ಸಿದ್ದಗಂಗಾ ಶ್ರೀಗಳ ಅಂತ್ಯಸಂಸ್ಕಾರಕ್ಕೆ ಬರಲು ಪ್ರಧಾನಿ ಮೋದಿಗೆ ಸಮಯವಿರಲಿಲ್ಲವೇ? ಕಾಂಗ್ರೆಸ್ ಟ್ವೀಟ್
ಬೆಂಗಳೂರು, ಏಪ್ರಿಲ್ 18: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಗಂಭೀರ ಪ್ರಚಾರದಲ್ಲಿ ತೊಡಗಿಕೊಂಡಿವೆ. ಇದೇ ವೇಳೆ, ರಾಜ್ಯ ಬಿಜೆಪಿಯಲ್ಲಿ ಎಂದೂ ಕಂಡಿರದಂತಹ ಮಹತ್ತರ ಬೆಳವಣಿಗೆಗಳು ನಡೆದಿವೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಈ ಇಬ್ಬರು ಲಿಂಗಾಯತ ನಾಯಕರನ್ನು ಬಿಜೆಪಿ ಕಡೆಗಣಿಸಿದೆ ಎಂಬ ಮಾತುಗಳು ಕೇಳಿಬಂದಿವೆ.
ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಬಿಜೆಪಿಯ ಲಿಂಗಾಯತ ವಿರೋಧಿ ನೀತಿ ಕೇವಲ ರಾಜಕೀಯ ಕಾರಣಕ್ಕಾಗಿ ಮಾತ್ರವಲ್ಲ. ಅದು ಮನುವಾದ ವರ್ಸಸ್ ಬಸವ ತತ್ವದ ಸೈದ್ದಾಂತಿಕ ಸಂಘರ್ಷದ ದ್ವೇಷ' ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. #ಲಿಂಗಾಯತವಿರೋಧಿಬಿಜೆಪಿ ಎಂಬ ಹ್ಯಾಶ್ಟ್ಯಾಗ್ ಅನ್ನು ಕಾಂಗ್ರೆಸ್ ಬಳಸಿದೆ.

'ಚುನಾವಣೆಗಾಗಿ ವಾರಕ್ಕೊಮ್ಮೆ ಕರ್ನಾಟಕಕ್ಕೆ ಬರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿದ್ದಗಂಗಾ ಶ್ರೀಗಳ ಅಂತ್ಯಸಂಸ್ಕಾರಕ್ಕೆ ಬರಲು ಸಮಯವಿರಲಿಲ್ಲವೇ' ಎಂದು ಕೆಪಿಸಿಸಿ ಪ್ರಶ್ನಿಸಿದೆ.
'ಲಿಂಗಾಯತ ನಾಯಕರನ್ನು ತುಳಿಯುತ್ತಿರುವ ಬಿಜೆಪಿ ವಿರುದ್ಧ ತಿರುಗಿಬಿದ್ದ ಲಿಂಗಾಯತರ ಕಿವಿ ಮೇಲೆ ಹೂವಿಡಲು ಲಿಂಗಾಯತರನ್ನೇ ಸಿಎಂ ಮಾಡುತ್ತೇವೆ ಎನ್ನುತ್ತಿದ್ದಾರೆ ಬಿಜೆಪಿಗರು. ಆದರೆ, ಮುಂದೆಯೂ ಬಸವರಾಜ ಬೊಮ್ಮಾಯಿ ಅವರೇ ಸಿಎಂ ಅಭ್ಯರ್ಥಿ ಎಂದು ಹೇಳುತ್ತಿಲ್ಲವೇಕೆ? ಇದರರ್ಥ ಬೊಮ್ಮಾಯಿಯವರನ್ನೂ ಮೂಲೆಗೆ ತಳ್ಳುವುದು ನಿಶ್ಚಿತ' ಎಂದೂ ಕಾಂಗ್ರೆಸ್ ಆರೋಪಿಸಿದೆ.
'ಬಿಜೆಪಿ ವಿರುದ್ಧ ಲಿಂಗಾಯತ ಸಮುದಾಯ ಆಕ್ರೋಶಗೊಂಡಿದೆ, ನಾಗಪುರದ ಲಿಂಗಾಯತ ವಿರೋಧಿ ನೀತಿ ಅಳವಡಿಸಿಕೊಂಡಿರುವ ಸಿಟಿ ರವಿ ತಮ್ಮ ಕ್ಷೇತ್ರದ ಲಿಂಗಾಯತ ಸಮುದಾಯವಿರುವ ಪ್ರದೇಶಗಳನ್ನು ಕಡೆಗಣಿಸಿದ್ದಾರೆ ಎಂದು ಅಲ್ಲಿನ ಲಿಂಗಾಯತರೇ ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿ ಟಾರ್ಗೆಟ್ ಲಿಂಗಾಯತ ಅಭಿಯಾನ ನಡೆಸಿದೆಯೇ' ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

'ನಾಗಪುರದ ಅಜೆಂಡಾದಂತೆ ಗುಪ್ತವಾಗಿ ಲಿಂಗಾಯತರನ್ನು ಹಣಿಯಲು ಮುಂದಾಗಿದೆ ಬಿಜೆಪಿ. ಬಿಎಸ್ವೈರನ್ನು ಕಣ್ಣೀರು ಹಾಕಿಸಿ ಅಧಿಕಾರದಿಂದ ಇಳಿಸುವ ಮೂಲಕ ಈ ಅಜೆಂಡಾದ ಜಾರಿಗೆ ಚಾಲನೆ ಕೊಟ್ಟಂತಿದೆ. ಲಿಂಗಾಯತ ಸಮುದಾಯದ ಬಸವತತ್ವದ ವೈಚಾರಿಕ ಪ್ರಜ್ಞೆ ನಾಗಪುರಕ್ಕೆ ತತ್ವಕ್ಕೆ ವಿರುದ್ಧವಿರುವುದರಿಂದ ಈ ಹುನ್ನಾರವೇ' ಎಂದು ಕೇಳಿದೆ.
ಭಾರತೀಯ ಜನತಾ ಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ 'ಲಿಂಗಾಯತ ವಿರೋಧಿ ಬಿಜೆಪಿ ಎಂಬ ನೆರೆಟಿವ್ ಅನ್ನು ಕಟ್ಟಲು ಕಾಂಗ್ರೆಸ್ ಮುಂದಾಗಿದೆ.
2021 ರಲ್ಲಿ ಬಿಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಿದ್ದರಿಂದ ಬಿಜೆಪಿಗೆ ಲಿಂಗಾಯತ ಸಮುದಾಯದ ಬೆಂಬಲ ಕಡಿಮೆಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ಯಡಿಯೂರಪ್ಪ ಅವರಿಗೂ ಬಿಜೆಪಿ ಮೋಸ ಮಾಡಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಬಳಸಿ ಬೀಸಾಡುವುದು ಬಿಜೆಪಿ ಸಂಸ್ಕೃತಿ ಎಂದು ಕಾಂಗ್ರೆಸ್ ಹೇಳುತ್ತಿದೆ.
ಲಿಂಗಾಯತ ನಾಯಕರನ್ನು ತುಳಿಯುವ ನಿಟ್ಟಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಈ ಇಬ್ಬರೂ ನಾಯಕರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು.












Click it and Unblock the Notifications