರಿ ನಡೆಸಿದ್ದರು. [ಸಚಿವ ಅಂಬರೀಶ್ ವಿರುದ್ಧ ರಾಹುಲ್ ಗಾಂಧಿಗೆ ದೂರು]

ಪತ್ನಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೊಡಿಸಲು ಸಚಿವ ಅಂಬರೀಶ್ ಸೇರಿದಂತೆ ಕಾಂಗ್ರೆಸ್ ಮುಖಂಡರ ಮೇಲೆ ಒತ್ತಡ ಹೇರಿದ್ದರು. ಈ ಬಗ್ಗೆ ಒಪ್ಪಿಗೆ ಸಿಕ್ಕಿರಲಿಲ್ಲವಾದರೂ ಸಿಕ್ಕೇ ಸಿಗುತ್ತೆ ಎಂಬ ವಿಶ್ವಾಸದಲ್ಲಿ ಕೆಬ್ಬಳ್ಳಿ ಆನಂದ್ ಇದ್ದರು. ಆದರೆ, ಕೊನೆ ಕ್ಷಣದಲ್ಲಿ ಅಭ್ಯರ್ಥಿ ಬದಲಾಗಿದ್ದಾರೆ. [ರಮ್ಯಾ ಸೋಲಿಗೆ ಯಾರು ಕಾರಣ ಗೊತ್ತೆ?]
ನಾಮಪತ್ರ ಸಲ್ಲಿಸಲು ಕೊನೆ ದಿನವಾದ ಸೋಮವಾರ, ಕಾಂಗ್ರೆಸ್ ಹೈಕಮಾಂಡ್ ಸಾಕಮ್ಮ ಮಾದೇಗೌಡ ಅವರಿಗೆ ಟಿಕೆಟ್ ನೀಡಿತ್ತು. ಇದರಿಂದಾಗಿ ಅಸಮಾಧಾನಗೊಂಡ ಕೆಬ್ಬಳ್ಳಿ ಆನಂದ್ ಅವರು ತಮ್ಮ ಪತ್ನಿಯನ್ನು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಇದರಿಂದ ಸಚಿವ ಅಂಬರೀಶ್ ಅವರಿಗೆ ಮುಜುಗರ ತಂದಂತಾಗಿದೆ. [ಮಂಡ್ಯ ಕಾಂಗ್ರೆಸ್ ನಲ್ಲಿ ಮತ್ತೆ ಕದನ ಆರಂಭ]
ಜಿಲ್ಲಾ ಮತ್ತು ತಾಲೂಕು ಚುನಾವಣೆ ಕೂಡ ಉಸ್ತುವಾರಿ ಸಚಿವ ಅಂಬರೀಶ್ ಅವರಿಗೆ ಪ್ರತಿಷ್ಠೆಯಾಗಿದೆ. ಇಲ್ಲಿ ಎಷ್ಟು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ? ಎಂಬುದು ಮುಖ್ಯವಾಗಿದೆ. ಕಾಂಗ್ರೆಸ್ನ ಒಳ ಜಗಳ ಬೇರೆ ಪಕ್ಷಗಳಿಗೆ ವರದಾನವಾದರೆ ಅಂಬಿಯ ತಲೆದಂಡವಾಗುವುದರಲ್ಲಿ ಅಚ್ಚರಿಯಿಲ್ಲ.
ಈಗಾಗಲೇ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ವೇಳಾಪಟ್ಟಿ ಪ್ರಕಟಗೊಂಡಿದ್ದು, ಫೆಬ್ರವರಿ 20ರಂದು ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮಂಡ್ಯ, ಚಾಮರಾಜನಗರ, ಉಡುಪಿ ಸೇರಿದಂತೆ 15 ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ.












Click it and Unblock the Notifications