ಕಾಶಿ ಯಾತ್ರೆಗೆ ಸಹಾಯಧನ ಬಳಿಕ, ಛತ್ರ ಆಭಿವೃದ್ಧಿ ಭರವಸೆ ನೀಡಿದ ಸಚಿವೆ ಶಶಿಕಲಾ ಜೊಲ್ಲೆ
ವಾರಣಾಸಿ, ನವೆಂಬರ್ 13: ಕರ್ನಾಟಕ ಸರ್ಕಾರ ಕಾಶಿ ಯಾತ್ರೆಗೆ ಸಹಾಯಧನ ಘೋಷಿಸಿದೆ. ಇದರಿಂದ ಯಾತ್ರಾರ್ಥಿಗಳ ಸಂಖ್ಯೆಯೂ ಹೆಚ್ಚಾಗಿದೆ. ಯಾತ್ರಾರ್ಥಿಗಳಿಗೆ ಇನ್ನೂ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಛತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಲಾಗುವುದು ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಆ ಜೊಲ್ಲೆ ಹೇಳಿದ್ದಾರೆ.
ಭಾನುವಾರ ಕಾಶಿಯಲ್ಲಿರುವ ಕರ್ನಾಟಕ ರಾಜ್ಯ ಛತ್ರಕ್ಕೆ ಭೇಟಿ ನೀಡಿ ಕಾಶಿ ಸಹಾಯಧನ ರಶೀದಿಗಳನ್ನು ಫಲಾನುಭವಿಗಳಿಗೆ ವಿತರಿಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಕರ್ನಾಟಕ ರಾಜ್ಯ ಛತ್ರವನ್ನು 1928 ರಲ್ಲಿ ಮೈಸೂರಿನ ನಾಲ್ವಡಿ ಶ್ರೀ ಕೃಷ್ಣ ರಾಜೇಂದ್ರ ಒಡೆಯರ್ ಅವರು ಕಾಶಿ ರಾಜನಿಂದ ಜಾಗ ಖರೀದಿಸಿ ನಿರ್ಮಿಸಿದ್ದರು.
2ನೇ ಕಟ್ಟಡವನ್ನು 2002 ರಲ್ಲಿ ಕಟ್ಟಿಸಲಾಗಿದೆ. ಗಂಗಾ ನದಿಯ ತೀರದಲ್ಲಿ ಇರುವ ಪ್ರಮುಖ ಹಾಗೂ ಮನಮೋಹಕ ಜಾಗ ಇದಾಗಿದೆ. ಈ ಜಾಗವನ್ನು ಅಭಿವೃದ್ಧಿಗೊಳಿಸಿದಲ್ಲಿ ರಾಜ್ಯದ ಯಾತ್ರಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗುತ್ತದೆ. ಈಗಾಗಲೇ ಸಹಾಯಧನ ವಿತರಣೆ ಕಾರ್ಯ ಚುರುಕುಗೊಳಿಸಲು ಅಗತ್ಯ ಸಿಬ್ಬಂದಿ ಹಾಗೂ ಸಾಮಗ್ರಿಗಳನ್ನು ಕೊಂಡುಕೊಳ್ಳಲು ಅನುಮತಿ ನೀಡಲಾಗಿದೆ. ಈ ನೇಮಕ ಕಾರ್ಯವನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಭಿವೃದ್ಧಿಗೆ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ
ಕಾಶಿ ಕರ್ನಾಟಕ ಛತ್ರದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸಚಿವರಾದ ಶಶಿಕಲಾ ಜೊಲ್ಲೆ ಸೂಚನೆ ನೀಡಿದರು. ಹಳೆಯ ಛತ್ರ ಮೈಸೂರು ಮಹಾರಾಜರು ಕಟ್ಟಿಸಿದ್ದಾರೆ. ಅದರ ನೈಜ ಶೈಲಿಯನ್ನು ಉಳಿಸಿಕೊಂಡು ಅಭಿವೃದ್ಧಿ ಸಾಧ್ಯವೇ ಎನ್ನುವುದನ್ನು ಪರಿಶೀಲಿಸಬೇಕು. ಇದೆ ವೇಳೆ ಯಾತ್ರಾರ್ಥಿಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಅಳವಡಿಸುವುದನ್ನು ಗಮನದಲ್ಲಿ ಇಟ್ಟುಕೊಳ್ಳುವಂತೆ ಸೂಚಿಸಿದರು.
ಕಾಶಿ ಸಹಾಯಧನ ಯೋಜನೆಗೆ ಶ್ಲಾಘನೆ
ಧಾರ್ಮಿಕ ದತ್ತಿ ಇಲಾಖೆ ಪ್ರಾರಂಭಿಸಿರುವ ಕಾಶಿ ಸಹಾಯ ಧನ ಯೋಜನೆಯಿಂದ ಬಹಳಷ್ಟು ಅನುಕೂಲವಾಗಿದೆ. ಇಂತಹ ಜನಾನುಕೂಲ ಯೋಜನೆ ಪ್ರಾರಂಭಿಸಿ ಅನುಕೂಲ ಮಾಡಿ ಕೊಟ್ಟಿದ್ದರಿಂದ ನಾವೆಲ್ಲರೂ ಕಾಶಿಗೆ ಬರುವಂತಾಗಿದೆ. ಇದಕ್ಕೆ ಕರಣೀಭೂತರಾದ ನಿಮಗೆ ಧನ್ಯವಾದಗಳು ಇಂದು ಪ್ರವಾಸಿಗರು ಸಂತಸ ವ್ಯಕ್ತಪಡಿಸಿದರು.
ಕಾಶಿಯಲ್ಲಿರುವ ಜಂಗಮವಾಡಿ ಮಠಕ್ಕೆ ಭೇಟಿ ನೀಡಿ ಜಗದ್ಗುರುಗಳ ಆಶೀರ್ವಾದ ಪಡೆದ ಸಚಿವರು ಮಠದಲ್ಲಿದ್ದ ಕರ್ನಾಟಕ ದ ಯಾತ್ರಾರ್ಥಿಗಳೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಚಿಕ್ಕೋಡಿಯ ಸಂಸದರಾದ ಅಣ್ಣಾ ಸಾಹೇಬ್ ಜೊಲ್ಲೆ, ಕಾಶಿ ಕರ್ನಾಟಕ ಛತ್ರದ ವ್ಯವಸ್ಥಾಪಕರಾದ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ನವೆಂಬರ್ ೧೩ ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್ ರೈಲಿಗೆ ಚಾಲನೆ ನೀಡಿದರು. ಕಾಶಿಯಾತ್ರೆ ಗೆಂದು ರಾಜ್ಯ ಸರ್ಕಾರ ರೂಪಿಸಿರುವ ಮಹತ್ವಾಕಾಂಕ್ಷೆಯ ಭಾರತ ಗೌರವ ಕಾಶಿ ದರ್ಶನ್ ರೈಲು ಇದಾಗಿದ್ದು, ರಾಜ್ಯದ ಜನತೆಯ ಕಾಶಿ ಯಾತ್ರೆ ಕನಸನ್ನು ನನಸಾಗಿಸಲಿದೆ.
ಎಂಟು ದಿನಗಳ ಕಾಲ ಕಾಶಿ ದರ್ಶನದ ಈ ರೈಲು ವಾರಣಾಸಿ, ಪ್ರಯಾಗ್ ರಾಜ್, ಅಯೋಧ್ಯಾ ಮುಂತಾದ ಪವಿತ್ರ ಸ್ಥಳಗಳಿಗೆ ಯಾತ್ರಿಕರನ್ನು ಕರೆದೊಯ್ಯುತ್ತದೆ. ಮುಜರಾಯಿ ಇಲಾಖೆ ಭಾರತ ಸರ್ಕಾರದ ಸಹಯೋಗದಲ್ಲಿ ಈ ಕಾಶಿ ದರ್ಶನ ಯಾತ್ರೆ ಆಯೋಜಿಸಲಾಗಿದೆ. ಈ ಯಾತ್ರೆಗೆ ಒಟ್ಟು ವೆಚ್ಚ 20,000 ರೂ ಇದ್ದು, ಇದರಲ್ಲಿ ಸರ್ಕಾರ 5000ರೂ ಸಹಾಯಧನ ನೀಡುತ್ತಿದೆ. ಪ್ರವಾಸದಲ್ಲಿ ಆಹಾರ, ವಸತಿ ಹಾಗೂ ಇನ್ನಿತರ ಸೌಕರ್ಯಗಳನ್ನು ಯಾತ್ರಿಕರಿಗೆ ಕಲ್ಪಿಸಲಾಗಿದೆ.












Click it and Unblock the Notifications