ಬಿಗ್ ಬಾಸ್ ನಲ್ಲಿ ಗಾಯತ್ರಿ ಮಂತ್ರಕ್ಕೆ ಅವಮಾನ, ಬ್ರಾಹ್ಮಣರ ಆಕ್ರೋಶ
ಬಿಗ್ ಬಾಸ್ ಕನ್ನಡ ಅವತರಣಿಕೆಯ ಐದನೇ ಸೀಸನ್ ನಲ್ಲಿ ಭಾಗವಹಿಸಿರುವ ಸಮೀರಾಚಾರ್ಯ ಮತ್ತೊಮ್ಮೆ ಬ್ರಾಹ್ಮಣ ಸಮುದಾಯದ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ವಾರದ ಹಿಂದೆಯೇ ನಡೆದ ಈ ಘಟನೆಯ ವಿಡಿಯೋ ಫೇಸ್ ಬುಕ್ ನಲ್ಲಿ ಹರಿದಾಡುತ್ತಿದ್ದು, ಬ್ರಾಹ್ಮಣ ಸಮುದಾಯದ ಸಿಟ್ಟಿಗೆ ತುತ್ತಾಗಿದ್ದಾರೆ.
ಅಷ್ಟಕ್ಕೂ ಆಗಿದ್ದೇನು ಅಂದರೆ, ಬಿಗ್ ಬಾಸ್ ಮನೆಯಲ್ಲಿ ಉಳಿದ ಸ್ಪರ್ಧಿಗಳ ಜತೆಗೆ ಜೋರಾಗಿ ಗಾಯತ್ರಿ ಮಂತ್ರವನ್ನು ಹಾಡಿನಂತೆ ಹಾಡಿದ್ದಾರೆ ಸಮೀರಾಚಾರ್ಯ. ಹಿನ್ನೆಲೆಯಲ್ಲಿ ಪಾಶ್ಚಾತ್ಯ ಸಂಗೀತದಂತೆ ಕೆಲವು ಶಬ್ದಗಳನ್ನು ಕೂಡ ಮಾಡಲಾಗಿದೆ. ಕೊನೆಯಲ್ಲಿ ಯಾ ಇಲಾಹಿ ಇಲ್ಲಲ್ಲಾ ಎಂದು ಮತ್ತೇನೋ ಸೇರಿಸಿಕೊಂಡು ಹಾಡಿದ್ದಾರೆ.
ಗಾಯತ್ರಿ ಮಂತ್ರವನ್ನು ಈಗಾಗಲೇ ಕ್ಯಾಸೆಟ್ ಗಳನ್ನು ಮಾಡಿ, ಬಿಡುಗಡೆ ಮಾಡಲಾಗಿದೆ. ಅದರ ವಿಡಿಯೋಗಳು ಸಿಗುತ್ತವೆ. ಮತ್ತು ಯಾವುದೇ ಮಂತ್ರ ಯಾವ ಸಮುದಾಯ ಅಥವಾ ವ್ಯಕ್ತಿಯ ಸ್ವತ್ತಲ್ಲ. ಆದರೆ ಈ ಗಾಯತ್ರಿ ಮಂತ್ರದ ಬಗ್ಗೆ ವಿಶೇಷವಾದ ಭಕ್ತಿ ಇಟ್ಟುಕೊಂಡು, ಇಂಥದ್ದೇ ನೀತಿ-ನಿಯಮದಲ್ಲಿ ಆ ಮಂತ್ರ ಉಚ್ಚರಿಸುವ ನಂಬಿಕೆ ಇಟ್ಟುಕೊಂಡ ಸಮುದಾಯದ ಪ್ರತಿನಿಧಿಯಾಗಿ ಸಮೀರಾಚಾರ್ಯ ಹೀಗೆ ಮಾಡಿದ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದೆ.
"ಅಲ್ಲಿದ್ದ ಉಳಿದ ಸ್ಪರ್ಧಿಗಳ ಬಗ್ಗೆ ನಮ್ಮ ಆಕ್ಷೇಪವಿಲ್ಲ. ಆದರೆ ಗಾಯತ್ರಿ ಮಂತ್ರವನ್ನು ಹೀಗೆ ಹೇಳಬೇಕು ಎಂದು ಶಾಸ್ತ್ರಗಳಲ್ಲಿ ಇರುವುದನ್ನು ತಿಳಿದೂ ಜೋರಾಗಿ ಮಂತ್ರ ಹೇಳಿದ್ದು, ಅದಕ್ಕೆ ತಾಳ ಹಾಕಿದ್ದು, ಆ ನಂತರ ಇಸ್ಲಾಂನಲ್ಲಿ ಬರುವಂತೆ ಏನನ್ನೋ ಸ್ಮರಣೆ ಮಾಡಿದ್ದು ಅಕ್ಷಮ್ಯ" ಎನ್ನುತ್ತಾರೆ ಧಾರ್ಮಿಕ ಚಿಂತಕರಾದ ಭೀಮಸೇನಾಚಾರ್.

ಗಾಯತ್ರಿ ಮಂತ್ರ ಯಾರು ಹೇಳಬಹುದು?
ಶಾಸ್ತ್ರಗಳ ಪ್ರಕಾರ ವೇದಾಧಿಕಾರ ಇರುವಂಥವರು ಗಾಯತ್ರಿ ಮಂತ್ರ ಹೇಳಬೇಕು ಅಂತಿದೆ. ಬ್ರಾಹ್ಮಣ, ಕ್ಷತ್ರಿಯ ಹಾಗೂ ವೈಶ್ಯರಿಗೆ ಆ ಅಧಿಕಾರ ಇದೆ. ಬ್ರಹ್ಮೋಪದೇಶ ಸಂದರ್ಭದಲ್ಲಿ ತಂದೆ ಅಥವಾ ತಂದೆ ಸ್ಥಾನದಲ್ಲಿರುವ ವ್ಯಕ್ತಿ ಗಾಯತ್ರಿ ಮಂತ್ರದ ಉಪದೇಶ ಮಾಡುತ್ತಾರೆ. ಅದು ವಸ್ತ್ರವೊಂದನ್ನು ಮರೆ ಮಾಡಿಕೊಂಡು, ಕಿವಿಯಲ್ಲಿ ಹೇಳಲಾಗುತ್ತದೆ ಎನ್ನುತ್ತಾರೆ ಭೀಮಸೇನಾಚಾರ್.

ಶಾಸ್ತ್ರ ಸಮ್ಮತವಾದ ವಿಚಾರವಿದು
ಗಾಯತ್ರಿ ಮಂತ್ರದಲ್ಲಿ ಬ್ರಹ್ಮ ಹಾಗೂ ವಿಶ್ವಾಮಿತ್ರ ಗಾಯತ್ರಿ ಅಂತಿದೆ. ನಾವಿಂದು ಅನುಷ್ಠಾನ ಮಾಡುತ್ತಿರುವುದು ವಿಶ್ವಾಮಿತ್ರ ಗಾಯತ್ರಿ ಮಂತ್ರವನ್ನು. ಸಂಧ್ಯಾವಂದನೆ ವೇಳೆಯಲ್ಲಿ ಇದನ್ನು ಅನುಷ್ಠಾನ ಮಾಡಲಾಗುತ್ತದೆ. ಗಾಯತ್ರಿ ಮಂತ್ರವನ್ನು ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಉಚ್ಚರಿಸುವಂತಿಲ್ಲ. ಧ್ವನಿಯೆತ್ತಿ ಹೇಳುವಂತೆಯೇ ಇಲ್ಲ ಎಂಬುದು ಶಾಸ್ತ್ರ ಸಮ್ಮತವಾದದ್ದು ಎನ್ನುತ್ತಾರೆ ಅವರು.

ಸಮೀರಾಚಾರ್ಯರಿಗೆ ತಪ್ಪು-ಸರಿ ಗೊತ್ತಿದೆ
ಗಾಯತ್ರಿ ಮಂತ್ರವನ್ನು ಇಂಥವರು ಹೇಳಬಾರದು ಎಂದು ಇರುವಂತೆಯೇ ಇಂಥವರು ಕೇಳಿಸಿಕೊಳ್ಳಬಾರದು ಅಂತಲೂ ಇದೆ. ಈ ವಿಚಾರದಲ್ಲಿ ಭೇದ- ಭಾವ ಅಂತಿಲ್ಲ. ಇದು ಶಾಸ್ತ್ರ ಸಮ್ಮತವಾದ ವಿಚಾರ ಅಷ್ಟೇ. ಬಿಗ್ ಬಾಸ್ ಮನೆಯಲ್ಲಿ ಇರುವ ಸಮೀರಾಚಾರ್ಯ ಅವರಿಗೆ ಈ ಎಲ್ಲ ವಿಚಾರವೂ ಗೊತ್ತು. ಬ್ರಾಹ್ಮಣ ಸಮುದಾಯದ ನಂಬಿಕೆಯೂ ಗೊತ್ತು. ಅಂಥವರು ಹೀಗೆ ಮಾಡಬಾರದಿತ್ತು. ಷೂ ಹಾಕಿಕೊಂಡವರು ಕಾಲಿನಲ್ಲಿ ತಾಳ ಹಾಕುತ್ತಾ ಗಾಯತ್ರಿ ಮಂತ್ರವನ್ನು ಪಾಶ್ಚಾತ್ಯ ಸಂಗೀತದಂತೆ ಹೇಳುವುದನ್ನು ಸಹಿಸಿಕೊಳ್ಳುವುದು ಅಸಾಧ್ಯ ಎಂದರು ಭೀಮಸೇನಾಚಾರ್.

ಬ್ರಾಹ್ಮಣ ಸಮುದಾಯಕ್ಕೆ ಅನಗತ್ಯ ಪ್ರಶ್ನೆಗಳು
ಬಿಗ್ ಬಾಸ್ ಮನೆಯಲ್ಲಿ ಪ್ರತ್ಯೇಕ ಅಗ್ಗಿಷ್ಟಿಕೆ, ಸ್ವಯಂಪಾಕ ಮಾಡಿಕೊಳ್ಳುತ್ತಿರುವ ಸಮೀರಾಚಾರ್ಯ ಶೇಕಡಾ ನೂರರಷ್ಟು ಆಚರಣೆಗಳನ್ನು ಪಾಲಿಸುವುದು ಸಾಧ್ಯವಿಲ್ಲ. ಆದರೂ ಅವರು ಸ್ಪರ್ಧೆಗೆ ತೆರಳಿದ್ದಾರೆ, ಅದು ವೈಯಕ್ತಿಕ ವಿಚಾರ. ಅಲ್ಲಿರುವಾಗ ಬ್ರಾಹ್ಮಣ ಸಮುದಾಯದ ನಂಬಿಕೆಗೆ ವಿರುದ್ಧವಾಗಿ ನಡೆದುಕೊಳ್ಳುವುದು ಸಹಿಸುವುದಕ್ಕೆ ಸಾಧ್ಯವಿಲ್ಲ. ಅವರಿಂದಾಗಿ ಇಡೀ ಸಮುದಾಯವೇ ಅನಗತ್ಯ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಧರ್ಮಕ್ಕೆ ಚ್ಯುತಿ ಬರದಂತೆ ಎಚ್ಚರ ವಹಿಸಲಿ
ಇನ್ನು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಆಗಮಿಕರ ಒಕ್ಕೂಟದ ಪದಾಧಿಕಾರಿಗಳಾದ ಡಾ.ಉಮೇಶ್ ಶರ್ಮ ಗುರೂಜಿ ಮಾತನಾಡಿ, ಪ್ರಾಪಂಚಿಕ ಸಾಧನೆಗಾಗಿ ಸಮೀರಾಚಾರ್ಯರು ಸ್ಪರ್ಧೆಯಲ್ಲಿದ್ದಾರೆ. ಅದು ಅವರ ನಿರ್ಧಾರ. ಆದರೆ ಅವರಿಂದ ಧರ್ಮಕ್ಕೆ ಚ್ಯುತಿ ಬರುವಂಥ, ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಆಗಬಾರದು. ಈ ರೀತಿ ಗಾಯತ್ರಿ ಮಂತ್ರವನ್ನು ಹಾಡಿನಂತೆ ಹಾಡಿರುವುದನ್ನು ನಾವು ಪ್ರಬಲವಾಗಿ ಖಂಡಿಸುತ್ತೇವೆ. ಇನ್ನು ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿವಳಿಕೆ ಹೇಳುತ್ತೇವೆ.












Click it and Unblock the Notifications